ಶಿವಕಾರ್ತಿಕೇಯನ್ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್? ಹೊಂಬಾಳೆ ಬಂಡವಾಳ
'ಮಿಸ್ಟರ್ & ಮಿಸ್ಸೆಸ್ ರಾಮಾಚಾರಿ', 'ರಾಜಕುಮಾರ', 'ಯುವರತ್ನ', 'ರಾಘವೇಂದ್ರ ಸ್ಟೋರ್ಸ್' ಹಾಗೂ 'ಯುವ' ರೀತಿಯ ವಿಭಿನ್ನ ಸಿನಿಮಾಗಳನ್ನು ಕಟ್ಟಿಕೊಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್. 'ಯುವ' ಸಿನಿಮಾ ಬಂದು ಹೋಗಿ 2 ವರ್ಷ ಕಳೆದರೂ ಸಂತು ಹೊಸ ಸಿನಿಮಾ ಘೋಷಿಸಿಲ್ಲ.
ಸದ್ದಿಲ್ಲದೇ ಮತ್ತೊಂದು ಅದ್ಧೂರಿ ಚಿತ್ರಕ್ಕೆ ಸಂತು ಪ್ಲ್ಯಾನ್ ಮಾಡ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲೇ ಹೊಸ ಚಿತ್ರ ನಿರ್ದೇಶನಕ್ಕೆ ಮನಸ್ಸು ಮಾಡಿದ್ದಾರೆ. ಕಿಚ್ಚ ಸುದೀಪ್ ಕಾಂಬಿನೇಷನ್ನಲ್ಲಿ ಸಿನಿಮಾ ಮಾಡ್ತಾರೆ ಎನ್ನುವ ಊಹಾಪೋಹ ಕೇಳಿಬಂದಿತ್ತು. ಆದರೆ ಅದು ಸದ್ಯಕ್ಕಿಲ್ಲ. ಆದರೆ ಶೀಘ್ರದಲ್ಲೇ ತಮಿಳು ಸ್ಟಾರ್ ನಟನ ಜೊತೆ ಸಿನಿಮಾ ಮಾಡಲು ಸಂತು ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ನಡೀತಿದೆ. ಹಾಗಾಗಿ ಕಲಾವಿದರು, ತಂತ್ರಜ್ಞರು ಭಾಷೆಯ ಗಡಿಮೀರಿ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈಗಾಗಲೇ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ನಿರ್ಮಿಸಿದೆ. ಶೀಘ್ರದಲ್ಲೇ ಬಾಲಿವುಡ್ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. 'ರಘುತಾತ' ಬಳಿಕ ಮತ್ತೊಂದು ತಮಿಳು ಚಿತ್ರ ನಿರ್ಮಾಣಕ್ಕೆ ತಯಾರಿ ಶುರುವಾಗಿದೆ.
'ಯುವ' ಬಳಿಕ ಸಂತೋಷ್ ಯಾವುದೇ ಸಿನಿಮಾ ಶುರು ಮಾಡಿಲ್ಲ. ಆದರೆ ಕಥೆ, ಚಿತ್ರಕಥೆ ಬರೆಯುವ ಕೆಲಸದಲ್ಲಿ ಮಗ್ನರಾಗಿದ್ದರು. ಇದೀಗ ಸ್ಕ್ರಿಪ್ಟ್ ಫೈನಲ್ ಆಗಿದ್ದು ಸ್ಟಾರ್ಕಾಸ್ಟ್ ಕಡೆ ಮುಖ ಮಾಡಿದ್ದಾರೆ. ನಾಯಕ-ನಾಯಕಿಯ ಆಯ್ಕೆ ಆರಂಭಿಸಿದ್ದಾರೆ. ತಮಿಳು ನಟ ಶಿವಕಾರ್ತಿಕೇಯನ್ಗೆ ಸಂತು ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈಗಾಗಲೇ ಒಂದು ಹಂತದ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗ್ತಿದೆ.

ಸಂತು ಹೇಳಿರುವ ಕಥೆ ಕೇಳಿ ಶಿವಕಾರ್ತಿಕೇಯನ್ ಕೂಡ ನಟಿಸೋಕೆ ಆಸಕ್ತಿ ತೋರಿಸಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಶೀಘ್ರದಲ್ಲೇ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಶಿವಕಾರ್ತಿಕೇಯನ್ ನಟನೆಯ 'ಪರಾಶಕ್ತಿ' ಸಿನಿಮಾ ತೆರೆಕಂಡಿತ್ತು. ಸುಧಾ ಕೊಂಗರ ನಿರ್ದೇಶನದ ಚಿತ್ರದಲ್ಲಿ ಚೆಳಿಯನ್ ಎಂಬ ಪಾತ್ರದಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ.
60ರ ದಶಕದಲ್ಲಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ವಿರೋಧಿಸಿ ತಿರುಗಿ ಬಿದ್ದ ಇಬ್ಬರು ಸಹೋದರರ ಕಥೆ 'ಪರಾಶಕ್ತಿ' ಚಿತ್ರದಲ್ಲಿದೆ. ಶಿವಕಾರ್ತಿಕೇಯನ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. 'ಕಾಂತಾರ- 1' ಬಳಿಕ ಹೊಂಬಾಳೆ ಫಿಲ್ಮ್ಸ್ ಯಾವುದೇ ಹೊಸ ಸಿನಿಮಾ ಆರಂಭಿಸಿಲ್ಲ. ಈಗಾಗಲೇ ಕೆಲ ಸಿನಿಮಾಗಳನ್ನು ಘೋಷಣೆ ಮಾಡಿದ್ದರೆ ಯಾವುದೇ ಸಿನಿಮಾ ಚಿತ್ರೀಕರಣ ನಡೀತಿದೆ.
'ಸಲಾರ್- 2', 'ರಿಚರ್ಡ್ ಆಂಟನಿ' ಹಾಗೂ ಹೃತಿಕ್ ರೋಷನ್ ಜೊತೆ ಒಂದು ಸಿನಿಮಾ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ. ಸದ್ಯಕ್ಕೆ ಯಾವುದೂ ಆರಂಭವಾಗಿಲ್ಲ. ಸಂತೋಷ್ ಆನಂದ್ ರಾಮ್ ಹಾಗೂ ಶಿವಕಾರ್ತಿಕೇಯನ್ ಕಾಂಬಿನೇಷನ್ ಸಿನಿಮಾ ತಮಿಳಿನಲ್ಲಿ ನಿರ್ಮಾಣವಾಗುವ ಸಾಧ್ಯತೆಯಿದೆ. ಕನ್ನಡಕ್ಕೂ ಡಬ್ ಆಗಬಹುದು. ಕನ್ನಡ ಕಲಾವಿದರು ನಟಿಸೋ ಸಾಧ್ಯತೆಯಿದೆ.
ಸುದೀಪ್ ಹಾಗೂ ಸಂತೋಷ್ ಆನಂದ್ರಾಮ್ ಮುಂದಿನ ಚಿತ್ರಕ್ಕೆ ನಾನೇ ಮ್ಯೂಸಿಕ್ ಕಂಪೋಸ್ ಮಾಡ್ತಿನಿ ಎಂದು ಎಸ್. ತಮನ್ ಹೇಳಿದ್ದರು. ಆ ಸಿನಿಮಾ ಯಾವಾಗ ಶುರುವಾಗುತ್ತದೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. 'ಯುವ' ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಹಾಗಾಗಿ ಮುಂದಿನ ಚಿತ್ರದ ಬಗ್ಗೆ ಸಂತು ಬಹಳ ತಲೆ ಕೆಡಿಸಿಕೊಂಡಿದ್ದಾರೆ. ತಡವಾದರೂ ಪರವಾಗಿಲ್ಲ ಒಂದೊಳ್ಳೆ ಸಿನಿಮಾ ಮಾಡಬೇಕು ಎಂದು ಕಾಯುತ್ತಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್ನಲ್ಲಿ ಸಂತು 4 ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ. ಅದೇ ಬ್ಯಾನರ್ನಲ್ಲಿ 5ನೇ ಸಿನಿಮಾ ಮಾಡುವ ಪ್ರಯತ್ನ ಶುರುವಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಅಪ್ಡೇಟ್ ಸಿಗಲಿದೆ.


Click it and Unblock the Notifications











