"ಆ ಒಂದು ಕಾಲ್ ಅಲ್ಲೇ ಓಕೆ ಆಯ್ತು": ಹೊಂಬಾಳೆ ಫಿಲ್ಮ್ಸ್ 'ಕಾಂತಾರ' ಆಯ್ಕೆ ಮಾಡಿದ್ದೇಕೆ..?
ಸ್ಯಾಂಡಲ್ವುಡ್ ನಟ ನಿರ್ದೇಶಕ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ 'ಕಾಂತಾರ' ಚಿತ್ರ ಸಪ್ಟೆಂಬರ್ 30ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಕರಾವಳಿ ಭಾಗದ ಸಂಸ್ಕೃತಿಯ ಜೊತೆಗೆ ಒಂದು ದಂತಕತೆಯೊಂದನ್ನು ಹೇಳಲು ಚಿತ್ರತಂಡ ಹೊರಟಿದೆ. 'ಕಾಂತಾರ' ಚಿತ್ರದ ಟ್ರೈಲರ್, ಪೋಸ್ಟರ್ ಹಾಗೂ ಹಾಡಿನ ಮೂಲಕವೇ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಈಗಾಗಲೇ ಚಿತ್ರದ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿದೆ. ಕನ್ನಡ ಚಿತ್ರರಂಗಕ್ಕೆ ಉತ್ತಮ ಚಿತ್ರಗಳನ್ನೇ ನೀಡಿರುವ ರಿಷಬ್ ಶೆಟ್ಟಿ ಅವರ ಮುಂದಿನ ಚಿತ್ರದ ಬಗ್ಗೆಯೂ ಪ್ರೇಕ್ಷಕರು ಭರವಸೆ ಇಟ್ಟಿದ್ದು, ಮುಗಿಬಿದ್ದು ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಚಿತ್ರ ಬಿಡುಗಡೆಗೂ ಒಂದು ದಿನದ ಮೊದಲು ಸಪ್ಟೆಂಬರ್ 29ರಂದು ಪೇಯ್ಡ್ ಪ್ರೀಮಿಯರ್ ಶೋಗಳನ್ನು ಕೂಡು ಚಿತ್ರತಂಡ ಆಯೋಸಿದೆ.
'ದಿ ವಲ್ಡ್ ಆಫ್ ಕಾಂತಾರ' ಮೂಲಕ ಚಿತ್ರದ ಮೇಕಿಂಗ್ ವಿಡಿಯೋ ಕೂಡ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಚಿತ್ರ ಎಷ್ಟು ಅದ್ಧೂರಿಯಾಗಿ ನಿರ್ಮಾಣಗೊಂಡಿದೆ ಎನ್ನುವುದನ್ನು ನೋಡಬಹುದಾಗಿದೆ. ಈ ಹಿಂದೆ ಸ್ಯಾಂಡಲ್ವುಡ್ನ ಸ್ಟಾರ್ ನಟರ ಚಿತ್ರಕ್ಕೆ ಬಂಡವಾಳ ಹಾಕಿದ್ದ ಹೊಂಬಾಳೆ ಫಿಲ್ಮ್ಸ್ ಮೊದಲ ಬಾರಿಗೆ ರಿಷಬ್ ಶೆಟ್ಟಿ ಚಿತ್ರಕ್ಕೆ ಬಂಡವಾಳ ಹಾಕಿದೆ. ಹೊಂಬಾಳೆ ಫಿಲ್ಮ್ಸ್ ರಿಷಬ್ ಶೆಟ್ಟಿ ಚಿತ್ರವನ್ನು ಯಾಕೆ ಆಯ್ಕೆ ಮಾಡಿಕೊಂಡರು ಎನ್ನುವ ಪ್ರಶ್ನೆಗೆ ಸ್ವತಃ ರಿಷಬ್ ಶೆಟ್ಟಿ ಉತ್ತರ ನೀಡಿದ್ದಾರೆ.

ಲಾಕ್ ಡೌನ್ನಲ್ಲಿ 'ಕಾಂತಾರ' ಪರಿಕಲ್ಪನೆ
ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ರಿಷಬ್ ಶೆಟ್ಟಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಆದಾಗಿನಿಂದ 'ಕಾಂತಾರ' ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ನನಗೆ ಉತ್ತಮ ಸ್ನೇಹಿತರಾಗಿದ್ದರು. ಯಾವಾಗಲೂ, ಎಲ್ಲಿ ಸಿಕ್ಕಾಗಲೂ ಸಿನಿಮಾ ಬಗ್ಗೆ, ಮುಂದಿನ ಚಿತ್ರಗಳ ಆಲೋಚನೆಗಳ ಬಗ್ಗೆ ಮಾತನಾಡುತ್ತಿರುತ್ತೇವೆ. 'ಕಾಂತಾರ' ರೀತಿಯ ಒಂದು ಆಲೋಚನೆ ಇದೆ ಎಂದು ಆಗಾಗ ಚರ್ಚೆ ಮಾಡುತ್ತಿದ್ದೆವು. ಎರಡು ಬರ್ತ್ಡೇ ಸೆಲೆಬ್ರೇಷನ್ ಸಮಯದಲ್ಲಿ ಈ ರೀತಿಯ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದೆವು. ಆದರೆ ಎರಡನೇ ಬಾರಿ ಲಾಕ್ ಡೌನ್ ಆದ ಸಂದರ್ಭದಲ್ಲಿ ನನಗೆ ಈ ಪರಿಕಲ್ಪನೆ ಇಷ್ಟ ಆಯ್ತು ಎಂದರು.

'ಕಾಂತಾರ' ಚಿತ್ರಕ್ಕೆ ಬಜೆಟ್ ಲೆಕ್ಕ ಹಾಕಿಲ್ಲ
ನನಗೆ 'ಕಾಂತಾರ' ರೀತಿಯ ಪರಿಕಲ್ಪನೆಗೆ ಸ್ಪಷ್ಟತೆ ಸಿಕ್ಕ ಮೇಲೆ ತಕ್ಷಣವೇ ಕಾರ್ತಿಕ್ಗೆ ಕರೆ ಮಾಡಿ ಹೀಗೊಂದು ಕಥೆ ಇದೆ ಎಂದೆ. ಅವರು ಕೂಡ ಕತೆ ಇಂಟ್ರಸ್ಟಿಂಗ್ ಆಗಿದೆ. ನಾನು ಮುಂದಿನ ಹಂತದಲ್ಲಿ ಮಾತನಾಡುತ್ತೇನೆ ಎಂದರು. ಇದಾದ ಮಾರನೇ ದಿನವೇ ವಿಜಯ್ ಕಿರಗಂದೂರು ಅವರ ಬಳಿ ಮಾತನಾಡಿದೆವು. ಒಂದು ಫೋನ್ ಕಾಲ್ ಅಲ್ಲೇ ಕತೆ ಓಕೆ ಆಯ್ತು. ಆಮೇಲೆ ಚಿತ್ರಕ್ಕೆ ಬಜೆಟ್ ಲೆಕ್ಕನೂ ಹಾಕಿಲ್ಲ. ಏನೋ ಅಂದುಕೊಂಡು ಸಿನಿಮಾ ಆರಂಭಿಸಿದೆವು. ಈಗ ಅದು ಎಲ್ಲಿಗೋ ಹೋಗಿದೆ. ನಮ್ಮ ಕೆರಾಡಿಯಲ್ಲಿ ಊರಿಗೆ ಊರೇ ಸೆಟ್ ಹಾಕಿಕೊಂಡಿದ್ದೆವು. ಹೀಗಾಗಿ ಅದಕ್ಕೆ ಕೆರಾಡಿ ಫಿಲ್ಮಂ ಸಿಟಿ ಅಂತಾನೆ ಹೆಸರಿಟ್ಟಿದ್ದೇವೆ ಎಂದು ಹೊಂಬಾಳೆ ಫಿಲ್ಮ್ಸ್ ಗೆ ತಮ್ಮ ಕತೆ ಆಯ್ಕೆಯಾದ ಬಗ್ಗೆ ರಿಷಬ್ ಹೇಳಿದ್ದಾರೆ.

ಪ್ರಕೃತಿ-ಮನುಷ್ಯರ ನಡುವಿನ ಸಂಘರ್ಷ ಚಿತ್ರದ ತಿರುಳು
ಇನ್ನು ಚಿತ್ರದ ಶೀರ್ಷಿಕೆ ಬಗ್ಗೆ ಹಲವರಿಗೆ ಕುತೂಹಲವಿದೆ. 'ಕಾಂತಾರ' ಎಂದರೇನು ಎನ್ನುವ ಪ್ರಶ್ನೆಗೆ ರಿಷಬ್ ಶೆಟ್ಟಿ ಉತ್ತರಿಸಿದ್ದಾರೆ. 'ಕಾಂತಾರ' ಎಂದರೆ ಒಂದು ನಿಗೂಢವಾದ ಕಾಡು ಎಂದರ್ಥ. ಇದುಒಂದು ಸೂಚನೆ ಕೂಡ. ಈ ಚಿತ್ರದ ಮೂಲಕ ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು ತೋರಿಸಲು ಹೊರಟ್ಟಿದ್ದೇವೆ. ಒಂದು ಜನಪದ ಮುಖಾಂತರವಾಗಿ, ಒಂದು ಭಾಗದ ಸಂಸ್ಕೃತಿಯೊಂದಿಗೆ ಈ ವಿಚಾರ ಹೇಳಲು ಹೊರಟ್ಟಿದ್ದೇವೆ. ಪೂರ್ತಿ ಸಿನಿಮಾದಲ್ಲಿ ಊರು, ಕಾಡು, ಭೂಮಿ ಇರುತ್ತದೆ. ನಮ್ಮಲ್ಲಿ ಭೂಮಿ ಎಂದ ತಕ್ಷಣ ಪರಶುರಾಮ ಸೃಷ್ಟಿ ಎನ್ನುತ್ತೇವೆ. ಪೂಜನೀಯವಾಗಿ ನೋಡುತ್ತೇವೆ ಎಂದಿದ್ದಾರೆ.

ಧರ್ಮಸ್ಥಳಕ್ಕೆ ಹೋಗಿ ಸಿನಿಮಾ ಆರಂಭಿಸಿದೆವು
ಇನ್ನು ಕರಾವಳಿಯಲ್ಲಿ ನಾಗಾರಾಧನೆ ಆಗಿರಬಹುದು, ದೈವಾರಾಧನೆ ಆಗಿರಬಹುದು, ಕೃಷಿ ಚಟುವಟಿಕೆ ಆಗಿರಬಹುದು, ಎಲ್ಲವನ್ನೂ ಪೂಜನೀಯ ಭಾವದಿಂದ ನೋಡುತ್ತೇವೆ. ಈವೆಲ್ಲವೂ 'ಕಾಂತಾರ' ಸಿನಿಮಾದಲ್ಲಿದೆ. ಇದು ಕೇವಲ ಕರಾವಳಿ ಭಾಗದವರಿಗಷ್ಟೇ ಅಲ್ಲ. ಪ್ರತಿಯೊಬ್ಬರಿಗೂ ಅವರದೆ ಆದ ರೀತಿಯಲ್ಲಿ ಹತ್ತಿರವಾಗುತ್ತದೆ. ನಾನು ಈ ರೀತಿಯ ಸಿನಿಮಾ ಮಾಡಲು ಒಂದು ಪ್ರೇರಣೆ ಇತ್ತು. ಹೀಗಾಗಿ ದೈವಾರಾಧನೆ ಬಗ್ಗೆ ತಿಳಿದವರ ಬಳಿ ಹೋಗಿ ಅದರ ಹಿನ್ನೆಲೆ, ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಂಡೆ. ಮೊದಲು ಧರ್ಮಸ್ಥಳಕ್ಕೆ ಹೋಗಿ ಸಿನಿಮಾ ಆರಂಭಿಸಿದೆವು. ದೈವಾರಾಧನೆ ದೃಶ್ಯ ಚಿತ್ರೀಕರಣಕ್ಕಾಗಿ ಹಾಕಿದ ಸೆಟ್ನಲ್ಲಿ ನಾವು ಮಾಂಸಹಾರ ಮಾಡಿಲ್ಲ. ಚಪ್ಪಲಿ ಹಾಕಿ ಓಡಾಡಿಲ್ಲ. ಅದು ನಮ್ಮದೇ ಭಾವನೆ ಆಗಿರುವುದರಿಂದ ತುಂಬಾ ಶುದ್ಧವಾಗಿ ಸಿನಿಮಾ ಚಿತ್ರೀಕರಣ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.


Click it and Unblock the Notifications











