ಕೋಮಾದಲ್ಲಿ ಹಿರಿಯ ಕಲಾವಿದ ಶಿವರಾಮ್ : ಗಂಭೀರವಾಗಿದೆ ಆರೋಗ್ಯ ಸ್ಥಿತಿ!
ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಹಿರಿಯ ಕಲಾವಿದ ಶಿವರಾಮ್ ಅವರಿಗೆ ಬೆಂಗಳೂರಿನ ಬ್ಯಾಂಕ್ ಕಾಲೋನಿಯಲ್ಲಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿತ್ರರಂಗದ ಅನೇಕರು ಆಸ್ಪತ್ರೆಗೆ ಭೇಟಿ ನೀಡಿ ಶಿವರಾಮ್ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ.
ಶಿವರಾಮ್ ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರು ಪ್ರಾರ್ಥಿಸುತ್ತಿದ್ದಾರೆ. ಆದರೆ ಶಿವರಾಮ್ ಕ್ಷೀಣಿಸುತ್ತಿದ್ದು, ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಅಭಿಪ್ರಾಯವನ್ನು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ವ್ಯಕ್ತಪಡಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಅವರ ಆರೋಗ್ಯ ಮತ್ತಷ್ಟು ಗಂಭೀರ ಸ್ಥಿತಿ ತಲುಪಿದೆ. ಈ ವಿಚಾರ ಅವರ ಕುಟುಂಬದವರು, ಸ್ನೇಹಿತರು ಮತ್ತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ!
ಶಿವರಾಮ್ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಹಾಗಾಗಿ ನುರಿತ ವೈದ್ಯರು ಪರೀಕ್ಷೆ ಮಾಡಿ ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಬ್ರೇನ್ ಡ್ಯಾಮೇಜ್ ಆಗಿದ್ದು, ಈಗಾಗಲೇ ಅವರು ಕೋಮಾ ಸ್ಥಿತಿ ತಲುಪಿದ್ದಾರೆ. ಅವರ ಆರೋಗ್ಯದ ವಿಚಾರದಲ್ಲಿ ಮಿರಾಕಲ್ ಆಗಬೇಕು ಎಂದು ವೈದ್ಯರು ಹೇಳುತ್ತಿದ್ದಾರೆ. ಇನ್ನು ನಿರಂತರವಾಗಿ ಕಲಾವಿದರ ದಂಡು ಆಸ್ಪತ್ರೆಗೆ ಭೇಟಿ ನೀಡುತ್ತಿದೆ. ಅವರ ಆರೋಗ್ಯದ ವಿಚಾರದಲ್ಲಿ ಸಿಹಿ ಸುದ್ದಿ ಬರಲಿ ಎಂದು ಕಾಯುತ್ತಿದ್ದಾರೆ.

ಅಯ್ಯಪ್ಪ ಸ್ವಾಮಿ ಪೂಜೆಗಾಗಿ ತೆರಳಿ ಪ್ರಜ್ಞೆ ತಪ್ಪಿದ್ದ ಶಿವರಾಮ್!
ಶಿವರಾಮ್ ಅವರು ತಮ್ಮ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡಲು ಮಹಡಿ ಮೇಲೆ ವ್ಯವಸ್ಥೆ ಮಾಡಿಕೊಂಡಿದ್ದರು. ಅಲ್ಲಿಗೆ ತೆರಳಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಒಂದೂವರೆ ಗಂಟೆ ಬಳಿಕ ಅವರು ಪ್ರಜ್ಞೆ ತಪ್ಪಿದ ವಿಚಾರ ತಿಳಿದು ಬಂದಿದೆ. ನಂತರ ಅವರ ಮಗ ಮತ್ತು ಮೊಮ್ಮಗಳು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಎಂಆರ್ಐ ಸ್ಕ್ಯಾನ್ ಮಾಡಿದಾಗ ತಲೆ ಒಳಗೆ ಪೆಟ್ಟು ಬಿದ್ದಿರುವುದು ತಿಳಿಯಿತು ಬಂದಿದೆ ಎಂದಿದ್ದಾರೆ ವೈದ್ಯರು.

ಚಿತ್ರರಂಗಕ್ಕೆ ಶಿವರಾಮ್ ಅವರ ಕೊಡುಗೆ ಅಪಾರ!
ಶಿವರಾಮ್ ಅವರು 1965ರಲ್ಲಿ ಬಿಡುಗಡೆಯಾದ 'ಬೆರೆತ ಜೀವ' ಸಿನಿಮಾದಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಕನ್ನಡದ ಬಹುತೇಕ ನಾಯಕ ನಟರೊಟ್ಟಿಗೆ ನಟನೆ ಮಾಡಿರುವ ಶಿವರಾಮ್, ಡಾ.ರಾಜ್ಕುಮಾರ್ ನಟಿಸಿರುವ 'ಹೃದಯ ಸಂಗಮ' ಸಿನಿಮಾವನ್ನು ನಿರ್ದೇಶನ ಸಹ ಮಾಡಿದ್ದಾರೆ. ಜೊತೆಗೆ ತಮಿಳಿನಲ್ಲಿ ರಜನೀಕಾಂತ್ ನಟಿಸಿದ ಒಂದು ಸಿನಿಮಾ ಸೇರಿದಂತೆ ಒಟ್ಟು ಆರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ಶಿವರಾಮ್. ಇವರು ಪುಟ್ಟಣ ಕಣಗಾಲ್ ಅವರ ಮೆಚ್ಚಿನ ಶಿಷ್ಯರಾಗಿದ್ದರು ಹಾಗೂ ವಿಷ್ಣುವರ್ಧನ್ ಅವರ ಆಪ್ತ ಗೆಳೆಯರೂ ಆಗಿದ್ದರು. ಜೊತೆಗೆ ತಮ್ಮ ವಿಶಿಷ್ಟ ಅಭಿನಯದ ಮೂಲಕ ಗಮನ ಸೆಳೆದಿದ್ದರು.

ಅಷ್ಟಕ್ಕೂ ಅವರ ಆರೋಗ್ಯ ಹದಗೆಡಲು ಕಾರಣ ಏನು!
ಮೂರು ದಿನಗಳ ಹಿಂದೆ ಕಾರಿನಲ್ಲಿ ಹೊರಗೆ ಹೋಗಿದ್ದ ವೇಳೆ ಕಾರ್ ಆಕ್ಸಿಡೆಂಟ್ ಆಗಿತ್ತು. ನಂತರ ಮೂರು ದಿನಗಳಿಂದ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮೊನ್ನೆ ರಾತ್ರಿ ಮನೆಯಲ್ಲಿ ಅಯ್ಯಪ್ಪನ ಪೂಜೆ ಮಾಡಲು ರೂಂಗೆ ಹೋಗಿದ್ದರು. ಆ ವೇಳೆ ಮನೆಯಲ್ಲಿ ಬಿದ್ದ ಹಿನ್ನೆಲೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಮೊನ್ನೆ ರಾತ್ರಿಯೇ ಅಸ್ಪತ್ರೆಗೆ ಕರೆದುಕೊಂಡು ಬಂದು ಸ್ಕ್ಯಾನಿಂಗ್ ಮಾಡಿಸಲಾಗಿದೆ. ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಗಿದೆ. ಅವರಿಗೆ ವಯಸ್ಸಾದ ಹಿನ್ನೆಲೆ ಸರ್ಜರಿ ಮಾಡಲು ಆಗಿಲ್ಲ. ಸದ್ಯ ಐಸಿಯುನಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆದಿದೆ.


Click it and Unblock the Notifications











