Rakshit Shetty: ಮುಗಿಯದ ಹೋರಾಟದಲ್ಲಿ ಸಿಲುಕಿ ಕೊರಗಿದ ರಕ್ಷಿತ್ ಶೆಟ್ಟಿ; ಇದು ನೋವಿನ ಯಾನ
ಕಳೆದ ವರ್ಷ ಚಾರ್ಲಿ 777 ಮೂಲಕ ಗೆದ್ದು ಬೀಗಿದ್ದ ನಟ ರಕ್ಷಿತ್ ಶೆಟ್ಟಿ ಸದ್ಯ ತಮ್ಮ ಮುಂದಿನ ಚಿತ್ರಗಳಲ್ಲಿ ನಿರತರಾಗಿದ್ದಾರೆ. ಚಾರ್ಲಿ 777 ಜತೆಗೆ ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಚಿತ್ರೀಕರಣದಲ್ಲೂ ಸಹ ಬ್ಯುಸಿಯಾಗಿದ್ದರು. ಈ ಚಿತ್ರದ ಚಿತ್ರೀಕರಣ ಚಿತ್ರ ಸೆಟ್ಟೇರಿದ ಬರೋಬ್ಬರಿ ಎರಡು ವರ್ಷಗಳ ಬಳಿಕ ಮುಕ್ತಾಯಗೊಂಡಿದ್ದು, ಇದೀಗ ಬಿಡುಗಡೆಗೆ ತಯಾರಾಗಿದೆ.
ಹೌದು, ಚಂದನವನದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ ಸೈಡ್ ಎ ಸೆಪ್ಟೆಂಬರ್ 1ರಂದು ತೆರೆಗೆ ಬರಲಿದ್ದು, ಎರಡನೇ ಭಾಗ ಸೈಡ್ ಬಿ ಅಕ್ಟೋಬರ್ 20ರಂದು ಬಿಡುಗಡೆಯಾಗಲಿದೆ. ಹೀಗೆ ಎರಡೂ ಭಾಗಗಳ ಚಿತ್ರೀಕರಣವನ್ನು ಒಟ್ಟಿಗೆ ಮುಕ್ತಾಯಗೊಳಿಸಿಕೊಂಡಿರುವ ಸಪ್ತ ಸಾಗರದಾಚೆ ಎಲ್ಲೋ ಚಿತ್ರತಂಡ ಇದೀಗ ಮೊದಲ ಭಾಗದ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಗಳನ್ನು ಆರಂಭಿಸಿದೆ.

ಹೌದು, ಇಂದು ( ಜುಲೈ 20 ) ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಚಿತ್ರದ ಮೊದಲ ಹಾಡು ಬಿಡುಗಡೆಗೊಂಡಿದೆ. 'ಹೋರಾಟ' ಎಂಬ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆಯಾಗಿರುವ ಸಪ್ತ ಸಾಗರದಾಚೆ ಎಲ್ಲೋ ಫಸ್ಟ್ ಸಿಂಗಲ್ ಪರಮ್ವ್ಹಾ ಮ್ಯೂಸಿಕ್ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಂಡಿದೆ. ಈ ಹಾಡಿನಲ್ಲಿ ನಾಯಕ ಪ್ರೀತಿ ಹಾಗೂ ಬದುಕಿನಲ್ಲಿ ಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಮಾಯೆ ಮಾಯೆ ಅರ್ಧ ಛಾಯೆ.. ಹೋರಾಟ ಹೋರಾಟ ಮುಗಿಯೋವರೆಗೆ ಈ ಹೋರಾಟ.. ಎಂಬ ಸಾಲುಗಳೊಂದಿಗೆ ಆರಂಭವಾಗುವ ಈ ಹಾಡು ಸ್ಯಾಡ್ ಸಾಂಗ್ ಪ್ರಿಯರಿಗೆ ಖಂಡಿತ ಇಷ್ಟವಾಗಲಿದೆ.
ಎಂಸಿ ಬಿಜ್ಜು ಹಾಗೂ ಕಿರಣ್ ಕಾವೇರಪ್ಪ ಬರೆದಿರುವ ನೋವಿನ ಸಾಲುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ಈ ಹಾಡೂ ಸಹ ಪಕ್ಕಾ ಚರಣ್ ರಾಜ್ ಫ್ಲೇವರ್ನಲ್ಲಿದೆ. ವಿಭಿನ್ನ ಸಂಗೀತ ಹಾಗೂ ರಾಗ ಕೇಳುಗರ ಗಮನ ಸೆಳೆಯುವಂತಿದೆ. ಇನ್ನು ಕನ್ನಡದ ರ್ಯಾಪರ್ ಎಂಸಿ ಬಿಜ್ಜು ಈ ಹಾಡಿಗೆ ಸಾಹಿತ್ಯ ಬರೆಯುವುದು ಮಾತ್ರವಲ್ಲದೇ ದನಿಯನ್ನೂ ಸಹ ನೀಡಿದ್ದಾರೆ.
ಈ ಹಿಂದೆ ಇದೇ ರೀತಿ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ನಾಗಾರ್ಜುನ ಶರ್ಮಾ ಬರೆದಿದ್ದ ಹಾಡನ್ನು ರ್ಯಾಪರ್ ರಾಹುಲ್ ಡಿಟ್ಟೋ ಜತೆ ಕೈಜೋಡಿಸಿ ರ್ಯಾಪ್ ಮಾಡಿಸಿದ್ದ ಚರಣ್ ರಾಜ್ ಇಲ್ಲಿಯೂ ಸಹ ಎಂಸಿ ಬಿಜ್ಜು ಜತೆ ಸೇರಿ ರ್ಯಾಪ್ ಮಾಡಿಸಿದ್ದಾರೆ. ಎಂಸಿ ಬಿಜ್ಜು ಜತೆ ಕೀರ್ತನ್ ಹೊಳ್ಳ ಸಹ ಈ ಹಾಡಿಗೆ ದನಿ ನೀಡಿದ್ದು, ಹಾಡು ನಿಧಾನವಾಗಿ ಕೇಳುಗರಿಗೆ ಇಷ್ಟವಾಗುವ ಹಾಗಿದೆ. ಇನ್ನು ಹಾಡಿನ ಸಾಹಿತ್ಯ ವಿನೂತನವಾಗಿದ್ದು, ಯೂತ್ಸ್ಗೆ ಖಚಿತವಾಗಿ ಈ ಹಾಡು ಇಷ್ಟವಾಗಲಿದೆ.
ಇನ್ನು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಾಗೂ ಕವಲುದಾರಿ ಚಿತ್ರಗಳಿಗೆ ಆಕ್ಷನ್ ಕಟ್ ಹೇಳುವ ಮೂಲಕ ಗೆದ್ದಿದ್ದ ನಿರ್ದೇಶಕ ಹೇಮಂತ್ ರಾವ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ನಿರ್ದೇಶಕನಾಗಿ ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ರಕ್ಷಿತ್ ಶೆಟ್ಟಿಗೆ ಮೊದಲ ಭಾಗದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾದರೆ, ಎರಡನೇ ಭಾಗದಲ್ಲಿ ಚೈತ್ರಾ ಜೆ ಆಚಾರ್ ನಾಯಕಿಯಾಗಿ ನಟಿಸಿದ್ದಾರೆ.


Click it and Unblock the Notifications











