ಶಾಶ್ವತ ನೀರಾವರಿಗಾಗಿ ಹೋರಾಟ: ಕೋಲಾರದಲ್ಲಿ ತಾರೆಯರು ಹೇಳಿದ್ದೇನು.?
ಬಯಲು ಸೀಮೆ ಶಾಶ್ವತ ನೀರಾವರಿ ಜಾರಿಗೆ ಆಗ್ರಹಿಸಿ ಇಂದು ಕೋಲಾರದಲ್ಲಿ ಕನ್ನಡ ಚಿತ್ರರಂಗದ ಗಣ್ಯರು ಪ್ರತಿಭಟನಾ ರ್ಯಾಲಿ ನಡೆಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, 'ತುಪ್ಪದ ಬೆಡಗಿ' ರಾಗಿಣಿ ದ್ವಿವೇದಿ, ನಟಿ ಪೂಜಾ ಗಾಂಧಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ಚಿರಂಜೀವಿ ಸರ್ಜಾ, ಸಾಧು ಕೋಕಿಲ ಸೇರಿದಂತೆ ಸ್ಯಾಂಡಲ್ ವುಡ್ ನ ಗಣ್ಯರು ಭಾಗಿಯಾದರು. [ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?]
ಇಂದು ಬೆಳಗ್ಗೆ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಫಿಲ್ಮ್ ಚೇಂಬರ್ ಬಳಿ ಸೇರಿದ ನಟ-ನಟಿಯರ ದಂಡು ಕೋಲಾರದತ್ತ ಪಯಣ ಆರಂಭಿಸಿತು. ಒಂದು ಗಂಟೆ ಸುಮಾರಿಗೆ ಕೋಲಾರ ಜಿಲ್ಲೆಗೆ ಆಗಮಿಸಿದ ಸಿನಿ ತಾರೆಯರು ಕೋಲಾರದ ಪ್ರವಾಸಿ ಮಂದಿರದಿಂದ ಎಲೆಪೇಟೆ ಸರ್ಕಲ್ ಮಾರ್ಗವಾಗಿ ತೆರೆದ ವಾಹನದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಸರ್ವಜ್ಞ ವೃತ್ತದಲ್ಲಿ ಪ್ರತಿಭಟನಾ ಸಮಾವೇಶದಲ್ಲಿ ಭಾಷಣ ಮಾಡಿದರು.
ಯಾರ್ಯಾರು ಏನು ಹೇಳಿದರು ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಶಿವರಾಜ್ ಕುಮಾರ್
''ನಾವು ಯಾವಾಗಲೂ ಬರಲ್ಲ. ನಮ್ಮ ತಪ್ಪು ಇವತ್ತು ನಮಗೆ ಗೊತ್ತಾಗಿದೆ. ದಯವಿಟ್ಟು ನಮ್ಮನ್ನ ಕ್ಷಮಿಸಿ. ಇನ್ಮೇಲೆ ಖಂಡಿತ ಅವಾಗವಾಗ ಕೋಲಾರಕ್ಕೆ ಬರ್ತೀವಿ. ನಿಮ್ಮನ್ನೆಲ್ಲಾ ಖುಷಿ ಪಡಿಸುತ್ತೇವೆ. ಆದ್ರೆ, ಈ ರೀತಿ ಬರುವುದು ಬೇಡ. ನಿಜವಾಗಲೂ ಸ್ಟ್ರಾಂಗ್ ಆಗಿ ಹೋರಾಟ ಮಾಡಬೇಕು. ಇಲ್ಲ ಅಂದ್ರೆ ಅರ್ಥ ಬರುವುದಿಲ್ಲ. ಕೋಲಾರ ಚಿನ್ನದ ನಾಡು, ಅದಕ್ಕೆ ನೀರಿನ ಸಮಸ್ಯೆ ಬಂದ್ರೆ ನಾವೆಲ್ಲಾ ಸುಮ್ಮನೆ ಇರಬಾರದು. ಗಡಿ ಪ್ರದೇಶ ಅಂತ ಬಿಡಬಾರದು. ನಿಮಗೆ ಯಾವುದೇ ಸಮಸ್ಯೆ ಬಂದರೂ ನಾವು ಜೊತೆಗೆ ಇರುತ್ತೇವೆ.''

ಯಶ್
''ಮೊದಲು ಈ ಸಮಸ್ಯೆ ಬಗ್ಗೆ ಸೀರಿಯಸ್ ನೆಸ್ ನಿಮಗೆ ಬರಬೇಕು. ನೀವು ಸೀರಿಯಸ್ ಆದರೆ ಅದು ಎಲ್ಲರಿಗೂ ಮುಟ್ಟುತ್ತೆ. ಪ್ರತಿ ಬಾರಿ ಹೋರಾಟ ಮಾಡುವಾಗ ಭಾವನಾತ್ಮಕವಾಗಿ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ. ಎಲ್ಲಕ್ಕಿಂತ ಹೆಚ್ಚಾಗಿ ವೋಟ್ ಗೆ ನೋಟು ತೆಗೆದುಕೊಳ್ಳುವುದು ಇದ್ಯಲ್ಲ. ಅಲ್ಲೇ, ನಿಮ್ಮ ಹಕ್ಕುಗಳನ್ನು ಮಾರಿಕೊಳ್ಳುತ್ತೀರಾ. ಈ ತಪ್ಪುಗಳಿಂದ ಯಾವ ಸಮಸ್ಯೆ ಪರಿಹಾರ ಆಗಲ್ಲ.''

ಸಾಧು ಕೋಕಿಲ
''ಈ ವೇದಿಕೆಯನ್ನ ಸಾಧು ಕೋಕಿಲ ತರಹ ತಮಾಷೆಯಾಗಿ ತೆಗೆದುಕೊಂಡರೆ, ಅದರಷ್ಟು ತಮಾಷೆ ಯಾವುದೂ ಇಲ್ಲ. ನಾಳೆ ಕುಡಿಯುವ ನೀರು ಬತ್ತಿಹೋದರೆ, ಏನೂ ಇರಲ್ಲ. ನಾವು ಕಲಾವಿದರು ನಿಮ್ಮ ಜೊತೆ ಇರ್ತೀವಿ. ದಯವಿಟ್ಟು ಎಲ್ಲರೂ ಸೀರಿಯಸ್ ಆಗಿ ತೆಗೆದುಕೊಳ್ಳಿ.''

ರಾಗಿಣಿ ದ್ವಿವೇದಿ
''ನೀರಿನ ಸಮಸ್ಯೆ ಭವಿಷ್ಯದ ವಿಚಾರ. ಎಲ್ಲರೂ ಹೋರಾಟ ಮಾಡಬೇಕು. ನಾವು ಕಲಾವಿದರಾಗಿ ಇಲ್ಲಿಗೆ ಬಂದಿಲ್ಲ. ನಿಮ್ಮ ಕುಟುಂಬದ ಸದಸ್ಯರಾಗಿ ನಾವು ಇಲ್ಲಿಗೆ ಬಂದಿದ್ದೇವೆ. ನಿಮ್ಮ ಹೋರಾಟದಲ್ಲಿ ನಾವು ಭಾಗಿಯಾಗುತ್ತೇವೆ''

ಪೂಜಾ ಗಾಂಧಿ
''ನೆಲಕ್ಕೆ ಬೆಂಕಿ ಬಿದ್ದರೆ ನೀರಿನಿಂದ ಆರಿಸಬಹುದು. ಆದ್ರೆ, ನೀರಿಗೆ ಬೆಂಕಿ ಬಿದ್ರೆ, ಅದನ್ನ ಯಾವುದರಿಂದ ಆರಿಸುತ್ತೀರಾ. ನಮ್ಮ ಕರ್ನಾಟಕದಲ್ಲಿ ನೀರಿಗಾಗಿ ಮಹಾ ಯುದ್ಧ ನಡೆಯುತ್ತಿದೆ. ಯಾಕೆ ಅಂದ್ರೆ, ಉತ್ತರ ಕರ್ನಾಟಕದಲ್ಲಿ ಕಳಸಾ-ಬಂಡೂರಿ ಗಲಾಟೆ ನಡೆಯುತ್ತಿದೆ. ನಿಮ್ಮ ಧ್ವನಿ ಪರಿಹಾರ ಆಗುವ ಹಾಗೆ ರೀಚ್ ಆಗಲಿ ಅಂತ ಕೇಳಿಕೊಳ್ಳುತ್ತೇನೆ. ನಿಮ್ಮ ಸಮಸ್ಯೆಗೆ ನಾವು ಕೈ ಜೋಡಿಸುತ್ತೇವೆ''


Click it and Unblock the Notifications











