Sapta Sagaradaache Ello: ಏನು ಬೇಕಾದ್ರೂ ಬರೀರಿ ಆದ್ರೆ ಅದನ್ನು ಮಾತ್ರ ಬಿಟ್ಟುಕೊಡಬೇಡಿ; ರಕ್ಷಿತ್, ರುಕ್ಮಿಣಿ ಮನವಿ!
ಕಳೆದ ವರ್ಷ ಚಾರ್ಲಿ 777 ಮೂಲಕ ಗೆದ್ದು ಬೀಗಿದ್ದ ನಟ ರಕ್ಷಿತ್ ಶೆಟ್ಟಿ ಆ ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನೂ ಸಹ ಪಡೆದಿದ್ದು ಸದ್ಯ ತಮ್ಮ ಮುಂದಿನ ಚಿತ್ರಗಳಲ್ಲಿ ನಿರತರಾಗಿದ್ದಾರೆ. ಚಾರ್ಲಿ 777 ಜತೆಗೆ ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಚಿತ್ರೀಕರಣದಲ್ಲೂ ಸಹ ಬ್ಯುಸಿಯಾಗಿದ್ದರು. ಈ ಚಿತ್ರದ ಚಿತ್ರೀಕರಣ ಚಿತ್ರ ಸೆಟ್ಟೇರಿದ ಬರೋಬ್ಬರಿ ಎರಡು ವರ್ಷಗಳ ಬಳಿಕ ಮುಕ್ತಾಯಗೊಂಡು ನಾಳೆ ( ಸೆಪ್ಟೆಂಬರ್ 1 ) ಬೆಳ್ಳಿ ತೆರೆಗೆ ಅಪ್ಪಳಿಸುತ್ತಿದೆ.
ಚಂದನವನದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ ಸೈಡ್ ಎ ನಾಳೆ ತೆರೆಗೆ ಬರಲಿದ್ದು, ಎರಡನೇ ಭಾಗ ಸೈಡ್ ಬಿ ಅಕ್ಟೋಬರ್ 20ರಂದು ಬಿಡುಗಡೆಯಾಗಲಿದೆ. ಹೀಗೆ ಎರಡೂ ಭಾಗಗಳ ಚಿತ್ರೀಕರಣವನ್ನು ಒಟ್ಟಿಗೆ ಮುಕ್ತಾಯಗೊಳಿಸಿಕೊಂಡಿರುವ ಸಪ್ತ ಸಾಗರದಾಚೆ ಎಲ್ಲೋ ಚಿತ್ರತಂಡ ನಿನ್ನೆ ( ಆಗಸ್ಟ್ 30 ) ಚಿತ್ರದ ಪ್ರೀಮಿಯರ್ ಪ್ರದರ್ಶನವನ್ನು ಆಯೋಜಿಸಿತ್ತು.

ಈ ವಿಶೇಷ ಪ್ರದರ್ಶನಕ್ಕೆ ಸೆಲೆಬ್ರಿಟಿಗಳು ಹಾಗೂ ಪತ್ರಕರರ್ತರು ತೆರಳಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರವನ್ನು ನೋಡಿದ್ದಾರೆ. ಇನ್ನು ಚಿತ್ರ ಮುಕ್ತಾಯಗೊಂಡ ಬಳಿಕ ಸಪ್ತ ಸಾಗರದಾಚೆ ಎಲ್ಲೋ ಚಿತ್ರತಂಡ ಪರದೆ ಮುಂದೆ ನಿಂತು ಶೋಗೆ ಬಂದಿದ್ದವರಲ್ಲಿ ವಿಶೇಷ ಮನವಿಯೊಂದನ್ನು ಮಾಡಿದೆ. ಹೌದು, ಸಿನಿಮಾ ಮುಗಿದ ಬಳಿಕ ಮಾತನಾಡಿದ ನಟ ರಕ್ಷಿತ್ ಶೆಟ್ಟಿ "ಚಿತ್ರ ಇಷ್ಟವಾದವರಿಗೂ ಧನ್ಯವಾದಗಳು ಹಾಗೂ ಚಿತ್ರ ಇಷ್ಟವಾಗದವರಿಗೂ ಧನ್ಯವಾದಗಳು. ವಿಮರ್ಶೆ ಬರಿಬೇಕಾದ್ರೆ ದಯವಿಟ್ಟು ಯಾರೂ ಸಹ ಸ್ಪಾಯ್ಲರ್ಸ್ಗಳನ್ನು ಬಿಟ್ಟುಕೊಡಬೇಡಿ ( ಕಥೆಗೆ ತಿರುವು ಕೊಡುವ ಅಂಶ ಅಥವಾ ಕಥೆಯಲ್ಲಿ ಬರುವ ಬಹುಮುಖ್ಯ ಸನ್ನಿವೇಶದ ಕಾರಣಗಳು ) ಏನು ಅನಿಸಿತೋ ಅದನ್ನೇ ಬರೆಯಿರಿ. ಆದರೆ ಸ್ಪಾಯಿಲರ್ ಇಲ್ಲದೇ ಇರುವ ಹಾಗೆ ಬರೆಯಿರಿ" ಎಂದು ರಕ್ಷಿತ್ ಶೆಟ್ಟಿ ಮನವಿ ಮಾಡಿಕೊಂಡರು.
ಇನ್ನು ರಕ್ಷಿತ್ ಶೆಟ್ಟಿ ಬಳಿಕ ಮಾತನಾಡಿದ ನಟಿ ರುಕ್ಮಿಣಿ ವಸಂತ್ ಸಹ ಅದೇ ಮನವಿಯನ್ನು ಮಾಡಿಕೊಂಡರು. "ಎಲ್ಲರಿಗೂ ಧನ್ಯವಾಗಳನ್ನು ತಿಳಿಸುವ ಬದಲು ಇನ್ನೇನು ಹೇಳಬೇಕೋ ಗೊತ್ತಾಗುತ್ತಿಲ್ಲ. ಯಾರೂ ಸಹ ಚಿತ್ರದ ಸ್ಪಾಯಿಲರ್ಗಳನ್ನು ಬಿಟ್ಟುಕೊಡಬೇಡಿ. ಎಲ್ಲರಿಗೂ ಚಿತ್ರ ಇಷ್ಟವಾಗಿದೆ ಎಂದು ಭಾವಿಸುತ್ತೇವೆ" ಎಂದು ರುಕ್ಮಿಣಿ ವಸಂತ್ ಮಾತನಾಡಿದರು.
ಸಪ್ತ ಸಾಗರದಾಚೆ ಒನ್ ಲೈನ್ ಸ್ಟೋರಿ:
ಬಡ ಮಧ್ಯಮ ವರ್ಗದ ಇಬ್ಬರು ಪ್ರೇಮಿಗಳು ಸುಂದರ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಾರೆ. ಸುಮುದ್ರದ ತೀರದಲ್ಲಿ ಸುಂದರವಾದ ಮನೆ ಕಟ್ಟಿಕೊಳ್ಳಬೇಕು ಅನ್ನೋ ಆಸೆ. ಆ ಕನಸಿಗೆ ಅದರದ್ದೇ ಆದ ಬೆಲೆ ಇರುತ್ತೆ. ಅದನ್ನು ಸಂಪಾಧಿಸಲು ಹೋದ ಹೀರೊ ಸಂಕಷ್ಟಕ್ಕೆ ಸಿಲುಕುತ್ತಾನೆ. ಜೈಲು, ಪ್ರೀತಿ, ರೋಧನೆ, ವೇದನೆ, ಭಾವುಕತೆ ಪ್ರೇಮಿಗಳಿಬ್ಬ ಬಾಳಲ್ಲಿ ಹೆಣೆದುಕೊಳ್ಳುತ್ತಾ ಸಾಗುತ್ತೆ. ಮುಂದೇನಾಗುತ್ತೆ? ಪ್ರೇಮಿಗಳ ಪಾಡೇನು? ಈ ಕಥೆಯ ವಿಲನ್ ಯಾರು? ಇವೆಲ್ಲವೂ ಕನಸಿನ ಬೆಲೆ ಕಟ್ಟಲು ಹೊರ ಪ್ರೇಮಿಗಳಿಬ್ಬರ ಪ್ರೇಮಕಥೆಯ ಬಹುಮುಖ್ಯ ಅಂಗ.


Click it and Unblock the Notifications











