ಅಂದು ದಾದಾ.. ಇಂದು ಕಿಚ್ಚ ಸುದೀಪ್: ಪುರಿ ಬೀಚ್ನಲ್ಲಿ ಅರಳಿದ ಕಿಚ್ಚನ ಮರಳು ಶಿಲ್ಪ!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸುದೀಪ್ ಅದ್ದೂರಿ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಈ ವರ್ಷವೂ ಸರಳವಾಗಿ ಅಭಿಮಾನಿಗಳನ್ನು ಭೇಟಿ ಮಾಡಿ ಶುಭಾಶಯ ಸ್ವೀಕರಿಸಲಿದ್ದಾರೆ. ಇನ್ನು ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮರಳು ಶಿಲ್ಪದ ತವರೂರು ಒರಿಸ್ಸಾದ ಪುರಿ ಬೀಚ್ನಲ್ಲಿ ಸುದೀಪ್ ಅವರ ಮರಳು ಶಿಲ್ಪ ಅರಳಿದೆ.
ಸುದೀಪ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಚಿರಪರಿಚಿತ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಶುರುವಾಗುವುದಕ್ಕೂ ಮೊದಲೇ ಬೇರೆ ಭಾಷೆಗಳಲ್ಲಿ ನಟಿಸಿ, ದೇಶ್ಯಾದ್ಯಂತ ಹೆಸರು ಮಾಡಿದ್ದರು. ಈ ಬಾರಿ ಸುದೀಪ್ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಲು ಮಾನಸ್ ಕುಮಾರ್ ಎಂಬ ಹೆಸರಾಂತ ಮರಳುಶಿಲ್ಪಿ ಒರಿಸ್ಸಾದ ಸಮುದ್ರ ತೀರದಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ನಿರ್ಮಿಸುವ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. ಸುದೀಪ್ ಅವರ ಮರಳು ಶಿಲ್ಪ ನೋಡಿ ಅಭಿಮಾನಿಗಳಂತೂ ಖುಷಿಯಾಗಿದ್ದಾರೆ.

ಕಿಚ್ಚನ ಈ ಶಿಲ್ಪವು 20 ಅಡಿ ಅಗಲ, 7 ಅಡಿ ಎತ್ತರವಿದೆ. ಈ ಶಿಲ್ಪಕ್ಕಾಗಿ ಸುಮಾರು 20 ಟನ್ ಮರಳನ್ನು ಬಳಸಲಾಗಿದೆ ಎಂದು ಶಿಲ್ಪಿ ಮಾನಸ್ ಕುಮಾರ್ ತಿಳಿಸಿದ್ದಾರೆ. ದಕ್ಷಿಣ ಭಾರತದಲ್ಲಿಯೇ ಈ ಮರಳು ಶಿಲ್ಪ ಗೌರವಕ್ಕೆ ಪಾತ್ರವಾಗುತ್ತಿರುವ ಎರಡನೇ ಕಲಾವಿದರೆಂದರೆ ಅದು ಕಿಚ್ಚ ಸುದೀಪ್ ಮಾತ್ರ. ಈ ಹಿಂದೆ 2020ರಲ್ಲಿ ಡಾ.ವಿಷ್ಣುವರ್ಧನ್ ಅವರ 70ನೇ ಜನ್ಮದಿನ ಪ್ರಯುಕ್ತ ಮರಳು ಶಿಲ್ಪದ ಗೌರವ ನೀಡಲಾಗಿತ್ತು. ಮನೀಶ್ ಕುಮಾರ್ 6 ಅಡಿ ಎತ್ತರ 15 ಅಡಿ ಅಗಲದ ದಾದಾ ಮರಳು ಶಿಲ್ಪ ರಚಿಸಿದ್ದರು. ಆ ಮರಳು ಶಿಲ್ಪವೂ ಅಭಿಮಾನಿಗಳ ಮನಗೆದ್ದಿತ್ತು. ಇನ್ನು ಮರಳು ಶಿಲ್ಪದಲ್ಲಿ 'ಕನ್ನಡವೇ ನಮ್ಮಮ್ಮ' ಎಂದು ಬರೆದಿರುವುದು ಗಮನ ಸೆಳೆಯುತ್ತಿದೆ.

ವಿಷ್ಣು ದಾದಾ ಬಿಟ್ಟರೆ ಇದುವರೆಗೆ ಯಾವುದೇ ದಕ್ಷಿಣ ಭಾರತದ ನಟರಿಗೆ ಈ ಗೌರವ ದಕ್ಕಿರಲಿಲ್ಲ. ಇದೀಗ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಅವರಿಗೆ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಈಗಾಗಲೇ ಭಾರತ ಸರ್ಕಾರದ ಅಂಚೆ ಇಲಾಖೆಯಿಂದ ವಿಶೇಷ ಲಕೋಟೆಯ ಗೌರವ ಕಿಚ್ಚನಿಗೆ ಸಿಗುತ್ತಿದೆ. ಇದರ ಬೆನ್ನಲ್ಲೇ ದೂರದ ಒರಿಸ್ಸಾದ ಪುರಿ ಬೀಚ್ನಲ್ಲಿ ಸುದೀಪ್ ಮರಳು ಶಿಲ್ಪ ಅರಳಿರುವುದು ವಿಶೇಷ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊಗಳು ರಾರಾಜಿಸುತ್ತಿದೆ.


Click it and Unblock the Notifications











