ಕೊರೊನಾ ಎರಡನೇ ಅಲೆ: ಮತ್ತೆ ತಲೆಕೆಳಗಾಯಿತು ಸ್ಟಾರ್ ನಟರ ಪ್ಲಾನ್
ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂತು. ಮೊದಲಿನಂತೆ ಯಥಾಸ್ಥಿತಿ ತಲುಪಬಹುದು ಎಂಬ ಲೆಕ್ಕಾಚಾರಗಳು ಆಗಷ್ಟೇ ಹುಟ್ಟಿಕೊಂಡಿದ್ದವು. ಸಾರ್ವಜನಿಕವಾಗಿ ಜನರು ಬೆರೆಯತೊಡಗಿದರು. ಧಾರ್ಮಿಕ, ರಾಜಕೀಯ, ಮದುವೆ ಸಮಾರಂಭಗಳಲ್ಲಿ ಮತ್ತೆ ಜನ ಸೇರಲು ಆರಂಭಿಸಿದರು. ಚಿತ್ರಮಂದಿರಗಳು ತೆರೆದವು. 100 ಪರ್ಸೆಂಟ್ ಅವಕಾಶ ಸಹ ಸಿಕ್ತು. ಪೊಗರು, ರಾಬರ್ಟ್, ಯುವರತ್ನ ಅಂತಹ ಚಿತ್ರಗಳು ತೆರೆಕಂಡು ಹೌಸ್ಫುಲ್ ಪ್ರದರ್ಶನ ಕಂಡವು.
ಎಲ್ಲವೂ ಮುಗಿದು ಹೋಯಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಮತ್ತೆ ಕೋವಿಡ್ ಎರಡನೇ ಅಲೆ ಶುರುವಾಗಿದೆ. 2020ರ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಉಂಟಾದ ಸಂದರ್ಭ ಮತ್ತೆ ಮರುಕಳಿಸಬಹುದಾ ಎಂಬ ಆತಂಕ ಸೃಷ್ಟಿಯಾಗಿದೆ. ಪ್ರತಿನಿತ್ಯ ಸಾವಿರಾರು ಕೋವಿಡ್ ಕೇಸ್ಗಳು ಪತ್ತೆಯಾಗುತ್ತಿದೆ. ಮತ್ತೆ ಲಾಕ್ಡೌನ್ ಆತಂಕ ಕಾಡ್ತಿದೆ. ಚಿತ್ರಮಂದಿರಗಳು ಮತ್ತೆ ಬಂದ್ ಆಗುವ ಸಾಧ್ಯತೆ ಗೋಚರವಾಗುತ್ತಿದೆ. ಇದೆಲ್ಲದರ ಪರಿಣಾಮ ಸ್ಟಾರ್ ನಟರ ಚಿತ್ರಗಳಿಗೆ ಮತ್ತೆ ತಲೆಬಿಸಿ ಉಂಟಾಗಿದೆ. ಮುಂದೆ ಓದಿ...

ಮತ್ತೆ ಮುಂದಕ್ಕೆ ಹೋದ ಸ್ಟಾರ್ ನಟರು?
ಪೊಗರು, ರಾಬರ್ಟ್, ಯುವರತ್ನ ಚಿತ್ರಗಳು ಬಿಡುಗಡೆಯಾಗಿ ಹೌಸ್ಫುಲ್ ಪ್ರದರ್ಶನ ಕಂಡವು. ಏಪ್ರಿಲ್ 15 ರಂದು ಸಲಗ ಹಾಗೂ ಏಪ್ರಿಲ್ ಕೊನೆಯಲ್ಲಿ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗಬೇಕಿತ್ತು. ಅದಕ್ಕೆ ಬೇಕಾದ ತಯಾರಿ ನಡೆದಿತ್ತು. ಇದೀಗ, ಕೋವಿಡ್ ಎರಡನೇ ಅಲೆಯ ಪರಿಣಾಮ ಚಿತ್ರಮಂದಿರಗಳಲ್ಲಿ ಮತ್ತೆ 50 ಪರ್ಸೆಂಟ್ ನೀತಿ ಜಾರಿಯಾಗಿದೆ. ಈ ಹಿನ್ನೆಲೆ ಸ್ಟಾರ್ ನಟರ ತಮ್ಮ ಸಿನಿಮಾಗಳ ರಿಲೀಸ್ ದಿನಾಂಕವನ್ನು ಮತ್ತೆ ಮುಂದೂಡಿಕೆ ಮಾಡುವ ಬಗ್ಗೆ ಚಿಂತಿಸಿವೆ ಎಂದು ಹೇಳಲಾಗಿದೆ.

100 ಪರ್ಸೆಂಟ್ ಇದ್ದರೆ ಮಾತ್ರ ಬರ್ತೇವೆ
ಕೋಟಿಗೊಬ್ಬ 3 ಹಾಗೂ ಸಲಗ ಚಿತ್ರಗಳು ಚಿತ್ರಮಂದಿರಗಳಲ್ಲಿ ಶೇಕಡಾ 100ರಷ್ಟು ಅವಕಾಶ ಕೊಡುವವರೆಗೂ ಕಾದು ರಿಲೀಸ್ ಮಾಡುತ್ತೇವೆ, ಇಲ್ಲವಾದಲ್ಲಿ ಸದ್ಯಕ್ಕೆ ನಾವು ಬರಲ್ಲ ಎಂಬ ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ.

ಒಟಿಟಿಯಲ್ಲಿ ಬರೋಕೆ ತಯಾರು ಇಲ್ಲ
ಚಿತ್ರಮಂದಿರಗಳಲ್ಲಿ 50 ಪರ್ಸೆಂಟ್ ಆದೇಶ ಜಾರಿ ಮಾಡುತ್ತಿದ್ದಂತೆ ಯುವರತ್ನ ಸಿನಿಮಾ ಅಮೇಜಾನ್ ಪ್ರೈಮ್ಗೆ ಸಿನಿಮಾ ಮಾರಾಟ ಮಾಡಿತು. ಆದರೆ, ಇತರೆ ಸ್ಟಾರ್ಗಳು ತಮ್ಮ ಚಿತ್ರಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಸಿದ್ದರಿಲ್ಲ. ಥಿಯೇಟರ್ನಲ್ಲೇ ಬರ್ತೇವೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಕೆಜಿಎಫ್ 2 ಬಿಡುಗಡೆಯ ಕಥೆ ಏನಾಗುತ್ತದೆ?
ಸದ್ಯಕ್ಕೆ ನಿಗದಿಯಾಗಿರುವ ಚಿತ್ರಗಳೇ ಹೇಳಿದ ದಿನಕ್ಕೆ ಬರಲು ಸಮಸ್ಯೆಯಾಗುತ್ತಿದೆ. ಸಲಗ, ಕೋಟಿಗೊಬ್ಬ 3, ಭಜರಂಗಿ 2 ಚಿತ್ರಗಳು ಬಿಡುಗಡೆಯಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚು. ಜುಲೈ 16ಕ್ಕೆ ಕೆಜಿಎಫ್ ಪ್ಯಾನ್ ಇಂಡಿಯಾ ಬಿಡುಗಡೆಯಾಗಬೇಕಿದೆ. ಮಹಾರಾಷ್ಟ್ರದಲ್ಲಿ ಜನತಾ ಕರ್ಫ್ಯೂ, ತಮಿಳುನಾಡಿನಲ್ಲಿ 50 ಪರ್ಸೆಂಟ್, ಆಂಧ್ರದಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಕೆಜಿಎಫ್ ಚಿತ್ರವೂ ಹೇಳಿದ ದಿನಕ್ಕೆ ಬರೋದು ಡೌಟು.
Recommended Video

ಆಗಸ್ಟ್ಗೆ ವಿಕ್ರಾಂತ್ ರೋಣ
ಈ ನಡುವೆ ಸುದೀಪ್ ಅಭಿನಯದ ಮತ್ತೊಂದು ಸಿನಿಮಾ ವಿಕ್ರಾಂತ್ ರೋಣ ಆಗಸ್ಟ್ 19ಕ್ಕೆ ಬಿಡುಗಡೆಯಾಗಲಿದೆ ಎಂದು ಪ್ರಕಟಿಸಿದೆ. ಆದರೆ, ಚಿತ್ರಮಂದಿರಗಳ 100 ಪರ್ಸೆಂಟ್ ಇದ್ದರೆ ಮಾತ್ರ ಎಂದು ತಿಳಿಸಿದೆ. ಈ ಹಿನ್ನೆಲೆ ಈ ಚಿತ್ರದ ಬಿಡುಗಡೆಯಲ್ಲಿ ವ್ಯತ್ಯಾಸವಾಗಬಹುದು.


Click it and Unblock the Notifications











