'ಸಲಗ' ಸಿನಿಮಾಕ್ಕೆ ಸಂಕಷ್ಟ: ಪೊಲೀಸ್ ಠಾಣೆ ಮೆಟ್ಟಿಲೇರಿದ ವಿವಾದ
ಅಕ್ಟೋಬರ್ 14 ರಂದು ಬಿಡುಗಡೆ ಆದ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಸಲಗ' ಸಿನಿಮಾಕ್ಕೆ ಒಂದರಮೇಲೊಂದು ಸಂಕಷ್ಟಗಳು ಎದುರಾಗುತ್ತಲೇ ಇದೆ.
ಕೊರೊನಾ ಸೇರಿದಂತೆ ಹಲವು ಅಡೆ-ತಡೆಗಳನ್ನು ದಾಟಿ ಅಕ್ಟೋಬರ್ 14 ರಂದು ಬಿಡುಗಡೆ ಆದ 'ಸಲಗ' ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದ್ದು, ಇದೀಗ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಇನ್ನೇನು ಸಿನಿಮಾ ಗೆದ್ದೇಬಿಟ್ಟಿತು ಎಂದುಕೊಳ್ಳುವಾಗಲೇ ಸಿನಿಮಾಕ್ಕೆ ಸಂಕಷ್ಟವೊಂದು ಎದುರಾಗಿದೆ.
ನಾಳೆ (ಅಕ್ಟೋಬರ್ 22)ಕ್ಕೆ 'ರಿಯಲ್ ಎಸ್ಟೇಟ್' ಹೆಸರಿನ ಹೊಸಬರ ಸಿನಿಮಾವೊಂದು ಬಿಡುಗಡೆ ಆಗುತ್ತಿದೆ. ಸಿನಿಮಾವು ತ್ರಿವೇಣಿ ಚಿತ್ರಮಂದಿರವನ್ನು ಮುಖ್ಯ ಚಿತ್ರಮಂದಿರವಾಗಿ ಬುಕ್ ಮಾಡಿಕೊಂಡಿದೆ. ಪ್ರಸ್ತುತ 'ಸಲಗ' ಸಿನಿಮಾ ಅದೇ ಚಿತ್ರಮಂದಿರದಲ್ಲಿ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ 'ಸಲಗ' ಸಿನಿಮಾವನ್ನು ಹಿಂದೆ ತೆಗೆಯುವುದು ವಿಜಯ್ಗೆ ಇಷ್ಟವಿಲ್ಲ.

ಇದಕ್ಕೆ ವಿರೋಧ ವ್ಯಕ್ತಪಡಿಸಿದ 'ರಿಯಲ್ ಎಸ್ಟೇಟ್' ಸಿನಿಮಾದ ನಿರ್ಮಾಪಕ ರಾಮಕೃಷ್ಣ, ದುನಿಯಾ ವಿಜಯ್ ಹಾಗೂ ನಿರ್ಮಾಪಕ ಕೆಪಿ ಶ್ರೀಕಾಂತ್ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆದರೆ ದುನಿಯಾ ವಿಜಯ್ ಹಾಗೂ ರಾಮಕೃಷ್ಣ ಪರಸ್ಪರ ಮಾತುಕತೆ ನಡೆಸಿಕೊಂಡು ಸಂಧಾನಕ್ಕೆ ಬಂದಿದ್ದು, 'ರಿಯಲ್ ಎಸ್ಟೇಟ್' ಸಿನಿಮಾವನ್ನು ಅನುಪಮ ಚಿತ್ರಮಂದಿರದಲ್ಲಿ ಬಿಡುಗಡೆಗೊಳಿಸುವಂತೆ ವಿಜಯ್ ರಾಮಕೃಷ್ಣರ ಮನವೊಲಿಸಿದ್ದಾರೆ. 'ಸಲಗ' ಸಿನಿಮಾವು ಇನ್ನೊಂದು ವಾರ ತ್ರಿವೇಣಿ ಚಿತ್ರಮಂದಿರದಲ್ಲಿಯೇ ಮುಂದುವರೆಯಲಿದೆ.
ಸಂಧಾನ ಮಾತುಕತೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ದುನಿಯಾ ವಿಜಯ್, ''ಹೇಗಾದರು ಮಾಡಿ 'ಸಲಗ' ಸಿನಿಮಾವನ್ನು ತುಳಿಯಬೇಕು ಎಂದು ಕೆಲವರು 'ರಿಯಲ್ ಎಸ್ಟೇಟ್' ಸಿನಿಮಾದ ನಿರ್ಮಾಪಕ ರಾಮಕೃಷ್ಣ ಅವರನ್ನು ಆಯುಧವನ್ನಾಗಿ ಬಳಸಲು ಯತ್ನಿಸಿದರು. ರಾಮಕೃಷ್ಣ ಹೋರಾಟಗಾರರು ಹಾಗಾಗಿ ನೇರವಾಗಿ ನಮ್ಮೆದುರು ಬಂದು ಮಾತನಾಡಿದರು. ನಾವುಗಳು ಪರಸ್ಪರ ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿಕೊಂಡಿದ್ದೇವೆ'' ಎಂದರು.
''ಸಲಗ' ಸಿನಿಮಾವನ್ನು ತುಳಿಯುವ ಪ್ರಯತ್ನ ಕೈಬಿಡಿ, ಇಲ್ಲದಿದ್ದರೆ ನೀವೆ ಸಣ್ಣವರಾಗುತ್ತೀರ. 'ಸಲಗ' ಸಿನಿಮಾವನ್ನು ಏನೇ ಮಾಡಿದರು ನಿಲ್ಲಿಸಲು ಆಗುವುದಿಲ್ಲ. 'ಸಲಗ' ಹೋದದ್ದೇ ದಾರಿ. ಅದನ್ನು ಜನ ಹೆಗಲ ಮೇಲೆ ಎತ್ತಿಕೊಂಡಿದ್ದಾಗಿದೆ'' ಎಂದು ದುನಿಯಾ ವಿಜಯ್ ಹೇಳಿದರು.


Click it and Unblock the Notifications











