Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೋಲುವ ಭೀತಿಯಿಂದ ಗೆಲುವಿನ ಕಡೆಗೆ 'ಸಖತ್': ಗಣೇಶ್ ಕೊಟ್ಟ ವರದಿ
ಗಣೇಶ್ ನಟನೆಯ 'ಸಖತ್' ಸಿನಿಮಾ ಮೂರು ವಾರಗಳ ಹಿಂದೆ ಬಿಡುಗಡೆ ಆಗಿತ್ತು. ಸಿನಿಮಾ ಬಗ್ಗೆ ಸಾಕಷ್ಟು ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿತ್ತು ಆದರೂ ಸಿನಿಮಾದ ಬಗ್ಗೆ ಅಳುಕೊಂದು ಇದ್ದೇ ಇತ್ತು. ಇಂದು ಚಿತ್ರತಂಡ ಸಕ್ಸಸ್ ಮೀಟ್ ಮಾಡಿದ್ದು, ಸಿನಿಮಾ ಯಶಸ್ವಿಯಾಗಿದೆ ಎಂದು ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಗಣೇಶ್, ''ಕೊರೊನಾ ಕಾರಣದಿಂದ ಪರಿಸ್ಥಿತಿ ಈಗ ಮೊದಲಿನಂತೆ ಇಲ್ಲ. ಶುಕ್ರವಾರ ಸಿನಿಮಾ ಬಿಡುಗಡೆ ಆದಾಗ ನಾನು ಮತ್ತು ಸುನಿ ಬಹಳ ಹೊತ್ತು ಮಾತನಾಡಿದೆವು. ನಮ್ಮಿಬ್ಬರ ಕಾಂಬಿನೇಶನ್ ಸಿನಿಮಾಕ್ಕೆ ಈ ರೀತಿಯ ಓಪನಿಂಗ್ ಅಲ್ಲ, ಇನ್ನೂ ಒಳ್ಳೆಯ ಓಪನಿಂಗ್ ಸಿಗಬೇಕಿತ್ತು ಎಂದುಕೊಂಡೆವು'' ಎಂದರು ಗಣೇಶ್.
''ಬಿಡುಗಡೆ ಆದ ದಿನ ನನಗೆ ಅಳುಕಿತ್ತು. ನಂತರ ಭಾನುವಾರ ನಾನು ನಿರ್ಮಾಪಕ ಸುಪ್ರಿತ್ ಬಳಿ ಮಾತನಾಡಿದೆ. ನಿಮಗೆ ಖುಷಿ ಇದೆಯಾ ಸಿನಿಮಾ ಕಲೆಕ್ಷನ್ ಬಗ್ಗೆ ಎಂದು ಕೇಳಿದೆ. 'ಶುಕ್ರವಾರ ನನಗೆ ಸ್ವಲ್ಪ ಆತಂಕವಾಗಿತ್ತು. ಆದರೆ ಶನಿವಾರ, ಭಾನುವಾರ ಸಿನಿಮಾ ಮಾಡಿರುವ ಕಲೆಕ್ಷನ್ ತೃಪ್ತಿ ತಂದಿದೆ' ಎಂದರು. ಆಗ ನನಗೆ ಸ್ವಲ್ಪ ಸಮಾಧಾನವಾಯ್ತು'' ಎಂದರು ಗಣೇಶ್.
''ಭಾನುವಾರದ ಆಚೆಗೆ ಸಿನಿಮಾ ಚೆನ್ನಾಗಿ ಪಿಕಪ್ ಆಯಿತು. ಆದರೆ ಕೊರೊನಾ ಭಯ ನಮಗೆ ಸದಾ ಇದ್ದೇ ಇತ್ತು. ಸ್ವತಃ ನಿರ್ದೇಶಕ ಸುನಿ ಮನೆಯವರೇ ಏಳು ಜನ ಟಿಕೆಟ್ ಬುಕ್ ಮಾಡಿ ಕೋವಿಡ್ ಭೀತಿಯಿಂದ ಸಿನಿಮಾಕ್ಕೆ ಹೋಗಿರಲಿಲ್ಲ. ಕೋವಿಡ್ ಭಯದಿಂದ ನಮಗೆ ತುಸು ಹೊಡೆತ ಬಿದ್ದಿದ್ದು ನಿಜವಾದರೂ ಸಿನಿಮಾದ ಬಗ್ಗೆ ಬಂದ ಒಳ್ಳೆಯ ಬಾಯಿ ಪ್ರಚಾರದಿಂದಾಗಿ ಸಿನಿಮಾ ಮೂರು ವಾರಗಳಾದರೂ ಚೆನ್ನಾಗಿ ಓಡುತ್ತಿದೆ'' ಎಂದರು ಗಣೇಶ್.
''ಎರಡನೇ ವಾರ ಮುಗಿಯುವವರೆಗೆ ನಮಗೆ ಗೆಲ್ಲುವ ವಿಶ್ವಾಸವಿರಲಿಲ್ಲ. ನಮ್ಮ ಸಿನಿಮಾಕ್ಕೆ ಹಾಕಿರುವ ಬಂಡವಾಳ ವಾಪಸ್ ಬರುವ ಖಾತ್ರಿಯಷ್ಟೆ ಇತ್ತು. ಎರಡನೇ ವಾರದ ಬಳಿಕ ಸಹ ನಾನು, ಸುನಿ ಹಾಗೂ ನಿರ್ಮಾಪಕರು ಮಾತನಾಡಿಕೊಂಡು ಸಿನಿಮಾದ ಸಕ್ಸಸ್ ಮೀಟ್ ಮಾಡಬೇಕಾ ಬೇಡವಾ ಎಂದು ಚರ್ಚೆ ಮಾಡಿದ್ದೆವು. ನಮಗೆ ಸುಳ್ಳು ಹೇಳುವುದು ಇಷ್ಟವಿರಲಿಲ್ಲ. ಆದರೆ ಎರಡನೇ ವಾರದ ವೀಕೆಂಡ್ ವೇಳೆಗೆ ನಮ್ಮ ಸಿನಿಮಾ ಗೆದ್ದಿರುವುದು ಖಾತ್ರಿಯಾಯಿತು ಆಗಷ್ಟೆ ನಾವು ಸಿನಿಮಾದ ಸಕ್ಸಸ್ ಮೀಟ್ ನಡೆಸಬೇಕು ಎಂದು ತೀರ್ಮಾನಿಸಿದೆವು'' ಎಂದರು ಗಣೇಶ್.
'ಪುಷ್ಪ' ಸಿನಿಮಾದ ಬಿಡುಗಡೆಯಿಂದ ಸಖತ್ ಸಿನಿಮಾಕ್ಕೆ ಸಮಸ್ಯೆ ಆಗುತ್ತಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಗಣೇಶ್, ''ನಮಗೆ ದೊಡ್ಡದಾಗಿ ಸಮಸ್ಯೆ ಏನೂ ಆಗಿಲ್ಲ. ನಮ್ಮ ಸಿನಿಮಾ ಎಲ್ಲೆಲ್ಲಿ ಎಷ್ಟು ಶೋ ಇತ್ತೊ ಅಷ್ಟೇ ಶೋ ಅನ್ನು ನಾವು ಮುಂದುವರೆಸಿದ್ದೇವೆ'' ಎಂದರು.
ಗಣೇಶ್ ನಟನೆಯ 'ಸಖತ್' ಸಿನಿಮಾ ನವೆಂಬರ್ 26 ರಂದು ಬಿಡುಗಡೆ ಆಗಿತ್ತು. ಸಿನಿಮಾವನ್ನು ಸುನಿ ನಿರ್ದೇಶನ ಮಾಡಿದ್ದು, ನಿಶಾ ವೆಂಕಟ್ ಕೊಂಕಣಿ, ಸುಪ್ರಿತ್ ನಿರ್ಮಾಣ ಮಾಡಿದ್ದರು. ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ. ರಂಗಾಯಣ ರಘು, ರವಿಶಂಕರ್ ಗೌಡ, ಸಾಧು ಕೋಕಿಲ, ಧರ್ಮಣ್ಣ ಇನ್ನೂ ಹಲವರು ನಟಿಸಿದ್ದಾರೆ.