ಈ ವರ್ಷದಲ್ಲಿ ನಡೆದ 23 ವಿವಾದಗಳನ್ನ ಯಾರೂ ಮರೆಯಲ್ಲ
2017ರಲ್ಲಿ ಸ್ಯಾಂಡಲ್ ವುಡ್ ಬರಿ ಸಿನಿಮಾ, ಮದುವೆ, ನಿಶ್ಚಿತಾರ್ಥ, ಪ್ರೀತಿಯ ಸಮಾಚಾರಗಳಿಗೆ ಮಾತ್ರ ಸುದ್ದಿಯಾಗಿಲ್ಲ. ಇದನ್ನ ಹೊರತು ಪಡಿಸಿ ವಿವಾದಗಳು ಹೆಡ್ ಲೈನ್ಸ್ ಆಗಿದ್ದವು.
ಕನ್ನಡದ ಸ್ಟಾರ್ ನಟರು ಎನಿಸಿಕೊಂಡಿರುವ ದರ್ಶನ್, ಸುದೀಪ್ ಅವರ ಸ್ನೇಹದ ವಿಚಾರ ಈ ವರ್ಷದ ಬಹುದೊಡ್ಡ ವಿವಾದ ಹುಟ್ಟುಹಾಕಿತ್ತು. ಬಿಗ್ ಬಾಸ್ ಸಂಜನಾ, ಕಿರಿಕ್ ಪಾರ್ಟಿ ರಶ್ಮಿಕಾ ಕೊಟ್ಟಿದ್ದ ಸ್ಟೇಟ್ ಮೆಂಟ್ ಗಳು ಅಭಿಮಾನಿಗಳನ್ನ ಕೆರಳಿಸಿತ್ತು.
ಈ ಅಂಶಗಳ ಜೊತೆಗೆ ಮತ್ತಷ್ಟು ವಿಷ್ಯಗಳು ಸ್ಯಾಂಡಲ್ ವುಡ್ ಗೆ ಕಪ್ಪು ಚುಕ್ಕೆಯಾದವು. ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲದೇ, ಬೇರೆ ಇಂಡಸ್ಟ್ರಿಯ ಕೆಲವು ವಿವಾದಗಳು ಕೂಡ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು.
ಹಾಗಿದ್ರೆ, 2017 ರಲ್ಲಿ ಹೆಚ್ಚು ಸುದ್ದಿಯಾದ ವಿವಾದಗಳು ಯಾವುದು? ಎಂಬುದರ ಬಗ್ಗೆ ಒಂದು ಸಂಕ್ಷಿಪ್ತ ವರದಿ ಇಲ್ಲಿದೆ ಓದಿ......

ಸುದೀಪ್ ಬಗ್ಗೆ ದರ್ಶನ್ ಟ್ವೀಟ್
ಕನ್ನಡ ಚಿತ್ರರಂಗದ ಕುಚಿಕು ಗೆಳಯರು ಎಂದೇ ಗುರುತಿಸಿಕೊಂಡಿದ್ದ ದರ್ಶನ್ ಮತ್ತು ಸುದೀಪ್ ಅವರ ನಡುವೆ ನಡೆದ ಸ್ನೇಹ ಸಮರ ಈ ವರ್ಷದ ಬಹುದೊಡ್ಡ ವಿವಾದವಾಯಿತು. ''ಇನ್ಮುಂದೆ ನಾನು ಮತ್ತು ಸುದೀಪ್ ಸ್ನೇಹಿತರಲ್ಲ'' ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿ ಬಳಗಕ್ಕೆ ದರ್ಶನ್ ದೊಡ್ಡ ಶಾಕ್ ಕೊಟ್ಟಿದ್ದರು.

ದರ್ಶನ್ ಮತ್ತು ಪವಿತ್ರ ಗೌಡ ಫೋಟೋ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಟಿ ಪವಿತ್ರ ಗೌಡ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ವು. ಕುರುಕ್ಷೇತ್ರ ಸೆಟ್ ನಲ್ಲು ಇಬ್ಬರು ಒಟ್ಟಿಗೆ ಇರುವ ಫೋಟೋ ಬಹಿರಂಗವಾಗಿತ್ತು. ಇವರಿಬ್ಬರ ಸಂಬಂಧದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಇದು ದರ್ಶನ್ ಅವರ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರಿತ್ತು. ಈ ವರ್ಷ ಈ ಸುದ್ದಿ ದೊಡ್ಡ ಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿತ್ತು.

ಸಂಜನಾ 'ಬಿಲ್ಡಪ್' ಡೈಲಾಗ್
'ಸೂಪರ್ ಟಾಕ್ ಟೈಮ್' ನಲ್ಲಿ ದರ್ಶನ್ ಗೆ 'ಬಿಲ್ಡಪ್' ಎಂದು ಬಿಗ್ ಬಾಸ್ ಸಂಜನಾ ಸ್ಟೇಟ್ ಮೆಂಟ್ ನೀಡಿದ್ದರು. ನಂತರ ಸೋಶಿಯಲ್ ಮಿಡಿಯಾದಲ್ಲಿ ಸಂಜನಾ ವಿರುದ್ಧ ದೊಡ್ಡ ಸಮರವೇ ನಡೆದು ಹೋಯಿತು. ಟ್ರೋಲ್ ಪೇಜ್ ಗಳಂತೂ ಉಗಿದು-ಉಪ್ಪಿನಕಾಯಿ ಹಾಕಿಬಿಟ್ಟರು. ಕೊನೆಗೆ ಸಂಜನಾ ಕ್ಷಮೆ ಕೇಳಿ ವಿವಾದ ತಣ್ಣಗಾಯಿತು.

'ಶೋ ಆಫ್' ಎಂದು ರಶ್ಮಿಕಾ
ಅದೇ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ 'ಶೋ ಆಫ್' ಎಂದು ಕಾಮೆಂಟ್ ಮಾಡಿದ್ದ ರಶ್ಮಿಕಾ ವಿರುದ್ದ ಯಶ್ ಅಭಿಮಾನಿಗಳು ದಂಗೆ ಎದ್ದರು. ನಂತರ ರಶ್ಮಿಕಾ, ಯಶ್ ಅವರಿಗೆ ಕ್ಷಮೆ ಕೇಳಿದರು. ಅಭಿಮಾನಿಗಳು ಕೂಲ್ ಅದರು.

ಬುಲೆಟ್ ಪ್ರಕಾಶ್ ಟ್ವೀಟ್
ದೊಡ್ಡ ನಟನ ಸಣ್ಣತನ ಬಯಲು ಮಾಡುತ್ತೇನೆ, ಸ್ಯಾಂಡಲ್ ವುಡ್ ನಲ್ಲಿ ಗುಂಪುಗಾರಿಕೆಗೆ ಕಾರಣವಾಗಿರುವ ನಟನ ಬಗ್ಗೆ ಬಹಿರಂಗಪಡಿಸುತ್ತೇನೆ ಎಂದು ಹಾಸ್ಯ ನಟ ಬುಲೆಟ್ ಪ್ರಕಾಶ್ ಟ್ವೀಟ್ ಮಾಡಿದ್ದರು. ಇದು ಇಡೀ ಸ್ಯಾಂಡಲ್ ವುಡ್ ಇಂಡಸ್ಟ್ರಿಯನ್ನೇ ಬೆಚ್ಚಿಬೀಳಿಸಿತ್ತು. ಆದ್ರೆ, ಬುಲೆಟ್ ಆ ರಹಸ್ಯವನ್ನ ಹೇಳಲಿಲ್ಲ.

ಸ್ಟಾರ್ ನಾಯಕರ ಕೌಂಟರ್ ಡೈಲಾಗ್
ಈ ವರ್ಷ ಕೌಂಟರ್ ಡೈಲಾಗ್ ಗೆ ಮರುಜೀವ ನೀಡಿ, ಸ್ಟಾರ್ ನಟರ ಅಭಿಮಾನಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು 'ಭರ್ಜರಿ' ಸಿನಿಮಾ. ಯಶ್ ಅವರ ಹವಾ ಡೈಲಾಗ್ ಗೆ, ಧ್ರುವ ಸರ್ಜಾ ಟಾಂಗ್ ಕೊಟ್ಟಿಂತಿದ್ದ ಡೈಲಾಗ್ ಗೆ ರಾಕಿಂಗ್ ಸ್ಟಾರ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದರು. ನಂತರ ಈ ಕೌಂಟರ್ ಡೈಲಾಗ್ ಬಗ್ಗೆ ಧ್ರುವ ಸರ್ಜಾ, ದರ್ಶನ್ ಮಧ್ಯೆ ಪ್ರವೇಶಿಸಿ ಇದು ಬರಿ ಸಿನಿಮಾ ಮಾತ್ರ. ಪರ್ಸನಲ್ ಬೇಡ ಎಂದು ವಿವಾದಕ್ಕೆ ತೆರೆ ಎಳೆದರು.

ಸಂಜನಾ ಬೆತ್ತಲೆ ಫೋಟೋ ವಿವಾದ
'ದಂಡುಪಾಳ್ಯ-2' ಚಿತ್ರದಲ್ಲಿ ನಟಿ ಸಂಜನಾ ಬೆತ್ತಲಾಗಿರುವ ವಿಡಿಯೋ ಲೀಕ್ ಆಗಿತ್ತು. ನಾನು ಬೆತ್ತಲಾಗಿ ನಟಿಸಿಲ್ಲ. ಆದ್ರೆ, ಈ ವಿಡಿಯೋ ಹೇಗೆ ಬಂತು ಎಂದು ಸಂಜನಾ ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಿತ್ರದಲ್ಲಿ ಅಂತಹ ದೃಶ್ಯಗಳಿಲ್ಲ. ಇದು ಎಡಿಟಿಂಗ್ ಆಗಿದೆ. ನಾವು ಲೀಕ್ ಮಾಡಿಲ್ಲ ಎಂದು ನಿರ್ದೇಶಕರು ಕೂಡ ಸ್ಪಷ್ಟಿಕರಣ ನೀಡಿದರು.

ಬ್ರಾಹ್ಮಣರ ವಿವಾದ
ಜೀ-ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಡ್ರಾಮಾ ಜ್ಯೂನಿಯರ್ಸ್'ನಲ್ಲಿ ಪುರೋಹಿತರ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ಬ್ರಾಹ್ಮಣರು ಆಕ್ರೋಶ ವ್ಯಕ್ತಪಡಿಸಿದ್ದರು. ಬ್ರಾಹ್ಮಣರನ್ನು ಕೀಳಾಗಿ ತೋರಿಸಿರುವ 'ಡ್ರಾಮಾ ಜ್ಯೂನಿಯರ್ಸ್' ಹಾಗೂ ಜೀ ಕನ್ನಡ ವಾಹಿನಿ ಬೇಷರತ್ ಕ್ಷಮೆ ಕೇಳದಿದ್ದರೆ, ಉಗ್ರ ಪ್ರತಿಭಟನೆ ಗ್ಯಾರೆಂಟಿ ಎಂದು ಬ್ರಾಹ್ಮಣ ಸಮುದಾಯ ಎಚ್ಚರಿಕೆ ನೀಡಿತ್ತು. ಇವೆಲ್ಲವನ್ನು ಗಮನಿಸಿ, ಆಗಿರುವ ತಪ್ಪನ್ನು ಒಪ್ಪಿಕೊಂಡಿರುವ ಜೀ ಕನ್ನಡ ಹಾಗೂ 'ಡ್ರಾಮಾ ಜ್ಯೂನಿಯರ್ಸ್' ತಂಡ ಕ್ಷಮೆ ಕೇಳಿ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟಿತ್ತು.

ರಮ್ಯಾ ವರ್ಸಸ್ ಶಿಲ್ಪಾ ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕಿ ರಮ್ಯಾ ಅವರ ಮಧ್ಯೆ ರಾಜಕೀಯವಾಗಿ ವಿವಾದ ಉಂಟಾಗಿತ್ತು. ಬಿಜೆಪಿ ಸರ್ಕಾರ ಮಹಿಳೆಯರಿಗೆ ಭದ್ರತೆ ನೀಡುತ್ತಿಲ್ಲ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 22.2% ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಮಾಜಿ ಸಂಸದೆ ರಮ್ಯಾ ಹರಿಹಾಯ್ದಿದ್ದರು. ಅದಕ್ಕೆ ತಿರಗೇಟು ಕೊಟ್ಟ ಶಿಲ್ಪಾ ಗಣೇಶ್, ಕಾಂಗ್ರೆಸ್ ಪಕ್ಷದ ಶಾಸಕ ಮುನಿರತ್ನ ಬೆಂಬಲಿಗರು ಮಹಿಳಾ ಜೆಡಿಎಸ್ ಕಾರ್ಪೊರೇಟರ್ ಸೀರೆಯನ್ನ ಎಳೆದು ದಾಂಧಲೆ ನಡೆಸಿದ ಪ್ರಕರಣವನ್ನ ಮುಂದಿಟ್ಟು ರಮ್ಯಾ ಅವರನ್ನ ತರಾಟೆಗೆ ತೆಗೆದುಕೊಂಡಿದ್ದರು.

ಹುಚ್ಚ ವೆಂಕಟ್ ಮತ್ತು ರಚನಾ
'ಸೂಪರ್ ಜೋಡಿ-2' ರಿಯಾಲಿಟಿ ಶೋನಲ್ಲಿ ಹುಚ್ಚವೆಂಕಟ್ ಮತ್ತು ರಚನಾ ಜೋಡಿಯಾಗಿ ಭಾಗವಹಿಸಿದ್ದರು. ಶೋ ಮುಗಿಯುತ್ತಿದ್ದಂತೆ ರಚನಾ ನನ್ನನ್ನ ಪ್ರೀತಿಸಿ ಕೈಕೊಟ್ಟಿದ್ದಾರೆ ಎಂದು ಹುಚ್ಚವೆಂಕಟ್ ಆರೋಪಿಸಿದರು. ಇದನ್ನ ರಚನಾ ಅಲ್ಲೆಗಳೆದರು.

ಸಂಯುಕ್ತಾ ಹೆಗಡೆ ಕಿರಿಕ್
'ಕಿರಿಕ್ ಪಾರ್ಟಿ' ನಾಯಕಿ ಸಂಯುಕ್ತಾ ಹೆಗಡೆ 'ಕಾಲೇಜ್ ಕುಮಾರ್' ಚಿತ್ರವನ್ನ ಒಪ್ಪಿಕೊಂಡಿದ್ದರು. ಆದ್ರೆ, ಶೂಟಿಂಗ್ ಗೆ ಬರುತ್ತಿಲ್ಲವೆಂದು ನಿರ್ಮಾಪಕ ಪದ್ಮನಾಭನ್ ಆರೋಪಿಸಿದರು. ತಮಿಳು ಚಿತ್ರದಲ್ಲಿ ಅಭಿನಯಿಸಲು, ಕನ್ನಡ ಸಿನಿಮಾಗೆ ಕೈಕೊಟ್ಟಿದ್ದಾರೆ ಎನ್ನಲಾಯಿತು. ನಂತರ ಸಂಯುಕ್ತಾ 'ಕಾಲೇಜ್ ಕುಮಾರ್' ಸಿನಿಮಾ ಮಾಡಿದರು. ಆದ್ರೆ, ಪ್ರಚಾರಕ್ಕೆ ಬರುತ್ತಿಲ್ಲ ಮತ್ತೆ ಫಿಲ್ಮ್ ಚೇಂಬರ್ ನಲ್ಲಿ ನಿರ್ಮಾಪಕರು ದೂರು ನೀಡಿದರು. ಈ ವರ್ಷ ಸಂಯುಕ್ತಾ ಮಾಡಿದ್ದು, ಒಂದೇ ಸಿನಿಮಾ, ಆದ್ರೆ, ವರ್ಷವಿಡಿ ವಿವಾದಲ್ಲಿದ್ದರು.

ಕ್ಷಮೆ ಕೇಳಿದ ಕಟ್ಟಪ್ಪ
ಕನ್ನಡಿಗರನ್ನ ಅವಮಾನಿಸಿದ್ದ ತಮಿಳು ನಟ ಸತ್ಯರಾಜ್ ಅವರು ಕನ್ನಡಿಗರ ಹೋರಾಟಕ್ಕೆ ಮಣಿದು ಕ್ಷಮೆ ಕೇಳಿದರು. ಇದಕ್ಕು ಮುಂಚೆ ಸತ್ಯರಾಜ್ ಅಭಿನಯಿಸಿದ್ದ 'ಬಾಹುಬಲಿ 2' ಚಿತ್ರವನ್ನ ಬಿಡುಗಡೆ ಮಾಡುವುದಿಲ್ಲ ಎಂದು ಕನ್ನಡಿಗರು ಪಟ್ಟು ಹಿಡಿದಿದ್ದರು. ಈ ವಿವಾದ ತಿಂಗಳುಗಳ ಕಾಲ ಸುದ್ದಿಯಲ್ಲಿತ್ತು.

ಪ್ರಥಮ್-ಭುವನ್ ಕಾದಾಟ
'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಂಜು ಮತ್ತು ನಾನು' ಮೆಗಾ ಸಿರಿಯಲ್ ನ ಕೊನೆಯ ದಿನ ಚಿತ್ರೀಕರಣದಲ್ಲಿ ನಟ ಭುವನ್ ಮತ್ತು ಪ್ರಥಮ್ ಜಗಳ ಮಾಡಿಕೊಂಡಿದ್ದರು. ಪ್ರಥಮ್, ಭುವನ್ ಅವರ ತೊಡೆ ಕಚ್ಚಿದ್ದರು ಎಂಬ ಆರೋಪ ಮಾಡಿ, ಭುವನ್ ದೂರು ನೀಡಿದ್ದರು. ಪ್ರಥಮ್ ಕೂಡ ಪ್ರತಿ ದೂರು ನೀಡಿದ್ದರು.

ಪ್ರಥಮ್ ಆತ್ಮಹತ್ಯೆ ಯತ್ನ
ಬಿಗ್ ಬಾಸ್ ವಿನ್ನರ್ ಪ್ರಥಮ್ ಫೇಸ್ ಬುಕ್ ಲೈವ್ ನಲ್ಲೇ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದ ಘಟನೆ ಭಾರಿ ಚರ್ಚಗೆ ಕಾರಣವಾಗಿತ್ತು. ವೈಯಕ್ತಿಕವಾಗಿ ಮತ್ತು ಮಾನಸಿಕವಾಗಿ ಕೆಲವರು ಹಿಂಸೆ ಮಾಡುತ್ತಿದ್ದಾರೆ ಎಂದು ಮನನೊಂದು ಸಾಯಲು ನಿರ್ಧರಿಸಿದ್ದರು ಪ್ರಥಮ್. ನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.

ದನಕಾಯೋನು ಸಂಭಾವನೆ ಕಿರಿಕ್
'ದನಕಾಯೋನು' ಚಿತ್ರದ ಸಂಭಾವನೆಯನ್ನ ನಿರ್ಮಾಪಕರು ಕೊಟ್ಟಿಲ್ಲ ಎಂದು ನಿರ್ದೇಶಕ ಯೋಗರಾಜ್ ಭಟ್ ಆರೋಪಿಸಿದರು. ನಂತರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕ ಶ್ರೀನಿವಾಸ್, ನಿರ್ದೇಶಕ ಯೋಗರಾಜ್ ಭಟ್ ಗೆ ಮೂರು ಚೆಕ್ ನೀಡಿದರು. ಆದ್ರೆ, ಬೌನ್ಸ್ ಆಯಿತು. ಇದೀಗ, ಯೋಗರಾಜ್ ಭಟ್ಟರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

'ರಾಜು ಕನ್ನಡ ಮೀಡಿಯಂ' ಜಗಳ
'ಕನ್ನಡ ಮೀಡಿಯಂ ರಾಜು' ಚಿತ್ರದ ನಟಿ ಅವಂತಿಕಾ ಶೆಟ್ಟಿ, ನಿರ್ಮಾಪಕ ಸುರೇಶ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದರು. ಸಂಭಾವನೆ ಕೊಟ್ಟಿಲ್ಲ ಎಂದು ದೂರು ನೀಡಿದರು. ಆದ್ರೆ, ಆರೋಪ ನಿರಾಕರಿಸಿದ ಸುರೇಶ್, ಅವಂತಿಕಾ ಶೆಟ್ಟಿ ಸ್ವಭಾವ ಸರಿಯಿಲ್ಲ. ಅವರ ಶೂಟಿಂಗ್ ಗೆ ಬಂದಿಲ್ಲ ಎಂದು ಪ್ರತ್ಯಾರೋಪ ಮಾಡಿದರು. ಕೊನೆಗೆ ಫಿಲ್ಮ್ ಚೇಂಬರ್ ನಲ್ಲಿ ಈ ವಿವಾದ ಬಗೆಹರಿಯಿತು.

ಕಾರುಣ್ಯ ರಾಮ್ ಲವ್ ಕಿರಿಕ್
ನಟಿ ಕಾರುಣ್ಯ ರಾಮ್ ಮತ್ತು ಉದ್ಯಮಿ ಸಚಿನ್ ಅವರ ಲವ್ ಬ್ರೇಕ್ ವಿಷ್ಯ ಬಹಿರಂಗವಾಯಿತು. ಸುಮಾರು 8 ವರ್ಷಗಳ ಪರಿಚಯ ಪ್ರೀತಿಗೆ ತಿರುಗಿ, ಮದುವೆವರೆಗೂ ಬಂದಿತ್ತು. ಆದ್ರೆ, ಸಚಿನ್ ಮನೆಯವರು ಕಾರಣ್ಯ ಅವರನ್ನ ಒಪ್ಪದ ಕಾರಣ ಸಚಿನ್, ಕಿರುತೆರೆ ನಟಿ ಅನಿಖ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.

ಮಸಾಜ್ ಪಾರ್ಲರ್ ಮತ್ತ ಹಾಸ್ಯ ನಟರು
ಮೈಸೂರಿನ ಮಸಾಜ್ ಪಾರ್ಲರ್ ನಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಕನ್ನಡ ಖ್ಯಾತ ನಟ ಮಂಡ್ಯ ರಮೇಶ್ ಮತ್ತು ಸಾಧು ಕೋಕಿಲಾ ಅವರ ವಿರುದ್ಧ ಆರೋಪ ಕೇಳಿ ಬಂತು. ಈ ವಿವಾದ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ಹಂತಕ್ಕೆ ತಲುಪಿದೆ. ಈ ವಿವಾದ ಈ ವರ್ಷದ ಕೊನೆಯ ವಿವಾದವಾಗಿದೆ.

ಹೃತಿಕ್-ಕಂಗನಾ ಮಹಾಯುದ್ಧ
ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ನಟಿ ಕಂಗನಾ ರನೌತ್ ನಡುವಿನ ಖಾಸಗಿ ವಿವಾದ ವರ್ಷವಿಡಿ ಸುದ್ದಿ ಮಾಡಿದೆ. ಹೃತಿಕ್ ವಿರುದ್ಧ ಕಂಗನಾ ಆರೋಪ ಮಾಡಿದ್ರೆ, ಕಂಗನಾ ವಿರುದ್ಧ ಹೃತಿಕ್ ಪ್ರತ್ಯಾರೋಪ ಮಾಡಿದ್ರು. ಈ ವರ್ಷ ಇವರಿಬ್ಬರ ವಿವಾದ ಮುಗಿಯಲೇ ಇಲ್ಲ.

'ಪದ್ಮಾವತಿ' ರಗಳೆ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿ, ದೀಪಿಕಾ ಪಡುಕೋಣೆ ಅಭಿನಯಿಸಿದ್ದ 'ಪದ್ಮಾವತಿ' ಸಿನಿಮಾ ವಿರುದ್ಧ ರಜಪೂತ್ ಕರಣಿ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 'ರಾಣಿ ಪದ್ಮಾವತಿ' ಬಗ್ಗೆ ಕೆಟ್ಟಾದಾಗಿ ತೋರಿಸಲಾಗಿದೆ ಎಂದು ವಿರೋಧಿಸಿದರು. ಇದರ ಪರಿಣಾಮ ಡಿಸೆಂಬರ್ 1 ರಂದು ಸಿನಿಮಾ ಬಿಡುಗಡೆ ಮಾಡಲು ಅವಕಾಶ ನೀಡಲಿಲ್ಲ. ಸೆನ್ಸಾರ್ ಸಮಸ್ಯೆ ಕೂಡ ಕಾಡಿದೆ. ರಾಜಕೀಯವಾಗಿ ಕೂಡ ಈ ವಿವಾದ ಬದಲಾಯಿತು. ಕೊನೆಗೂ ಈ ವರ್ಷ ಸಿನಿಮಾ ಬರಲೇ ಇಲ್ಲ.

ಸನ್ನಿ ಲಿಯೋನ್ 'ಸನ್ನಿ ನೈಟ್ಸ್'
ಹೊಸ ವರ್ಷದ ಸಂಭ್ರಮಾಚರಣೆಯನ್ನ ಆಚರಿಸಲು ಬೆಂಗಳೂರಿನಲ್ಲಿ 'ಸನ್ನಿ ನೈಟ್ಸ್' ಕಾರ್ಯಕ್ರಮ ಆಯೋಜಿಸಿದ್ದರು. ಆದ್ರೆ, ಕನ್ನಡ ಸಂಘಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕೊನೆ ಘಳಿಗೆಯಲ್ಲಿ ರದ್ದಾಯಿತು. ಆಯೋಜಕರು ಕೋರ್ಟ್ ಮೆಟ್ಟಲೇರಿದರು. ಪೊಲೀಸರು ಅನುಮತಿ ನೀಡಲಿಲ್ಲ. ಸರ್ಕಾರದ ಈ ಕ್ರಮದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಸನ್ನಿ ''ನಾನು ಬೆಂಗಳೂರಿಗೆ ಬರಲ್ಲ'' ಎಂದು ಹೇಳಿಕೆ ನೀಡಿದರು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

ಟಾಲಿವುಡ್ ಡ್ರಗ್ ಮಾಫಿಯಾ
ಟಾಲಿವುಡ್ ಇಂಡಸ್ಟ್ರಿಯಲ್ಲಿ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿತ್ತು. ರವಿತೇಜ, ಪೂರಿ ಜಗನ್ನಾಥ್, ಚಾರ್ಮಿ ಕೌರ್ ಸೇರಿದಂತೆ ಸುಮಾರು 15ಕ್ಕಿಂತ ಹೆಚ್ಚು ಸಿನಿಮಾ ಮಂದಿಯಲ್ಲಿ ಎಸ್ಐಟಿ ಪೊಲೀಸರು ತನಿಖೆ ನಡೆಸಿದ್ದರು.

ಸೋನು ನಿಗಮ್ ವಿವಾದಾತ್ಮಕ ಸ್ಟೇಟ್ ಮೆಂಟ್
ಖ್ಯಾತ ಗಾಯಕ ಸೋನು ನಿಗಮ್ ''ಮುಸ್ಲೀಮರು ಮುಂಜಾನೆ ಮಾಡುವ ಪ್ರಾರ್ಥನೆಗೆ ನಾನು ಇಸ್ಲಾಂ ಧರ್ಮದವನಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಏಳಬೇಕಾದ ಪರಿಸ್ಥಿತಿ ಎದುರಾಗಿದೆ'' ಎಂದು ಟ್ವೀಟ್ ಮಾಡಿದ್ದರು. ಇದು ದೊಡ್ಡ ವಿವಾದವನ್ನ ಹುಟ್ಟುಹಾಕಿತ್ತು. ಸೋನು ನಿಗಮ್ ಹೇಳಿಕೆ ಖಂಡಿಸಿ ಪ್ರತಿಭಟನೆ ಕೂಡ ಮಾಡಿದ್ದರು.


Click it and Unblock the Notifications











