ಫಿಲಂ ಚೇಂಬರ್ನಲ್ಲೇ ಹೃದಯಾಘಾತ: ಸಾಹಸ ಸಿಂಹನ ನೆಚ್ಚಿನ ನಿರ್ದೇಶಕ ಜೋ ಸೈಮನ್ ನಿಧನ
''ಸಾಹಸ ಸಿಂಹ'' ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗದ ''ಯಜಮಾನ'' ವಿಷ್ಣುವರ್ಧನ್ ಅವರಿಗೆ ''ಸಾಹಸಸಿಂಹ'' ಎಂಬ ಬಿರುದನ್ನು ನೀಡಿದವರು ಜೋಸೈಮನ್. ''ಒಂದು ಪ್ರೇಮದ ಕಥೆ''.. ''ಸಿಂಹ ಜೋಡಿ''.. ''ನನ್ನ ರೋಷ ನೂರು ವರುಷ''.. ''ಮಹಾ ಪ್ರಚಂಡರು''.. ''ಊರಿಗೆ ಉಪಕಾರಿ''.. ''ಸಿಡಿದೆದ್ದ ಸಹೋದರರು'' .. ''ಹಾಕಾಂಗ್ನಲ್ಲಿ ಏಜೆಂಟ್ ಅಮರ''..
ಹೀಗೆ ಒಂದಕ್ಕಿಂತ ಒಂದು ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಹೆಗ್ಗಳಿಕೆ ಇವರದ್ದು. ಬರಹಗಾರನಾಗಿ, ನಿರ್ದೇಶಕನಾಗಿ ಹತ್ ಹತ್ರ 47-48 ವರ್ಷ ಚಿತ್ರರಂಗಕ್ಕೆ ತಮ್ಮ ಸೇವೆಯನ್ನು ಸಲ್ಲಿಸಿದ್ದ ಜೋಸೈಮನ್ ಇಂದು ( ಫೆಬ್ರವರಿ 13 ) ನಿಧನರಾಗಿದ್ದಾರೆ.

ವಿಧಿಯಾಟ ನೋಡಿ, ಎಂತಹ ವಿಚಿತ್ರವಾದದ್ದು. ಕಲೆಯನ್ನೇ ಉಸಿರಾಗಿಸಿಕೊಂಡಿದ್ದ ಜೋಸೈಮನ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆಯಲ್ಲಿ ಇಂದು ( ಫೆಬ್ರವರಿ 13 ) ಭಾಗವಹಿಸಿದ್ದರು. ಆಗ ಜೋಸೈಮನ್ ಅವರಿಗೆ ತೀವೃ ಹೃದಯಾಘಾತ ಆಗಿತ್ತು. ಕೂಡಲೇ ಅವರನ್ನು ಅಲ್ಲಿಯೇ ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಜೋಸೈಮನ್ ಅವರು ಕೊನೆ ಉಸಿರೆಳೆದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಜೋ ಸೈಮನ್ ಮೂಲತ ಮಂಂಡ್ಯದವರು. 1946ರಲ್ಲಿ ಜನಿಸಿದ್ದ ಇವರು ಚಿತ್ರರಂಗಕ್ಕೆ 1967ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆರಂಭದಲ್ಲಿ 'ಟಚ್-ಅಪ್ ಬಾಯ್' ಆಗಿ ವೃತ್ತಿಜೀವನ ಆರಂಭಿಸಿದ ಇವರು, ನಂತರ ಮೇಕಪ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದರು. ಕೆ.ಎಸ್.ಆರ್ ದಾಸ್ ಮತ್ತು ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರಂತಹ ದಿಗ್ಗಜ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಪಳಗಿದ ಸೈಮನ್, ಶ್ರಮ ಮತ್ತು ಪ್ರತಿಭೆಯ ಬಲದಿಂದ ಸ್ವತಂತ್ರ ನಿರ್ದೇಶಕರಾಗಿ ಬೆಳೆದರು.
ಮೊದಲಿಂದ ಚಿತ್ರರಂಗದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುತ್ತಿದ್ದ ಜೋಸೈಮನ್ ಇಂದು ( ಫೆಬ್ರವರಿ 13 ) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದ್ದರು. ಈ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಅಲ್ಲಿಯೇ ಪಕ್ಕದಲ್ಲಿರುವ ಮಲ್ಲಿಗೆ ಆಸ್ಪತ್ರೆಗೆ ಕೊಂಡೊಯ್ಯಲಾಯ್ತಾದರೂ ಅಷ್ಟರಲ್ಲಿ ಜೋಸೈಮನ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ತಮ್ಮ ಜೀವಿತಾವಧಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಜೋಸೈಮನ್, 100ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡ ಚಿತ್ರನಟಿ ಭವ್ಯಾರನ್ನು ಬೆಳ್ಳಿತೆರೆಗೆ ಪರಿಚಯಿಸಿದ ಖ್ಯಾತಿ ಜೋಸೈಮನ್ ಅವರದ್ದು.

ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ (KANFIDA) ಉಪಾಧ್ಯಕ್ಷರಾಗಿ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಸಕ್ರಿಯ ಸದಸ್ಯರಾಗಿ ಜೋಸೈಮನ್ ಚಿತ್ರರಂಗದ ಹಲವು ಸಮಸ್ಯೆಗಳಿಗೆ ಧ್ವನಿಯಾಗಿದ್ದರು. ಹೊಸ ತಲೆಮಾರಿನ ನಿರ್ದೇಶಕರಿಗೆ ಮಾರ್ಗದರ್ಶಕರಾಗಿದ್ದರು.
ಇನ್ನೂ ಇಷ್ಟು ವರ್ಷ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದರು ಕೂಡ ಜೋಸೈಮನ್ ಅವರಿಗೆ ಸಿಗಬೇಕಾದ ಮನ್ನಣೆ ಮತ್ತು ಮಾನ್ಯತೆ ಸಿಗಲಿಲ್ಲ. ಈ ವಿಚಾರದ ಕುರಿತು ಅವರಿಗೆ ಬೇಸರ ಕೂಡ ಇತ್ತು. ತೀರಾ ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ ಈ ಕುರಿತು ಜೋಸೈಮನ್ ಮಾತನಾಡಿದ್ದರು ಕೂಡ.
ಜೋಸೈಮನ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದ್ದು, ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದಾರೆ. ಜೋಸೈಮನ್ ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನಾಳೆ (ಫೆಬ್ರವರಿ 14) ರವೀಂದ್ರ ಕಲಾಕ್ಷೇತ್ರದಲ್ಲಿ ಜೋಸೈಮನ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ
ಇಡಲಾಗುತ್ತಿದ್ದು, ಬೆಳಗ್ಗೆ 10 ಗಂಟೆಯಿಂದ ಒಂದು ಗಂಟೆ ವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ನಂತರ ನಾಳೆಯೇ ಕ್ರಿಶ್ಚಿಯನ್ ವಿಧಿ ವಿಧಾನಗಳ ಅನುಸಾರ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.


Click it and Unblock the Notifications











