ರಚಿತಾ ರಾಮ್ ವಿರುದ್ದ ದೂರು ದಾಖಲು..!
ಚಿತ್ರ ಹೇಗಾದರೂ ಇರಲಿ .. ಆದರೆ ಈ ಕಾಲದಲ್ಲಿ ಪ್ರಚಾರ ತುಂಬಾನೇ ಮುಖ್ಯ. ಹೀಗಾಗಿಯೇ ಪ್ರಚಾರ ಮಾಡುವ ಅವಶ್ಯಕತೆ ಇಲ್ಲದಿದ್ದರೂ ಕೂಡ ರಾಜಮೌಳಿ ಅವರಂತಹ ನಿರ್ದೇಶಕರು ತಮ್ಮ ಚಿತ್ರದ ಪ್ರಚಾರ ಮಾಡ್ತಾರೆ. ಪ್ರಚಾರಕ್ಕೆಂದೇ ಸಮಯ ಮೀಸಲಿಡುತ್ತಾರೆ. ಆದರೆ, ನಮ್ಮ ಕನ್ನಡ ಚಿತ್ರರಂಗಕ್ಕೆ ಈ ಪ್ರಚಾರದ ಮಹತ್ವ ಇನ್ನೂ ಅರ್ಥವೇ ಆಗಿಲ್ಲ. ಗಿಮಿಕ್ ಮಾಡುವುದನ್ನೇ ಪ್ರಚಾರ ಎಂದು ನಮ್ಮಲ್ಲಿ ಅನೇಕರು ಅಂದುಕೊಂಡಿದ್ದಾರೆ.
ಇನ್ನು ಕೆಲವರು ತಮ್ಮದೇ ಚಿತ್ರ ಆದರೂ ಕೂಡ.. ಬರಬೇಕಾದ ಹಣ ಬಂದರೂ ಕೂಡ.. ಪ್ರಚಾರ ಮಾಡಲು ಅದ್ಯಾಕೋ ಹಿಂದೆ ಮುಂದೆ ಯೋಚನೆ ಮಾಡುತ್ತಾರೆ. ಪ್ರಚಾರಕ್ಕೆ ಬರದೇ ಸತಾಯಿಸುತ್ತಾರೆ. ಉದಾಹರಣೆಗೆ ರಚಿತಾ ರಾಮ್.

ಹೌದು, ಧಾರಾವಾಹಿ ಪ್ರಪಂಚದಲ್ಲಿ ಸಣ್ಣಗೆ ಸದ್ದು ಮಾಡುತ್ತಲೇ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗುವ ಮೂಲಕ ಅಚ್ಚರಿಗೆ ಕಾರಣವಾಗಿದ್ದವರು ರಚಿತಾ ರಾಮ್. ಅಲ್ಲಿಂದಾಚೆ ಕಮರ್ಷಿಯಲ್ ಪಥದಲ್ಲಿಯೇ ಮುಂದುವರೆಯುತ್ತಾ ಬಂದ ರಚಿತಾ ರಾಮ್, 'ಸಂಜು ವೆಡ್ಸ್ ಗೀತಾ 2' ಚಿತ್ರವನ್ನು ಮಾಡಿದ್ದರು.
ಈ ವರ್ಷದ ಆರಂಭದಲ್ಲಿ ಬಂದು ಕೇವಲ ಮೂರೇ ದಿನಕ್ಕೆ ಚಿತ್ರಮಂದಿರದಿಂದ ಎತ್ತಂಗಡಿಯಾಗಿದ್ದ ಈ ಚಿತ್ರ ಸದ್ಯ ಮರು ಬಿಡುಗಡೆಯಾಗಿದೆ. ಚಿತ್ರತಂಡ ಹೇಳಿಕೊಂಡಂತೆ ಪ್ರೇಕ್ಷಕರನ್ನು ಕೂಡ ಸೆಳೆಯುತ್ತಿದೆ. ಆದರೆ.. ಈ ಚಿತ್ರದ ಕಥಾನಾಯಕಿಯಾದ ರಚಿತಾ ರಾಮ್ ಮಾತ್ರ ತಮಗೂ ಚಿತ್ರಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆ.

ಆರಂಭದಲ್ಲಿ ಅಂದರೆ ಮೊದಲ ಬಾರಿ ಚಿತ್ರ ಬಿಡುಗಡೆಯಾಗುವ ಮುನ್ನ ಒಂದೆರಡು ಮೂರು ಬಾರಿ ತಮ್ಮ ಈ ಚಿತ್ರದ ಕುರಿತು ರಚಿತಾ ರಾಮ್ ಮಾತನಾಡಿದ್ದು ಬಿಟ್ಟರೆ ಆ ನಂತರ ರಚಿತಾ ರಾಮ್ ತಾನು ಇಂತಹದ್ದೊಂದು ಚಿತ್ರವನ್ನು ಮಾಡಿದ್ದೇ ಎನ್ನುವುದನ್ನೇ ಮರೆತು ಹೋದಂತೆ ಇದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಜೂನ್ 6ಕ್ಕೆ ಚಿತ್ರ ಮರು ಬಿಡುಗಡೆಯಾಗುತ್ತಿದೆ ಎಂದು ಹೇಳಿರುವುದನ್ನು ಹೊರತು ಪಡಿಸಿದರೆ ರಚಿತಾ ಬೇರೆ ಎಲ್ಲಿಯೂ ಕೂಡ ಚಿತ್ರದ ಕುರಿತು ಮಾತನಾಡುವ ಗೋಜಿಗೆ ಹೋಗಿಲ್ಲ. ಹೀಗಾಗಿಯೇ ಕೆರಳಿ ಕೆಂಡವಾಗಿರುವ ನಿರ್ದೇಶಕ ನಾಗಶೇಖರ್ ಸದ್ಯ ರಚಿತಾ ರಾಮ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ. ನಾಗ್ಶೇಖರ್ ಅವರ ಜೊತೆ ಶ್ರೀನಗರ ಕಿಟ್ಟಿ ಕೂಡ ಈ ವಿಚಾರದಲ್ಲಿ ಜೊತೆ ನಿಂತಿದ್ದಾರೆ.
ಈ ಕುರಿತು ಮಾತನಾಡಿರುವ ನಾಗಶೇಖರ್, ನಾನು ರಮ್ಯಾ, ತಮನ್ನಾ ಅವರ ಜೊತೆ ಎಲ್ಲ ಸಿನಿಮಾ ಮಾಡಿದವನು. ಆದರೆ.. ಅವರಿಂದ ನನಗೆ ಯಾವತ್ತು ಈ ತರಹದ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ. ನಮ್ಮ ಚಿತ್ರದ ಪ್ರಚಾರಕ್ಕೆ ರಚಿತಾ ರಾಮ್ ಒಂಚೂರು ಕೈ ಜೋಡಿಸಲಿಲ್ಲ ಎಂದು ತಮ್ಮ ಬೇಸರ ಹೊರ ಹಾಕಿದ ನಾಗಶೇಖರ್, ರಾಕ್ ಲೈನ್ ವೆಂಕಟೇಶ್ ಅವರ ಮಾತುಗಳಿಗೆ ಕೂಡ ರಚಿತಾ ಬೆಲೆ ನೀಡಲಿಲ್ಲ ಎಂದು ಹೇಳಿದ್ದಾರೆ. ನಮ್ಮ ಚಿತ್ರ ಮರುಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣ್ತಿದೆ ಆದರೂ ಕೂಡ ರಚಿತಾ ರಾಮ್ ಸಪೋರ್ಟ್ ಮಾಡಲಿಲ್ಲ ಎಂದು ಹೇಳಿದ್ದಾರೆ.
ಇನ್ನು ನಮ್ಮ ಚಿತ್ರಕ್ಕೆ ಶಿವಣ್ಣ, ಉಪೇಂದ್ರ, ಸುದೀಪ್, ಹೀಗೆ ಕನ್ನಡದ ದೊಡ್ಡ ದೊಡ್ಡವರೇ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿರುವ ನಾಗಶೇಖರ್ ಅವರಿಗೆ ನಾವು ಸಂಭಾವನೆ ಕಡಿಮೆ ಕೊಟ್ಟಿಲ್ಲ ಎಂದು ಕೂಡ ಹೇಳಿದ್ದಾರೆ. ಇಂತಹ ಕಲಾವಿದರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.
ಸದ್ಯ ರಚಿತಾ ರಾಮ್ ವಿರುದ್ದ ನಾಗಶೇಖರ್, ಶ್ರೀನಗರ ಕಿಟ್ಟಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದು ರಚಿತಾ ರಾಮ್ ಈ ವಿಚಾರಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











