ಪುತ್ತೂರು ಕಂಬಳದಲ್ಲಿ ಸಾನಿಯಾ ಐಯ್ಯರ್ ವಿವಾದ: ದೇವರ ಬಳಿ ದೂರು ನೀಡಿದ ಕಂಬಳ ಸಮಿತಿ!
ಪುತ್ತೂರಿನಲ್ಲಿ ನಡೆದ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳದಲ್ಲಿ ನಟಿ ಸಾನಿಯಾ ಅಯ್ಯರ್ ಗೆ ಕಿರುಕುಳ ವಿಚಾರವಾಗಿ ಅನಾವಶ್ಯಕವಾಗಿ ಕಂಬಳ ಸಮಿತಿಯನ್ನು ಗುರಿಮಾಡಲಾಗುತ್ತಿದೆ ಎಂದು ಪುತ್ತೂರು ಕಂಬಳ ಸಮಿತಿ ಆರೋಪಿಸಿದ್ದು ಈ ವಿಚಾರವಾಗಿ ಪುತ್ತೂರು ಸೀಮೆಯ ಹತ್ತೂರಿನ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಮೊರೆ ಹೋಗಿದ್ದಾರೆ.
ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸೇರಿದಂತೆ ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿ ಮಹಾಲಿಂಗೇಶ್ವರ ದೇವರ ಮೊರೆ ಹೋಗಿದೆ. ನಟಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಘಟನೆಗೆ ಕಂಬಳ ಸಮಿತಿಯನ್ನು ತಪ್ಪಿತಸ್ಥರನ್ನಾಗಿ ಮಾಡಲಾಗುತ್ತಿದೆ. ಘಟನೆಗೂ, ಸಮಿತಿಗೂ ಯಾವುದೇ ಸಂಬಂಧವಿಲ್ಲ. ಆದರೂ ಕಂಬಳ ಸಮಿತಿಯನ್ನು ದೂರಲಾಗಿದೆ. ಕೆಟ್ಟ ಶಬ್ಧ ಗಳಿಂದ ಕಂಬಳ ಸಮಿತಿಯನ್ನು ನಿಂದಿಸಲಾಗಿದೆ. ನಿಂದಿಸಿದವರನ್ನು ನೀನೇ ನೋಡಿಕೋ ಎಂದು ಮಹಾಲಿಂಗೇಶ್ವರ ನ ಬಳಿ ಕಂಬಳ ಸಮಿತಿ ಪ್ರಾರ್ಥನೆ ಮಾಡಿದೆ.
ಪ್ರಾರ್ಥನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ನಟಿ ಸಾನಿಯಾ ಕಂಬಳಕ್ಕೆ ಅತಿಥಿಯಾಗಿ ಬಂದಿದ್ದರು. ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಆಕೆ ಹಿಂದಿರುಗಿದ್ದಾರೆ. ಆದರೆ ಆಕೆ ಮತ್ತೆ ಕಂಬಳ ಗದ್ದೆಗೆ ಬಂದ ವಿಚಾರ ಸಮಿತಿಯ ಗಮನಕ್ಕೆ ಬಂದಿಲ್ಲ. ಯಾರೋ ಅವರೊಂದಿಗೆ ಅಸಭ್ಯವಾಗಿ ವರ್ತಿಸಿರುವುದಕ್ಕೆ ಕಂಬಳ ಸಮಿತಿಯನ್ನು ಗುರಿ ಮಾಡೋದು ತಪ್ಪು. ಈ ಕಾರಣಕ್ಕಾಗಿ ದೇವರ ಮುಂದೆಯೇ ನ್ಯಾಯ ಕೇಳಲು ಬಂದಿದ್ದೇವೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದ್ದಾರೆ.

ಸಾನಿಯಾ ದೂರು ನೀಡಲಿ, ನಾವು ಬೆಂಬಲಿಸುತ್ತೇವೆ: ಸಮಿತಿ
ಘಟನೆಯ ಬಗ್ಗೆ ಸಾನಿಯಾ ಪೋಲೀಸ್ ದೂರು ನೀಡಲಿ. ಅವರಿಗೆ ಬೇಕಾದ ಎಲ್ಲಾ ಸಹಾಯ ನಾವು ಮಾಡುತ್ತೇವೆ. ಇದೇ ಘಟನೆಯನ್ನು ಮುಂದಿಟ್ಟು ಕಂಬಳ ಸಮಿತಿಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ಕೆಲವು ಶಕ್ತಿಗಳು ಕೆಲಸ ಮಾಡುತ್ತಿದೆ. ಹಿಂದೂ,ಮುಸ್ಲಿಂ ರೂಪವನ್ನೂ ನೀಡಲಾಗುತ್ತಿದೆ. ಹೀಗೆ ಅಪಪ್ರಚಾರ ಮಾಡುವವರನ್ನು ದೇವರೇ ನೋಡಿಕೊಳ್ಳುತ್ತಾರೆ ಎಂದು ಶಕುಂತಲಾ ಶೆಟ್ಟಿ ಹೇಳಿದ್ದಾರೆ.

ಯಶಸ್ಸು ಸಹಿಲಾರದವರಿಂದ ಸುಳ್ಳು ಸುದ್ದಿ: ಸಮಿತಿ ಆರೋಪ
ಕಂಬಳ ನಡೆಯುವ ದೇವಮಾರು ಗದ್ದೆಯಲ್ಲಿ ಯಾರೂ ಯಾವ ಅನ್ಯಾಯವನ್ನೂ ಮಾಡಬಾರದು. ಅನ್ಯಾಯ ಮಾಡಿದವರಿಗೆ ಮಹಾಲಿಂಗೇಶ್ವರ ಕ್ಷೇಮ ನೀಡದೆ ಶಿಕ್ಷಿಸಿದ ಹಲವು ಜಲ್ವಂತ ಸಾಕ್ಷಿಗಳು ನಮ್ಮಲ್ಲಿ ಇವೆ. ಆದರೂ ಅಹಿತಕರ ಘಟನೆ ನಡೆಸಲು ಹುನ್ನಾರ ಎಬ್ಬಿಸಲಾಗಿದೆ. ಕಂಬಳ ಐತಿಹಾಸಿಕವಾಗಿ ಯಶಸ್ಸು ಕಂಡಿರೋದನ್ನು ಸಹಿಸಲಾಗದೇ ಕೆಲವರು ಪುಕಾರು ಎಬ್ಬಿಸುತ್ತಿದ್ದಾರೆ ಎಂದು ಶಂಕುತಲಾ ಶೆಟ್ಟಿ ದೂರಿದ್ದಾರೆ.

ಕಿರುಕುಳ ನೀಡಿದ್ದ ಯುವಕ
ನಡೆದಿದ್ದಿಷ್ಟು, ನಟಿ ಸಾನ್ಯಾ ಐಯ್ಯರ್, ಇತ್ತೀಚೆಗೆ ಪುತ್ತೂರಿನ ಕಂಬಳ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಸಾನ್ಯಾ ಐಯ್ಯರ್ ಭಾಷಣ ಮಾಡುವಾಗ ಯುವಕನೋರ್ವ ಕುಡಿದು ಕೆಟ್ಟದಾಗಿ ವರ್ತಿಸಿದ್ದ, 'ಸಾನ್ಯಾ ಐ ಲವ್ ಯೂ' ಎನ್ನುತ್ತಾ, ಕಿರುಚಾಡುತ್ತಾ ಸಭೆಯಲ್ಲಿ ಮುಜುಗರ ಉಂಟು ಮಾಡಿದ್ದ. ಹಾಗಿದ್ದರೂ ಸಹ ನಟಿ ಸಾನ್ಯಾ ಅದನ್ನು ಗಮನಕ್ಕೆ ತೆಗೆದುಕೊಳ್ಳದೆ, ಕಂಬಳ, ತುಳುನಾಡಿನ ಬಗ್ಗೆ, ತುಳು ಭಾಷೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಎಚ್ಚರಿಕೆ ನೀಡಿದ ಸಾನ್ಯಾ ಐಯ್ಯರ್
ಆದರೆ ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಮತ್ತೆ ಕಂಬಳ ನೋಡಲು ಗೆಳತಿಯೊಟ್ಟಿಗೆ ಸಾನ್ಯಾ ಮರಳಿದಾಗ ಸಾನ್ಯಾರನ್ನು ಮತ್ತೆ ಪೀಡಿಸಿದ ಯುವಕ ನಟಿಯ ಕೂದಲು ಹಿಡಿದು ಎಳೆದಿದ್ದಾನೆ, ಸಾನ್ಯಾ ವಿರೋಧ ವ್ಯಕ್ತಪಡಿಸಿದಾಗ, ಆಕೆಯ ಕಪಾಳಕ್ಕೆ ಹೊಡೆದಿದ್ದಾನೆ. ಆಗ ಅಲ್ಲಿಯೇ ಇದ್ದ ಕೆಲವರು ಯುವಕನನ್ನು ಎಳೆದು ಅವನಿಗೆ ಧರ್ಮದೇಟು ನೀಡಿದ್ದಾರೆ. ಘಟನೆ ಬಳಿಕ ಸಾನ್ಯಾ ಹಾಗೂ ಆಕೆಯ ಗೆಳೆತಿಯೊಬ್ಬರು ಘಟನೆ ಬಗ್ಗೆ ವೇದಿಕೆ ಮೇಲೆಯೇ ಆಯೋಜಕರೊಟ್ಟಿಗೆ ಏರಿದ ಧ್ವನಿಯಲ್ಲಿ ಈ ಬಗ್ಗೆ ಪ್ರಶ್ನೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಯೋಕರೊಬ್ಬರಿಗೆ ಬೆರಳು ತೋರಿಸಿ, ''ಸರ್, ಹೆಣ್ಣು ಮಕ್ಕಳ ಮೈ ಮುಟ್ಟಿದರೆ ಚೆನ್ನಾಗಿರಲ್ಲ'' ಎಂದು ಖಡಕ್ ಆಗಿ ಸಾನ್ಯಾ ಎಚ್ಚರಿಕೆ ನೀಡುತ್ತಿರುವ ವೀಡಿಯೋ ಸಹ ವೈರಲ್ ಆಗಿದೆ.


Click it and Unblock the Notifications











