ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಮೆದುಳು ನಿಷ್ಕ್ರಿಯಗೊಂಡು ಮೃತರೆಂದು ಘೋಷಿಸಲ್ಪಟ್ಟ ನಟ ಸಂಚಾರಿ ವಿಜಯ್ ಅಂತಿಮ ದರ್ಶನ ನಾಳೆ (ಜೂನ್ 15)ರಂದು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ನಡೆಯಲಿದೆ.
ಬೆಳಿಗ್ಗೆ 8 ರಿಂದ 10 ವರೆಗೆ ಸಂಚಾರಿ ವಿಜಯ್ರವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಮಾಡಬಹುದಾಗಿದೆ. ಅದೇ ದಿನ ಸಂಜೆ ವಿಜಯ್ರ ಹುಟ್ಟೂರಾದ ಚಿಕ್ಕಮಗಳೂರಿನ ಮಂಚನಹಳ್ಳಿಯಲ್ಲಿ ನಡೆಸಲಾಗುತ್ತದೆ.
ಸರ್ಕಾರಿ ಗೌರವಗಳೊಂದಿಗೆ ಸಂಚಾರಿ ವಿಜಯ್ರ ಅಂತಿಮ ಸಂಸ್ಕಾರ ನಡೆಯಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಶಾಸಕ ವೈಎಸ್ವಿ ದತ್ತ ಒತ್ತಾಯಿಸಿದ್ದಾರೆ. ಅವರು ರಾಷ್ಟ್ರಪ್ರಶಸ್ತಿ ವಿಜೇತ ನಟ ಹಾಗಾಗಿ ಅವರಿಗೆ ಸರ್ಕಾರಿ ಗೌರವ ಸಲ್ಲಿಸಬೇಕು ಎಂದು ದತ್ತ ಕೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ, ವಿಜಯ್ರ ಆಪ್ತ ಗೆಳೆಯ ಮಂಸೋರೆ, 'ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದವರೇ ಈ ವ್ಯವಸ್ಥೆ ಮಾಡಿಸಿದ್ದಾರೆ. ಎಲ್ಲರೂ ಮಾಸ್ಕ್ ಧರಿಸಿ ಬನ್ನಿ. ಅಂತಿಮ ಸಂಸ್ಕಾರ ಸಹ ಸರ್ಕಾರಿ ಗೌರವದೊಂದಿಗೆ ನೆರವೇರಲಿದೆ' ಎಂದಿದ್ದಾರೆ.
ನಾಳೆ (ಜೂನ್ 15) ಸಂಚಾರಿ ವಿಜಯ್ ಅಂತಿಮ ದರ್ಶನಕ್ಕೆ ಪ್ರಮುಖ ರಾಜಕಾರಣಿಗಳು, ಸಿನಿಮಾ ಗಣ್ಯರು, ವಿಜಯ್ ಗೆಳೆಯರು, ರಂಗಭೂಮಿ ಗೆಳೆಯರು ಬರಲಿದ್ದಾರೆ.
ಶನಿವಾರ ರಾತ್ರಿ ಬೈಕ್ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟುತಿಂದು ಬನ್ನೇರುಘಟ್ಟ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ ಸಂಚಾರಿ ವಿಜಯ್ರ ಮೆದುಳು ನಿಷ್ಕ್ರಿಯಗೊಂಡ ಕಾರಣ ಅವರನ್ನು ಮೃತರೆಂದು ಘೋಷಿಸಲಾಯಿತು. ಸಂಚಾರಿ ವಿಜಯ್ರ ಅಂಗಾಂಗಗಳನ್ನು ಸಂಗ್ರಹಿಸಿ ಅಗತ್ಯ ಇದ್ದವರಿಗೆ ಕಸಿ ಮಾಡಲಾಗುತ್ತದೆ.
Recommended Video
ರಂಗಭೂಮಿಯಿಂದ ನಟನೆ ಆರಂಭಿಸಿದ್ದ ವಿಜಯ್, ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಲಿಂಗದೇವರು ನಿರ್ದೇಶನದ 'ನಾನು ಅವನಲ್ಲ ಅವಳು' ಸಿನಿಮಾದ ನಟನೆಗೆ ವಿಜಯ್ಗೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು. ಮುಖ್ಯ ಪಾತ್ರವೊಂದಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ಕನ್ನಡದ ನಟ ವಿಜಯ್. ದತ್ತಣ್ಣ ಅವರಿಗೆ ಪೋಷಕ ಪಾತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ದೊರಕಿದೆ.


Click it and Unblock the Notifications











