ನವರಾತ್ರಿ ಪೂಜೆಯಲ್ಲಿ ಬನಾರಸ್ ನಾಯಕ 'ಝೈದ್ ಖಾನ್'
ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಝೈದ್ ಖಾನ್ ಅಭಿನಯದ ಬನಾಸರ್ ಚಿತ್ರ ತೆರೆ ಕಾಣಲು ಸಜ್ಜಾಗಿದೆ. ಈಗಾಗಲೇ ಹಾಡು, ಟ್ರೈಲರ್ ಮೂಲಕವೇ ಜನಪ್ರಿಯತೆ ಪಡೆದಿರುವ ಬನರಾಸ್ ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
ಬನರಾಸ್ ಚಿತ್ರದ ನಾಯಕ ಝೈದ್ ಖಾನ್ ಸಿನಿಮಾ ಜೊತೆ ಇತರ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಲಾವಿದನಿಗೆ ಜಾತಿ ಧರ್ಮ ಇಲ್ಲ ಎನ್ನುವ ಹೇಳಿದ್ದ ಝೈದ್ ಖಾನ್, ತಮ್ಮ ನುಡಿಯಂತೆ ನಡೆದುಕೊಳ್ಳುತ್ತಿದ್ದು, ಬೆಂಗಳೂರಿನಲ್ಲಿ ನಡೆಯುತ್ತಿರುವ ನವರಾತ್ರಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ನವರಾತ್ರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆಯ ಮಕ್ಕಳ ಕೂಟದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ನವರಾತ್ರಿ ಸಮಯದಲ್ಲಿ ಮಕ್ಕಳ ಕೂಟದಲ್ಲಿ ನಡೆಯುವ ಕಾರ್ಯಕ್ರಮವೇ ಪ್ರಮುಖ ಆಕರ್ಷಣೆಯಾಗಿದ್ದು, ಬೆಂಗಳೂರಿನ ಮೂಲೆ ಮೂಲೆಯಿಂದ ಬಂದ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಚಾಮರಾಜಪೇಟೆಯ ಮಕ್ಕಳ ಕೂಟದಲ್ಲಿ ನವರಾತ್ರಿ ಉತ್ಸವಕ್ಕೆ ದಾಂಡಿಯಾ ನೃತ್ಯವನ್ನು ಆಯೋಜಿಸಲಾಗಿದ್ದು, ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಈ ಬಾರಿಯ ಮಕ್ಕಳ ಕೂಟದಲ್ಲಿ ನವರಾತ್ರಿ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಝೈದ್ ಖಾನ್ ಮಿಂಚಿದ್ದಾರೆ. ತಮ್ಮ ತಂದೆಯ ಕ್ಷೇತ್ರವಾದ ಚಾಮರಾಜ ಪೇಟೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ನಟ ಝೈದ್ ಖಾನ್ ತೆರಳಿದ್ದು, ಜಾತಿ, ಧರ್ಮಧ ಹಂಗು ತೊರೆದು ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಸಾಂಪ್ರದಾಯ ಉಡುಗೆಯಲ್ಲಿ ನವರಾತ್ರಿ ಉತ್ಸವಕ್ಕೆ ತೆರಳಿದ ಝೈದ್ ಖಾನ್ ಅವರನ್ನು ಕಾರ್ಯಕ್ರಮದ ಆಯೋಜಕರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ಕಾರ್ಯಕ್ರಮದ ಆಯೋಜಕರು ಹಾಗೂ ಹಿರಿಯರೊಂದಿಗೆ ನವರಾತ್ರಿ ಉತ್ಸವ ಮೂರ್ತಿಗೆ ಝೈದ್ ಖಾನ್ ಆರತಿ ಬೆಳಗಿದ್ದಾರೆ. ಬಳಿಕ ನೆರೆದಿದ್ದರವರನ್ನುದ್ದೇಶಿ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷವೆಂಬಂತೆ ಝೈದ್ ಖಾನ್ ಭಕ್ತರೊಂದಿಗೆ ಜಾನಪದ ನೃತ್ಯ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಒಬ್ಬ ಕಲಾವಿದರಿಗೆ ಜಾತಿ ಇಲ್ಲ ಎನ್ನುವುದನ್ನು ಝೈದ್ ಖಾನ್ ಸಾಬೀತು ಮಾಡಿದ್ದಾರೆ.
ಈ ಹಿಂದೆ 'ಬನರಾಸ್' ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಧರ್ಮಗಳಿಗೆ ಗೌರವ ನೀಡುವ ಬಗ್ಗೆ ಝೈದ್ ಖಾನ್ ಅವರಿಗೆ ಪ್ರಶ್ನೆ ಎದುರಾಗಿತ್ತು. ಈ ವೇಳೆ ನಟ ನೀಡಿದ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಝೈದ್ ಖಾನ್ ಕಲಾವಿದರಿಗೆ ಜಾತಿ ಇಲ್ಲ. ನನಗೆ ಆ ರೀತಿ ಅನಿಸೋದು ಇಲ್ಲ. ಈ ಜಾತಿ ಬಗ್ಗೆ ಆಲೋಚನೆಗಳೆಲ್ಲಾ ಯಾಕೆ ಬೇಕು. ದೇವರು ಒಬ್ಬನೇ. ನೀವೇ ಬೇರೆ ಹೆಸರಿನಿಂದ ಕರೆಯುತ್ತೀರಾ, ನಾವೇ ಬೇರೆ ಹೆಸರಿನಿಂದ ಕರೆಯುತ್ತೇವೆ. ಆದರೆ ಎಲ್ಲವೂ ಒಂದೇ. ನಾವೆಲ್ಲರೂ ಒಂದೇ. ಎಲ್ಲದಕ್ಕಿಂತ ಮೊದಲು ನಾವು ಮನುಷ್ಯರು. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದಿದ್ದರು.
ಇನ್ನು ನವೆಂಬರ್ 4ರಂದು ಬಿಡುಗಡೆಯಾಗಲಿರುವ ಝೈದ್ ಖಾನ್ ನಟನೆಯ 'ಬನಾರಸ್' ಚಿತ್ರಕ್ಕೆ ಅನೇಕ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ 'ಬನಾರಸ್' ಅಭಿಯಾನ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಝೈದ್ ಖಾನ್ ಸಿನಿಮಾದಲ್ಲಿ ಬಾಯ್ಕಟ್ ಏನಿಲ್ಲ. ಇರುವುದು ಸೋಲು ಗೆಲುವು ಎರಡೇ, ಸಿನಿಮಾ ಚೆನ್ನಾಗಿದ್ದರೆ ಜನ ಖಂಡಿತವಾಗಿಯೂ ಬಂದು ನೋಡುತ್ತಾರೆ ಎಂದಿದ್ದರು.


Click it and Unblock the Notifications











