ರಾಜಕೀಯ ಮುಖಂಡರು, ಕಲಾವಿದರಿಂದ ಲೀಲಾವತಿಗೆ ಅಂತಿಮ ನಮನ.. ಲೀಲಮ್ಮನ ನೆನೆದು ಸಂತಾಪ
ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದ ಹಿರಿಯ ನಟಿ ಲೀಲಾವತಿ ಅಂತ್ಯಕ್ರಿಯೆ ಸಿದ್ಧತೆ ನಡೀತಿದೆ. ಸದ್ಯ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇರಿಸಲಾಗಿದ್ದು ರಾಜಕೀಯ ಮುಖಂಡರು, ಕಲಾವಿದರು ಬಂದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಾರ್ಥೀವ ಶರೀರವನ್ನು ನೆಲಮಂಗಲದ ಸೋಲದೇವನಹಳ್ಳಿಗೆ ಕೊಂಡೊಯ್ಸು ತೋಟದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಯಡಿಯೂರಪ್ಪ, ಹಿರಿಯ ನಟ ಶ್ರೀನಾಥ್, ದ್ವಾರಕೀಶ್ ನಟಿಯರಾದ ಪೂಜಾ ಗಾಂಧಿ, ಶ್ರುತಿ, ಸುಧರಾಣಿ ಸೇರಿದಂತೆ ಹಲವರು ಲೀಲಾವತಿಯವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಅವರ ಸಿನಿಮಾ, ಒಡನಾಟ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ. ಅಗಲಿದ ಚೇತಕ್ಕೆ ಸಂತಾಪ ಸೂಚಿಸಿದ್ದಾರೆ.

ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ "ಲೀಲಾವತಿಯವರ ಕೊಡುಗೆ ಅಪಾರ. ಚಿತ್ರರಂಗದಲ್ಲಿ ನಾವು ಅವರ ಸಾಧನೆಯನ್ನು ನೋಡಿದ್ದೇವೆ. ಲೀಲಮ್ಮ ನಿಧನಕ್ಕೆ ಸಂತಾಪ ವ್ಯಕ್ತಪಡಿದುತ್ತೇನೆ. ವಾರದ ಹಿಂದೆ ನಾನು ಮನೆಗೆ ಭೇಟಿ ನೀಡಿದ್ದೆ. ಪುತ್ರ ವಿನೋದ್ಗೆ ತಾಯಿ ಕಂಡ್ರೆ ತುಂಬಾ ಪ್ರೀತಿ. ತಾಯಿಯನ್ನ ಚೆನ್ನಾಗಿ ನೋಡ್ಕೋ ಎಂದು ಹೇಳಿದ್ದೆ. ಸರ್ಕಾರದಿಂದ ಸಹಾಯ ಬೇಕಿದ್ರೆ ಕೇಳು ಅಂದಿದ್ದೆ. ಸರ್ಕಾರದ ಗೌರವಗಳು ಲೀಲಾವತಿಯವರಿಗೆ ಸಲ್ಲುತ್ತದೆ"
"ದಕ್ಷಿಣ ಭಾರತದಲ್ಲಿ ಎಲ್ಲ ಭಾಷೆಯಲ್ಲೂ ಲೀಲಾವತಿ ನಟಿಸಿದ್ದಾರೆ. ಲೀಲಾವತಿ ಬಹುಭಾಷಾ ನಟಿ. ಎಲ್ಲ ತರಹದ ಪಾತ್ರಗಳಿಗೂ ಜೀವ ತುಂಬಿದ್ದಾರೆ. ನಾನು ಲೀಲಾವತಿ ಸಿನಿಮಾಗಳನ್ನ ನೋಡಿದ್ದೀನಿ. ಡಾ. ರಾಜ್-ಲೀಲಾವತಿ ಜೋಡಿ ಬಹಳ ಫೇಮಸ್. 'ಕುಲವಧು' ಸಿನಿಮಾ ನನ್ನ ನೆಚ್ಚಿನ ಸಿನಿಮಾ. ಲೀಲಾವತಿ ಪಾತ್ರಗಳಲ್ಲಿ ಪಾತ್ರವನ್ನ ಜೀವಿಸುತ್ತಿದ್ದರು. ಮನೋಜ್ಞವಾಗಿ ಅಭಿನಯಿಸಿದ ಲೀಲಾವತಿ ಪರಿಪೂರ್ಣ ನಿಜಕ್ಕೂ ಕಲಾವಿದೆ. ಐತಿಹಾಸಿಕ ಹಾಗೂ ಸಾಮಾಜಿಕ ಪಾತ್ರಗಳನ್ನ ಲೀಲಾಜಾಲವಾಗಿ ಮಾಡ್ತಿದ್ರು. ಅವರ ಸಾವು ಬಹಳ ನೋವು ತಂದಿದೆ. 'ಭಕ್ತ ಕುಂಬಾರ' ಚಿತ್ರದ ಅಭಿನಯ ನೀವೇ ನೋಡಿ. ಎಲ್ಲ ಪಾತ್ರಗಳಲ್ಲೂ ತಲ್ಲಿನವಾಗುವುದು ಅಷ್ಟು ಸುಲಭವಲ್ಲ. ಸಾಮಾಜಿಕ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ. ಪ್ರಾಣಿಗಳನ್ನ ಪ್ರೀತಿಸ್ತಿದ್ರು. ದಯೆಯೇ ಧರ್ಮದ ಮೂಲ ಅಂತ ಲೀಲಾವತಿ ಹೇಳಿಕೊಟ್ಟರು" ಎಂದು ಸಿಎಂ ಹೇಳಿದ್ದಾರೆ.
ಡಿಸಿಎಂ ಡಿ. ಕೆ ಶಿವಕುಮಾರ್ ಮಾತನಾಡಿ "ಒಂದು ಹೆಣ್ಣು ಮಗಳು ಗ್ರಾಮೀಣ ಪ್ರದೇಶದಿಂದ ಬಂದು 600 ಸಿನಿಮಾಗಳನ್ನು ಮಾಡಿರೋದು ಸಾಮಾನ್ಯದ ಮಾತಲ್ಲ. ಅವರೊಟ್ಟಿಗೆ 40 ವರ್ಷದ ಒಡನಾಟ ನನ್ನದು. ಬಂಗಾರಪ್ಪ ಕಾಲದಿಂದಲೂ ಆಪ್ತರು. ಎರಡು ವಾರದ ಹಿಂದೆ ಮನಗೆ ಬಂದಿದ್ದರು. ನಡೆಯೋಕೆ ಆಗ್ತಾ ಇರಲಿಲ್ಲ. ಪಶು ವೈಧ್ಯ ಆಸ್ಪತ್ರೆ ಕಟ್ಟಿ ಉದ್ಘಾಟನೆಗೆ ಕರೆದರು. ಅದೃಷ್ಟಗಳು ಬದಲಾಗಬಹುದು. ಆದರೆ ನಿರ್ಧಾರಗಳು ಬದಲಾಗಬಾರದು. ಅವರ ಉಸಿರು ಇರುವಾಗಲೇನೇ ಹೋಗಿ ಆಸ್ಪತ್ರೆ ಉದ್ಘಾಟಿಸಿದೆ. ಮನೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿದ್ದೆ. ವಿನೋದ್ ತಮ್ಮ ಇಡೀ ಜೀವನವನ್ನ ತಾಯಿಯ ಸೇವೆಗೆ ಮುಡಿಪಾಗಿಟ್ಟವರು. ಸ್ಮಾರಕ ನಿರ್ಮಾಣದ ವಿಚಾರ ಸರ್ಕಾರದ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಅದು ಒಬ್ಬನಿಂದ ಮಾಡುವ ಕಾರ್ಯ ಅಲ್ಲ" ಎಂದು ವಿವರಿಸಿದ್ದಾರೆ.
"ಜೀವನದಲ್ಲಿ ನಮಗೆ ಬರೋ ಕಷ್ಟನ ಎದುರಿಸಬೇಕು. ಅದನ್ನ ನಾವು ಲೀಲಾವತಿಯವರಿಂದ ಕಲಿತಿದ್ದೇವೆ. ಎಲ್ಲರಿಗೂ ನೋವು, ಕಷ್ಟ ಬರುತ್ತೆ. 600 ಚಿತ್ರಗಳಲ್ಲಿ ಅಭಿನಯಿಸಿ ಕೊನೆಗೆ ಸಿಂಗಲ್ ಪೇರೆಂಟ್ ಆದ್ರು. ಆಯುಷ್ಯದ ಕೊನೆವರೆಗೂ ಮಾನಸಿಕವಾಗಿ ಚೆನ್ನಾಗಿದ್ದರು. ಲೀಲಾವತಿ ಅವರು ನಮಗೆ ದೊಡ್ಡ ಆಸ್ತಿ. ತಾಯಿ -ಮಗ ಬದುಕಿದ್ದು ನಮಗೆ ಆದರ್ಶ. ಕೃಷಿಯನ್ನು ಲೀಲಾವತಿ ಪ್ರೀತಿಸಿದ್ರು. ಮನೆಗೆ ಎಲ್ಲರನ್ನೂ ಊಟಕ್ಕೆ ಕರೆಯುತ್ತಿದ್ದರು. ಭೂಮಿಯನ್ನ ಕಾಪಾಡೋದು ನಮ್ ಕರ್ತವ್ಯ ಎನ್ನುತ್ತಿದ್ದರು" ಎಂದು ನಟಿ ಶ್ರುತಿ ಹೇಳಿದ್ದಾರೆ.


Click it and Unblock the Notifications











