ರಕ್ಷಿತಾ ಪ್ರೇಮ್ ತಮ್ಮನ ಆರತಕ್ಷತೆಯಲ್ಲಿ ರಮ್ಯಾ, ಕಪ್ಪು ಸೀರೆಯಲ್ಲಿ ಕಂಗೊಳಿಸಿದ ಮೋಹಕತಾರೆ..!
ರಮ್ಯಾ ಮತ್ತು ರಕ್ಷಿತಾ ಒಂದ್ಕಾಲದ ಬದ್ಧ ವೈರಿಗಳು. ಒಬ್ಬರ ಮುಖವನ್ನೊಬ್ಬರು ನೋಡಲು ಇಬ್ಬರು ಹಿಂದೇಟು ಹಾಕುತ್ತಿದ್ದ ದಿನಗಳವು. ಆದರೆ ಈಗ ಕಾಲ ಬದಲಾಗಿದೆ. ಮನಸು ಕೂಡ ಮಾಗಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಅವರ ಮದುವೆ ಸಮಾರಂಭಕ್ಕೆ ಮೋಹಕತಾರೆ ರಮ್ಯಾ ನಿನ್ನೆ ಬಂದಿದ್ದರು. ನವ ಜೋಡಿಗೆ ಶುಭ ಕೋರಿದರು.
ನಿನ್ನೆ ನಡೆದ ಆರತಕ್ಷತೆಯ ಸಮಾರಂಭಕ್ಕೆ ಕಪ್ಪು ಸೀರೆಯಲ್ಲಿ ರಮ್ಯಾ ಬಂದಿದ್ದರು. ಮದುವೆ ಮನೆಯಲ್ಲಿ ಮಿರ ಮಿರ ಮಿಂಚಿದರು. ರಮ್ಯಾ ಬರುತ್ತಿದ್ದಂತೆಯೇ ರಕ್ಷಿತಾ ತಮ್ಮ ಆಪ್ತ ಸ್ನೇಹಿತೆಯನ್ನು ಪ್ರೀತಿಯಿಂದ ಬರಮಾಡಿಕೊಂಡರು. ಇದೇ ಸಮಯದಲ್ಲಿ ಎದೆಯೆತ್ತರಕ್ಕೆ ಬೆಳೆದಿರುವ ರಕ್ಷಿತಾ ಪ್ರೇಮ್ ಅವರ ಮಗನನ್ನು ಕಂಡು ರಮ್ಯಾ ಹುಬ್ಬೇರಿಸಿದರು. ಕುಶಲೋಪರಿ ವಿಚಾರಿಸಿದರು.

ಆ ನಂತರ ವೇದಿಕೆ ಮೇಲೆ ರಕ್ಷಿತಾ ಅವರ ಪಕ್ಕದಲ್ಲಿ ಕುಳಿತು ರಮ್ಯಾ ಕೆಲ ಕಾಲ ಕಳೆದರು. ನವ ಜೋಡಿ ರಾಣಾ ಮತ್ತು ರಕ್ಷಿತಾಗೆ ಶುಭ ಕೋರಿದ ರಮ್ಯಾ ಆ ನಂತರ ಕ್ಯಾಮರಾಗಳಿಗೆ ಫೋಸ್ ನೀಡಿದರು. ರಕ್ಷಿತಾ ಜೊತೆ ನಿಂತು ಗ್ರೂಪ್ ಫೋಟೊ ತೆಗೆಸಿಕೊಂಡರು. ಸದ್ಯ ರಕ್ಷಿತಾ ಪ್ರೇಮ್ ಅವರ ಸಹೋದರನ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ರಮ್ಯಾ ಭಾಗಿಯಾದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ವಯಸ್ಸು 42 ಆದರೂ ಕೂಡ ಬಳುಕುವ ಬಳ್ಳಿಯಂತೆ ರಮ್ಯಾ ಕಂಗೊಳಿಸುತ್ತಿದ್ದಾರೆ ಎನ್ನುತ್ತಿರುವ ಅಭಿಮಾನಿಗಳು ರಮ್ಯಾ ಅವರ ಫಿಟ್ನೆಸ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರರಂಗಕ್ಕೆ ಮೋಹಕತಾರೆ ಮರಳಿ ಬರುವುದು ಯಾವಾಗ ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ.
ಅಂದ್ಹಾಗೇ ವಜ್ರೇಶ್ವರಿ ಕಂಬೈನ್ಸ್ ಮೂಲಕ ಪುನೀತ್ ರಾಜ್ ಕುಮಾರ್ ಅವರ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಬಂದ ಇಬ್ಬರು ಆ ನಂತರ ಜಿದ್ದಿಗೆ ಬಿದ್ದಿದ್ದರು. ಒಂದರ್ಥದಲ್ಲಿ ನಾನಾ-ನೀನಾ ಎನ್ನುವ ಮನಸ್ಥಿತಿ ಇಬ್ಬರಲ್ಲಿ ಕೂಡ ಇತ್ತು. ಕೇವಲ ಕನ್ನಡದಲ್ಲಿ ಸ್ಟಾರ್ಗಳ ಜೊತೆ ತೆರೆ ಹಂಚಿಕೊಳ್ಳುವ ವಿಚಾರ ಮಾತ್ರವಲ್ಲ ಅಕ್ಕ-ಪಕ್ಕದ ರಾಜ್ಯದಲ್ಲಿ ಮೆರೆಯುವ ಹಂಬಲ ಇಬ್ಬರಲ್ಲಿ ಕೂಡ ಇತ್ತು.
ಈ ಕಡೆ ಎಕ್ಸ್ಕ್ಯೂಸ್ ಮೀ, ರಂಗ ಎಸ್ ಎಸ್ ಎಲ್ ಸಿ, ಕಂಠಿ, ಆಕಾಶ್, ಅಮೃತಧಾರೆ, ಹೀಗೆ ರಮ್ಯಾ ಒಂದಾದ ಮೇಲೊಂದು ಚಿತ್ರಗಳ ಮೂಲಕ ರಮ್ಯಾ ಸ್ಯಾಂಡಲ್ವುಡ್ ಕ್ವೀನ್ ಎಂದು ಕರೆಸಿಕೊಂಡರೆ ರಕ್ಷಿತಾ ಧಮ್, ಗೋಕರ್ಣ, ಲವ್, ಕಲಾಸಿಪಾಳ್ಯ, ಡೆಡ್ಲಿ ಸೋಮ, ಅಯ್ಯ, ಸುಂಟರಗಾಳಿ ಚಿತ್ರಗಳ ಮೂಲಕ ಕನ್ನಡಿಗರ ಪಾಲಿಗೆ ಕ್ರೇಜಿ ಕ್ವೀನ್ ಆದರು
ತನನಂ ತನನಂ ಚಿತ್ರದಲ್ಲಿ ಕವಿತಾ ಲಂಕೇಶ್ ಇಬ್ಬರನ್ನು ಒಂದು ಮಾಡುವ ಪ್ರಯತ್ನ ಮಾಡಿದರು ಕೂಡ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಮುನಿಸು ಇದ್ದೇ ಇತ್ತು. ಸಂದರ್ಶನವೊಂದರಲ್ಲಿ ಖುದ್ದು ರಕ್ಷಿತಾ ಈ ಮಾತನ್ನು ಒಪ್ಪಿಕೊಂಡಿದ್ದರು. ರ್ಯಾಪಿಡ್ ರಶ್ಮಿ ಅವರಿಗೆ ಹಿಂದೆ ನೀಡಿದ್ದ ಸಂದರ್ಶನದಲ್ಲಿ ರಕ್ಷಿತಾ ತಮ್ಮ ನಡುವೆ ಇದ್ದ ವೈಮನಸ್ಸು, ದ್ವೇಷದ ಬಗ್ಗೆ ಮಾತನಾಡಿದ್ದರು. ನಮ್ಮ ನಡುವೆ ಆ ಜಗಳ ಇಲ್ಲದಿದ್ದರೆ ನಮ್ಮ ಸಿನಿಮಾ ಪಯಣವೇ ಅಪೂರ್ಣವಾಗಿರುತ್ತಿತ್ತು ಎಂದು ನನಗೆ ಹಲವು ಬಾರಿ ಅನಿಸಿದ್ದು ಇದೆ, ಆ ಒಂದು ದ್ವೇಷ ಇದ್ದಿದ್ದಕ್ಕೆ ನಾವು ಜಿದ್ದಿಗೆ ಬಿದ್ದವರಂತೆ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದ ರಕ್ಷಿತಾ ಅದನ್ನು ಮಾಡಬೇಕು ಇದನ್ನು ಮಾಡಬೇಕು ಎಂಬ ತುಡಿತ ಇಬ್ಬರಲ್ಲಿಯೂ ಇತ್ತು ಆದರೆ ಸ್ಫರ್ಧೆ ಆರೋಗ್ಯಕರವಾಗಿರಲಿಲ್ಲ ಎಂದು ಹೇಳಿದ್ದರು.


Click it and Unblock the Notifications











