ಹಿಂದಿ ದಿವಸ್ ಆಚರಣೆಗೆ ವಿರೋಧ: ಸಿಡಿದೆದ್ದ ಕನ್ನಡ ಕಲಾ ಬಂಧುಗಳು
ಸೆಪ್ಟೆಂಬರ್ 14 ರಂದು ದೇಶದ ಹಲವು ಹಿಂದಿ ದಿವಸ್ ಆಚರಣೆ ಮಾಡಲಾಗುತ್ತಿದೆ. ಉತ್ತರ ಭಾರತದ ಕಡೆ ಹಿಂದಿ ದಿವಸ್ ಆಚರಣೆ ಜೋರಾಗಿದ್ದರೂ ದಕ್ಷಿಣ ಭಾರತಕ್ಕೆ ಬಂದರೆ ಹಿಂದಿ ಹೇರಿಕೆಗೆ ತೀವ್ರವಾದ ವಿರೋಧ ಇದೆ. ಅದರಲ್ಲೂ ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ, ಹೋರಾಟಗಳು ನಡೆಯುತ್ತಿದೆ.
ಹಿಂದಿ ಹೇರಿಕೆಯನ್ನು ಹಾಗೂ ಹಿಂದಿ ದಿವಸ್ ಆಚರಣೆಯನ್ನು ಕನ್ನಡ ಚಿತ್ರರಂಗದ ಅನೇಕರು ಖಂಡಿಸಿದ್ದಾರೆ. ಪ್ರತಿ ವರ್ಷವೂ ಸೆಪ್ಟೆಂಬರ್ 14ಕ್ಕೆ ಹಿಂದಿ ದಿವಸ್ ಆಚರಣೆ ವಿರೋಧಿಸಿ ಕನ್ನಡ ಪ್ರೇಮ ತೋರುತ್ತಾರೆ. ಇದೀಗ, ಹಿಂದಿ ಹೇರಿಕೆ ವಿರೋಧಿಸಿದ ಡಾಲಿ ಧನಂಜಯ್ ಟ್ವೀಟ್ ಮಾಡಿದ್ದು, 'ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಹೇರಿಕೆ ಸಲ್ಲದು' ಎಂದಿದ್ದಾರೆ.
''ಕನ್ನಡ ಕನ್ನಡ ಕನ್ನಡವೆಂದುಲಿ
ಕನ್ನಡ ನಾಡಿನ ಓ ಕಂದ
ಕನ್ನಡ ನಾಡಿನ ಕೀರ್ತಿಯ ಹಬ್ಬಿಸು
ಕನ್ನಡ ತಾಯಿಗೆ ಆನಂದ.
(ಬಾಲ್ಯದಲ್ಲಿ ಓದಿದ ಪದ್ಯ)
ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಹೇರಿಕೆ ಸಲ್ಲದು'' ಎಂದು ನಟ ಧನಂಜಯ್ ಟ್ವಿಟ್ಟರ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಮುಂದೆ ಓದಿ...

ಹಿಂದಿ ಕಲಿಯಬೇಕೆನ್ನುವುದು ದಬ್ಬಾಳಿಕೆ
ಇನ್ಸ್ಟಾಗ್ರಾಂನಲ್ಲಿ ಹಿಂದಿ ಹೇರಿಕೆ ಖಂಡಿಸಿರುವ ಧನಂಜಯ್, ''ಹಿಂದಿಯನ್ನಾಗಲಿ, ಇಂಗ್ಲೀಷನ್ನಾಗಲಿ ಎಲ್ಲರೂ ಕಲಿಯಬೇಕು ಅನ್ನುವಂಥ ಅವಿವೇಕ ಮತ್ತೊಂದಿಲ್ಲ. ಎಲ್ಲರೂ ಇಂಗ್ಲೀಷ್ ಮತ್ತು ಹಿಂದಿ ಕಲಿಯಬೇಕೆನ್ನುವುದು ದಬ್ಬಾಳಿಕೆಯ ಸೂಚಕವಲ್ಲದೇ ಮತ್ತೇನು? ನಾವು ಇಂಗ್ಲೀಷ್ ದ್ವೇಷಿಗಳೂ ಅಲ್ಲ, ಹಿಂದಿ ದ್ವೇಷಿಗಳೂ ಅಲ್ಲ. ಎಲ್ಲರೂ ಎಲ್ಲವನ್ನೂ ಕಲಿಯಬೇಕು ಅನ್ನುವ ಬಲವಂತ ಬೇಡ- ಕುವೆಂಪು' ಅವರ ಪೋಸ್ಟ್ನ್ನು ಹಾಕಿದ್ದಾರೆ.

ಮಾತೃಭಾಷೆಗೆ ಪ್ರಥಮ ಸ್ಥಾನ
''ಭಾರತದ ವೈಶಿಷ್ಟ್ಯತೆಯೇ "ವಿವಿಧತೆಯಲ್ಲಿ ಏಕತೆ" ಹಲವಾರು ವೇಶ,,ಭಾಷೆ,,ಭಕ್ಷ್ಯಭೋಜನ,, ಆಟನೋಟ,, ಸಂಸ್ಕೃತಿ,, ಸಂಪ್ರದಾಯ ಇದ್ದರೂ ಒಂದಾಗಿರುವ ಹೆಗ್ಗಳಿಕೆ ನಮ್ಮದು..ಹೀಗಿರುವಾಗ ಒಂದೇ ಭಾಷೆಯನ್ನು ಹೇರುವುದು ತಪ್ಪು ಅಭಿಪ್ರಾಯ..ಅವರವರ ರಾಜ್ಯದಲ್ಲಿ ಆ ಮಣ್ಣಿನ ಮಾತೃಭಾಷೆಗೆ ಪ್ರಥಮ ಸ್ಥಾನವಿರಬೇಕು..#StopHindiImposition'' ಎಂದು ನಿರ್ದೇಶಕ ಸಿಂಪಲ್ ಸುನಿ ಟ್ವಿಟ್ಟರ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಕ್ರೋಶ ಹೊರಹಾಕಿದ ಎಚ್ಡಿಕೆ
''ಭಾರತ ಒಕ್ಕೂಟರಾಷ್ಟ್ರ. ಬಹುಸಂಸ್ಕೃತಿ, ಬಹುಭಾಷೆ, ಬಹುಜನರ ಆಗರ. ಅನೇಕ ಭಾಷೆಗಳ ತೊಟ್ಟಿಲು. ಆದರೆ ಒಂದೇ ಭಾಷೆಯನ್ನು ವೈಭವೀಕರಿಸುವ, ಹೇರುವ ಹುಂಬ ಪ್ರಯತ್ನವೇಕೆ? ಹಿಂದಿ ಹೇರಿಕೆಯನ್ನು ಕನ್ನಡಿಗರು ಒಪ್ಪುವುದಿಲ್ಲ. ಹಿಂದಿ ದಿವಸ ಆಚರಣೆಯನ್ನೂ ಸಹಿಸುವುದಿಲ್ಲ. ಒಕ್ಕೂಟದ ಎಲ್ಲಾ ಭಾಷೆಗಳಂತೆ ಹಿಂದಿಯೂ ಒಂದು ಭಾಷೆಯಷ್ಟೇ. ಕೇಂದ್ರ ಸರಕಾರ ಹಿಂದಿಗೆ ʼಇಂದ್ರ ವೈಭೋಗʼ ನೀಡಿ ಅನ್ಯ ಭಾಷೆಗಳನ್ನು ಬೀದಿಪಾಲು ಮಾಡುವುದನ್ನು ಸಹಿಸಲಾಗದು. ಹಿಂದಿ ಹೇರುವವರಿಗೆ ತಿಳಿದಿರಲಿ. ನಮ್ಮ ಕನ್ನಡ ಅಭಿಜಾತ ಭಾಷೆ. ನಮ್ಮ ಕನ್ನಡ ಸಾವಿರಾರು ವರ್ಷಗಳ ಘನ ಚರಿತ್ರೆಯುಳ್ಳ ಭಾಷೆ. ನಮ್ಮ ಕನ್ನಡ 6.4 ಕೋಟಿ ಜನರ ಹೃದಯಮಿಡಿತ. ನಮ್ಮ ಪಾಲಿನ ಮಾತೃಸ್ವರೂಪಿಣಿ. ನಮ್ಮ ನೆಲದಲ್ಲಿ ನಮ್ಮ ಕನ್ನಡ ಭಾಷೆಯೇ ಮೊದಲು. ಹಿಂದಿ ದಿವಸ ಆಚರಣೆ ಅಸಮರ್ಪಕ ಮತ್ತು ಅನಗತ್ಯ. ಹಿಂದಿ ಹೇರಿಕೆಯಿಂದ ಬಹುಭಾಷೆಯ ಭಾರತದ ನೆಮ್ಮದಿ ಕದಡುವುದು ಬೇಡ'' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಚಲನಚಿತ್ರ ನಿರ್ಮಾಪಕ ಎಚ್ಡಿ ಕುಮಾರಸ್ವಾಮಿ ಖಂಡಿಸಿದ್ದಾರೆ.

ಭಾಷೆ ತಾರತಮ್ಯ ವಿರೋಧಿಸುತ್ತೇವೆ
''ಸಂವಿಧಾನದ 343ನೇ ಆರ್ಟಿಕಲ್ ಪ್ರಕಾರ ಸೆಪ್ಟೆಂಬರ್ 14ನೇ ತಾರೀಖು ಹಿಂದಿ ದಿವಸ್ ಎಂದು ಪರಿಗಣಿಸಲಾಗಿದ್ದು, ಹಿಂದಿ ನಮ್ಮ ರಾಷ್ಟ್ರದ ಅಧಿಕೃತ ಭಾಷೆ ಎಂದು ಗುರುತಿಸಲಾಗುತ್ತಿದೆ. ಇಂತಹ ಭಾಷಾ ತಾರತಮ್ಯವನ್ನು ನಾವು ವಿರೋಧಿಸುತ್ತೇವೆ. ಹಿಂದಿ ಹೇರಿಕೆಯನ್ನು ನಿಲ್ಲಿಸಿ, 8ನೇ ವೇಳಾಪಟ್ಟಿಯಲ್ಲಿರುವ ಎಲ್ಲಾ 22 ಭಾಷೆಗಳನ್ನು ಕೂಡ ಅಧಿಕೃತ ಭಾಷೆ ಎಂದು ಗುರುತಿಸಬೇಕು'' ಎಂದು ನಟ-ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಪೋಸ್ಟ್ ಹಾಕಿದ್ದಾರೆ.


Click it and Unblock the Notifications











