ರಾಜಕೀಯ ಕೆಸರೆರಚಾಟದಲ್ಲಿ ಕೊಚ್ಚಿ ಹೋಗುತ್ತಿದ್ಯಾ ಸ್ಯಾಂಡಲ್ ವುಡ್?
Recommended Video
ಕಳೆದ ಹದಿನೈದು ದಿನಗಳಿಂದ ಟಿವಿ, ಪತ್ರಿಕೆ, ಫೇಸ್ ಬುಕ್, ಟ್ವಿಟ್ಟರ್ ಹೀಗೆ ಎಲ್ಲೇ ನೋಡಿದ್ರು ಸರ್ಕಾರ ಉರುಳುತ್ತಾ, ಉಳಿಯುತ್ತಾ ಎಂಬುದೇ ಚರ್ಚೆ. ಅತೃಪ್ತ ಶಾಸಕರು ಮುಂಬೈಗೆ ಹೋದರು, ಕಾಂಗ್ರೆಸ್-ಜೆಡಿಎಸ್ ಶಾಸಕರು ರೆಸಾರ್ಟ್ ಗೆ ಹೋದರು, ಬಿಜಿಪಿಯವರು ಆಪರೇಷನ್ ಕಮಲ ಮಾಡ್ತಿದ್ದಾರೆ ಅನ್ನೋದೇ ಸುದ್ದಿ.
ಇದು ಬಿಟ್ಟರೇ ಸಮಾಜದಲ್ಲಿ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಯಾರೂ ಆಸಕ್ತಿ ತೋರುತ್ತಿಲ್ಲ. ಸದಾ ಒಂದಲ್ಲ ಒಂದು ಸುದ್ದಿಯಿಂದ ಸದ್ದು ಮಾಡುವ ಸ್ಯಾಂಡಲ್ ವುಡ್ ಅಂತೂ ಸೈಲೆಂಟ್ ಆಗಿಬಿಟ್ಟಿದೆ ಎಂಬ ಭಾವನೆ ಮೂಡುತ್ತಿದೆ. ಆದ್ರೆ, ಅದು ನಿಜ ಅಲ್ಲ. ಈ ರಾಜಕೀಯ ಪಕ್ಷಗಳ ಕೆಸರಾಟದಲ್ಲಿ ಚಂದನವನ ಕೊಚ್ಚಿ ಹೋಗಿದೆ.
ಪ್ರತಿನಿತ್ಯ ಪ್ರೆಸ್ ಮಿಟ್ ಆಗ್ತಿದೆ, ಪ್ರಚಾರ ಮಾಡ್ತಿದ್ದಾರೆ, ಆಡಿಯೋ ಬಿಡುಗಡೆ ಆಗಿದೆ, ಟ್ರೈಲರ್ ರಿಲೀಸ್ ಆಗಿದೆ, ಬರ್ತಡೇ ಸೆಲೆಬ್ರೆಷನ್ ಇದೆ. ಬಟ್ ಸದ್ಯದ ರಾಜಕೀಯ ದೊಂಬರಾಟದಲ್ಲಿ ಇದೆಲ್ಲವೂ ಜನರಿಗೆ ತಲುಪುವಲ್ಲಿ ಹಿನ್ನಡೆಯಾಗಿದೆ. ಅಷ್ಟಕ್ಕೂ, ಸದ್ಯದ ರಾಜಕೀಯ ಪರಿಸ್ಥಿತಿಯಿಂದ ನಷ್ಟ ಅನುಭವಿಸುತ್ತಿರುವ ಚಿತ್ರಗಳು ಯಾವುದು? ಮುಂದೆ ಓದಿ.....

ಪೈಲ್ವಾನ್ ಅಬ್ಬರಕ್ಕೆ ವಿಲನ್ ಆದ ರಾಜಕೀಯ.!
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ನೋಡಲು ಸ್ಯಾಂಡಲ್ ವುಡ್ ಅಭಿಮಾನಿಗಳು ಕಾಯ್ತಿದ್ದಾರೆ. ಕುಸ್ತಿ ಅಖಾಡದಲ್ಲಿ ಸುದೀಪ್ ಹೇಗೆ ಕಾಳಗ ಮಾಡಿರಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಆದ್ರೀಗ, ರಾಜ್ಯ ಸಮ್ಮಿಶ್ರ ಸರ್ಕಾರದ ಅತಂತ್ರ ಸ್ಥಿತಿ ಕಂಡ ಜನರ, ಸುದೀಪ್ ಪೈಲ್ವಾನ್ ಬಗ್ಗೆ ಮರೆತೆ ಹೋಗಿದ್ದಾರೆ. ರಾಜಕಾರಣಿಗಳ ಕುಸ್ತಿಯನ್ನ 24 ಗಂಟೆ ಟಿವಿ ಮುಂದೆ ವೀಕ್ಷಿಸುತ್ತಿದ್ದಾರೆ. ಪೈಲ್ವಾನ್ ಪ್ರಚಾರಕ್ಕೆ ಸದ್ಯದ ರಾಜಕೀಯ ಬೆಳವಣಿಗೆ ವಿಲನ್ ಆಗಿ ನಿಂತಿದೆ.

ದರ್ಶನ್ ಕುರುಕ್ಷೇತ್ರಕ್ಕಿಂತ ಕರ್ನಾಟಕ ಕುರುಕ್ಷೇತ್ರವೇ ರೋಚಕ
ಸದ್ಯ ಕರ್ನಾಟಕ ರಾಜಕೀಯ ನೋಡುತ್ತಿದ್ದರೇ ದರ್ಶನ್ ಕುರುಕ್ಷೇತ್ರಕ್ಕಿಂತ ಕರ್ನಾಟಕ ಸರ್ಕಾರದ ಕುರುಕ್ಷೇತ್ರವೇ ಹೆಚ್ಚು ರೋಚಕವಾಗಿದೆ. ಕನ್ನಡದಲ್ಲಿ ಇಂತಹದೊಂದು ಸಿನಿಮಾ ಬರುತ್ತಿರುವುದು ಎಲ್ಲರ ಕಣ್ಣು ಹುಬ್ಬೇರಿಸುವಂತೆ ಮಾಡಿದೆ. ಆದ್ರೆ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಯುದ್ಧದಲ್ಲಿ ಮುನಿರತ್ನ ಕುರುಕ್ಷೇತ್ರ ಕಳೆದು ಹೋಗಿದೆ ಎನ್ನಬಹುದು. ದುರಂತ ಅಂದ್ರೆ ಕುರುಕ್ಷೇತ್ರ ಸಿನಿಮಾ ನಿರ್ಮಿಸಿರುವ ಮುನಿರತ್ನ ಅವರೇ ಸಿನಿಮಾಗಿಂತ ಹೆಚ್ಚು ಸರ್ಕಾರವನ್ನ ಉರುಳಿಸುವ ಪ್ರಯತ್ನದಲ್ಲಿ ಬ್ಯುಸಿಯಾಗಿದ್ದಾರೆ.

ಮಾಧ್ಯಮಗಳಿಗೆ ಇಂತಹದೊಂದು ಸುದ್ದಿ ಬೇಕಿತ್ತು
ಯಾವುದೇ ಮಾಧ್ಯಮ ನೋಡಿದ್ರೂ ರಾಜ್ಯ ಸರ್ಕಾರ ಉಳಿಯುತ್ತಾ ಅಥವಾ ಉರುಳುತ್ತಾ ಎಂಬ ವಿಷ್ಯ ಬಿಟ್ಟರೇ ಬೇರೆ ಏನೂ ಇಲ್ಲ. ಇದರಿಂದ ಸಹಜವಾಗಿ ಸ್ಯಾಂಡಲ್ ವುಡ್ ಆತಂಕಗೊಂಡಿದೆ. ಸಿನಿಮಾಗಳ ಪ್ರಚಾರಕ್ಕೆ ಏನು ಮಾಡುವುದು ಎಂಬ ಗೊಂದಲದಲ್ಲಿದ್ದಾರೆ. ಸತತವಾಗಿ ಬೆಳಿಗ್ಗೆಯಿಂದ ರಾತ್ರಿವರೆಗೂ ರಾಜಕೀಯ ಸುದ್ದಿಯೇ ಪ್ರಸಾರವಾಗುತ್ತಿರುವಾಗ, ಸಿನಿಮಾ ಕಥೆ ಏನು ಎಂದು ಚಿಂತಿಸುತ್ತಿದ್ದಾರೆ.

ಸಣ್ಣ-ಪುಟ್ಟ ಸಿನಿಮಾಗಳಿಗೂ ಸಂಕಷ್ಟ
ದೊಡ್ಡ ದೊಡ್ಡ ಸಿನಿಮಾಗಳು ಹೇಗೋ ಇದನ್ನೆಲ್ಲ ಭೇದಿಸಿ ಚಿತ್ರಮಂದಿರಕ್ಕೆ ಬಂದು, ಜನರಿಗೆ ತಲುಪುತ್ತೆ. ಆದ್ರೆ, ಸಣ್ಣ ಪುಟ್ಟ ಸಿನಿಮಾಗಳ ಕಥೆ ಏನು? ಟಿವಿ, ಪೇಪರ್, ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲೂ ಬರಿ ರಾಜಕೀಯೇ ತುಂಬಿ ಹೋಗಿದೆ. ಕಳೆದ ವಾರ ಯಾವ ಸಿನಿಮಾ ಬಂತು ಎನ್ನುವುದು ಎಷ್ಟೋ ಜನಕ್ಕೆ ಗೊತ್ತಿಲ್ಲ. ಈ ವಾರ ಯಾವ ಸಿನಿಮಾ ಬರ್ತಿದೆ ಎಂಬುದು ಕೂಡ ಅನೇಕರಿಗೆ ಗೊತ್ತಿಲ್ಲ. ಇದನ್ನೆಲ್ಲಾ ನೋಡಿದಾಗ ರಾಜಕೀಯ ಕೆಸರಾಟದಲ್ಲಿ ಸ್ಯಾಂಡಲ್ ವುಡ್ ಕೊಚ್ಚಿ ಹೋಯ್ತಾ ಎಂಬ ಭಾವನೆ ಬರ್ತಿದೆ.


Click it and Unblock the Notifications











