ಕನ್ನಡದಲ್ಲಿ ಐಎಎಸ್ ಪಾಸ್ ಮಾಡಿದ ಪ್ರಥಮ ಕನ್ನಡಿಗ ; ಬಾ ನಲ್ಲೆ ಮಧು ಚಂದ್ರಕೆ ಖ್ಯಾತಿಯ ಕೆ.ಶಿವರಾಂ ನಿಧನ
ಬಾ ನಲ್ಲೆ ಮಧು ಚಂದ್ರಕೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು ಕೆ.ಶಿವರಾಂ. ಚಾಕ್ಲೇಟ್ ಹೀರೋಗಳ ಜಮಾನಾದಲ್ಲಿ ಇವರನ್ನ ನೋಡಿದ್ದ ಅನೇಕರು ಮರದ ಕೊರಡಿನಂತಿರೋ ಹೀರೊ ಎಂದು ಮಾತನಾಡಿಕೊಂಡಿದ್ದರು. ಆದರೆ. ಮಾತನಾಡಿಕೊಂಡವರಿಗೆಲ್ಲ ಬಾ ನಲ್ಲೆ ಮಧು ಚಂದ್ರಕೆ ಚಿತ್ರದ ಅತ್ಯದ್ಭುತ ಗೆಲುವು ಉತ್ತರವನ್ನೂ ಕೊಟ್ಟಿತ್ತು.
ಅಲ್ಲಿಂದಾಚೆ ವಸಂತಕಾವ್ಯ', 'ಖಳನಾಯಕ', 'ಯಾರಿಗೆ ಬೇಡ ದುಡ್ಡು', 'ಗೇಮ್ ಫಾರ್ ಲವ್', 'ನಾಗ', 'ಓ ಪ್ರೇಮ ದೇವತೆ ಚಿತ್ರಗಳಲ್ಲಿ ಶಿವರಾಂ ನಟಿಸಿದರು. ಆದರೆ ಬಾ ನಲ್ಲೆ ಮಧು ಚಂದ್ರಕೆ ಚಿತ್ರಕ್ಕೆ ಸಿಕ್ಕಂತ ಗೆಲುವು ಕೆ.ಶಿವರಾಂ ಅವರಿಗೆ ಸಿಗಲಿಲ್ಲ.

ಹಾಗಂಥ ಕೆ.ಶಿವರಾಂ ಹೆಚ್ಚು ತಲೆಯನ್ನೂ ಕೆಡಿಸಿಕೊಳ್ಳಲಿಲ್ಲ. ಯಾಕೆಂದರೆ ಸಿನಿಮಾ ಶಿವರಾಂ ಅವರ ಪಾಲಿಗೆ ಕೇವಲ ಹವ್ಯಾಸವಾಗಿತ್ತಷ್ಟೇ. ವೃತ್ತಿಯಲ್ಲಿ ಕೆ.ಶಿವರಾಂ ಐಎಎಸ್ ಅಧಿಕಾರಿಯಾಗಿದ್ದರು. 1985ರಲ್ಲಿ ಕೆಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದ ಕೆ.ಶಿವರಾಂ ಆ ನಂತರ ಐಎಎಸ್ ಅಧಿಕಾರಿಯೂ ಆಗಿದ್ದರು. ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆಯನ್ನ ಬರೆದು ಉತ್ತೀರ್ಣರಾದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆ ಇವರದ್ದು
ಐಎಎಸ್ ವೃತ್ತಿ ಜೀವನದಲ್ಲಿ ವಿಜಯಪುರ, ಬೆಂಗಳೂರು, ಮೈಸೂರು, ಕೊಪ್ಪಳ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಕೆ.ಶಿವರಾಂ ಸೇವೆಯನ್ನ ಸಲ್ಲಿಸಿದ್ದರು. ಇನ್ನೂ ಸಮೂಹ ಶಿಕ್ಷಣ ಆಯುಕ್ತರಾಗಿ, ಆಹಾರ ಆಯುಕ್ತರಾಗಿ ಮತ್ತು MSIL ನ MD ಆಗಿ ಸೇವೆ ಸಲ್ಲಿಸಿದ್ದರು ಕೆ.ಶಿವರಾಂ.

2013 ರಲ್ಲಿ ನಿವೃತ್ತಿಯ ನಂತರ ರಾಜಕೀಯದತ್ತ ಮುಖ ಮಾಡಿದ ಕೆ.ಶಿವರಾಂ, ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದರು. 2014 ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೆ ಆ ನಂತರ ಕಾಂಗ್ರೆಸ್ ನಲ್ಲಿ ಸೂಕ್ತ ಸ್ಥಾನ ಮಾನ ಸಿಗದ ಹಿನ್ನೆಲೆ ಕೆ.ಶಿವರಾಂ 2016 ರಲ್ಲಿ ಬಿ.ಜೆ.ಪಿ ಪಕ್ಷಕ್ಕೆ ಸೇರಿದರು.
ಇಷ್ಟೇ ಅಲ್ಲ ಛಲವಾದಿ ಮಹಾಸಭಾ ಅಧ್ಯಕ್ಷರು ಆಗಿದ್ದ ಕೆ.ಶಿವರಾಂ, ದಲಿತ ಪರ ಹೋರಾಟದಲ್ಲಿ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದರು. 2007ರಲ್ಲಿ ಬಿಡುಗಡೆ ಆದ 'ಟೈಗರ್' ಚಿತ್ರಕ್ಕೆ ಕೊನೆಯದಾಗಿ ಕೆ.ಶಿವರಾಂ ಬಣ್ಣ ಹಚ್ಚಿದ್ದರು. ಹೀಗೆ ತಮ್ಮ ಜೀವಿತಾವಧಿಯಲ್ಲಿ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ, ತಮ್ಮದೇ ಕೊಡುಗೆಯನ್ನ ನೀಡಿದ್ದ ಕೆ.ಶಿವರಾಂ ಇನ್ನು ನೆನಪು ಮಾತ್ರ

ಕೆ.ಶಿವರಾಂ ಅವರಿಗೆ ಏನಾಗಿತ್ತು..?
ಫೆ.3ರಂದು ಆಸ್ಪತ್ರೆಗೆ ದಾಖಲಾಗಿದ್ದ ಶಿವರಾಮ್ ಅವರಿಗೆ ಒಂದು ಶಸ್ತ್ರ ಚಿಕಿತ್ಸೆಯೂ ಆಗಿತ್ತು.ಕಳೆದ 5-6 ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತದ ರೀತಿಯಲ್ಲಿ ಆಯ್ತು. ಅಲ್ಲಿಂದ ಪರಿಸ್ಥಿತಿ ಕೊಂಚ ಗಂಭೀರವಾಯಿತು. ಆಸ್ಪತ್ರೆಗೆ ಅಡ್ಮಿಟ್ ಆದ ಮೇಲೆ ಲೋ ಬಿಪಿ ಸಮಸ್ಯೆ ಶುರುವಾಗಿತ್ತು.
ಶಿವರಾಮ್ ಅವರಿಗೆ ಡಾ.ಶೇಖರ್ ಪಾಟೀಲ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಶಿವರಾಮ್ ಸ್ಪಂದಿಸುತ್ತಿದ್ದಾರೆ ಎಂದು ನಿನ್ನೆ ಹೇಳಲಾಗಿತ್ತು. ಹೀಗಾಗಿ ಕೆ.ಶಿವರಾಂ ಗುಣಮುಖರಾಗಿ ಬರುವ ವಿಶ್ವಾಸ ಅವರ ಅಸಂಖ್ಯಾತ ಬೆಂಬಲಿಗರಲ್ಲಿ ಇತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ, ನಿಧನರಾದರು. ಮೋದಿ ರಸ್ತೆಯ ಸ್ವಗೃಹದಲ್ಲಿ ಕೆ.ಶಿವರಾಂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.


Click it and Unblock the Notifications











