ಸಾವಿನ ಬಗ್ಗೆ ಸಂಚಾರಿ ವಿಜಯ್ ಹೀಗೆ ಹೇಳಿದ್ದರು
ಸಂಚಾರಿ ವಿಜಯ್ ಈಗ ಸಾವಿಗೆ ಸಮೀಪದಲ್ಲಿದ್ದಾರೆ. ವಿಜಯ್ರ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಅಧಿಕೃತವಾಗಿ ಘೋಷಿಸಿದ್ದಾರೆ.
ಜೀವನವನ್ನು ತುಂಬು ಉತ್ಸಾಹ, ಪ್ರೀತಿ, ಛಲಗಳಿಂದ ಬದುಕುತ್ತಿದ್ದ ವಿಜಯ್ ಸಾವಿನ ಬಗ್ಗೆ ಭಯ ಹೊಂದಿದ್ದರು. ಏಕೆಂದರೆ ಸಾವು ಉಂಟು ಮಾಡುವ ನೋವನ್ನು ಅವರು ಅನುಭವಿಸಿದ್ದರು ಹಾಗಾಗಿಯೇ ಯಾರದ್ದೇ ಸಾವಾಗಲಿ ಅವರನ್ನು ಭೀತಿಗೊಳಿಸಿಬಿಡುತ್ತಿತ್ತು.
ಸಣ್ಣ ವಯಸ್ಸಿನಲ್ಲಿಯೇ ಅಪ್ಪ-ಅಮ್ಮ ಇಬ್ಬರನ್ನೂ ಕಣ್ಣೆದುರೇ ಕಳೆದುಕೊಂಡ ವಿಜಯ್ಗೆ ಸಾವು ಉಂಟು ಮಾಡುವ ಪರಿಣಾಮದ ಅರಿವಿತ್ತು. ಸಂದರ್ಶನವೊಂದರಲ್ಲಿ ತಮ್ಮ ತಾಯಿಯ ಸಾವಿನ ಬಗ್ಗೆ ಮಾತನಾಡಿದ್ದ ವಿಜಯ್, 'ನನ್ನ ತಾಯಿಗೆ ಜಾಂಡೀಸ್ ಆಗಿತ್ತು. ದಾವಣಗೆರೆಯ ಆಸ್ಪತ್ರೆಯಲ್ಲಿ ದಾಖಲಿಸಿದ್ದೆವು. ಅವರನ್ನು ಉಳಿಸಿಕೊಳ್ಳಬೇಕೆಂದರೆ ಕನಿಷ್ಟ 10 ಲಕ್ಷ ರುಪಾಯಿಯ ಅವಶ್ಯಕತೆ ಇತ್ತು. ಅದು ನಮಗೆ ಬಹಳ ದೊಡ್ಡ ಮೊತ್ತವಾಗಿತ್ತು. ಹಾಗಾಗಿ ನನ್ನ ತಂದೆಯೂ ಸೇರಿದಂತೆ ನಾವೆಲ್ಲ ಪ್ರಯತ್ನ ಕೈಬಿಟ್ಟು ಬಿಟ್ಟೆವು' ಎಂದು ಹೇಳಿದ್ದರು.

ಅಸ್ಥಿಪಂಜರದಂತೆ ಆಗಿಬಿಟ್ಟಿದ್ದರು ಅಮ್ಮ: ವಿಜಯ್
'ಅಮ್ಮ ದಿನೇ-ದಿನೇ ಕ್ಷೀಣಿಸುತ್ತಾ ಸಾಗಿದಳು. ನನ್ನ ಕಣ್ಣ ಎದುರೇ ಅಮ್ಮ ಹಾಗೆ ಕಳೆಗುಂದಿದ್ದು ನೋಡಿ ನಾನು ಕುಗ್ಗಿ ಹೋಗಿದ್ದೆ. ಆಕೆಯನ್ನು ಕೈಯಲ್ಲಿ ಎತ್ತಿಕೊಂಡು ಬಂದು ರೈಲಿಗೆ ಹತ್ತಿಸಿದ್ದೆವು. ಒಂದು ತಿಂಗಳ ಕಾಲ ಮನೆಯಲ್ಲಿಯೇ ಇಟ್ಟುಕೊಂಡೆವು ಕಣ್ಣೆದುರೇ ಅಮ್ಮ ಮೂಳೆಗಳ ಚಕ್ಕದಂತಾಗಿಬಿಟ್ಟಳು. ಆಕೆಯನ್ನು ನೋಡಿದರೆ ಅಸ್ಥಿಪಂಜರ ನೋಡಿದಂತೆ ಎನಿಸುತ್ತಿತ್ತು. ಅಮ್ಮನ ಸ್ಥಿತಿ ಕಂಡು ತೀವ್ರ ಮರುಕಪಟ್ಟಿದ್ದೆ. ಅತ್ತು-ಅತ್ತು ಕಣ್ಣೀರೆಲ್ಲ ಬತ್ತಿ ಹೋಗಿತ್ತು. ಅಮ್ಮ ಸತ್ತ ದಿನ ನನಗೆ ಕಣ್ಣೀರೆ ಬಂದಿರಲಿಲ್ಲ. ನಾನು ಇಷ್ಟು ಕಲ್ಲು ಹೃದಯದವನಾ ಎಂಬ ಅನುಮಾನ ನನಗೆ ಬಂದುಬಿಟ್ಟಿತ್ತು' ಎಂದು ಅಮ್ಮನ ಸಾವು ತಮ್ಮಲ್ಲಿ ಹುಟ್ಟಿಸಿದ ಅನುಮಾನಗಳ ಬಗ್ಗೆ ಮಾತನಾಡಿದ್ದರು ವಿಜಯ್.

ಎರಡು ಸಾವು ಜೀವನನ್ನೇ ಪಲ್ಲಟ ಮಾಡಿಬಿಟ್ಟಿತು
ಅಮ್ಮ ತೀರಿಕೊಂಡಾಗ ವಿಜಯ್ ಪಿಯುಸಿ ಮೆಟ್ಟಿಲು ಸಹ ಏರದ ವಿದ್ಯಾರ್ಥಿ. ಅಮ್ಮ ಹೋದ ಕೆಲವು ತಿಂಗಳುಗಳಲ್ಲಿ ಅಪ್ಪನೂ ಕಾಲವಾದರು. ಆ ಎರಡೂ ಸಾವು ಸಂಚಾರಿ ವಿಜಯ್ ಜೀವನವನ್ನು ಪಲ್ಲಟ ಮಾಡಿ ಬಿಟ್ಟವು. ಅಲ್ಲಿಯವರೆಗೆ ಪ್ರಯಾಸವಿಲ್ಲದೆ ಸಾಗುತ್ತಿದ್ದ ಜೀವನಕ್ಕೆ ಕಷ್ಟಗಳ ಸರಮಾಲೆಯೇ ಎದುರಾಯಿತು. ಹಾಗಾಗಿಯೇ ಬದುಕಿರುವವರ ಮೇಲೆ ಸಾವು ಉಂಟು ಮಾಡುವ ಪರಿಣಾಮದ ಬಗ್ಗೆ ಚೆನ್ನಾಗಿ ಅರಿವಿತ್ತು ಸಂಚಾರಿ ವಿಜಯ್ಗೆ.

ಜೀವಗಳ ಬಗ್ಗೆ ವಿಜಯ್ಗೆ ಅತೀವ ಕಾಳಜಿ ಇತ್ತು
ಇತ್ತೀಚೆಗೆ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದಾಗ ಕೋವಿಡ್ ರೋಗಿಗಳ ಪಾಡು ನೋಡಿ ಎದೆ ನಡುಗಿ ಹೋಗಿದ್ದಾಗಿ ಸಂಚಾರಿ ವಿಜಯ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ಉಸಿರೆಳೆದುಕೊಳ್ಳಲು ರೋಗಿಗಳ ಮಾಡುತ್ತಿದ್ದ ಹೋರಾಟ ಕಂಡು ತಮ್ಮ ಜಂಘಾಬಲವೇ ಉಡುಗಿಹೋಗಿದ್ದನ್ನು ವಿಜಯ್ ಹೇಳಿದ್ದರು. ವಿಜಯ್ಗೆ ಜೀವಗಳ ಮೇಲೆ ಅಪಾರ ಕಾಳಜಿ ಇತ್ತು. ಹಾಗಾಗಿಯೇ ಅವರು ಸಾವಿಗೆ ಹೆದರುತ್ತಿದ್ದರು. ತಮ್ಮ ಸಾವಲ್ಲ ಎಲ್ಲರ ಸಾವಿಗೂ ಹೆದರುತ್ತಿದ್ದರು.
Recommended Video

ಜೀವ ಉಳಿಸಲು ಸದಾ ಸಿದ್ದರಿರುತ್ತಿದ್ದ ವಿಜಯ್
ಕೆಲವು ತಿಂಗಳ ಹಿಂದೆ ಬೆಂಗಳೂರಿನ ಒಬ್ಬ ಪುಟ್ಟ ಬಾಲಕನಿಗೆ ಅಪರೂಪವಾದ ಕ್ಯಾನ್ಸರ್ ರೋಗವೊಂದು ವಕ್ಕರಿಸಿ ಆ ಹುಡುಗನ ಚಿಕಿತ್ಸೆಗೆ ಸುಮಾರು 40-50 ಲಕ್ಷ ಹಣ ಖರ್ಚಾಗುತ್ತದೆಂದು ತಿಳಿದು ಒಂದು ವಾರ ಸತತವಾಗಿ ಆತನಿಗೆ ಸಹಾಯ ಮಾಡಲು ಶ್ರಮಿಸಿದ್ದರು. ಆದರೆ ಕೊನೆಗೂ ತಾವು ಅಂದುಕೊಂಡಂತೆ ಸಹಾಯ ಮಾಡಲಾಗಲಿಲ್ಲವೆಂದು ಅತೀವ ನೋವಿನಲ್ಲಿ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿ ಹತಾಶೆ ವ್ಯಕ್ತಪಡಿಸಿದ್ದರು ವಿಜಯ್. ಸಾವು ತರುವ ನೋವಿನ ಅರಿವಿದ್ದಿದ್ದರಿಂದಲೇ ಜೀವ ಉಳಿಸಲು ಹೋರಾಡುತ್ತಿದ್ದರು ವಿಜಯ್.


Click it and Unblock the Notifications











