ನಮ್ಮತ್ರ ನೀಯತ್ತಿಲ್ಲ ಅಂದ್ರೆ ನೀನೇ ಇರಲ್ಲ; ವಾರ್ನಿಂಗ್ ಕೊಡುತ್ತಾ ಎಂಟ್ರಿ ಕೊಟ್ಟ ಕಿಚ್ಚನ ಅಕ್ಕನ ಮಗ

ಕಿಚ್ಚ ಸುದೀಪ್ ಎರಡು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದು, ಬಳಿಕ ಅವರ ಪತ್ನಿ ಪ್ರಿಯಾ ಸುದೀಪ್ ಸಹ ನಿರ್ಮಾಪಕಿಯಾಗಿ ಕಾರ್ಯ ನಿರ್ವಹಿಸಿದರು. ಆದರೆ ಬಳಿಕ ಕಿಚ್ಚ ಕುಟುಂಬದ ಯಾರೊಬ್ಬರೂ ಸಹ ಚಿತ್ರರಂಗ ಪ್ರವೇಶಿಸಿರಲಿಲ್ಲ.
ಆದರೀಗ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅದೂ ಸಹ ನಟನಾಗಿ, ಜತೆಗೆ ನಿರ್ದೇಶಕನಾಗಿ. ಹೌದು, ಸಂಚಿತ್ ಸಂಜೀವ್ ಜಿಮ್ಮಿ ಎಂಬ ಚಿತ್ರದ ಮೂಲಕ ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದಾರೆ.
ಇಂದು ( ಜೂನ್ 25 ) ಸಂಚಿತ್ ಸಂಜೀವ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿರುವ ಚಿತ್ರದ ವಿಶೇಷ ಟೀಸರ್ ಒಂದನ್ನು ಬಿಡುಗಡೆಗೊಳಿಸಲಾಗಿದೆ. ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ನಲ್ಲಿ ಜಿಮ್ಮಿ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ.
ಈ ಟೀಸರ್ನಲ್ಲಿ ಸೆರೆಸಿಕ್ಕ ಖಳನೋರ್ವನ ಬಳಿಗೆ ಕಾರಿನಲ್ಲಿ ಬಂದಿಳಿಯುವ ಸಂಚಿತ್ ಸಂಜೀವ್ ಸ್ಟೈಲಿಶ್ ಆಗಿ ನಡೆದುಕೊಂಡು ಆತನ ಬಳಿ ಬಂದು ಸಿಗರ್ ಸೇದುತ್ತಾ "ಪ್ರೀತೀಲಿ ನೀಯತ್ತಿಲ್ಲ ಅಂದ್ರೆ ಏನಾಗುತ್ತೆ? ಮನಸ್ಸು ಮುರಿದು ಹೋಗುತ್ತೆ. ಅದೇ ನಮ್ಮ ವ್ಯವಹಾರದಲ್ಲಿ ನೀಯತ್ತಿಲ್ಲ ಅಂದ್ರೆ ನೀನೇ ಇರಲ್ಲ" ಎಂದು ಖಡಕ್ ಡೈಲಾಗ್ ಹೊಡೆದಿದ್ದಾರೆ.
ಇನ್ನು ಸಂಚಿತ್ ಸಂಜೀವ್ ಟೀಸರ್ ಉದ್ದಕ್ಕೂ ಕಾಣಿಸಿಕೊಂಡಿರುವ ಪರಿ ನೋಡಿ ಅಬ್ಬಾ.. ಹೀರೊ ಅಂದ್ರೆ ಈ ಪರಿ ಫಿಟ್ ಇರಬೇಕು ಎಂದು ನೆಟ್ಟಿಗರು ಪ್ರಶಂಸಿಸಿದ್ದಾರೆ. ಹೌದು, ಸಂಚಿತ್ ಲುಕ್ ಹಾಗಿದೆ. ಪ್ರಸ್ತುತ ಚಿತ್ರರಂಗಕ್ಕೆ ಏನು ಬೇಕೋ ಅದನ್ನು ಸರಿಯಾಗಿ ತಯಾರಿ ಮಾಡಿಕೊಂಡೇ ಬಂದ ಹಾಗಿದೆ.
ಸಂಚಿತ್ ಸಂಜೀವ್ ಬಾಡಿಯಲ್ಲಿ, ನಡೆಯುವ ಶೈಲಿನಲ್ಲಿ, ಡೈಲಾಗ್ ಡೆಲಿವರಿ ಮಾಡುವ ವಿಧಾನದಲ್ಲಿ ಆತ ಮಾಡಿರುವ ಹೋಮ್ ವರ್ಕ್ ಎದ್ದು ಕಾಣುತ್ತಿದೆ. ಇನ್ನು ಸಂಚಿತ್ ಸಂಜೀವ್ ದನಿ ಕಿಚ್ಚ ಸುದೀಪ್ ದನಿ ಹಾಗೆಯೇ ಇದ್ದು, ಕಿಚ್ಚನ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಇನ್ನು ಈ ಚಿತ್ರಕ್ಕೆ ಸ್ವತಃ ಸಂಚಿತ್ ಸಂಜೀವ್ ಆಕ್ಷನ್ ಕಟ್ ಹೇಳಿದ್ದು, ಕೆಪಿ ಶ್ರೀಕಾಂತ್, ಜಿ ಮನೋಹರನ್ ಹಾಗೂ ಪ್ರಿಯಾ ಸುದೀಪ್ ಬಂಡವಾಳ ಹೂಡಿದ್ದಾರೆ. ವಾಸುಕಿ ವೈಭವ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಟೀಸರ್ ಉದ್ದಕ್ಕೂ ಬರುವ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಟೀಸರ್ ನೋಡುಗರಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿದೆ.
ಕೆಲ ಕಿರುಚಿತ್ರ ಹಾಗೂ ಜಾಹೀರಾತುಗಳಲ್ಲಿ ಕ್ಯಾಮೆರಾ ಹಿಂದೆ ಕೆಲಸ ಮಾಡಿದ್ದ ಸಂಚಿತ್ ಸಂಜೀವ್ ಅಂಬಿ ನಿಂಗ್ ವಯಸ್ಸಾಯ್ತೋ ಎಂಬ ಚಿತ್ರದಲ್ಲಿಯೂ ಸಹ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಂಚಿತ್ ಸಂಜೀವ್ ನ್ಯೂಯಾರ್ಕ್ನಲ್ಲಿ ನಟನೆ, ನಿರ್ದೇಶನ ಹಾಗೂ ಛಾಯಾಗ್ರಹಣಕ್ಕೆ ಸಂಬಂಧಿಸಿದ ತರಬೇತಿಗಳನ್ನು ಪಡೆದುಕೊಂಡಿದ್ದು, ಎಂಎಂಎ ಫೈಟಿಂಗ್ನಲ್ಲಿ ಸಹ ಪಳಗಿದ್ದಾರೆ. ಒಟ್ಟಿನಲ್ಲಿ ಚಿತ್ರರಂಗಕ್ಕೆ ಬೇಕಾದ ತಯಾರಿಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡಿರುವ ಸಂಚಿತ್ ಸಂಜೀವ್ ಯಾವ ರೀತಿ ಜನರಿಗೆ ಇಷ್ಟವಾಗ್ತಾರೋ ಕಾದು ನೋಡಬೇಕಿದೆ.
ಅಂದ್ಹಾಗೆ ಈಗ ಚಿತ್ರರಂಗಕ್ಕೆ ಕಾಲಿಡುವವರು ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿಕೊಂಡೇ ಚಿತ್ರರಂಗ ಪ್ರವೇಶ ಮಾಡುತ್ತಿದ್ದು, ಈ ಹಿಂದಿನ ರೀತಿ ನೆಪೋಟಿಸಂ ಎಂದು ಕಾಲೆಳೆಯುವವರಿಗೆ ಹೆಚ್ಚಿನ ಅವಕಾಶವನ್ನು ಸ್ಟಾರ್ ನಟರ ಆಪ್ತ ಕಲಾವಿದರು ನೀಡುತ್ತಿಲ್ಲ. ಹೌದು, ಈ ಹಿಂದೆ ಈ ರೀತಿ ಸ್ಟಾರ್ ನಟರ ಮನೆಯವರು ಚಿತ್ರರಂಗಕ್ಕೆ ಕಾಲಿಟ್ಟರೆ ನೆಪೊ ಕಿಡ್ ಎಂದು ಟ್ರೋಲ್ ಮಾಡುತ್ತಿದ್ದರು. ಆದರೆ ಜಾಣ ಪ್ರೇಕ್ಷಕರಿರುವ ಈಗಿನ ಚಿತ್ರರಂಗದಲ್ಲಿ ಟ್ಯಾಲೆಂಟ್ ಇದ್ದವರು ಗೆಲ್ಲಲಿದ್ದು, ಇಲ್ಲದವರು ಸೋತು ಬದಿಗೆ ಸರಿಯಲಿದ್ದಾರೆ.


Click it and Unblock the Notifications











