ಡಬ್ಬಿಂಗ್ ವಿರುದ್ಧ ಕೈ ಎತ್ತಿದ ತಾರೆಗಳು ಏನಂತಾರೆ?
ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಮಾರಕ ಎನ್ನಲಾಗುತ್ತಿರುವ ಡಬ್ಬಿಂಗ್ ವಿರುದ್ಧದ ಕಹಳೆ ಮತ್ತೆ ಮೊಳಗುತ್ತಿದೆ. ಡಬ್ಬಿಂಗ್ ಚಿತ್ರಗಳಿಗೆ ಹಲವಾರು ತಾರೆಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಮೌನಕ್ಕೆ ಶರಣಾಗಿದ್ದಾರೆ. ಇನ್ನೂ ಕೆಲವರ ನಿಲುವು ಏನು ಎಂಬುದು ಸ್ಪಷ್ಟವಾಗಿಲ್ಲ.
ಈಗಾಗಲೆ ಪ್ರತಿಭಟನಾ ಮೆರವಣಿಗೆ ಆರಂಭವಾಗಿದ್ದು ಮೈಸೂರು ಬ್ಯಾಂಕ್ ವೃತ್ತ ಹಾಗೂ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿದೆ. ಗಾಂಧಿನಗರದ ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನ ರದ್ದಾಗಿದೆ. ಡಾ.ರಾಜ್ ಅಭಿಮಾನಿಗಳಿಂದ ಮೈಸೂರು ಬ್ಯಾಂಕ್ ವೃತ್ತದಿಂದ ಬೈಕ್ ರ್ಯಾಲಿ ಸಹ ಆರಂಭಿಸಲಾಯಿತು.
ಬಂದ್ ಗೆ ಕರೆಕೊಟ್ಟಿರುವ ಕಾರಣ ಚಿತ್ರೋದ್ಯಮದ ಸಂಪೂರ್ಣ ಚಟುವಟಿಕೆಗಳು ಬಂದ್ ಆಗಿವೆ. ಸೆಂಟ್ರಲ್ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹಲವಾರು ತಾರೆಗಳು ಭಾಗಿಯಾಗಿದ್ದಾರೆ.
ವರನಟ ಡಾ.ರಾಜ್ ಕುಮಾರ್ ಅವರಿಂದ ಹಿಡಿದು ಖ್ಯಾತ ಸಾಹಿತಿಗಳಾದ ಅ.ನ.ಕೃ ಅವರು ಡಬ್ಬಿಂಗ್ ಸಂಸ್ಕೃತಿಗೆ ವಿರೋಧ ವ್ಯಕ್ತಪಡಿಸಿದ್ದರು. ಆ ಪರಂಪರೆಯನ್ನು ಬೆಳಸಿಕೊಂಡು ಬಂದವರಲ್ಲಿ ಪ್ರಮುಖರು. ಈಗ ಮತ್ತೆ ಡಬ್ಬಿಂಗ್ ವಿರುದ್ಧ ರಣಕಹಳೆ ಮತ್ತೆ ಮೊಳಗುತ್ತಿದೆ.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಖಡಕ್ ನುಡಿ
ಕನ್ನಡ ಭಾಷೆ ಮೇಲೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು. ಬೇಕಿದ್ದರೆ ರೀಮೇಕ್ ಮಾಡಲಿ. ಆದರೆ ಡಬ್ಬಿಂಗ್ ಬೇಡ ಎಂದಿದ್ದಾರೆ ಶಿವರಾಜ್ ಕುಮಾರ್. ಡಬ್ಬಿಂಗ್ ಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಯಾವುದೇ ಸ್ವಾರ್ಥಕ್ಕಲ್ಲ. ಯುವ ಕಲಾವಿದರು ಹಾಗೂ ತಂತ್ರಜ್ಞರ ಒಳಿತಿಗಾಗಿ ಎಂದು ಶಿವಣ್ಣ ಖಡಕ್ ಆಗಿ ಹೇಳಿದ್ದಾರೆ.

ಡಬ್ಬಿಂಗ್ ಎಂಬುದು ಸ್ಲೋ ಪಾಯಿಸನ್ ಇದ್ದಂತೆ
ಈ ರೀತಿ ಹೇಳಿರುವವರು ಕ್ರೇಜಿಸ್ಟಾರ್ ರವಿಚಂದ್ರನ್. ಕನ್ನಡ ಚಿತ್ರಗಳಿಗೆ ಥಿಯೇಟರ್ ಗಳೇ ಸಿಗುತ್ತಿಲ್ಲ. ನಮ್ಮ ನಾಡಿನಲ್ಲೇ ಕನ್ನಡ ಚಿತ್ರಗಳು ಅತಂತ್ರವಾಗಿವೆ. ಇನ್ನು ಡಬ್ಬಿಂಗ್ ಬಂದರೆ ಅದು ನಿಧಾನಕ್ಕೆ ಕನ್ನಡ ಚಿತ್ರಗಳನ್ನು ಬಲಿತೆಗೆದುಕೊಳ್ಳುತ್ತದೆ. ಡಬ್ಬಿಂಗ್ ಒಂಥರಾ ಸ್ಲೋ ಪಾಯಿಸನ್ ಇದ್ದಂತೆ. ರೀಮೇಕ್ ಚಿತ್ರಗಳಿಗೂ ನನ್ನ ವಿರೋಧವಿದೆ ಎಂದಿದ್ದಾರೆ ರವಿಮಾಮ.

ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಕೊರತೆ
ನೆರರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿನ ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ಅಲ್ಲಿನ ರಾಜಕಾರಣಿಗಳು ಸಿನಿಮಾದೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ಈ ರೀತಿಯ ಬೆಳವಣಿಗೆ ಆಗಬೇಕು ಎಂದು ಅವರು ಡಬ್ಬಿಂಗ್ ಚಿತ್ರಗಳಿಗೆ ವಿರೋಧಿಸಿದ್ದಾರೆ.

ವಾಟಾಳ್ ನಾಗರಾಜ್ ಯಾಕೆ ಧುಮುಕಿದರು?
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗಾರಾಜ್ ಯಾಕೆ ಡಬ್ಬಿಂಗ್ ವಿರುದ್ಧ ಬೀದಿಗಿಳಿದರು? ಇದಕ್ಕೆ ಅವರೇ ಹೇಳುವಂತೆ...ನನಗೂ ಕನ್ನಡ ಚಿತ್ರರಂಗಕ್ಕೆ ಯಾವುದೇ ಸಂಬಂಧವಿಲ್ಲ. ಆದರೆ ಕನ್ನಡನಾಡಿಗಾಗಿ ಒಗ್ಗಟ್ಟಾಗಲು ನಾವೆಲ್ಲರೂ ಕೈಜೋಡಿಸಬೇಕು. ಡಬ್ಬಿಂಗ್ ತಡೆಗಟ್ಟಲು ಅಗತ್ಯಬಿದ್ದರೆ ಜೈಲಿಗೆ ಹೋಗಲೂ ಸಿದ್ಧ ಎಂದಿದ್ದಾರೆ.

ಸೃಜನಶೀಲತೆ ಹಾಳು ಎಂದ ಬರಗೂರು
ಚಲನಚಿತ್ರ ಎಂಬುದು ಒಂದು ಸೃಜನಶೀಲ ಕಲೆ. ಡಬ್ಬಿಂಗ್ನಿಂದಾಗಿ ಈ ಸೃಜನಶೀಲತೆ ಹಾಳಾಗುತ್ತದೆ. ಈ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರ ಸೂಕ್ತ ಕಾನೂನು ಮಾಡಿಲ್ಲ. ಹೀಗಾಗಿ ತೀರ್ಮಾನವಾಗುವ ಮೊದಲೇ ವಿವಾದ ಬೇಡ ಎಂದಿದ್ದಾರೆ ಬರಗೂರು ರಾಮಚಂದ್ರಪ್ಪ.

ಡಬ್ಬಿಂಗ್ ವಿರುದ್ಧ ಸಾ.ರಾ.ಗೋವಿಂದು
ಡಬ್ಬಿಂಗ್ಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ಇದು ಕನ್ನಡಪರ ಸಂಘಟನೆಗಳ ತೀರ್ಮಾನವಷ್ಟೇ ಅಲ್ಲ, ಕನ್ನಡ ಚಿತ್ರರಂಗದ ನಿರ್ಧಾರವೂ ಹೌದು. ಎಂಥ ಹೋರಾಟಕ್ಕೂ ನಾವು ಸಿದ್ಧ.

ಡಾ.ಜಯಮಾಲಾ ಏನಂತಾರೆ?
ಇದು ಕನ್ನಡ ಚಿತ್ರರಂಗದ ಮತ್ತು ಇಲ್ಲಿಯ ಕಾರ್ಮಿಕರ ಅಸ್ತಿತ್ವದ ಪ್ರಶ್ನೆ. ಡಬ್ಬಿಂಗ್ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದಿದ್ದಾರೆ ನಟಿ, ನಿರ್ಮಾಪಕಿ ಡಾ.ಜಯಮಾಲಾ.

ನಟಿ ಶ್ರುತಿ ಅವರದೂ ಅದೇ ಮಾತು
ಇದು ಕನ್ನಡಿಗರು ಮತ್ತು ಕನ್ನಡ ಚಿತ್ರರಂಗದ ಮಾನ- ಮರ್ಯಾದೆ ಪ್ರಶ್ನೆ. ಡಬ್ಬಿಂಗ್ನಿಂದ ನಮ್ಮ ಸೃಜನಶೀಲತೆಯೂ ನಾಶ ಆಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎನ್ನುತ್ತಾರೆ ನಟಿ ಶ್ರುತಿ.


Click it and Unblock the Notifications











