'ಬಾಸ್ ಈಸ್ ಬ್ಯಾಕ್' ಎಂದ ಅಭಿಮಾನಿಗಳಿಗೆ ಬಂದಿರುವ ಸೂಚನೆ ಏನು?
131 ದಿನಗಳ ಬಳಿ ನಟ ದರ್ಶನ್ ಜೈಲಿನಿಂದ ಬಿಡುಗಡೆ ಆಗುತ್ತಿದ್ದಾರೆ. ಚಿಕಿತ್ಸೆಗಾಗಿ ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ಸಿಕ್ಕಿದೆ. ಇದು ಸಹಜವಾಗಿಯೇ ದರ್ಶನ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿ ಅಭಿಮಾನಿಗಳು ಖುಷಿಪಡುತ್ತಿದ್ದಾರೆ. 'ಬಾಸ್ ಈಸ್ ಬ್ಯಾಕ್' ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ನಟ ದರ್ಶನ್ ಬೇಗ ಸಂಕಷ್ಟದಿಂದ ಪಾರಾಗಿ ಬರಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದರು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಿದ್ದರು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಾನೂನು ಹೋರಾಟದ ಜೊತೆಗೆ ಹಲವು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದರು. ಹೇಗಾದರೂ ಮಾಡಿ ಜಾಮೀನು ಕೊಡಿಸಿ ಪತಿಯನ್ನು ಕರೆದುಕೊಂಡು ಬರಲು ಪ್ರಯತ್ನಿಸಿದ್ದರು.

ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ಜಾಮೀನಿ ಅರ್ಜಿ ವಾದ ಮಂಡಿಸಿದ್ದರು. 57ನೇ ಸಿಸಿಹೆಚ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ರಿಜೆಕ್ಟ್ ಆಗಿತ್ತು. ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತ್ತು. ಆದರೆ ಹೈಕೋರ್ಟ್ನಲ್ಲಿ ಜಾಮೀನು ಸಿಗುವುದು ಖಚಿತ ಎಂದು ದರ್ಶನ್ ಪರ ವಕೀಲರು ಹೇಳಿದ್ದರು. ಅದರಂತೆ ಇದೀಗ ಮಧ್ಯಂತರ ಜಾಮೀನು ಸಿಕ್ಕಿದೆ. ದರ್ಶನ್ ಬೆನ್ನುಹುರಿಯಿಂದ ಬಳಲುತ್ತಿದ್ದಾರೆ. ಕೂರಲು, ನಿಲ್ಲಲು ಸಾಧ್ಯವಾಗದೇ ನೋವು ಅನುಭವಿಸುತ್ತಿದ್ದಾರೆ.
ಇತ್ತೀಚೆಗೆ ಬಳ್ಳಾರಿ ಜೈಲಿನಿಂದ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಸು ಸ್ಕ್ಯಾನಿಂಗ್ ಮಾಡಿಸಲಾಗಿತ್ತು. ದರ್ಶನ್ ಆರೋಗ್ಯ ಸಮಸ್ಯೆಯ ಬಗ್ಗೆ ವೈದ್ಯರ ವರದಿಯನ್ನು ಕೋರ್ಟ್ಗೆ ಸಲ್ಲಿಸಲಾಗಿತ್ತು. ಸೂಕ್ತ ಚಿಕಿತ್ಸೆ ಕೊಡಿಸದೇ ಇದ್ದರೆ ಆರೋಗ್ಯ ಸ್ಥಿತಿ ಗಂಭೀರ ಸ್ವರೂಪ ಪಡೆಯುವ ಬಗ್ಗೆ ವಕೀಲರು ಕೋರ್ಟ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಕೂಡಲೇ ಸರಿಯಾದ ಚಿಕಿತ್ಸೆ ನೀಡದಿದ್ದರೆ ದರ್ಶನ್ ಕಾಲಿಗೆ ಪಾರ್ಶ್ವವಾಯು ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದರು. ಹಾಗಾಗಿ ಹೆಲ್ತ್ ಗ್ರೌಂಡ್ಸ್ ಅಡಿಯಲ್ಲಿ 6 ವಾರಗಳ ಕಾಲ ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕಿದೆ.
ದರ್ಶನ್ ಜೈಲು ಸೇರಿದ ದಿನದಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕೆಸರೆರಚಾಟ ಆರಂಭಿಸಿದ್ದರು. ಕೆಲವರ ವಿರುದ್ಧ ಟ್ರೋಲ್ ಮಾಡಿದ್ದರು. ದರ್ಶನ್ ಬೆಂಬಲಿಸಿ ಮಾಧ್ಯಮಗಳನ್ನು ದೂರಿದ್ದರು. ಅಂತೂ ಇಂತೂ ಇದೀಗ ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕಿ ರಿಲೀಫ್ ಪಡೆದಿದ್ದಾರೆ. ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಕೆಲವರು ಈಗಾಗಲೇ ತಮ್ಮ ವಿರುದ್ಧ ಮಾತನಾಡಿದವರಿಗೆ ತಿರುಗೇಟು ಕೊಡುತ್ತೀವಿ ಎನ್ನುವ ಅರ್ಥದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಇತ್ತ ಡಿ ಕಂಪನಿ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಲಾಗಿದೆ. "ಎಲ್ಲಾ ತೂಗುದೀಪ ಪರಿವಾರದ ಅಭಿಮಾನಿಗಳಿಗೆ ಈ ಮೂಲಕ ತಿಳಿಸುವುದು ಏನೆಂದರೆ ಡಿ ಬಾಸ್ರವರು ಬಿಡುಗಡೆಯಾಗಿರುವುದು ಚಿಕಿತ್ಸೆಯ ಸಲುವಾಗಿ ಆದ್ದರಿಂದ, ಅಭಿಮಾನಿಗಳು ದರ್ಶನ್ ಅವರ ಮನೆ ಮುಂದೆ ಹೋಗಿ ಪಟಾಕಿ ಹೊಡೆಯುವುದು, ಕೂಗಾಡುವುದು ಮಾಡುವಂತಿಲ್ಲ, ಹಾಗೂ ಮಾಧ್ಯಮಗಳಿಗೆ, ಬೇರೆ ನಟರಿಗೆ, ಪೊಲೀಸ್ ಅಧಿಕಾರಿಗಳ ಬಗ್ಗೆ ಹಗುರವಾಗಿ ಮಾತನಾಡುವಂತಿಲ್ಲ ಎಂದು ತಿಳಿಸುತ್ತೇವೆ" ಎಂದು ಪೋಸ್ಟ್ ಮಾಡಿದ್ದಾರೆ.
ನಟ ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು ಸಂಜೆ ವೇಳೆಗೆ ಬಳ್ಳಾರಿ ಜೈಲಿನಿಂದ ಮೈಸೂರಿಗೆ ವಾಪಸ್ ಆಗುವ ನಿರೀಕ್ಷೆಯಿದೆ. ಈಗಾಗಲೇ ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಹೋಗಿದ್ದಾರೆ. ಪತಿಗೆ ಊಟವನ್ನು ತೆಗೆದುಕೊಂಡು ಹೋಗಿದ್ದಾರೆ. ಬಳ್ಳಾರಿ ಜೈಲಿನ ಮುಂಭಾಗ ಪೊಲೀಸ್ ಭದ್ರತೆ ಹೆಚ್ಚಿಸಲಾಗುತ್ತಿದೆ. ದರ್ಶನ್ ಬಿಡುಗಡೆ ಹಿನ್ನೆಲೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬಳ್ಳಾರಿ ಜೈಲಿನಿಂದ ದರ್ಶನ್ ನೇರವಾಗಿ ಮೈಸೂರಿನಲ್ಲಿರುವ ತಮ್ಮ ತಾಯಿ ಮನೆಗೆ ತೆರಳುತ್ತಾರೆ ಎಂದು ಆಪ್ತರಿಂದ ಮಾಹಿತಿ ಲಭ್ಯವಾಗುತ್ತಿದೆ. ಬಳಿಕ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಾರೆ ಎನ್ನಲಾಗ್ತಿದೆ.


Click it and Unblock the Notifications











