ಕನ್ನಡ ನಟರು ಈ ವಿಚಾರವನ್ನು ಮಲಯಾಳಂ ನಟ ಮಮ್ಮುಟ್ಟಿಯನ್ನು ನೋಡಿ ಕಲಿಯಬೇಕಿದೆ!
ಮಲಯಾಳಂ ಸಿನಿಮಾಗಳು ಬಹಳ ಗಮನ ಸೆಳೆಯುತ್ತಿವೆ. 'ಮಂಜುಮ್ಮೇಲ್ ಬಾಯ್ಸ್', 'ಆಡುಜೀವಿತಂ' ಹಾಗೂ 'ಆವೇಶಂ' ರೀತಿಯ ಸಿನಿಮಾಗಳು ಹೊರ ರಾಜ್ಯಗಳಲ್ಲಿ ಕೂಡ ಸದ್ದು ಮಾಡಿವೆ. ಕೇವಲ 4 ತಿಂಗಳಿಗೆ 1000 ಕೋಟಿ ರೂ. ಬಿಸಿನೆಸ್ ಮಾಡಿರುವ ಲೆಕ್ಕಾಚಾರ ನಡೀತಿದೆ.
ಕನ್ನಡ ಚಿತ್ರರಂಗದಲ್ಲಿ ಈ 4 ತಿಂಗಳಲ್ಲಿ 80 ಸಿನಿಮಾಗಳು ತೆರೆಗಪ್ಪಳಿಸಿವೆ. ಸರಿಯಾಗಿ 100 ಕೋಟಿ ರೂ. ಬಿಸಿನೆಸ್ ಕೂಡ ನಡೆದಿಲ್ಲ. ಸದ್ಯ ಬಿಡುಗಡೆಗೆ ಸಜ್ಜಾಗಿರುವ ಮೂರ್ನಾಲ್ಕು ಸಿನಿಮಾಗಳು ಬಿಟ್ಟರೆ ಮುಂದೇನು ಎನ್ನುವ ಗ್ಯಾರೆಂಟಿ ಇಲ್ಲ. ಮತ್ತೆ ಏಳೆಂಟು ತಿಂಗಳು ಥಿಯೇಟರ್ಗಳು ಖಾಲಿ ಆಗಲಿವೆ. ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದು ಸ್ಯಾಂಡಲ್ವುಡ್ ಹಳ್ಳ ಹಿಡಿಯುತ್ತಿದೆ ಎನ್ನುವ ಆರೋಪವೂ ಕೇಳಿಬರ್ತಿದೆ.

ಮೊದಲಿಗೆ ಒಳ್ಳೆ ಸಿನಿಮಾ ಮಾಡಿ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಎಲ್ಲಾ ಕಡೆ ರೀಚ್ ಆಗುತ್ತದೆ. ದೊಡ್ಡ ಸಿನಿಮಾ ಮಾಡಿದರೆ ಮಾತ್ರ ಜನ ನೋಡ್ತಾರೆ ಎಂದು ಕೂತರೇ ಕಷ್ಟ ಕಷ್ಟ ಎನ್ನುತ್ತಿದ್ದಾರೆ. ಮಾಲಿವುಡ್ನಲ್ಲಿ ಮಮ್ಮುಟಿ, ಮೋಹನ್ ಲಾಲ್ ರೀತಿಯ ಸೂಪರ್ ಸ್ಟಾರ್ಗಳೇ ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ನಮ್ಮಲ್ಲಿ ಎರಡನೇ ಶ್ರೇಣಿ ನಟರು ಕೂಡ 2 ವರ್ಷಕ್ಕೆ ಒಂದು ಸಿನಿಮಾ ಎನ್ನುತ್ತಿದ್ದಾರೆ.
ದೊಡ್ಡ ಸಿನಿಮಾಗಳಿಲ್ಲದೇ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳ ಬಾಗಿಲು ಮುಚ್ಚುವಂತಾಗಿದೆ. ಇದು ಹೀಗೆ ಮುಂದುವರೆದರೆ ಇನ್ನುಳಿದ ಥಿಯೇಟರ್ಗಳು ನೆಲಸಮವಾಗಿ ಬಳಿಕ ಓಟಿಟಿಯಲ್ಲೇ ಸಿನಿಮಾಗಳನ್ನು ರಿಲೀಸ್ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು. ಸದ್ಯ ಮಮ್ಮುಟಿ ನಟನೆಯ 'ಟರ್ಬೊ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇನ್ನೆರಡು ವಾರಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.

ಈ ವರ್ಷ 4 ತಿಂಗಳಲ್ಲಿ ಬಿಡುಗಡೆ ಆಗುತ್ತಿರುವ ಮಮ್ಮುಟಿ ನಟನೆಯ 3ನೇ ಸಿನಿಮಾ 'ಟರ್ಬೊ'. ಇತ್ತೀಚೆಗೆ 'ಅಬ್ರಹಾಂ ಒಳರ್', 'ಬ್ರಹ್ಮಯುಗಂ' ಎನ್ನುವ ಮತ್ತೆರಡು ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಮಮ್ಮುಟಿ ವಯಸ್ಸು ಈಗ 71 ವರ್ಷ. ಈ ವಯಸ್ಸಿನಲ್ಲಿ ಕೂಡ ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸೋ ಸಾಹಸ ಮಾಡುತ್ತಿದ್ದಾರೆ. ಆದರೆ ನಮ್ಮ ನಟರು ಹಿಂದು ಮುಂದು ನೋಡುತ್ತಿದ್ದಾರೆ.
ಕಳೆದ ವರ್ಷ ಕೂಡ ಮಮ್ಮುಟಿ 4 ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಕಾವೇರಿ ಚಿತ್ರಮಂದಿರ ನೆಲಸಮವಾಯಿತು. ದೊಡ್ಡ ಸಿನಿಮಾಗಳಿಲ್ಲದೇ ಜನ ಥಿಯೇಟರ್ಗೆ ಬರ್ತಿಲ್ಲ. ಅದಕ್ಕೆ ಥಿಯೇಟರ್ ಒಡೆಯುತ್ತಿರುವುದಾಗಿ ಮಾಲೀಕರು ಹೇಳಿದ್ದರು. ಆದರೆ ಸ್ಯಾಂಡಲ್ವುಡ್ ಸ್ಟಾರ್ಸ್ ಈ ದಿಶೆಯಲ್ಲಿ ಆಲೋಚಿಸುತ್ತಲೇ ಇಲ್ಲ. ಮಾಲಿವುಡ್ ಸಣ್ಣ ಇಂಡಸ್ಟ್ರಿ. ಅಲ್ಲೇ ಸೀನಿಯರ್ ಸ್ಟಾರ್ಸ್ ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಕನ್ನಡದಲ್ಲಿ ಯಾಕೆ ಸಾಧ್ಯವಿಲ್ಲ? ಎನ್ನುವ ಪ್ರಶ್ನೆ ಎದ್ದಿದೆ.
'KGF-2' ಸಿನಿಮಾ ಬಂದು ಹೋಗಿ 3 ವರ್ಷಗಳ ಬಳಿಕ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ತೆರೆಗೆ ಬರ್ತಿದೆ. 'ವಿಕ್ರಾಂತ್ ರೋಣ' ಬಂದೋಗಿ 2 ವರ್ಷಕ್ಕೆ ಸುದೀಪ್ 'ಮ್ಯಾಕ್ಸ್' ತೆರೆಗಪ್ಪಳಿಸುತ್ತಿದೆ. ಇದ್ದಿದ್ದರಲ್ಲಿ ದರ್ಶನ್, ಶಿವಣ್ಣ ಮಾತ್ರ ವರ್ಷಕ್ಕೆ 2 ಸಿನಿಮಾಗಳನ್ನು ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಚಿತ್ರರಂಗಕ್ಕೆ ಬಂದ 12 ವರ್ಷಗಳಲ್ಲಿ 4 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. 2ನೇ ಶ್ರೇಣಿ ನಟರ ಸಿನಿಮಾಗಳು ಗೆಲ್ಲುತ್ತಿಲ್ಲ. ಮೊದಲ ಶ್ರೇಣಿಯ ಮೂರ್ನಾಲ್ಕು ಹೀರೊಗಳ ಸಿನಿಮಾಗಳಿಗೆ ಕಾದು ಕೂರುವಂತಾಗಿದೆ.
ತಮಿಳಿನಲ್ಲಿ ನಟ ದಳಪತಿ ವಿಜಯ್ ಕೂಡ ವರ್ಷಕ್ಕೆ 2 ಸಿನಿಮಾಗಳನ್ನು ರಿಲೀಸ್ ಮಾಡುವ ಪ್ರಯತ್ನ ಮಾಡುತ್ತಾರೆ. 3 ತಿಂಗಳು ಶೂಟಿಂಗ್, 3 ತಿಂಗಳು ಪೋಸ್ಟ್ ಪ್ರೊಡಕ್ಷನ್ ಎಂದು ಪ್ಲ್ಯಾನ್ ಮಾಡುತ್ತಾರೆ. ಆದರೆ ಕನ್ನಡದಲ್ಲಿ ಮಾತ್ರ ಯಾವುದೇ ಪ್ಲ್ಯಾನಿಂಗ್ ಇಲ್ಲದೇ ಸಿನಿಮಾ ಮಾಡುತ್ತಾರೆ. ಇದು ಹೀಗೆ ಮುಂದುವರೆದರೆ ಭಾರೀ ಬೆಲೆಯನ್ನೇ ತೆರಬೇಕಾಗುತ್ತದೆ.


Click it and Unblock the Notifications











