ಶಿವಕಾರ್ತಿಕೇಯನ್ ಜೊತೆ ಹೊಂಬಾಳೆ ಸಿನಿಮಾ ಸುಳಿವು ಸಿಕ್ತು; ನಿರ್ದೇಶಕ ಯಾರು ಗೊತ್ತಾ?
'ಕಾಂತಾರ- 1' ಬಳಿಕ ಹೊಂಬಾಳೆ ಫಿಲ್ಮ್ಸ್ ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. 'ರಿಚರ್ಡ್ ಆಂಟನಿ', 'ಸಲಾರ್- 2' ಹಾಗೂ 'ಕೆಜಿಎಫ್- 3' ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಆದರೆ ಯಾವುದೇ ಸಿನಿಮಾ ಚಿತ್ರೀಕರಣ ಶುರುವಾಗಿಲ್ಲ. ಸಿನಿಮಾ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್ ಅಂತ ಹೊಂಬಾಳೆ ಸಂಸ್ಥೆ ಸದಾ ಬ್ಯುಸಿಯಾಗಿ ಇರ್ತಿತ್ತು. ಆದರೆ ಈಗ ಸೈಲೆಂಟ್ ಆಗಿದೆ.
ಹೃತಿಕ್ ರೋಷನ್ ಜೊತೆಗೂ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಿನಿಮಾ ಘೋಷಿಸಿದೆ. ಆದರೆ ಸದ್ಯಕ್ಕೆ ಯಾವುದೇ ಸಿನಿಮಾ ಕೆಲಸಗಳು ಚಾಲ್ತಿಯಲ್ಲಿ ಇಲ್ಲ. 'ಯುವ' ಸಿನಿಮಾ ಬಳಿಕ ಸಂತೋಷ್ ಆನಂದ್ ರಾಮ್ ಕೂಡ ಯಾವುದೇ ಚಿತ್ರಕ್ಕೆ ಕೈ ಹಾಕಿಲ್ಲ. ಸುದೀಪ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಅದು ನಿಜವಾಗಲಿಲ್ಲ. ಈ ನಡುವೆ ಶಿವಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರದಲ್ಲಿ ಶಿವಕಾರ್ತಿಕೇಯನ್ ನಟಿಸುತ್ತಾರೆ. ಆ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡುತ್ತದೆ ಎನ್ನುವ ಚರ್ಚೆ ನಡೀತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇಂದು(ಫೆಬ್ರವರಿ 17) ನಟ ಶಿವಕಾರ್ತಿಕೇಯನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಇದನ್ನು ನೋಡಿ ಇಬ್ಬರ ಕಾಂಬಿನೇಷನ್ ಸಿನಿಮಾ ಖಚಿತ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.
'ಯುವ' ಸಿನಿಮಾ ಬಳಿಕ ಸಂತೋಷ್ ಆನಂದ್ ರಾಮ್ ಕಥೆ, ಚಿತ್ರಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದರು. ಅಂತಿಮವಾಗಿ ಶಿವಕಾರ್ತಿಕೇಯನ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಯಾವುದು ಎನ್ನುವ ಫೈನಲ್ ಆಗಿಲ್ಲ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಹರಿದಾಡಿತ್ತು. ಇದೀಗ ತಮಿಳು ನಟನಿಗೆ ಹೊಂಬಾಳೆ ಸಂಸ್ಥೆ ಹುಟ್ಟುಹಬ್ಬದ ಶುಭಾಶಯ ಕೋರಿರುವುದು ಕಾಂಬಿನೇಷನ್ ಬಗ್ಗೆ ಸುಳಿವು ಸಿಕ್ಕಂತಾಗಿದೆ.
ಸಂಕ್ರಾಂತಿ ಸಂಭ್ರಮದಲ್ಲಿ ಬಂದಿದ್ದ 'ಪರಾಶಕ್ತಿ' ಚಿತ್ರದಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದರು. ಇತ್ತೀಚೆಗೆ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಓಟಿಟಿಗೆ ಬಂದು ಸದ್ದು ಮಾಡ್ತಿದೆ. ಸುಧಾ ಕೊಂಗರ ನಿರ್ದೇಶನದ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಮಿಂಚಿದ್ದಾರೆ. ಡಾಲಿ ಧನಂಜಯ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮುಂದಿನ ತಿಂಗಳು 'ರಿಚರ್ಡ್ ಆಂಟನಿ' ಚಿತ್ರದ ಪ್ರೀ ಪ್ರೊಡಕ್ಷನ್ ಆರಂಭಿಸುವುದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಹೊಂಬಾಳೆ ಸಂಸ್ಥೆಯೇ ಈ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಲಾಗಿತ್ತು. 'ಕಾಂತಾರ- 1' ಬಳಿಕ ಬ್ಯಾನರ್ನಲ್ಲಿ 'ರಿಚರ್ಡ್ ಆಂಟನಿ' ಸಿನಿಮಾ ಶುರುವಾಗುತ್ತಾ ಕಾದು ನೋಡಬೇಕಿದೆ. ಈ ಚಿತ್ರವನ್ನು ಸ್ವತಃ ರಕ್ಷಿತ್ ಶೆಟ್ಟಿ ನಿರ್ಮಿಸುತ್ತಾರೆ ಎನ್ನುವ ಊಹಾಪೋಹ ಕೂಡ ಕೇಳಿಬರ್ತಿದೆ. ಎಲ್ಲದಕ್ಕೂ ಶೀಘ್ರದಲ್ಲೇ ತೆರೆ ಬೀಳಲಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಪ್ರಭಾಸ್ ನಟನೆಯ 'ಸಲಾರ್- 2' ಸಿನಿಮಾ ತಡವಾಗ್ತಿದೆ. ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಬೇರೆ ಬೇರೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದೇ ಇದಕ್ಕೆ ಕಾರಣ. ಪ್ರಭಾಸ್ ಜೊತೆ ಆದಷ್ಟು ಬೇಗ ಸಿನಿಮಾ ಮಾಡುವ ಪ್ರಯತ್ನದಲ್ಲಿ ಹೊಂಬಾಳೆ ಫಿಲ್ಮ್ಸ್. ಇನ್ನು ಶಿವಕಾರ್ತಿಕೇಯನ್ ಜೊತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮಾಡಲು ಪ್ರಯತ್ನ ನಡೀತಿದೆ. ಈ ಸಿನಿಮಾ ಮೂಲಕ ಸಂತೋಷ್ ಆನಂದ್ ರಾಮ್ ಬೇರೆ ಚಿತ್ರರಂಗಕ್ಕೂ ಪರಿಚಿತರಾಗಲಿದ್ದಾರೆ.
ಈಗಾಗಲೇ ಬೇರೆ ಚಿತ್ರರಂಗಗಳಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಆರಂಭಿಸಿದೆ. ತಮಿಳಿನಲ್ಲಿ 'ರಘುತಾತ', ತೆಲುಗಿನಲ್ಲಿ 'ಸಲಾರ್' ಹಾಗೂ ಮಲಯಾಳಂನಲ್ಲಿ 'ಧೂಮಂ' ಸಿನಿಮಾ ನಿರ್ಮಿಸಿ ಗೆದ್ದಿದೆ. ಶಿವಕಾರ್ತಿಕೇಯನ್ ಸಿನಿಮಾ ಮೂಲಕ ಮತ್ತೆ ಕಾಲಿವುಡ್ ಪ್ರವೇಶಿಸಲಿದೆ.


Click it and Unblock the Notifications











