'ದರ್ಶನ್-ಇಂದ್ರಜಿತ್ ಇಲ್ಲಿಗೆ ಬಿಟ್ಟುಬಿಡಿ': ವಿಚಾರಣೆ ಬಳಿಕ ಸಂದೇಶ್ ಪ್ರತಿಕ್ರಿಯೆ
ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನುವ ವಿಚಾರವನ್ನು ಗಂಗಾಧರ್ ನಿರಾಕರಿಸಿದ್ದಾರೆ. 'ಹಲ್ಲೆ ಮಾಡಿಲ್ಲ, ರೇಗಾಡಿದ್ರು ಅಷ್ಟೇ' ಎಂದು ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ.
ಪೊಲೀಸ್ ವಿಚಾರಣೆ ಮುಗಿಸಿ ಮಾತನಾಡಿದ ಸಂದೇಶ್ ''ದರ್ಶನ್ ಮತ್ತು ಇಂದ್ರಜಿತ್ ಇಬ್ಬರು ಈ ವಿಚಾರವನ್ನು ಇಲ್ಲಿಗೆ ಕೈಬಿಟ್ಟರೆ ನಮಗೆ ಒಳ್ಳೆಯದು, ಹೋಟೆಲ್ಗೆ ಬಹಳ ತೊಂದರೆಯಾಗುತ್ತದೆ'' ಎಂದು ಮನವಿ ಮಾಡಿದರು. ''ಅವರು ಹೊಡೆದಾಡುವುದು ಬಡಿದಾಡಿಕೊಳ್ಳುವುದು ಅವರಿಗೆ ಬಿಟ್ಟಿದ್ದು. ಪದೇ ಪದೇ ಪೊಲೀಸರು ಬರುವುದು, ನಮಗೆ ತೊಂದರೆಯಾಗುತ್ತದೆ. ಇಬ್ಬರು ಇಲ್ಲಿಗೆ ಬಿಡಿ'' ಎಂದು ಸಂದೇಶ್ ಪ್ರಿನ್ಸ್ ಹೇಳಿದರು.
''ಬೆಳಗ್ಗೆ ಪೊಲೀಸರು ಬರುವುದಕ್ಕೂ ಮುಂಚೆ ನೋಟಿಸ್ ಕೊಟ್ಟರು. ಅರ್ಧ ಗಂಟೆ ಅಂತರದಲ್ಲಿ ಪೊಲೀಸರು ಹೋಟೆಲ್ಗೆ ಬಂದರು. ಸಿಸಿಟಿವಿಯ ಎಲ್ಲಾ ದೃಶ್ಯಗಳನ್ನು ತೆಗೆದುಕೊಂಡು ಹೋದರು.'' ಎಂದು ಸಂದೇಶ್ ಮಾಹಿತಿ ನೀಡಿದರು.

'ಇನ್ನು ದರ್ಶನ್ ಅವರ ಜೊತೆ ಬೆಳಗ್ಗೆಯಿಂದಲೂ ಮಾತನಾಡಿಲ್ಲ. ಪೊಲೀಸರ ಜೊತೆ ವಿವರ ಕೊಡುವುದರಲ್ಲೇ ಸಮಯ ಕಳೆಯಿತು. ಪ್ರೆಸ್ಮೀಟ್ ಬಗ್ಗೆ ನಮಗೆ ಮಾಹಿತಿ ಇಲ್ಲ' ಎಂದು ಹೇಳಿದರು.
ಗಂಗಾಧರ್ ಹೇಳಿಕೆ
''ಇಂದ್ರಜಿತ್ ಹೇಳಿರುವಂತೆ ನಾನು ದಲಿತ ಅಲ್ಲ, ನಾನು ಬ್ರಾಹ್ಮಣ. ನನ್ನ ಪತ್ನಿ ಪೊರಕೆ ಹಿಡಿದುಕೊಂಡು ಬಂದು ಹೋಟೆಲ್ ಮುಂದೆ ಜಗಳವಾಡಲು ಸಾಧ್ಯವಿಲ್ಲ. ನನಗೆ ಮದುವೆಯೇ ಆಗಿಲ್ಲ. ನಾನು ನನ್ನ ತಾಯಿಯೊಟ್ಟಿಗೆ ವಾಸವಿದ್ದೇನೆ'' ಎಂದು ತಿಳಿಸಿದರು.
''ನನಗೆ ದರ್ಶನ್ ಹೊಡೆದಿದ್ದಾರೆ ಎಂಬುದು ಸುಳ್ಳು. ನನ್ನ ಕಣ್ಣಿಗೆ ಏಟಾಗಿದೆ ಎಂದು ಹೇಳಿದ್ದು ಸಹ ಸುಳ್ಳು. ಬೇಕಿದ್ದರೆ ನೀವೇ ನೋಡಿಕೊಳ್ಳಿ'' ಎಂದು ಮಾಸ್ಕ್ ತೆಗೆದು ತೋರಿಸಿದರು.


Click it and Unblock the Notifications











