twitter
    For Quick Alerts
    ALLOW NOTIFICATIONS  
    For Daily Alerts

    ಕುಪ್ಪಳ್ಳಿ, ಕವಿಶೈಲ, ಪಡ್ಡು, ಮೊಸರವಲಕ್ಕಿ: ಸಂಚಾರಿ ವಿಜಯ್‌ಗೆ ಶಿವಮೊಗ್ಗದ ನಂಟು

    By ಶಿವಮೊಗ್ಗ ಪ್ರತಿನಿಧಿ
    |

    ರಸ್ತೆ ಅಪಘಾದಲ್ಲಿ ನಿಧನರಾದ ನಟ ಸಂಚಾರಿ ವಿಜಯ್‌ಗೆ ಶಿವಮೊಗ್ಗ ಜಿಲ್ಲೆಯ ಜೊತೆಗೆ ಉತ್ತಮ ನಂಟಿತ್ತು. ಕವಿಶೈಲ ವಿಜಯ್ ನೆಚ್ಚಿನ ತಾಣಗಳಲ್ಲೊಂದು. ಶಿವಮೊಗ್ಗದ ಹೊಟೇಲ್‍ ಒಂದರ ತಿಂಡಿ ಅಚ್ಚುಮೆಚ್ಚು. ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ಸಂಚಾರಿ ವಿಜಯ್‌ಗೆ ಮೊದಲ ನಾಗರಿಕ ಸನ್ಮಾನವಾಗಿದ್ದು ಶಿವಮೊಗ್ಗದ ಭದ್ರಾವತಿಯಲ್ಲಿ.

    ಸಂಚಾರಿ ವಿಜಯ್ ಅವರಿಗೆ ರಾಜ್ಯದ ವಿವಿಧೆಡೆ ಗೆಳೆಯರ ಬಳಗವಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅವರ ಆಪ್ತರ ಪೈಕಿ ಒಬ್ಬರು ಶಂಕರ್ ಮಿತ್ರ. ಸಂಚಾರಿ ವಿಜಯ್ ಅವರು ಶಿವಮೊಗ್ಗಕ್ಕೆ ಬಂದಾಗಲೆಲ್ಲ ಇವರನ್ನು ಭೇಟಿಯಾಗುತ್ತಿದ್ದರು. ಒಟ್ಟಿಗೆ ಸುತ್ತಾಡುತ್ತಿದ್ದರು.

    ಸಂಚಾರಿ ವಿಜಯ್ ಅವರಿಗೆ ಮಲೆನಾಡಿನ ಊಟ, ತಿಂಡಿ ಬಹಳ ಇಷ್ಟ ಅಂತಾ ಸ್ಮರಿಸಿಕೊಳ್ಳುತ್ತಾರೆ ಶಂಕರ್ ಮಿತ್ರ. ನೀರ್ ದೋಸೆ, ಚಟ್ನಿ ಎಂದರೆ ತುಂಬಾ ಪ್ರೀತಿ. ಮೀನಾಕ್ಷಿ ಭವನ ಹೊಟೇಲ್‌ನ ದೋಸೆ, ಮೊಸರು ಅವಲಕ್ಕಿ ಇಷ್ಟಪಡುತ್ತಿದ್ದರು. ಶಿವಮೊಗ್ಗಕ್ಕೆ ಬಂದಾಗಲೆಲ್ಲ ನೆನಪು ಮಾಡಿಕೊಂಡು ಅಲ್ಲಿಗೆ ಹೋಗುತ್ತಿದ್ದರು ಅಂತಾರೆ ಶಂಕರ್. ಇನ್ನು, ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿ ಫುಟ್‌ಪಾತ್‌ ಮೇಲೆ ಗಾಡಿಯಲ್ಲಿ ಮಾಡುವ ಪಡ್ಡು ಇಷ್ಟಪಡುತ್ತಿದ್ದರು. ಎರಡು ಪ್ಲೇಟ್‍ ಪಡ್ಡು ತಿಂದರಷ್ಟೆ ಅವರಿಗೆ ಸಮಾಧಾನವಾಗುತ್ತಿತ್ತು ಎಂದು ನೆನಪಿನ ಸುರುಳಿ ಬಿಚ್ಚಿದರು.

    ಮೊದಲ ನಾಗರಿಕ ಸನ್ಮಾನ ಭದ್ರಾವತಿಯಲ್ಲಿ

    ಮೊದಲ ನಾಗರಿಕ ಸನ್ಮಾನ ಭದ್ರಾವತಿಯಲ್ಲಿ

    ನಾನು ಅವನಲ್ಲ ಅವಳು ಸಿನಿಮಾಗೆ ರಾಷ್ಟ್ರಪ್ರಶಸ್ತಿ ಬಂದಾಗ ಸಂಚಾರಿ ವಿಜಯ್ ಅವರಿಗೆ ಮೊಟ್ಟಮೊದಲು ನಾಗರಿಕ ಸನ್ಮಾನವಾಗಿದ್ದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ. ಇಲ್ಲಿನ ಎಂಪಿಎಂ ರಂಗಮಂದಿರ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಕೆ.ಸಂಗಮೇಶ್ವರ್ ಮತ್ತು ಅಪ್ಪಾಜಿಗೌಡರ ಉಪಸ್ಥಿತಿಯಲ್ಲಿ ಸನ್ಮಾನ ಮಾಡಲಾಯಿತು.

    ಕುಪ್ಪಳಿ, ಕವಿಶೈಲ, ಮಂಡಗದ್ದೆ

    ಕುಪ್ಪಳಿ, ಕವಿಶೈಲ, ಮಂಡಗದ್ದೆ

    ನಟ ಸಂಚಾರಿ ವಿಜಯ್ ಅವರು ಅವಕಾಶ ಸಿಕ್ಕಾಗಲೆಲ್ಲ ಕುಪ್ಪಳಿಗೆ ಭೇಟಿ ನೀಡುತ್ತಿದ್ದರು. ಕವಿಶೈಲವನ್ನು ತುಂಬಾ ಇಷ್ಟಪಡುತ್ತಿದ್ದರು ಅನ್ನುತ್ತಾರೆ ಶಂಕರ್ ಮಿತ್ರ. ರಾಷ್ಟ್ರಕವಿ ಕುವೆಂಪು ಮತ್ತು ಪೂರ್ಣ ತೇಜಸ್ವಿ ಅವರ ಸಮಾಧಿ ಬಳಿಗೆ ಹೋಗಿ ನಮಸ್ಕರಿಸಿ ಮೌನಕ್ಕೆ ಶರಣಾಗುತ್ತಿದ್ದರು. ಇದಿಷ್ಟೆ ಅಲ್ಲ, ಮಂಡಗದ್ದೆ, ಗಾಜನೂರಿಗೆ ಒಮ್ಮೆ ಹೋಗಿ ಪ್ರಕೃತಿ ಸೊಬಗಿನ ಜೊತೆ ಸಮಯ ಕಳೆಯಬೇಕು ಎಂದು ಹೇಳಿದ್ದರಂತೆ. ಸಿಗಂದೂರು ದೇವಸ್ಥಾನ, ಶರಾವತಿ ಹಿನ್ನೀರಿನ ಲಾಂಚ್‍ನಲ್ಲಿನ ಸಂಚಾರ ಬಲು ಅಚ್ಚುಮೆಚ್ಚು. 'ನಾತಿಚರಾಮಿ' ಸಿನಿಮಾ ತಂಡದ ಜೊತೆ ಒಮ್ಮೆ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದರು. ನಟಿ ಶೃತಿ ಹರಿಹರನ್ ಸೇರಿದಂತೆ ಹಲವರು ಈ ತಂಡದಲ್ಲಿದ್ದರು.

    ಸಿಟಿ ಸೆಂಟರ್‌ಗೆ ಕೊನೆ ಭೇಟಿ

    ಸಿಟಿ ಸೆಂಟರ್‌ಗೆ ಕೊನೆ ಭೇಟಿ

    ನಟ ಸಂಚಾರಿ ವಿಜಯ್ ಅವರು 'ಆಕ್ಟ್ 1978' ಸಿನಿಮಾದ ಪ್ರಮೋಷನ್‌ಗಾಗಿ ಶಿವಮೊಗ್ಗಕ್ಕೆ ಬಂದಿದ್ದರು. ಸಿಟಿ ಸೆಂಟರ್‍ ಮಾನ್‌ನ ಭಾರತ್ ಸಿನಿಮಾಸ್‌ನಲ್ಲಿ ಚಿತ್ರದ ಪ್ರಚಾರ ಕಾರ್ಯ ನಡೆಸಲಾಗಿತ್ತು ಎಂದು ಸ್ಮರಿಸಿಕೊಳ್ಳುತ್ತಾರೆ ಶಂಕರ್ ಮಿತ್ರ. ಪ್ರತಿ ಭಾರಿ ಶಿವಮೊಗಕ್ಕೆ ಬಂದಾಗಲೂ ಇಲ್ಲಿಯ ರಂಗ ತಂಡಗಳು, ರಂಗ ಕರ್ಮಿಗಳನ್ನು ಭೇಟಿಯಾಗಲು ಇಷ್ಟಪಡುತ್ತಿದ್ದರು.

    ಕೊನೆಯ ಫೋನ್ ಕರೆ

    ಕೊನೆಯ ಫೋನ್ ಕರೆ

    ಸಂಚಾರಿ ವಿಜಯ್, ಸಾಹಿತ್ಯ ಪ್ರೇಮಿ. ಇತ್ತೀಚಗೆ ಆತ್ಮಚರಿತ್ರೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿದ್ದರು. ಪ್ರಾಜೆಕ್ಟ್‍ ಒಂದಕ್ಕಾಗಿ ಆತ್ಮಚರಿತ್ರೆಗಳನ್ನು ಓದುತ್ತಿದ್ದರು. ಕಳೆದ ಶುಕ್ರವಾರ ಕೊನೆಯ ಬಾರಿಗೆ ಕರೆ ಮಾಡಿದ್ದ ಸಂಚಾರಿ ವಿಜಯ್ ಅವರು, ಒಂದೊಳ್ಳೆ ಆಟೋಬಯೋಗ್ರಫಿಯನ್ನು ರೆಫರ್ ಮಾಡುವಂತೆ ಕೇಳಿದ್ದರು ಅನ್ನುತ್ತಾರೆ ಶಂಕರ್‍ ಮಿತ್ರ. ಶಿವಮೊಗ್ಗದ ಜೊತೆ, ಇಲ್ಲಿಯ ರಂಗಕರ್ಮಿಗಳು ಸೇರಿದಂತೆ ಹಲವರ ಜೊತೆ ಉತ್ತಮ ನಂಟು ಹೊಂದಿದ್ದರು. ಈಗ ಅವರ ಅಕಾಲಿಕ ಮರಣ ಸ್ನೇಹಿತರ ಬಳಗಕ್ಕೆ ನೋವನ್ನುಂಟು ಮಾಡಿದೆ.

    Recommended Video

    Sanchari Vijay ಅದ್ಬುತ ನಟನೆಗೆ ಸಾಕ್ಷಿಯಾಯ್ತು ತಲೆದಂಡ ಚಿತ್ರದ ಟ್ರೈಲರ್ | Filmibeat Kannada
    ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನೆರವೇರಿದೆ

    ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನೆರವೇರಿದೆ

    ಶನಿವಾರ (ಜೂನ್ 12)ರ ರಾತ್ರಿ ಬೆಂಗಳೂರಿನ ಜೆಪಿ ನಗರ 7ನೇ ಹಂತದಲ್ಲಿ ಗೆಳೆಯ ನವೀನ್ ಜೊತೆಗೆ ಬೈಕ್‌ನಲ್ಲಿ ಬರುವಾಗ ಬಿದ್ದು ವಿಜಯ್ ತಲೆಗೆ ತೀವ್ರವಾದ ಪೆಟ್ಟಾಗಿತ್ತು. ಅಪೊಲೊ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವಿಜಯ್‌ರ ಮೆದುಳು ನಿಷ್ಕ್ರಿಯಗೊಂಡಿದೆ ಎಂದ ವೈದ್ಯರು, ಜೂನ್ 15ರಂದು ಮುಂಜಾನೆ ವಿಜಯ್‌ ನಿಧನರಾಗಿದ್ದಾರೆ ಎಂದು ಘೋಷಿಸಿದರು. ಅವರ ಅಂತಿಮ ಕ್ರಿಯೆಯನ್ನು ಹುಟ್ಟೂರು ಪಂಚನಹಳ್ಳಿಯಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.

    English summary
    Actor Sanchari Vijay has special relation and bond with Shivamogga. He regularly visited Shimogga.
    Tuesday, June 15, 2021, 20:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X