ಬುಕ್ ಮೈ ಶೋ ದಂಧೆಯ ವಿರುದ್ಧ 'ಯುವರತ್ನ' ನಿರ್ದೇಶಕ, ನಿರ್ಮಾಪಕರ ಆಕ್ರೋಶ
ಬುಕ್ ಮೈ ಶೋ ವಿರುದ್ಧ ಆಗಾಗ ಕನ್ನಡ ಚಿತ್ರರಂಗ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ 'ಯುವರತ್ನ' ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
'ಯುವರತ್ನ' ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಬುಕ್ ಮೈ ಶೋ ನಲ್ಲಿ ನಡೆಯುತ್ತಿರುವ ದಂಧೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫೇಸ್ ಯೂಸರ್ ಖಾತೆ ತೆರೆದು ಮೋಸ ಮಾಡುವ ವ್ಯಕ್ತಿಗಳ ಬಗ್ಗೆ ಬುಕ್ ಮೈ ಶೋ ಗಮನಕ್ಕೆ ತಂದಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಹ ಬುಕ್ ಮೈ ಶೋ ಹಾಗೂ ಮಲ್ಟಿಪ್ಲೆಕ್ಸ್ ಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ದೊಡ್ಡ ಮಟ್ಟದ ವ್ಯಾಪಾರ ನಡೆಸುವ ನೀವು ಕನ್ನಡ ಸಿನಿಮಾಗಳಿಗೆ ಆದ್ಯತೆ ನೀಡಬೇಕು ಎಂದಿದ್ದಾರೆ.

ಫೇಕ್ ಯೂಸರ್ ಗಳ ವಿರುದ್ದ ಕಾರ್ತಿಕ್ ಕಿಡಿ
ಬುಕ್ ಮೈ ಶೋ ನಲ್ಲಿ ಸಿನಿಮಾ ನೋಡಿದ ಜನರು ಅದರ ಬಗ್ಗೆ ತಮ್ಮ ಅಭಿಪ್ರಾಯ ಬರೆದು ರೇಟಿಂಗ್ ನೀಡಬಹುದಾಗಿದೆ. ಆದರೆ, ಕೆಲವರು ತಮ್ಮದೆ ತಂಡ ಕಟ್ಟಿಕೊಂಡು, ಫೇಕ್ ಯೂಸರ್ ಖಾತೆ ತೆರೆದು 'ದಿಯಾ' ಸಿನಿಮಾಗೆ ಕಡಿಮೆ ರೇಟಿಂಗ್ ನೀಡುತ್ತಿದ್ದಾರೆ. ರೇಟಿಂಗ್ ಹೆಚ್ಚು ಮಾಡಲು ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನುವುದು ಕಾರ್ತಿಕ್ ಗೌಡ ಆರೋಪವಾಗಿದೆ.

ಬುಕ್ ಮೈ ಶೋ ಗಮನಕ್ಕೆ ತಂದ ಕಾರ್ತಿಕ್
ಹಣದ ಆಸೆಗೆ ಒಳ್ಳೆಯ ಸಿನಿಮಾಗಳಿಗೂ ಕಡಿಮೆ ರೇಟಿಂಗ್ ನೀಡಲಾಗುತ್ತಿದೆ ಎಂದು ಆರೋಪ ಮಾಡಿರುವ ಕಾರ್ತಿಕ್ ಗೌಡ ಕೆಲವು ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಫೇಕ್ ಯೂಸರ್ ಖಾತೆಗಳ ಬಗ್ಗೆ ಬುಕ್ ಮೈ ಶೋ ಗಮನಕ್ಕೆ ತಂದಿದ್ದಾರೆ. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆ ಹರಿಸುವಂತೆ ಮನವಿ ಮಾಡಿದ್ದಾರೆ.

ಸಂತೋಷ್ ಆನಂದ್ ರಾಮ್ ಟ್ವೀಟ್
''ಪಿವಿಆರ್, ಐನಾಕ್ಸ್, ಸಿನಿಪೊಲಿಸ್, ಬುಕ್ ಮೈ ಶೋ ಅಥವಾ ಯಾರೇ ಆಗಲಿ, ಮೊದಲು ಕನ್ನಡ ಸಿನಿಮಾಗೆ ಪ್ರೋತ್ಸಾಹ ನೀಡಬೇಕು. ನೀವು ಕರ್ನಾಟಕದಲ್ಲಿ ವ್ಯಾಪಾರ ಮಾಡುತ್ತೀರಿ. ಕರ್ನಾಟಕ ಬಿಟ್ಟರೆ ಬೇರೆ ಎಲ್ಲಿಯೂ ನಾವು ಕೊಡುವಷ್ಟು ಮಟ್ಟದ ಟಿಕೆಟ್ ಹಣವನ್ನು ಯಾರೂ ನೀಡುವುದಿಲ್ಲ. ಹಾಗಾಗಿ ಕನ್ನಡಕ್ಕೆ ಆದ್ಯತೆ ನೀಡಿ'' ಎಂದು ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದಾರೆ.

ಚಿತ್ರಮಂದಿರಗಳ ವಿರುದ್ಧ ಕೃಷ್ಣ ಬೇಸರ
ನಿನ್ನೆ ತಾನೇ ನಟ ಡಾರ್ಲಿಂಗ್ ಕೃಷ್ಣ ಕೂಡ ಚಿತ್ರಮಂದಿರಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ತಮ್ಮ ನಟನೆ ಹಾಗೂ ನಿರ್ದೇಶನದ 'ಲವ್ ಮಾಕ್ ಟೈಲ್' ಸಿನಿಮಾಗೆ ಬೆಂಗಳೂರಿನಲ್ಲಿ ಒಂದೇ ಒಂದು ಚಿತ್ರಮಂದಿರದಲ್ಲಿ ಉಳಿದಿದೆ. ಸಿನಿಮಾಗೆ ಒಳ್ಳೆಯ ಮಾತು ಇದ್ದರೂ, ಒಂದೇ ವಾರದಲ್ಲಿ ಚಿತ್ರಮಂದಿರದಿಂದ ಸಿನಿಮಾ ತೆಗೆದಿದ್ದಾರೆ ಎಂದು ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದರು.


Click it and Unblock the Notifications











