ಸ್ಯಾಂಡಲ್ವುಡ್ ಗಿಲ್ಲ ಸಂಕ್ರಾಂತಿ ಸಡಗರ: ಕರ್ನಾಟಕದಲ್ಲೂ ಪರಭಾಷೆ ಚಿತ್ರಗಳದ್ದೇ ಅಬ್ಬರ
ಈ ವರ್ಷದ ಸಂಕ್ರಾಂತಿ ಸ್ಯಾಂಡಲ್ವುಡ್ ಪಾಲಿಗೆ ಖುಷಿಗಿಂತ ನಿರಾಸೆ ತಂದಿದೆ. ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಈ ಹಬ್ಬಕ್ಕೆ ಯಾವುದಾದರೂ ನಿರೀಕ್ಷೆಯ ಅಥವಾ ಸ್ಟಾರ್ ನಟರ ಚಿತ್ರ ಬರುತ್ತೆ ಎಂದು ಕಾಯುತ್ತಿದ್ದ ಕನ್ನಡ ಸಿನಿಪ್ರೇಮಿಗಳಿಗೆ ಚಂದನವನ ಬೇಸರ ಉಂಟು ಮಾಡಿದೆ.
ಸಂಕ್ರಾಂತಿ ಪ್ರಯುಕ್ತ ಯಾವ ಚಿತ್ರವೂ ಚಿತ್ರಮಂದಿರಕ್ಕೆ ಬರ್ತಿಲ್ಲ. ಹಬ್ಬಕ್ಕೆ ಯಾವುದಾದರೂ ಸಿನಿಮಾಗೆ ಹೋಗೋಣ ಅಂತ ಅಂದುಕೊಂಡ್ರೆ ಅಲ್ಲಿ ಖುಷಿಗಿಂದ ಬೇಸರ ಆಗೋದು ಪಕ್ಕಾ. ಹೌದು, ಸುಗ್ಗಿ ಹಬ್ಬದ ಸಂಭ್ರಮದಲ್ಲಿ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಪರಭಾಷೆ ಚಿತ್ರಗಳು ತುಂಬಿಕೊಂಡಿರುತ್ತೆ.
ಅದಕ್ಕೆ ಕಾರಣ, ಈ ವಾರ ಬಿಡುಗಡೆಯಾಗುತ್ತಿರುವ ಮೂರು ಸೌತ್ ಸಿನಿಮಾ ಹಾಗೂ ಒಂದು ಬಾಲಿವುಡ್ ಚಿತ್ರ. ಯಾವುದು ಆ ಸಿನಿಮಾಗಳು? ಮುಂದೆ ಓದಿ....

ಕನ್ನಡಕ್ಕೆ ಶ್ರೀಮನ್ನಾರಾಯಣ ಮಾತ್ರ
ಕನ್ನಡ ಸಿನಿಮಾ ನೋಡಬೇಕು ಅಂದುಕೊಂಡವರಿಗೆ ಸಂಕ್ರಾಂತಿ ಹಬ್ಬದಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರವೇ ಗಟ್ಟಿ. ಎರಡನೇ ವಾರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ರಕ್ಷಿತ್ ಶೆಟ್ಟಿ ಸಿನಿಮಾ ನೋಡದವರು ಹೋಗಿ ಈ ಚಿತ್ರ ನೋಡಬಹುದು. ಉಳಿದಂತೆ ಒಡೆಯ, ಅಳಿದು ಉಳಿದವರು, ರಾಜೀವ, ಬ್ರಹ್ಮಾಚಾರಿ, ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರಗಳು ಚಿತ್ರಮಂದಿರದಲ್ಲಿದ್ದರೂ ನಿಮ್ಮ ಹತ್ತಿರದ ಥಿಯೇಟರ್ ನಲ್ಲಿ ಸಿಗೋದು ಅನುಮಾನ.

ರಜನಿಯ ದರ್ಬಾರ್ ಆಗಮನ
ರಜನಿಕಾಂತ್ ಅಭಿನಯದ ದರ್ಬಾರ್ ಸಿನಿಮಾ ಕನ್ನಡದಲ್ಲಿ ಡಬ್ ಆಗಿಲ್ಲ. ಹಾಗಾಗಿ, ಈ ಚಿತ್ರವನ್ನ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಮಾಡದಂತೆ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಈ ವಿರೋಧದ ನಡುವೆಯೂ ರಾಜ್ಯದ ಬಹುತೇಕ ಚಿತ್ರಮಂದಿರದಲ್ಲಿ ತಮಿಳು ಮತ್ತು ತೆಲುಗು ಅವತರಣಿಕೆ ಜನವರಿ 9 ರಂದು ಬರ್ತಿದ್ದು, ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್
ಮಹೇಶ್ ಬಾಬು ಅಭಿನಯದ ಸರಿಲೇರು ನೀಕೇವರು ಮತ್ತು ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠಪುರಂಲ್ಲೋ ಚಿತ್ರಗಳು ಕ್ರಮವಾಗಿ ಜನವರಿ 11 ಮತ್ತು ಜನವರಿ 12 ರಂದು ಬಿಡುಗಡೆಯಾಗ್ತಿದೆ. ದರ್ಬಾರ್ ಅಬ್ಬರದ ಮುಂದೆ ಈ ಎರಡು ಚಿತ್ರಗಳಿಗೆ ಕರ್ನಾಟಕದಲ್ಲಿ ಚಿತ್ರಮಂದಿರ ಸಿಕ್ಕಿರುವುದು ಬಹಳ ಕಡಿಮೆ. ಆದರೂ, ಉಳಿದ ಚಿತ್ರಮಂದಿರಗಳನ್ನೆಲ್ಲಾ ಈ ಸಿನಿಮಾಗಳು ಬಾಚಿಕೊಂಡಿದೆ ಎನ್ನುವುದು ಗಮನಿಸಬೇಕು.

ಬಾಲಿವುಡ್ನಲ್ಲಿ ಚಪಾಕ್
ಮತ್ತೊಂದೆಡೆ ಹಿಂದಿ ಪ್ರೇಕ್ಷಕರಿಗಾಗಿ ದೀಪಿಕಾ ಪಡುಕೋಣೆ ನಟಿಸಿರುವ ಚಪಾಕ್ ಸಿನಿಮಾ ಬರ್ತಿದೆ. ಜನವರಿ 10 ರಂದು ಈ ಸಿನಿಮಾ ಥಿಯೇಟರ್ ಪ್ರವೇಶಿಸುತ್ತಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಚಪಾಕ್ ಸಿನಿಮಾದ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ಸಿಕ್ಕಿಲ್ಲ.

ಕನ್ನಡ ಸಿನಿಮಾಗಳು ಪ್ಲಾನ್ ಮಾಡಬೇಕು
ಒಂದೇ ವಾರದಲ್ಲಿ ಏಳು, ಏಂಟು, ಒಂಬತ್ತು ಚಿತ್ರಗಳು ಬರುತ್ತೆ. ಅದರ ಬದಲು ಇಂತಹ ಸಮಯದಲ್ಲಿ ಬಂದ್ರೆ ಚಿತ್ರತಂಡಕ್ಕೂ ಅನುಕೂಲವಾಗುತ್ತೆ. ಬೇರೆ ಭಾಷೆಯ ಚಿತ್ರಗಳು ಶೂಟಿಂಗ್ ಆರಂಭವಾಗುತ್ತಿದ್ದಂತೆ ರಿಲೀಸ್ ದಿನಾಂಕ ಘೋಷಿಸಿ, ಡೇಟ್ ಲಾಕ್ ಮಾಡ್ತಾರೆ. ಇಂತಹ ಸಂಸ್ಕೃತಿ ಕನ್ನಡದಲ್ಲೂ ಬಂದ್ರೆ ಉಳಿದ ಚಿತ್ರಗಳಿಗೆ ಸಹಕಾರಿಯಾಗುತ್ತೆ. ಒಟ್ನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಕನ್ನಡದ ಯಾವ ದೊಡ್ಡ ಸಿನಿಮಾನೂ ಬಿಡುಗಡೆಯಾಗುತ್ತಿಲ್ಲ ಎನ್ನುವುದು ಮಾತ್ರ ನಿರಾಸೆ ತಂದಿದೆ.


Click it and Unblock the Notifications











