SK Bhagavan: ಕನ್ನಡದ ಹಿರಿಯ ನಿರ್ದೇಶಕ ಎಸ್. ಕೆ. ಭಗವಾನ್ ನಿಧನ

ಚಂದನವನ ಕಂಡ ಅತಿ ಯಶಸ್ವಿಯುತ ನಿರ್ದೇಶಕರಲ್ಲಿ ಓರ್ವರಾದ ಹಿರಿಯ ನಿರ್ದೇಶಕ ಎಸ್ ಕೆ ಭಗವಾನ್ ಇಹಲೋಕ ತ್ಯಜಿಸಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಭಗವಾನ್ ಅವರು ಚಿಕತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಎಸ್ ಕೆ ಭಗವಾನ್ ಅವರಿಗೆ 90 ವರ್ಷ ವಯಸ್ಸಾಗಿತ್ತು.
ಇನ್ನು ಭಗವಾನ್ ಹಾಗೂ ದೊರೆ ಇಬ್ಬರೂ ಸಹ ಜಂಟಿಯಾಗಿ ಸುಮಾರು 27ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದು, ಈ ಇಬ್ಬರೂ ಸಹ ದೊರೆ ಭಗವಾನ್ ಎಂದೇ ಖ್ಯಾತಿಯನ್ನು ಗಳಿಸಿದ್ರು. ಕನ್ನಡ ಚಲಚಿತ್ರರಂಗದ ವರನಟ ಎಂದೇ ಖ್ಯಾತಿಯನ್ನು ಹೊಂದಿರುವ ಡಾ ರಾಜ್ಕುಮಾರ್ ನಟನೆಯ ಹೆಚ್ಚಿನ ಚಿತ್ರಗಳಿಗೆ ಈ ಇಬ್ಬರು ಆಕ್ಷನ್ ಕಟ್ ಹೇಳಿದ್ದು, ಈ ಪೈಕಿ ಹೆಚ್ಚು ಚಿತ್ರಗಳು ಗೆದ್ದಿವೆ.
ಅರವತ್ತು - ತೊಂಬತ್ತರ ದಶಕದವರೆಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿ ಕನ್ನಡ ಸಿನಿ ರಸಿಕರ ಮನ ಗೆದ್ದಿದ್ದ ದೊರೆ - ಭಗವಾನ್ ಪೈಕಿ ದೊರೆ ಅವರು 2000ದಲ್ಲಿ ನಿಧನ ಹೊಂದಿದ್ದರು. ಈಗ ಭಗವಾನ್ ಸಹ ನಿಧನ ಹೊಂದಿದ್ದು, ತಮ್ಮ ಗೆಳೆಯ ದೊರೆ ಬಳಿಗೆ ಪಯಣ ಬೆಳೆಸಿದ್ದಾರೆ.

ಸಹಾಯಕ ನಿರ್ದೇಶಕನಾಗಿ ಜರ್ನಿ ಆರಂಭ
1933ರ ಜುಲೈ 5ರಂದು ಜನಿಸಿದ ಎಸ್ ಕೆ ಭಗವಾನ್ ಅವರು ಬೆಂಗಳೂರು ಹೈಸ್ಕೂಲ್ನಲ್ಲಿ ವ್ಯಾಸಂಗ ಮಾಡಿದ್ದರು. ಕಿರಿಯ ವಯಸ್ಸಿನಲ್ಲಿಯೇ ಹಿರಣ್ಣಯ್ಯ ಮಿತ್ರ ಮಂಡಳಿಯ ಜತೆ ನಾಟಕಗಳಲ್ಲಿ ಭಾಗವಹಿಸಿದ್ದ ಎಸ್ ಕೆ ಭಗವಾನ್ 1956ರಲ್ಲಿ ಬಿಡುಗಡೆಗೊಂಡ ಭಾಗ್ಯೋದಯ ಚಿತ್ರದ ಮೂಲಕ ಸಹಾಯಕ ನಿರ್ದೇಶಕನಾಗಿ ಸಿನಿ ಜರ್ನಿ ಆರಂಭಿಸಿದರು. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಕಣಗಲ್ ಪ್ರಭಾಕರ್ ಶಾಸ್ತ್ರಿ ಅವರಿಗೆ ಎಸ್ ಕೆ ಭಗವಾನ್ ಸಹಾಯಕ ನಿರ್ದೇಶಕನಾಗಿದ್ರು. ಇನ್ನು 1966ರಲ್ಲಿ ತೆರೆಗೆ ಬಂದ ರಾಜ್ಕುಮಾರ್ ಹಾಗೂ ಕಲ್ಯಾಣ್ ಕುಮಾರ್ ನಟನೆಯ ಸಂಧ್ಯಾ ರಾಗ ಸಿನಿಮಾ ಮೂಲಕ ಎಸ್ ಕೆ ಭಗವಾನ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದರು. ಆದರೆ ಈ ಚಿತ್ರದ ನಿರ್ದೇಶನದ ಕ್ರೆಡಿಟ್ಸ್ ನಿರ್ದೇಶಕ ಎ ಸಿ ನರಸಿಂಹ ಮೂರ್ತಿ ಅವರಿಗ ಸಂದಿತ್ತು.

ಜೇಡರ ಬಲೆ ಮೂಲಕ ನಿರ್ದೇಶಕನಾದ್ರು
ಹೀಗೆ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕ, ಸಹ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ ಭಗವಾನ್ 1968ರಲ್ಲಿ ತೆರೆಗೆ ಬಂದ ಜೇಡರ ಬಲೆ ಚಿತ್ರದ ಮೂಲಕ ಅಧಿಕೃತವಾಗಿ ನಿರ್ದೇಶಕನಾದರು. ಈ ಚಿತ್ರದ ಮೂಲಕವೇ ದೊರೈ ಹಾಗೂ ಭಗವಾನ್ ಕೈಜೋಡಿಸಿ ಜಂಟಿಯಾಗಿ ನಿರ್ದೇಶನ ಮಾಡಲು ಆರಂಭಿಸಿದರು. ಜೇಡರ ಬಲೆ ಜೇಮ್ಸ್ ಬಾಂಡ್ ಶೈಲಿಯ ಸಿನಿಮಾವಾಗಿದ್ದು, ಕನ್ನಡದಲ್ಲಿ ಮೊದಲ ಬಾರಿಗೆ ಜೇಮ್ಸ್ ಬಾಂಡ್ ಶೈಲಿಯ ಸಿನಿಮಾವನ್ನು ನಿರ್ದೇಶಿಸಿದ ನಿರ್ದೇಶಕರು ಎಂಬ ಹೆಗ್ಗಳಿಕೆ ಇವರಿಗೆ ಸೇರಿದೆ. ಜೇಡರ ಬಲೆ ಬೆನ್ನಲ್ಲೇ ಗೋವಾದಲ್ಲಿ ಸಿಐಡಿ 999, ಆಪರೇಷನ್ ಜಾಕ್ಪಾಟ್ನಲ್ಲಿ ಸಿಐಡಿ 999 ಹಾಗೂ ಆಪರೇಷನ್ ಡೈಮಂಡ್ ರಾಕೆಟ್ ಚಿತ್ರಗಳನ್ನೂ ಸಹ ಬಾಂಡ್ ಶೈಲಿಯಲ್ಲೇ ನಿರ್ದೇಶಿಸಿದ್ರು ದೊರೆ - ಭಗವಾನ್. ಕೇವಲ ಬಾಂಡ್ ಶೈಲಿಯ ಸಿನಿಮಾ ಮಾತ್ರವಲ್ಲದೇ ಕಸ್ತೂರಿ ನಿವಾಸ, ಎರಡು ಕನಸು, ಚಂದನದ ಗೊಂಬೆ, ಗಿರಿ ಕನ್ಯೆ, ವಸಂತ ಗೀತ, ಸಮಯದ ಗೊಂಬೆ, ಯಾರಿವನು, ಜೀವನ ಚೈತ್ರ, ಒಡಹುಟ್ಟಿದವರು ಸೇರಿದಂತೆ ಹಲವಾರು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾಗಳನ್ನು ನಿರ್ದೇಶಿಸಿದೆ ಈ ಜೋಡಿ.

ನಟನೆಗೂ ಜೈ
ಇನ್ನು ಎಸ್ ಕೆ ಭಗವಾನ್ ನಿರ್ದೇಶನದಲ್ಲಿ ಲೆಜೆಂಡ್ ಎನಿಸಿಕೊಂಡಿದ್ದು, ಕೆಲ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಿಗಾಗಿ ಬಣ್ಣ ಹಚ್ಚಿದ್ದಾರೆ. ಹೊಸ ಬೆಳಕು, ಭಾಗ್ಯೋದಯ, ಮಂಗಳ ಸೂತ್ರ, ರೌಡಿ ರಂಗಣ್ಣ, ವಸಂತ ಗೀತ, ಹಾಲು ಜೇನು, ಜೀವನ ಚೈತ್ರ ಹಾಗೂ ಬೆಂಗಳೂರು ಮೇಲ್ ಸಿನಿಮಾಗಳಲ್ಲಿ ಎಸ್ ಕೆ ಭಗವಾನ್ ನಟಿಸಿದ್ದಾರೆ.


Click it and Unblock the Notifications











