2018 ಫ್ಲ್ಯಾಶ್ ಬ್ಯಾಕ್: ಸ್ಯಾಂಡಲ್ ವುಡ್ ನಲ್ಲಿ ಮದುವೆ ಸಂಭ್ರಮ ಬಲು ಜೋರು
ಹೊಸ ಹೊಸ ಸಿನಿಮಾಗಳು, ಅದಕ್ಕೆ ತಕ್ಕ ವಿವಾದಗಳು, ಕಲೆಕ್ಷನ್ ನಿಂದ ಸದ್ದು ಮಾಡುತ್ತಿದ್ದ ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಮದುವೆಯ ಸಂಭ್ರಮ ಜೋರಾಗಿತ್ತು.
ಬಹುಭಾಷಾ ನಟಿ ಭಾವನಾ, ನಿರ್ದೇಶಕ ಸಂತೋಷ್ ಆನಂದ್ ರಾಮ್, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಸಾಲು ಸಾಲು ಸೆಲೆಬ್ರಿಟಿಗಳು ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ತಾರಾ ಜೋಡಿಗಳಾದ ದಿಗಂತ್-ಐಂದ್ರಿತಾ ರೇ, ಚಿರಂಜೀವಿ ಸರ್ಜಾ-ಮೇಘನಾ ರಾಜ್ ಈ ವರ್ಷ ಹೊಸ ಜೀವನ ಆರಂಭಿಸಿದ್ದು ವಿಶೇಷ. ಬನ್ನಿ ಹಾಗಾದ್ರೆ, ಈ ವರ್ಷ ಯಾರೆಲ್ಲಾ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು ಅಂತ ಒಮ್ಮೆ ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಬರೋಣ...

ಭಾವನಾ-ನವೀನ್
ಕನ್ನಡ ಹಾಗೂ ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಭಾವನಾ ಮತ್ತು ನಿರ್ಮಾಪಕ ನವೀನ್ ಈ ವರ್ಷಾರಂಭದಲ್ಲಿ ವಿವಾಹವಾದರು. ಆರು ವರ್ಷಗಳಿಂದ ಪ್ರೇಮಿಗಳಾಗಿದ್ದ ಭಾವನಾ-ನವೀನ್ ಜನವರಿ ತಿಂಗಳಲ್ಲಿ ಕೇರಳದಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದರು.

ಮೇಘನಾ-ಅನೂಪ್
ಸಾರಾ ಗೋವಿಂದು ಅವರ ಪುತ್ರ ಅನೂಪ್ ಸಾರಾ ಗೋವಿಂದು-ಮೇಘನಾ ಮದುವೆ ಯಲಹಂಕದ ಇಬಿಸು ಕನ್ವೆನ್ಷನಲ್ ಹಾಲ್ ನಲ್ಲಿ ಅದ್ಧೂರಿಯಾಗಿ ನಡೆಯಿತು.

ಸಂತೋಷ್ ಆನಂದ್ ರಾಮ್-ಸುರಭಿ
ರಾಮಾಚಾರಿ ಹಾಗೂ ರಾಜಕುಮಾರ ಸಿನಿಮಾಗಳನ್ನ ನಿರ್ದೇಶನ ಮಾಡಿ ಸಕ್ಸಸ್ ಕಂಡ ಸಂತೋಷ್ ಆನಂದ್ ರಾಮ್ ಮತ್ತು ಸುರಭಿ ಮದುವೆ ಫೆಬ್ರವರಿ ತಿಂಗಳಲ್ಲಿ ನಡೆಯಿತು.

ದೀಪಾ ಗೌಡ-ಅರುಣ್
'ಲಾಸ್ಟ್ ಬಸ್' ಚಿತ್ರದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದ ನಟಿ ದೀಪಾ ಗೌಡ, ಉದ್ಯಮಿ ಅರಣ್ ಕೈ ಹಿಡಿದರು. ಇವರಿಬ್ಬರ ವಿವಾಹ ಗುರು ಹಿರಿಯರ ಸಮ್ಮುಖದಲ್ಲಿ ಹಾಸನದಲ್ಲಿ ನಡೆಯಿತು.

ನೇಹಾ ಗೌಡ-ಚಂದನ್
ನಟಿ ಸೋನುಗೌಡ ಅವರ ಸಹೋದರಿ ನೇಹಾ ಗೌಡ ತಮ್ಮ ಬಾಲ್ಯದ ಗೆಳೆಯ ಚಂದನ್ ಅವರನ್ನು ಮದುವೆ ಆದರು. ಮೈಸೂರು ರಸ್ತೆಯಲ್ಲಿರುವ ಸಾಯಿ ಪ್ಯಾಲೇಸ್ ನಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆಯಿತು.

ಶಾನ್-ಸಿಂಧು
ಡಾ.ರಾಜ್ ಕುಮಾರ್ ಅವರ ಹಿರಿಯ ಪುತ್ರಿ ಲಕ್ಷ್ಮೀ ಅವರ ಪುತ್ರ ಶಾನ್ ಹಾಗೂ ಸಿಂಧೂ ಕಲ್ಯಾಣ ಈ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಯಿತು. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಈ ಮದುವೆಗೆ ಸಾಕ್ಷಿ ಆದರು.

ಕಾಮಿಡಿ ಕಿಲಾಡಿ ನಯನ-ಶರತ್
'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ನಯನ, ಶರತ್ ಎಂಬುವರ ಜೊತೆ ಹಸೆಮಣೆ ಏರಿದರು. ಧರ್ಮಸ್ಥಳದಲ್ಲಿ ಇವರಿಬ್ಬರ ಮದುವೆ ನಡೆಯಿತು.

ಮೇಘನಾ ರಾಜ್-ಚಿರಂಜೀವಿ ಸರ್ಜಾ
ಹಿಂದು ಮತ್ತು ಕ್ರೈಸ್ತ ಸಂಪ್ರದಾಯದಂತೆ ನಟಿ ಮೇಘನಾ ರಾಜ್-ಚಿರಂಜೀವಿ ಸರ್ಜಾ ಹೊಸ ಬಾಳಿಗೆ ಅಡಿಯಿಟ್ಟರು. ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರೇ ಮೇಘನಾ-ಚಿರು ಮದುವೆಯಲ್ಲಿ ಭಾಗವಹಿಸಿ, ವಧು-ವರರಿಗೆ ಶುಭ ಹಾರೈಸಿದರು.

ಸ್ಕಂದ ಅಶೋಕ್-ಶಿಕಾ ಪ್ರಸಾದ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿ ಖ್ಯಾತಿಯ ಸ್ಕಂದ ಅಶೋಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಾಲ್ಕುವರೆ ವರ್ಷಗಳಿಂದ ಪ್ರೀತಿಸುತ್ತಿದ್ದ ಶಿಕಾ ಪ್ರಸಾದ್ ಎಂಬುವರ ಜೊತೆಗೆ ಸ್ಕಂದ ಅಶೋಕ್ ಹೊಸ ಜೀವನ ಆರಂಭಿಸಿದರು. ಮೇ 31 ರಂದು ಸ್ಕಂದ ಅಶೋಕ್-ಶಿಕಾ ಪ್ರಸಾದ್ ವಿವಾಹ ಮಹೋತ್ಸವ ಬೆಂಗಳೂರು ಅರಮನೆಯಲ್ಲಿ ಅದ್ದೂರಿಯಾಗಿ ನೆರವೇರಿತು. ಕಿರುತೆರೆ ಲೋಕದ ಗಣ್ಯರು, ಸ್ಯಾಂಡಲ್ ವುಡ್ ನಟ-ನಟಿಯರು ಸ್ಕಂದ ಅಶೋಕ್ ಮದುವೆಗೆ ಸಾಕ್ಷಿ ಆದರು.

ನಯನ ಪುಟ್ಟಸ್ವಾಮಿ-ಚರಣ್ ತೇಜ್
'ಪ್ಯಾಟೆ ಹುಡುಗೀರ ಹಳ್ಳಿ ಲೈಫ್' ಕಾರ್ಯಕ್ರಮದ ವಿಜೇತೆ, 'ಬಿಗ್ ಬಾಸ್ ಕನ್ನಡ-6' ಸ್ಪರ್ಧಿ ನಯನ ಪುಟ್ಟಸ್ವಾಮಿ-ಚರಣ್ ತೇಜ್ ವಿವಾಹ ಮಹೋತ್ಸವ ಜೂನ್ ತಿಂಗಳಲ್ಲಿ ನಡೆಯಿತು. ವಿನಯ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಹಲವರು ನಯನ-ಚರಣ್ ಮದುವೆಗೆ ಸಾಕ್ಷಿ ಆದರು.

ಸುನೀಲ್ ರಾವ್-ಶ್ರೇಯಾ
'ಎಕ್ಸ್ಕ್ಯೂಸ್-ಮಿ' ಹಾಗೂ 'ಲೂಸ್ ಕನೆಕ್ಷನ್' ಮೂಲಕ ಮನೆ ಮಾತಾದ ನಟ ಸುನೀಲ್ ರಾವ್ ಜೂನ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವೃತ್ತಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿರುವ ಶ್ರೇಯಾ ಐಯ್ಯರ್ ಅವರ ಜೊತೆ ನಟ ಸುನೀಲ್ ರಾವ್ ಸಪ್ತಪದಿ ತುಳಿದರು.

ಗೌತಮಿ ಗೌಡ-ಜಾರ್ಜ್ ಕ್ರಿಸ್ಟಿ
ಕಿರುತೆರೆ ಹಾಗೂ ಬೆಳ್ಳಿ ತೆರೆ ಎರಡರಲ್ಲಿಯೂ ಪ್ರಖ್ಯಾತಿ ಪಡೆದಿರುವ, 'ಬಿಗ್ ಬಾಸ್' ಕಾರ್ಯಕ್ರಮದಲ್ಲೂ ಸ್ಪರ್ಧಿಸಿದ್ದ ನಟಿ ಗೌತಮಿ ಗೌಡ ಆಗಸ್ಟ್ 19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜಾರ್ಜ್ ಕ್ರಿಸ್ಟಿ ಎಂಬುವರ ಜೊತೆ ಗೌತಮಿ ಸಪ್ತಪದಿ ತುಳಿದರು.

ಪವನ್ ಒಡೆಯರ್-ಅಪೇಕ್ಷಾ
ಕನ್ನಡದ ಸ್ಟಾರ್ ನಿರ್ದೇಶಕ ಪವನ್ ಒಡೆಯರ್-ನಟಿ ಅಪೇಕ್ಷಾ ಪುರೋಹಿತ್ ಮದುವೆ ಆಗಸ್ಟ್ 20 ರಂದು ಬಾಗಲಕೋಟೆಯಲ್ಲಿ ನಡೆಯಿತು. ಅಪೇಕ್ಷಾ ಮೂಲತಃ ಬಾಗಲಕೋಟೆಯವರಾಗಿದ್ದು, ಅಲ್ಲಿಯ ವಿದ್ಯಗಿರಿಯ ಗೌರಿಶಂಕರ್ ಕಲ್ಯಾಣ ಮಂಟಪದಲ್ಲಿ ವಿವಾಹ ಜರುಗಿತು.

ನಟಿ ಕಾವ್ಯ-ಮಹದೇವ್
ಏಳು ವರ್ಷಗಳಿಂದ ಸ್ನೇಹಿತರಾಗಿದ್ದ ಕಾವ್ಯ ಮತ್ತು ಮಹದೇವ್ ಪ್ರೀತಿಸಿ ಮದುವೆ ಆಗಿದ್ದು ಇದೇ ವರ್ಷ. ಕುಟುಂಬದ ಸಮ್ಮತಿ ಪಡೆದು ಕಿರುತೆರೆ ನಟಿ ಕಾವ್ಯ ಹಾಗೂ ಮಹದೇವ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಅಂದ್ಹಾಗೆ, ನಟಿ ಕಾವ್ಯ 'ಚರಣದಾಸಿ', 'ನಾ ನಿನ್ನ ಬಿಡಲಾರೆ' ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ನಟಿ ಸ್ನೇಹಾ-ರಾಯನ್
ನವೆಂಬರ್ 25 ರಂದು ಬೆಂಗಳೂರಿನ ಸಿರಿ ಕನ್ವೆನ್ಷನ್ ಹಾಲ್ ನಲ್ಲಿ ಸ್ನೇಹಾ ಆಚಾರ್ಯ-ರಾಯನ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ನವೆಂಬರ್ 24 ರಂದು ಸಂಜೆ ಆರತಕ್ಷತೆ ನಡೆದಿದ್ದು, ನವೆಂಬರ್ 25 ರಂದು ಮುಂಜಾನೆ 5:25ಕ್ಕೆ ಇದ್ದ ಶುಭ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ನಡೆದಿದೆ. ಅಂದ್ಹಾಗೆ, ಸ್ನೇಹಾ ಆಚಾರ್ಯ ಮತ್ತು ರಾಯನ್ ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಸಪ್ತ ಸಾಗರಗಳನ್ನು ದಾಟಿರುವ ಇವರಿಬ್ಬರ ಪ್ರೇಮ್ ಕಹಾನಿಗೆ ಈ ವರ್ಷ ಅಧಿಕೃತ ಮುದ್ರೆ ಬಿತ್ತು.

'ರಾಜಾಹುಲಿ' ಹರ್ಷ-ಐಶ್ವರ್ಯ
'ರಾಜಾಹುಲಿ' ಸಿನಿಮಾದಲ್ಲಿ ಯಶ್ ಸ್ನೇಹಿತನಾಗಿ ನಟಿಸಿದ್ದ ಹರ್ಷ ವಿವಾಹ ಜೀವನಕ್ಕೆ ಕಾಲಿಟ್ಟರು. ತಿರುಪತಿಯಲ್ಲಿ ಡಿಸೆಂಬರ್ 3 ರಂದು ಅವರ ಮದುವೆ ನಡೆಯಿತು. ಐಶ್ವರ್ಯ ಜೊತೆಗೆ ಹರ್ಷವರ್ಧನ್ (ಹರ್ಷ) ನವ ಜೀವನ ಪ್ರಾರಂಭ ಮಾಡಿದ್ದಾರೆ. ಎರಡು ಕುಟುಂಬದವರು ಮತ್ತು ಆಪ್ತರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ದಿಗಂತ್-ಐಂದ್ರಿತಾ ರೇ
'ಮನಸಾರೆ' ಪ್ರೀತಿ ಮಾಡಿದ್ದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಮನಸಾರೆ ಮದುವೆಯಾದರು. ಡಿಸೆಂಬರ್ 12 ರಂದು ಸಂಜೆ 6.30ರ ಸುಮಾರಿಗೆ ಇದ್ದ ಮುಹೂರ್ತದಲ್ಲಿ ಬಂಗಾಳಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ದಿಗಂತ್-ಐಂದ್ರಿತಾ ರೇ ಕಾಲಿಟ್ಟರು. ಬೆಂಗಳೂರು ಹೊರವಲಯದ ನಂದಿಬೆಟ್ಟದ ಸಮೀಪ ಇರುವ ಡಿಸ್ಕವರಿ ವಿಲೇಜ್ ಎಂಬ ರೆಸಾರ್ಟ್ನಲ್ಲಿ ವಿವಾಹ ಕಾರ್ಯಕ್ರಮ ನೆರವೇರಿತು.

ನಟ ಸುಮಂತ್-ಅನಿತಾ
'ದಿಲ್ವಾಲ' ಖ್ಯಾತಿಯ ನಟ ಸುಮಂತ್ ಶೈಲೇಂದ್ರ ಹೊಸ ಜೀವನಕ್ಕೆ ಹೆಜ್ಜೆಯಿಟ್ಟರು. ಶ್ರೀನಿವಾಸ್ ಮತ್ತು ಚಂದ್ರಕಲಾ ಅವರ ಪುತ್ರಿ ಅನಿತಾ ಜೊತೆ ಸುಮಂತ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಡಿಸೆಂಬರ್ 12 ರಂದು ಬೆಳಗ್ಗೆ 9.30ರಿಂದ 10.30ರ ಶುಭಲಗ್ನದಲ್ಲಿ ಸುಮಂತ್ ಮತ್ತು ಅನಿತಾ ಸಪ್ತಪದಿ ತುಳಿದರು.

ನಿರ್ಮಾಪಕ ವಿಖ್ಯಾತ್-ಸ್ವಾತಿ
ಕನಕಪುರ ರಸ್ತೆಯಲ್ಲಿರುವ ಶಿಬ್ರಾವಿ ರೆಸಾರ್ಟ್ ನಲ್ಲಿ ಡಿಸೆಂಬರ್ 14 ರಂದು ಸ್ವಾತಿ ಎಂಬುವರನ್ನ ವಿಖ್ಯಾತ್ ವರಿಸಿದರು. ಅಂದ್ಹಾಗೆ ವಿಖ್ಯಾತ್, ರಮೇಶ್ ಅರವಿಂದ್ ಅಭಿನಯಿಸಿದ್ದ 'ಪುಷ್ಪಕ ವಿಮಾನ' ಚಿತ್ರವನ್ನ ಗೆಳೆಯರ ಜೊತೆ ಸೇರಿ ನಿರ್ಮಾಣ ಮಾಡಿದ್ದರು. ಈಗ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿರುವ 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ.


Click it and Unblock the Notifications











