twitter
    For Quick Alerts
    ALLOW NOTIFICATIONS  
    For Daily Alerts

    ಜಾತಿ ಅಸ್ಪೃಶ್ಯತೆ ಮತ್ತು ಸಂಚಾರಿ ವಿಜಯ್: ಸ್ಪಷ್ಟನೆ ನೀಡಿದ ಅಣ್ಣ

    |

    ಪ್ರತಿಭಾವಂತ ನಟ ಸಂಚಾರಿ ವಿಜಯ್ ನಿಧನರಾದ ಬೆನ್ನಲ್ಲೆ ವಿಜಯ್‌ರ ಖಾಸಗಿ ಜೀವನದ ಬಗ್ಗೆ, ಆರ್ಥಿಕ ಸ್ಥಿತಿ ಗತಿ ಬಗ್ಗೆ ಊರ ಜನ ಅವರನ್ನು ನಡೆಸಿಕೊಂಡ ರೀತಿ ಬಗ್ಗೆ ಕೆಲವು ಲೇಖನಗಳು, ವಿಡಿಯೋಗಳು ಹರಿದಾಡುತ್ತಿವೆ.

    Recommended Video

    Sanchari Vijay ಬಗ್ಗೆ ಅವರ ಸಹೋದರ ಹೇಳೋದೇನು | Filmibeat Kannada

    ಸಂಚಾರಿ ವಿಜಯ್ ಅವರ ಅಣ್ಣ ವಿರೂಪಾಕ್ಷ ಅವರು ತಮ್ಮನ ಬಗ್ಗೆ ಹರಿದಾಡುತ್ತಿರುವ ಎಲ್ಲ ಅಂತೆ-ಕಂತೆಗಳಿಗೂ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ.

    ಸಂಚಾರಿ ವಿಜಯ್ ಹಾಗೂ ಅವರ ಕುಟುಂಬದವರನ್ನು ಕಡೂರು ತಾಲ್ಲೂಕಿನ ಪಂಚನಹಳ್ಳಿಯ ಜನ ಸೂಕ್ತವಾಗಿ ನಡೆಸಿಕೊಳ್ಳಲಿಲ್ಲ. ವಿಜಯ್ ಕುಟುಂಬದವರನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗಿತ್ತು, ಅಸ್ಪೃಶ್ಯತೆ ಎಂಬುದು ವಿಜಯ್ ಹಾಗೂ ಕುಟುಂಬವನ್ನು ಕಾಡಿತ್ತು ಎಂಬುದಾಗಿ ಲೇಖಕರೊಬ್ಬರು ಬರೆದಿದ್ದಿದ್ದು ಬಹಳ ವೈರಲ್ ಆಗಿತ್ತು. ಅದೇ ವಿಷಯವಾಗಿ ಇಂದು ವಿಜಯ್‌ ಅವರ ಅಣ್ಣ ವಿರೂಪಾಕ್ಷ ಸ್ಪಷ್ಟನೆ ನೀಡಿದ್ದಾರೆ.

    ''ನಮ್ಮ ತಾಯಿ ನರ್ಸ್ ಆಗಿದ್ದರು. ಅಪ್ಪ ಚಿತ್ರಕಲಾವಿದ. ನಾನು ಮತ್ತು ನನ್ನ ತಮ್ಮ ಇನ್ನೂ ಸಣ್ಣವರಿದ್ದಾಗಲೇ ಕಡೂರು ತಾಲ್ಲೂಕಿನ ಪಂಚನಹಳ್ಳಿಗೆ ವಾಸ್ತವ್ಯಕ್ಕೆ ಬಂದೆವು. ಹಾಗಾಗಿಯೇ ನಮ್ಮ ಹುಟ್ಟೂರು ಪಂಚನಹಳ್ಳಿಯೇ ಆಗಿ ಹೋಯಿತು. ಆ ಊರಿನೊಂದಿಗೆ ನಮ್ಮ ಬಾಂಧವ್ಯ ಬಹಳ ಆಪ್ತವಾದುದು'' ಎಂದಿದ್ದಾರೆ ವಿರೂಪಾಕ್ಷ.

    ಊರ ಜನ ತಮ್ಮ ಮಕ್ಕಳಂತೆ ನೋಡಿಕೊಂಡಿದ್ದಾರೆ: ವಿರೂಪಾಕ್ಷ

    ಊರ ಜನ ತಮ್ಮ ಮಕ್ಕಳಂತೆ ನೋಡಿಕೊಂಡಿದ್ದಾರೆ: ವಿರೂಪಾಕ್ಷ

    ''ನಾವು ಸಣ್ಣ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡಾಗ ಆ ಊರ ಜನ ನಮ್ಮನ್ನು ಮನೆ ಮಕ್ಕಳಂತೆ ನೋಡಿಕೊಂಡಿದ್ದಾರೆ. ಅಲ್ಲಿ ಯಾರೂ ನಮಗೆ ಜಾತಿ ಭೇದ ಮಾಡಲಿಲ್ಲ. ನನ್ನ ತಮ್ಮನಿಗೆ ರಾಷ್ಟ್ರಪ್ರಶಸ್ತಿ ಬಂದಾಗ ಇಡೀ ಊರ ಜನ ಅವನನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿದ್ದರು. ಹಬ್ಬದಂತೆ ಸಂಭ್ರಮ ಮಾಡಿ, ಊರಿಗೆಲ್ಲ ಊಟ ಹಾಕಿಸಿದ್ದರು'' ಎಂದು ನೆನಪು ಮಾಡಿಕೊಂಡಿದ್ದಾರೆ ವಿರೂಪಾಕ್ಷ.

    ನಮ್ಮ ತಾಯಿ ಬಗ್ಗೆ ವಿಶೇಷ ಗೌರವ ಇತ್ತು: ಪಂಚನಹಳ್ಳಿ

    ನಮ್ಮ ತಾಯಿ ಬಗ್ಗೆ ವಿಶೇಷ ಗೌರವ ಇತ್ತು: ಪಂಚನಹಳ್ಳಿ

    ''ನರ್ಸ್ ಆಗಿದ್ದ ನನ್ನ ತಾಯಿ ಪಂಚನಹಳ್ಳಿಯ ಅನೇಕ ಮಹಿಳೆಯರಿಗೆ ಡೆಲಿವರಿ ಮಾಡಿಸಿದ್ದರು. ನನ್ನ ತಮ್ಮನ ವಾರಗೆಯ ಅನೇಕ ಹುಡುಗರನ್ನು ಅಮ್ಮನೇ ಡೆಲಿವರಿ ಮಾಡಿಸಿದ್ದರು. ಅಮ್ಮನೆಂದರೆ ಒಂದು ಬಗೆಯ ಗೌರವ ಊರಿನ ಅನೇಕ ಜನರಿಗೆ ಇತ್ತು. ಅಮ್ಮ ಹಾಡುಗಾರ್ತಿಯೂ ಆಗಿದ್ದ ಕಾರಣ ಊರಲ್ಲಿ ಯಾವುದೇ ಮನೆಯಲ್ಲಿ ಕಾರ್ಯಕ್ರಮವಾದರೂ ಅಮ್ಮನನ್ನು ಕರೆದುಕೊಂಡು ಹೋಗಿ ಹಾಡು ಹಾಡಿಸುತ್ತಿದ್ದರು. ನಾನೂ ಆಕೆಯ ಜೊತೆಗೆ ಹೋಗುತ್ತಿದ್ದೆ. ಹೀಗಿದ್ದಾಗ ಜಾತಿ ಭೇದ ಮಾಡಿದರು ಎನ್ನಲು ಹೇಗೆ ಸಾಧ್ಯ'' ಎಂದಿದ್ದಾರೆ ಸಂಚಾರಿ ವಿಜಯ್‌ರ ಸಹೋದರ ವಿರೂಪಾಕ್ಷ.

    ''ಅವನು ಮಾಡಿದ ಒಳ್ಳೆಯ ಕಾರ್ಯಕ್ಕೆ ಹೆಚ್ಚು ಪ್ರಚಾರ ಸಿಗಲಿಲ್ಲ''

    ''ಅವನು ಮಾಡಿದ ಒಳ್ಳೆಯ ಕಾರ್ಯಕ್ಕೆ ಹೆಚ್ಚು ಪ್ರಚಾರ ಸಿಗಲಿಲ್ಲ''

    ''ವಿಜಯ್‌ ಜಾತಿ ಅಸ್ಪೃಶ್ಯತೆಗೆ ಒಳಗಾಗಿದ್ದ ಎಂಬ ಲೇಖನಗಳು, ವಿಡಿಯೋಗಳು ಈಗ ಏಕೆ ಹರಿದಾಡುತ್ತಿವೆ ಎಂಬುದು ಗೊತ್ತಾಗುತ್ತಿಲ್ಲ. ಅವನಿಗೆ ಪ್ರಶಸ್ತಿ ಬಂದಾಗ, ಅವನ ಗೆಲುವನ್ನು ಊರವರು ಸಂಭ್ರಮಿಸಿದಾಗ ಸ್ವಲ್ಪ ಕೂಡ ಪ್ರಚಾರ ಆಗಿರಲಿಲ್ಲ. ಅವನು ಬದುಕಿದ್ದಾಗಲೇ ಅವನು ಮಾಡಿದ ಒಳ್ಳೆಯ ಕಾರ್ಯಗಳಿಗೆ ಇಷ್ಟು ಪ್ರಚಾರ ದೊರಕಿದಿದ್ದರೆ ಅವನು ಇನ್ನಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡಿರುತ್ತಿದ್ದ'' ಎಂದು ಬೇಸರದಿಂದ ನುಡಿದಿದ್ದಾರೆ ವಿರೂಪಾಕ್ಷ.

    ಪಂಚನಹಳ್ಳಿ ಜನರಿಗೆ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ: ವಿರೂಪಾಕ್ಷ

    ಪಂಚನಹಳ್ಳಿ ಜನರಿಗೆ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ: ವಿರೂಪಾಕ್ಷ

    ''ನಾನು ಪಂಚನಹಳ್ಳಿ ಜನರ ಬಳಿ ಕೇಳಿಕೊಳ್ಳುವುದು ಇಷ್ಟೆ. ಕೆಲವು ಲೇಖನಗಳು, ವಿಡಿಯೋಗಳಲ್ಲಿ ಬಂದಂಥ ಕೆಲವು ಬೇಡದ ವಿಚಾರಗಳಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ನಾನು ವೈಯಕ್ತಿಕವಾಗಿ ಕ್ಷಮೆ ಕೋರುತ್ತೇನೆ. ನಾನು ನನ್ನ ತಮ್ಮನು ಆ ರೀತಿ ಎಲ್ಲೂ ಹೇಳಿಲ್ಲ. ನಮಗೆ ಆ ಅನುಭವವೂ ಆಗಿಲ್ಲ. ಉದ್ಯಮದಲ್ಲೂ ಯಾರೂ ಸಹ ಅವನಿಗೆ ಭೇದ-ಭಾವ ಮಾಡಿಲ್ಲ. ನಮ್ಮನ್ನು ನೀವು ಹೇಗೆ ಪ್ರೀತಿಯಿಂದ ನೋಡಿಕೊಂಡಿದ್ದೀರಿ ಎಂಬುದು ನನಗೆ, ನಮ್ಮ ತಮ್ಮನಿಗೆ ಗೊತ್ತಿದೆ. ಹೀಗಿದ್ದಾಗ ನಮಗೆ ಅನ್ಯಾಯವಾಗಿದೆ ಎಂದು ಹೇಳುವುದು ತಪ್ಪಾಗುತ್ತದೆ. ಈ ಹಿಂದಿನಂತೆಯೇ ನಿಮ್ಮ ಆಶೀರ್ವಾದ ಪ್ರೀತಿ ನಮ್ಮ ಮೇಲೆ ಇರಲಿ'' ಎಂದು ಕೈ ಮುಗಿದಿದ್ದಾರೆ ವಿರೂಪಾಕ್ಷ.

    ಬಾಡಿಗೆ ಕಟ್ಟಲು ಹಣ ಇರಲಿಲ್ಲ ಎಂಬುದು ಸತ್ಯವಲ್ಲ: ವಿರೂಪಾಕ್ಷ

    ಬಾಡಿಗೆ ಕಟ್ಟಲು ಹಣ ಇರಲಿಲ್ಲ ಎಂಬುದು ಸತ್ಯವಲ್ಲ: ವಿರೂಪಾಕ್ಷ

    ''ವಿಜಯ್‌ ಬಳಿ ಬಾಡಿಗೆ ಕಟ್ಟಲು ಹಣ ಇರಲಿಲ್ಲ ಎಂದು ಕೆಲವರು ಹೇಳಿದ್ದಾರೆ. ಆದರೆ ಅದೆಲ್ಲ ನಿಜವಲ್ಲ. ಅವನಿಗೆ ಹಲವು ನಿರ್ದೇಶಕರುಗಳು ಕತೆ ಹೇಳಿ ಸಿನಿಮಾ ಆಫರ್ ಕೊಡುತ್ತಿದ್ದರು. ಅದನ್ನು ನನ್ನ ಬಳಿ ಹೇಳುತ್ತಿದ್ದ. ಅವನಿಗೆ ಒಳ್ಳೆಯ ಪಾತ್ರ ಮಾಡಬೇಕೆಂಬ ಆಸೆಯಿತ್ತು ಹಾಗಾಗಿ ಹೆಚ್ಚು ಸಿನಿಮಾ ಒಪ್ಪಿಕೊಳ್ಳುತ್ತಿರಲಿಲ್ಲ. ಚೆನ್ನಾಗಿಯೇ ದುಡಿಮೆ ಮಾಡುತ್ತಿದ್ದ ಅದನ್ನು ಸಾಮಾಜಿಕ ಸೇವೆಗೆ ಬಳಸಿಕೊಳ್ಳುತ್ತಿದ್ದ. ಅವನು ಆರ್ಥಿಕ ಸಮಸ್ಯೆಯಲ್ಲಿದ್ದ ಎಂಬುದು ನಿಜವಲ್ಲ. ಆ ವಿಷಯವನ್ನೆಲ್ಲ ಸುಮ್ಮನೆ ಎಳೆದಾಡುವುದು ಬೇಡ ಎಂಬುದು ನನ್ನ ಮನವಿ'' ಎಂದಿದ್ದಾರೆ ವಿರೂಪಾಕ್ಷ.

    English summary
    Sanchari Vijay's brother Virupaksha gave clarification about statements and articles written about Vijay facing caste based discrimination in his childhood.
    Tuesday, June 22, 2021, 19:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X