twitter
    For Quick Alerts
    ALLOW NOTIFICATIONS  
    For Daily Alerts

    'ಕಾಂತಾರ' ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಜಿಲ್ಲಾಧಿಕಾರಿಗೆ ಮನವಿ

    By ಮಂಗಳೂರು ಪ್ರತಿನಿಧಿ
    |

    ಭಾರೀ ಯಶಸ್ಸು ಗಳಿಸಿ, ಈಗಲೂ ಹೌಸ್ ಫುಲ್ ಪ್ರದರ್ಶನಗೊಳ್ಳುತ್ತಿರುವ 'ಕಾಂತಾರ' ಸಿನಿಮಾ ಇದೇ ಕಾರಣಕ್ಕೋ ಏನೋ ಅಲ್ಲಲ್ಲಿ ವಿವಾದಗಳಿಗೂ ಕಾರಣವಾಗಿದೆ.

    ಕನ್ನಡ ಸಿನಿಮಾದ 'ವರಾಹ ರೂಪಂ' ಹಾಡಿನ ಟ್ಯೂನ್ ಮಲಯಾಳಂ ಮ್ಯೂಸಿಕ್ ಆಲ್ಬಂನಿಂದ ಕೃತಿಚೌರ್ಯ ಮಾಡಿರೋದು ಎಂಬ ಆರೋಪ ಇತ್ತೀಚೆಗೆ ಸದ್ದು ಮಾಡಿತ್ತು. ಅದಾದ ಬಳಿಕ, 'ಕಾಂತಾರ' ಸಿನಿಮಾದಲ್ಲಿ ತೋರಿಸಲಾಗಿರುವುದು ಹಿಂದೂ ಸಂಸ್ಕೃತಿ ಅಲ್ಲ ಎಂದು ಕೆಲವರು ವಾದಿಸಿದ್ದರು. ಈ ವಿಚಾರ ಸುದ್ದಿಯಲ್ಲಿರುವಾಗಲೇ ಮತ್ತೆ 'ಕಾಂತಾರ' ಸಿನಿಮಾದಲ್ಲಿ ದಲಿತ ಅವಹೇಳನಕಾರಿ ವಿಚಾರಗಳಿವೆ ಎಂಬ ಆರೋಪ ಇದೀಗ ಕೇಳಿ ಬಂದಿದೆ.

    'ಕಾಂತಾರ' ಸಿನಿಮಾದ ಕೆಲವು ಪಾತ್ರಗಳು ದಲಿತ ವಿರೋಧಿ ವ್ಯಕ್ತಿತ್ವ ಪ್ರದರ್ಶಿಸಿವೆ. ಇದು ದೈವಾರಾಧನೆಯಲ್ಲಿ ತೊಡಗಿರುವ ದಲಿತರ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಹಾಗಾಗಿ ಸಿನಿಮಾದ ಪ್ರದರ್ಶನವನ್ನು ನಿಲ್ಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ದಲಿತಪರ ಸಂಘಟನೆ ಸಮತಾ ಸೈನಿಕದಳದ ಪತ್ರ ಮುಖೇನ ಮನವಿ ಮಾಡುವುದಾಗಿ ಹೇಳಿದೆ.

    ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಆಗ್ರಹ

    ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಆಗ್ರಹ

    ಈ ಬಗ್ಗೆ ಸಮತಾ ಸೈನಿಕದಳದ ರಾಜ್ಯ ಕಾರ್ಯದರ್ಶಿ ಲೋಲಾಕ್ಷ ಮಾತನಾಡಿ, 'ಕಾಂತಾರ' ಸಿನಿಮಾದ ಕೆಲವೊಂದು ಪಾತ್ರಗಳಲ್ಲಿ ದಲಿತ ವಿರೋಧಿ ವಿಚಾರಗಳಿದ್ದು, ಇದು ದೈವಾರಾಧನೆಯಲ್ಲಿ ತೊಡಗಿರುವ ದಲಿತರ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ನಮಗೆ ಸಿನಿಮಾ ತಂಡದ ಬಗ್ಗೆ ಆಕ್ಷೇಪಣೆಯಿಲ್ಲ. ಆದರೆ ಸೆನ್ಸಾರ್ ಮಂಡಳಿ ಕಾನೂನಿನ ಚೌಕಟ್ಟಿನಲ್ಲಿ ಸಿನಿಮಾವನ್ನು ಕೂಲಂಕಷವಾಗಿ ಪರಿಶೀಲಿಸಿ ಆಕ್ಷೇಪಣೆ ಇರುವ ಭಾಗಗಳಿಗೆ ಕತ್ತರಿ ಹಾಕಬೇಕಿತ್ತು. ದೈವಾರಾಧನೆಯ ಬಗ್ಗೆ ಸೆನ್ಸಾರ್ ಬೋರ್ಡ್ ಗೆ ಅರಿವು ಇಲ್ಲದಿದ್ದಲ್ಲಿ ಈ ಬಗ್ಗೆ ಅಧ್ಯಯನ ಮಾಡಿರುವ ಸಂಶೋಧಕರನ್ನು ಇರಿಸಿಕೊಂಡು ಆ ಕೆಲಸ ಮಾಡಬಹುದಿತ್ತು. ಆದರೆ ಸೆನ್ಸಾರ್ ಮಂಡಳಿ ಇದಾವುದನ್ನೂ ಮಾಡದೆ ನಿರ್ಲಕ್ಷ್ಯ ವಹಿಸಿದೆ. ಅಲ್ಲದೆ ದೈವಗಳು ಅಭಯ ನೀಡುತ್ತವೆಯೇ ಹೊರತು ಕತ್ತಿಯಿಂದ ಇರಿದು ಕೊಲ್ಲುವ ಕಾರ್ಯ ಮಾಡುವುದಿಲ್ಲ. ಇದು ದೈವಾರಾಧನೆಯ ವಿಕೃತಿಯಾಗಿದೆ‌. ಸಿನಿಮಾದಲ್ಲಿ ಇಂತಹ ಹಲವಾರು ನಿಂದನಕಾರಿ ಅಂಶಗಳಿದ್ದು, ಇದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.

    'ಕಾಂತಾರ' ಸಿನಿಮಾದ ಪ್ರದರ್ಶನ ಸ್ಥಗಿತಗೊಳಿಸಲು ಆಗ್ರಹ

    'ಕಾಂತಾರ' ಸಿನಿಮಾದ ಪ್ರದರ್ಶನ ಸ್ಥಗಿತಗೊಳಿಸಲು ಆಗ್ರಹ

    ಅಲ್ಲದೆ ಅಸ್ಪೃಶ್ಯತೆಯ ವಿಚಾರಗಳನ್ನು ಸಿನಿಮಾದಲ್ಲಿ ತೋರಿಸಿದ್ದಲ್ಲದೆ, ದಲಿತರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಆದ್ದರಿಂದ ಇಂತಹ ವಿಕೃತಿಯ ಭಾಗಗಳಿಗೆ ಕತ್ತರಿ ಹಾಕಬೇಕೆಂದು ನಾವು ಸೆನ್ಸಾರ್ ಮಂಡಳಿಯನ್ನು ಒತ್ತಾಯ ಮಾಡುತ್ತೇವೆ. ಇದಕ್ಕಾಗಿ ನಾವು ದ.ಕ.ಜಿಲ್ಲಾಧಿಕಾರಿಯವರಿಗೆ ಪತ್ರ ಮುಖೇನ ಮನವಿ ಮಾಡುತ್ತೇವೆ. ಅವರು ಈ ಸಿನಿಮಾದಲ್ಲಿರುವ ನಾವು ಹೇಳಿರುವ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಸಿನಿಮಾದ ಸಾರ್ವಜನಿಕ ಪ್ರದರ್ಶನವನ್ನು ಸ್ಥಗಿತ ಮಾಡಬೇಕು. ಅವರು ಕೇಂದ್ರ ಸರಕಾರಕ್ಕೆ ಈ ಬಗ್ಗೆ ಪತ್ರ ಬರೆದು ಸೆನ್ಸಾರ್ ಮಂಡಳಿಯು ಸಿನಿಮಾವನ್ನು ಪುನರ್ ವಿಮರ್ಶಿಸುವ ಕಾರ್ಯವನ್ನು ಮಾಡಬಹುದು. ಎರಡು ವಾರಗಳ ಕಾಲಾವಕಾಶವನ್ನು ನಾವು ಅವರಿಗೆ ನೀಡುತ್ತೇವೆ. ಆ ಬಳಿಕವೂ ಇದು ಸರಿಯಾಗದಿದ್ದಲ್ಲಿ ಮತ್ತೆ ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟುಗಳ ಸಂಘಟನೆಗಳು ನಾವು ಮತ್ತೆ ಸಭೆ ಸೇರಿ ಯಾವ ರೀತಿ ಕಾನೂನಾತ್ಮಕ ಹೋರಾಟ ನಡೆಸಬಹುದು ಎಂದು ಚಿಂತನೆ ನಡೆಸುತ್ತೇವೆ ಎಂದು ಲೋಲಾಕ್ಷ ಹೇಳಿದ್ದಾರೆ.

    ದಲಿತ ಸಮುದಾಯಕ್ಕೆ ಅವಹೇಳನ

    ದಲಿತ ಸಮುದಾಯಕ್ಕೆ ಅವಹೇಳನ

    ಕಾಂತಾರಾ ಚಿತ್ರದಲ್ಲಿ ದಲಿತ ಸಮುದಾಯಕ್ಕೆ ಅವಹೇಳನ ಮಾಡಲಾಗಿದೆ. ದಲಿತ ಮಹಿಳೆಯರು ಮತ್ತು ಯುವಜನರನ್ನು ಅವಮಾನ ಮಾಡಲಾಗಿದೆ. ಕೆಳ ಸಮುದಾಯದ ಯುವಕರನ್ನು ಪೋಲಿ ಹುಡುಗರ ರೀತಿ ಚಿತ್ರಿಸಲಾಗಿದೆ. ಹಣ-ಹೆಂಡ ಕೊಟ್ಟರೆ ಏನನ್ನೂ ಮಾಡಬಲ್ಲರು ಎಂಬುವುದಾಗಿ ಚಿತ್ರಿಸಲಾಗಿದೆ. ದೈವನರ್ತಕರೂ ನಮ್ಮ ಜೊತೆ ನೋವು ಹಂಚಿಕೊಂಡಿದ್ದಾರೆ. ಅದನ್ನು ಸಮಾಜದ ಮುಂದೆ ಹೇಳಿದರೆ ಉದ್ಯೋಗ ನಷ್ಟವಾಗುವ ಭೀತಿ ವ್ಯಕ್ತಪಡಿಸಿದ್ದಾರೆ. ಚಲನಚಿತ್ರ ನೋಡಿ ಅತ್ತು ಸಮಸ್ಯೆ ತೋಡಿಕೊಂಡಿದ್ದಾರೆ. ಕಾಂತಾರದಲ್ಲಿಕೇವಲ ದಲಿತರನ್ನು ಮಾತ್ರವಲ್ಲದೇ, ದೈವ ನರ್ತಕರ ಕುಟುಂಬವನ್ನೂ ಅವಹೇಳನ ಮಾಡಲಾಗಿದೆ. ಈ ಚಿತ್ರದಲ್ಲಿ ಸೆನ್ಸಾರ್ ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಸೆನ್ಸಾರ್ ಸಂಸ್ಥೆ ಮತ್ತೆ ಈ ಚಿತ್ರವನ್ನು ಪರಿಶೀಲನೆ ಮಾಡಬೇಕು ಅಂತಾ ಸಮತಾ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಆಗ್ರಹಿಸಿದ್ದಾರೆ.

    'ನಲಿಕೆ, ಪಂಬಂಧ, ಪರವ ಸಮುದಾಯದವರಿಗೆ ಅವಮಾನ'

    'ನಲಿಕೆ, ಪಂಬಂಧ, ಪರವ ಸಮುದಾಯದವರಿಗೆ ಅವಮಾನ'

    ಎಲ್ಲಾ ಸಮುದಾಯದ ಜನರು ಅನೋನ್ಯರಾಗಿದ್ದಾರೆ. ಆದರೆ ಚಿತ್ರದಲ್ಲಿ ಸಮಾಜದಲ್ಲಿ ಒಡಕನ್ನು ಮಾಡಲಾಗಿದೆ. ನಲಿಕೆ, ಪಂಬಂಧ, ಪರವ ಸಮುದಾಯವನ್ನು ಅವಮಾನ ಮಾಡಲಾಗಿದೆ‌. ದೈವ ನರ್ತಕನ ತಾಯಿಯ ಬಾಯಿಯಲ್ಲಿ ಅಸಂವಿಧಾನಿಕ ಪದವನ್ನು ಬಳಸಲಾಗಿದೆ. ಚಿತ್ರದಲ್ಲಿ ಹುಡುಗರು ಕೆಟ್ಟ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ ನರ್ತಕ ಕುಟುಂಬದಲ್ಲಿ ಆ ರೀತಿಯ ಕೆಟ್ಟ ಶಬ್ಧ ಬಳಕೆ ಮಾಡೋದಿಲ್ಲ. ಊರಿನ ಯಜಮಾನ ಗಂಡ ಸತ್ತವರಿಗೆ ನಾನೇ ಇದ್ದೇನೆ ಅಂತಾ ಹೇಳೋದು ದುಃಖ ತಂದಿದೆ. ಎಲ್ಲಾ ನರ್ತಕ ಸಮುದಾಯ ಭಲಾಡ್ಯ ಸಮುದಾಯವನ್ನು ನಂಬಿ ಕೊಂಡಿದೆ. ಸೆನ್ಸಾರ್ ಮಂಡಳಿ ಕಾನೂನು ಚೌಕಟ್ಟಿನಲ್ಲಿ ಆ ಚಿತ್ರವನ್ನು ನೋಡಬೇಕಿತ್ತು. ಆ ಚಿತ್ರಕ್ಕೆ ಸೆನ್ಸಾರ್ ಒಂದು ಕಟ್ ಕೂಡಾ ಮಾಡಿಲ್ಲ ಅನ್ನೋದನ್ನು ರಿಷಬ್ ಶೆಟ್ಟಿ ಹೇಳಿದ್ದರು. ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲನೆ ಮಾಡಬೇಕಾದ ಸೆನ್ಸಾರ್ ಮಂಡಳಿ ಪರಿಶೀಲನೆ ಮಾಡಬೇಕು ಅಂತಾ ಜಿಲ್ಲಾಡಳಿತ ಕ್ಕೆ ದಲಿತ ಸಂಘಟನೆಗಳು ಒತ್ತಾಯ ಮಾಡಿದೆ.

    'ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮನವಿ ಮಾಡುತ್ತೇವೆ'

    'ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮನವಿ ಮಾಡುತ್ತೇವೆ'

    ಇನ್ನು ಚಿತ್ರದಲ್ಲಿ ದಲಿತ ಹುಡುಗರನ್ನು ಕೀಳಾಗಿ ಕಾಣಲಾಗಿದೆ. ಧಣಿ, ಬಡ ಹೆಣ್ಣು ಮಗಳ ಮನೆಗೆ ಹೋಗುವಾಗ ಹೀರೋ ಕಾವಲು ಕಾಯುತ್ತೇನೆ. ಅದನ್ನು ವಿಜೃಂಭಣೆ ಮಾಡುವ ನಾವು ಇಂತಹ ಕೀಳು ಮಟ್ಟಕ್ಕೆ ಹೋಗಿದ್ದೇವೆ. ಹೊರದೇಶದಲ್ಲಿ ಇದನ್ನು ಭಾರತದ ಸಂಸ್ಕೃತಿ ಅಂತಾ ಹೇಳೋದು ದುರಂತವಾಗಿದೆ. ವ್ಯಕ್ತಿಗತವಾಗಿ ರಿಷಬ್ ಶೆಟ್ಟಿ ಒಳ್ಳೆಯವರು, ಆದರೆ ಚಿತ್ರವನ್ನು ಕಾನೂನು ಚೌಕಟ್ಟಿನಲ್ಲಿ ‌ನೋಡಬೇಕಾಗುತ್ತದೆ. ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮನವಿ ಮಾಡುತ್ತೇವೆ. ಇದು ಹಿಂಸೆಗೆ ಪ್ರಚೋದನೆ ನೀಡುತ್ತದೆ. ಹೀಗಾಗಿ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಬೇಕು. ಗುಳಿಗ ಕೋಲ 'ಕಾಂತಾರ' ಚಿತ್ರದಲ್ಲಿ ಇರುವ ರೀತಿಯೇ ಬೇಕು ಎನ್ನುವ ಬೇಡಿಕೆಯೂ ಬರುತ್ತಿದೆ. ಆರಾಧಾನಾ ಕ್ರಮವನ್ನು ವಿಕೃತಿಗೊಳಿಸುತ್ತಿದೆ ಅಂತಾ ದ.ಕ‌ ಜಿಲ್ಲಾ ನಲಿಕೆ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಪದ್ಮನಾಭ ಮೂಡುಬಿದಿರೆ ಬೇಸರ ವ್ಯಕ್ತಪಡಿಸಿದ್ದಾರೆ.

    English summary
    Pro Dalit outfit Samatha Sainik Dal demand to stop Kantara movie shows in theater. It alleged that some scenes of movie is against Dalit community.
    Saturday, November 12, 2022, 13:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X