ಕೊರೊನಾ ಭಯವಿಲ್ಲ: ಸ್ಯಾಂಡಲ್ವುಡ್ ನಟರ ಸಂಭ್ರಮಕ್ಕೆ ಕಡಿವಾಣವೂ ಇಲ್ಲ?
ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆಯ ಆತಂಕ ಎದುರಾಗಿದೆ. ನಿಧಾನವಾಗಿ ಮತ್ತೆ ಕೊರೊನಾ ಸೋಂಕು ಹರಡುತ್ತಿದೆ. ದಿನದಿಂದ ದಿನಕ್ಕೆ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೇ ಮುಂದಿನ ದಿನದಲ್ಲಿ ಅಪಾಯದ ಕ್ಷಣಗಳನ್ನು ನೋಡಬೇಕಾಗುತ್ತದೆ ಎಂಬ ಆತಂಕ ಕಾಡುತ್ತಿದೆ.
Recommended Video
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್ಡೌನ್, ಸೆಮಿ ಲಾಕ್ಡೌನ್, ಕಟ್ಟುನಿಟ್ಟಿನ ನಿಯಮಗಳು ಅಗತ್ಯ ಎನ್ನುವ ಚರ್ಚೆ ನಡೆಯುತ್ತಿದೆ. ಚಿತ್ರಮಂದಿರದಗಳಲ್ಲಿ ಜನರು ಹೆಚ್ಚು ಜಮಾಯಿಸುತ್ತಿದ್ದಾರೆ ಎಂಬ ಕಾರಣಕ್ಕೆ ಶೇಕಡಾ 50ರಷ್ಟು ಆಸನ ಭರ್ತಿಗೆ ಅವಕಾಶ ನೀಡುವುದು ಸೂಕ್ತ ಎಂದು ಬಿಬಿಎಂಪಿ ಚಿಂತಿಸಿದ್ದನ್ನು ನೆನಪಿಸಿಕೊಳ್ಳಬಹುದು. ಈ ಎಲ್ಲ ಆತಂಕಗಳ ನಡುವೆಯೂ ಸ್ಯಾಂಡಲ್ ವುಡ್ ಸ್ಟಾರ್ಸ್ ಕೊರೊನಾ ಭಯವಿಲ್ಲದೇ ಸಂಭ್ರಮದ ಮೇಲೆ ಸಂಭ್ರಮ ಮಾಡುತ್ತಲೇ ಇದ್ದಾರೆ. ಒಂದರ ಹಿಂದೆ ಒಂದರಂತೆ ಕಾರ್ಯಕ್ರಮಗಳು ಆಯೋಜನೆಯಾಗುತ್ತಲೇ ಇದೆ. ಮುಂದೆ ಓದಿ...

ಯುವ ಸಂಭ್ರಮದಲ್ಲಿ ಜನವೋ ಜನ?
ಪುನೀತ್ ರಾಜ್ ಕುಮಾರ್ ಕಳೆದ ವಾರ ರಾಜ್ಯದ ಹಲವು ಜಿಲ್ಲೆಗಳಿಗೆ ಪ್ರವಾಸ ಹೋಗಿದ್ದರು. ಯುವ ಸಂಭ್ರಮ ಹೆಸರಿನಲ್ಲಿ 'ಯುವರತ್ನ' ಸಿನಿಮಾದ ಪ್ರಚಾರ ಆರಂಭಿಸಿದ್ದರು. ಗುಲ್ಬರ್ಗ, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಮೈಸೂರು, ಮಂಡ್ಯ ಜಿಲ್ಲೆಗಳಿಗೆ ಭೇಟಿ ನೀಡಿದ್ದರು. ಅಪ್ಪು ಹೋಗಿದ್ದ ಕಡೆ ನೂರಾರು ಸಂಖ್ಯೆಯ ಜನರು ಜಾಮಾಯಿಸಿದ್ದರು. ಸಾಮಾಜಿಕ ಅಂತರವೂ ಇಲ್ಲ. ಕೊರೊನಾ ನಿಯಮ ಪಾಲನೇ ಇರಲಿಲ್ಲ.

ರಾಬರ್ಟ್ ವಿಜಯಯಾತ್ರೆ
ಯುವಸಂಭ್ರಮ ಮೊದಲ ಹಂತದ ಮುಗಿದ ಬೆನ್ನಲ್ಲೆ ಈಗ ರಾಬರ್ಟ್ ವಿಜಯಯಾತ್ರೆ ಆರಂಭವಾಗುತ್ತಿದೆ. ಮಾರ್ಚ್ 29 ರಿಂದ ಸತತ ನಾಲ್ಕು ದಿನ ದರ್ಶನ್ ಮತ್ತು ತಂಡ ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಲಿದೆ. ತುಮಕೂರಿನಿಂದ ಪ್ರಾರಂಭವಾಗುವ ಯಾತ್ರೆ ಬಳಿಕ ಚಿತ್ರದುರ್ಗ, ದಾವಣಗೆರೆ, ಧಾರವಾಡ, ಹುಬ್ಬಳ್ಳಿ ಮತ್ತು ಹಾವೇರಿ, ಶಿವಮೊಗ್ಗ, ಹಾಸ, ತಿಪಟೂರು,ಗುಂಡ್ಲುಪೇಟೆ, ಮೈಸೂರು, ಮಂಡ್ಯ ಮತ್ತು ಮದ್ದೂರಿನಲ್ಲಿ ಮುಗಿಯಲಿದೆ.

ಹೊಸಪೇಟೆಯಲ್ಲಿ 'ಸಲಗ' ಸಂಭ್ರಮ
ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಲಗ ಸಿನಿಮಾ ಏಪ್ರಿಲ್ 15 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆ ಏಪ್ರಿಲ್ 10 ರಂದು ಹೊಸಪೇಟೆಯಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜಿಸಲು ಚಿತ್ರತಂಡ ತಯಾರಿ ನಡೆಸಿದೆ. ಸಲಗ ಸಂಭ್ರಮದಲ್ಲೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.

ಕೋಟಿಗೊಬ್ಬ 3 ಕಾರ್ಯಕ್ರಮ
ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಏಪ್ರಿಲ್ 23ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿ ಕೋಟಿಗೊಬ್ಬ 3 ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೋಟಿಗೊಬ್ಬನ ಉತ್ಸವದಲ್ಲೂ ಭಾರಿ ಜನ ಸೇರುವ ಸಾಧ್ಯತೆ ಇದೆ.


Click it and Unblock the Notifications











