BREAKING: ಚಿತ್ರರಂಗದ ಹಿರಿಯ ನಟ ಶಿವರಾಂ ನಿಧನ
ಕೆಲವು ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಶಿವರಾಂ ಅವರಿಗೆ ಕೆಲವು ದಿನಗಳ ಹಿಂದೆ ಕಾರಿನಲ್ಲಿ ಪ್ರಯಾಣಿಸುವಾಗ ಅಪಘಾತವಾಗಿತ್ತು. ಚಿಕಿತ್ಸೆ ಪಡೆದು ಮನೆ ಸೇರಿದ್ದರಾದರೂ. ಮನೆಯಲ್ಲಿ ಒಬ್ಬರೇ ಇದ್ದಾಗ ಬಿದ್ದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ರಕ್ತಸ್ರಾವವಾಗಿದ್ದ ಕಾರಣ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ವಯಸ್ಸಾಗಿದ್ದ ಕಾರಣ ಶಸ್ತಚಿಕಿತ್ಸೆ ಸಾಧ್ಯವಿಲ್ಲವೆಂದು ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಮಧ್ಯಾಹ್ನ ಅವರು ಕೊನೆ ಉಸಿರೆಳೆದಿದ್ದಾರೆ.
ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿ ಶಿವರಾಂ ಅವರ ಆರೋಗ್ಯ ವಿಚಾರಿಸಿದ್ದರು. ಶಿವರಾಂ ಅವರ ಹಿತೈಶಿಗಳು, ಅಭಿಮಾನಿಗಳು ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದ್ದರು ಆದರೆ ಪ್ರಾರ್ಥನೆ ಫಲಿಸಲಿಲ್ಲ.
ಶಿವರಾಂ ಅವರು 1938ರಲ್ಲಿ ಆಗಿನ ಮದ್ರಾಸ್ ಪ್ರಾಂತ್ಯದ ಚೂಡಸಂದ್ರ ಹಳ್ಳಿಯಲ್ಲಿ ಜನಿಸಿದ್ದರು. ನಂತರ ಅಣ್ಣನೊಂದಿಗೆ ಬೆಂಗಳೂರಿಗೆ ಬಂದ ಶಿವರಾಂ ಗುಬ್ಬಿ ನಾಟಕ ಕಂಪೆನಿ ಸೇರಿ ಅಲ್ಲಿಂದ ಸಿನಿಮಾ ರಂಗಕ್ಕೆ ಸಹಾಯಕನಾಗಿ ಕಾಲಿಟ್ಟರು, ಮೇಕಪ್ ಸಹಾಯಕ, ಕ್ಯಾಮೆರಾಮನ್ ಸಹಾಯಕ, ಸಹಾಯಕ ನಿರ್ದೇಶಕ ಎಲ್ಲ ಕೆಲಸವನ್ನೂ ಮಾಡಿದ ಶಿವರಾಂ ನಂತರ ನಟನಾಗಿ ಗುರುತಿಸಿಕೊಂಡರು.

ಕನ್ನಡದ ನೂರಾರು ಸಿನಿಮಾಗಳಲ್ಲಿ ಪೋಷಕ ನಟರಾಗಿ, ಮುಖ್ಯ ನಟರಾಗಿಯೂ ನಟಿಸಿದ್ದ ಶಿವರಾಂ, ನಟನಾಗಿ ಮಾತ್ರವೇ ಅಲ್ಲದೆ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದರು. ಡಾ.ರಾಜ್ಕುಮಾರ್, ಭಾರತಿ ನಟಿಸಿದ್ದ 'ಹೃದಯ ಸಂಗಮ' ಹೆಸರಿನ ಸಿನಿಮಾ ನಿರ್ದೇಶನ ಸಹ ಮಾಡಿದ್ದಾರೆ.
ವಿಷ್ಣುವರ್ಧನ್, ಡಾ.ರಾಜ್ಕುಮಾರ್, ಪುಟ್ಟಣ್ಣ ಕಣಗಾಲ್, ಅಂಬರೀಶ್ ಅವರಿಗೆ ಬಹಳ ಆಪ್ತರಾಗಿದ್ದ ಶಿವರಾಂ ಅವರು, ರಾಜ್ಕುಮಾರ್ ಕುಟುಂಬದಲ್ಲಿ ನಡೆಯುತ್ತಿದ್ದ ಅಯ್ಯಪ್ಪ ಪೂಜೆಯಲ್ಲಿ ಪ್ರಮುಖ ಗುರುಗಳಾಗಿರುತ್ತಿದ್ದರು. ಶಿವರಾಂ ನೇತೃತ್ವದಲ್ಲಿ ರಾಜ್ಕುಮಾರ್, ಬಾಲಿವುಡ್ನ ಅಮಿತಾಬ್ ಬಚ್ಚನ್ ಸೇರಿದಂತೆ ನೆರೆ-ಹೊರೆ ಚಿತ್ರರಂಗದ ದಿಗ್ಗಜರು ಮಾಲಧಾರಿಗಳಾಗಿ ಶಬರಿಮಲೆ ಹೋಗಿದ್ದರು. ಈಗಲೂ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಅವರುಗಳು ಶಿವರಾಂ ನೇತೃತ್ವದಲ್ಲಿ ಮಾಲಾಧಾರಣೆ ಮಾಡುತ್ತಿದ್ದರು. ಸಕಲರಿಗೂ ಆತ್ಮೀಯರಾಗಿದ್ದ ಶಿವರಾಂ ಇಂದು ನಿಧನರಾಗಿದ್ದಾರೆ.


Click it and Unblock the Notifications











