ರೈತರ ಕಷ್ಟಕ್ಕೆ ನಾವು ಯಾವಾಗಲೂ ಜೊತೆ ಇರುತ್ತೇವೆ; ರೈತರ ಬೆಂಬಲಕ್ಕೆ ನಿಂತ ಶಿವರಾಜ್ ಕುಮಾರ್
ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದೆ. ಕೃಷಿ ಕಾಯ್ದೆಯನ್ನು ರದ್ದುಗೊಳಿಸುವಂತೆ ರೈತರು ಪಟ್ಟು ಹಿಡಿದಿದ್ದು, ಇಂದು (ಡಿಸೆಂಬರ್ 8) ರೈತರು ದೇಶದಾದ್ಯಂತ ಬಂದ್ ಗೆ ಕರೆ ನೀಡಿದ್ದಾರೆ.
ರೈತರ ಪ್ರತಿಭಟನೆಗೆ ಅನೇಕರು ಬೆಂಬಲ ನೀಡಿದ್ದಾರೆ. ಅನೇಕ ಸಿನಿಮಾ ಮತ್ತು ಕ್ರೀಡಾ ತಾರೆಯರು ರೈತರ ಬೆನ್ನಿಗೆ ನಿಂತಿದ್ದಾರೆ. ಬಾಲಿವುಡ್ ಕಲಾವಿದರಾದ ದಿಲ್ಜಿತ್ ದೊಸಾಂಜ್, ಪ್ರಿಯಾಂಕಾ ಚೋಪ್ರಾ, ಸೋನಂ ಕಪೂರ್, ರಿತೇಶ್ ದೇಶಮುಖ್ ಸೇರಿದಂತೆ ಅನೇಕರ ಪರ ನಿಂತಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಲ್ಲಿ ನಟ ಚೇತನ್, ಗೀತರಚನೆಗಾರ ಮತ್ತು ನಿರ್ದೇಶಕ ಕವಿ ರಾಜ್ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರೈತರ ಪರ ಇದ್ದೀವಿ ಎಂದು ಹೇಳಿ ಟ್ವೀಟ ಮಾಡಿದ್ದಾರೆ. ರೈತರ ಕಷ್ಟಕ್ಕೆ ಯಾವಾಗಲೂ ಜೊತೆ ಇರುತ್ತೇವೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿರುವ ಶಿವಣ್ಣ ರೈತರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ.

'ರೈತ ದೇಶದ ಬೆನ್ನೆಲುಬು, ರೈತ ಇದ್ರೇನೆ ದೇಶ. ಅವರ ಕಷ್ಟಕ್ಕೆ ನಾವು ಯಾವಾಗಲೂ ಜೊತೆ ಇರುತ್ತೇವೆ. ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ' ಎಂದು ಹ್ಯಾಟ್ರಿಕ್ ಹೀರೋ ಟ್ವೀಚ್ ಮಾಡಿದ್ದಾರೆ.
ರೈತರು ಪ್ರತಿಭಟನೆ ನಡೆಸುತ್ತಿದ್ದರು, ಮೌನವಾಗಿರುವ ಸ್ಯಾಂಡಲ್ ವುಡ್ ಬಗ್ಗೆ ನಟ ಚೇತನ್ ಕಿಡಿಕಾರಿದ್ದರು. 'ದೇಶದಾದ್ಯಂತ ರೈತರು ತಿಂಗಳುಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಚುನಾವಣೆ ಪ್ರಚಾರದ ತೆರೆದ ವಾಹನದ ಮೇಲೆ ವೇಗವಾಗಿ ನೆಗೆಯುವ ಕನ್ನಡದ ಚಲನಚಿತ್ರ ನಟರು ರೈತರ ಬೆಂಬಲವಾಗಿ ಒಂದು ಮಾತನ್ನೂ ಹೇಳಿಲ್ಲ.' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click it and Unblock the Notifications











