ದರ್ಶನ್ ಫಾರಂ ಹೌಸ್ನಲ್ಲಿ ಸಂಕ್ರಾಂತಿ ಆಚರಣೆ ಶುರು
ಲಾಕ್ಡೌನ್ ನಡುವೆ ನಾಡು ಇಂದು ಸರಳವಾಗಿ ಸಂಕ್ರಾಂತಿ ಆಚರಿಸುತ್ತಿದೆ. ಹಲವು ನಟ-ನಟಿಯರು ಸಹ ಸಂಕ್ರಾಂತಿ ಹಬ್ಬವನ್ನು ಸರಳವಾಗಿ ಕುಟುಂಬದೊಂದಿಗೆ ಆಚರಣೆ ಮಾಡುತ್ತಿದ್ದಾರೆ.
ನಟ ದರ್ಶನ್ ಅವರಿಗೆ ಸಂಕ್ರಾಂತಿ ವಿಶೇಷ ಹಬ್ಬ. ಅಪ್ರತಿಮ ಪ್ರಾಣಿ ಪ್ರೇಮಿ ಆಗಿರುವ ದರ್ಶನ್, ಪ್ರಾಣಿಗಳನ್ನು ಪೂಜಿಸುವ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಾರೆ.
ಮೈಸೂರಿನ ಸಮೀಪ ಫಾರಂ ಹೌಸ್ ಹೊಂದಿರುವ ನಟ ದರ್ಶನ್, ಹಸು, ಎತ್ತು, ಕುದುರೆ ಸೇರಿದಂತೆ ಹಲವು ಪ್ರಾಣಿಗಳನ್ನು ಸಾಕಿದ್ದಾರೆ. ಪ್ರಾಣಿಗಳನ್ನು ಲಾಭಕ್ಕಾಗಿ ಅಲ್ಲದೆ ಹವ್ಯಾಸಕ್ಕಾಗಿ, ಪ್ರಾಣಿಗಳ ಮೇಲಿನ ಪ್ರೀತಿಗಾಗಿ ದರ್ಶನ್ ಸಾಕಿದ್ದಾರೆ. ಸಂಕ್ರಾಂತಿ ಹಬ್ಬದಂದು ತಾವೇ ಸ್ವತಃ ಮುಂದೆ ನಿಂತು ಆ ಪ್ರಾಣಿಗಳನ್ನೆಲ್ಲ ಸ್ವಚ್ಛಗೊಳಿಸಿ ಪೂಜೆ ಮಾಡಿಸುತ್ತಾರೆ.

ಇಂದು ಸಂಕ್ರಾಂತಿ ಹಬ್ಬವಾಗಿದ್ದು, ಇಂದು ದರ್ಶನ್ ಅವರ ಫಾರಂ ಹೌಸ್ನಲ್ಲಿ ಸಂಕ್ರಾಂತಿ ಪ್ರಾರಂಭವಾಗಿದೆ. ಹಸು,ಎತ್ತು, ಕುದುರೆ ಇನ್ನಿತರ ಪ್ರಾಣಿಗಳನ್ನು ಚೆನ್ನಾಗಿ ಶುಚಿಗೊಳಿಸಿ, ಅವುಗಳಿಗೆ ಪೂಜೆ ಮಾಡಿ, ನೈವೇದ್ಯ ನೀಡಿ ಸಂಜೆ ವೇಳೆಗೆ ಕಿಚ್ಚು ಹಾಯಿಸಲಾಗುತ್ತದೆ.
ಸಾಮಾನ್ಯವಾಗಿ ಎತ್ತುಗಳನ್ನು ಕಿಚ್ಚು ಹಾಯಿಸುವ ರೂಢಿ ಇದೆ, ದರ್ಶನ್ ಫಾರಂ ಹೌಸ್ನಲ್ಲಿ ಎತ್ತುಗಳು ಮಾತ್ರವೇ ಅಲ್ಲದೆ ಕುದುರೆಗಳನ್ನು ಸಹ ಕಿಚ್ಚು ಹಾಯಿಸಲಾಗುತ್ತದೆ.
ದರ್ಶನ್ ಫಾರಂ ಹೌಸ್ನಲ್ಲಿ ಹಲವು ತಳಿಯ ಎತ್ತುಗಳು, ಹಸುಗಳು, ಕುದುರೆಗಳು, ಕುರಿ, ಮೇಕೆ, ಕೋಳಿ, ಗಿಳಿ, ಪಾರಿವಾಳ ಇನ್ನಿತರೆ ಪ್ರಾಣಿ ಪಕ್ಷಿಗಳಿವೆ. ದರ್ಶನ್ಗೆ ಅವರ ಗೆಳೆಯರು ಉಡುಗೊರೆಯಾಗಿ ನೀಡಿದ ಪ್ರಾಣಿಗಳು ಸಹ ದರ್ಶನ್ ಆರೈಕೆಯಲ್ಲಿ ಬೆಳೆಯುತ್ತಿವೆ. ಫಾರಂ ಹೌಸ್ನಲ್ಲಿ ಸಣ್ಣ ಮಟ್ಟಿನ ಕೃಷಿ ಚಟುವಟಿಕೆಯನ್ನು ಸಹ ದರ್ಶನ್ ಮಾಡುತ್ತಾರೆ. ಜೊತೆಗೆ ಹೈನುಗಾರಿಕೆಯಲ್ಲೂ ತೊಡಗಿಕೊಂಡಿದ್ದಾರೆ.
ಸಿನಿಮಾ ರಂಗಕ್ಕೆ ಬರುವ ಮುನ್ನ ದರ್ಶನ್ ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹಾಲು ಮಾರುವ ವೃತ್ತಿ ಮಾಡುತ್ತಿದ್ದರು. ಹಾಗಾಗಿ ಹಸುಗಳ ಮೇಲೆ ದರ್ಶನ್ಗೆ ವಿಶೇಷ ಪ್ರೀತಿ. ಅವರ ಪ್ರಾಣಿ ಪ್ರೇಮವನ್ನು ಗುರುತಿಸಿ ಅರಣ್ಯ ಇಲಾಖೆ ಅವರನ್ನು ರಾಯಭಾರಿಯಾಗಿ ನೇಮಿಸಿಕೊಂಡಿದೆ. ರೈತರ ಮೇಲಿನ ಪ್ರೀತಿಯನ್ನು ಗಮನಿಸಿ ಕೃಷಿ ಇಲಾಖೆಯು ದರ್ಶನ್ ಅವರನ್ನು ಕೃಷಿ ಇಲಾಖೆ ರಾಯಭಾರಿಯನ್ನಾಗಿ ಮಾಡಿದೆ.


Click it and Unblock the Notifications











