'ಸಪ್ತ ಸಾಗರದಾಚೆ ಎಲ್ಲೋ' ಬಿಡುಗಡೆ ದಿನಾಂಕ ಬಹಿರಂಗ; 50 ದಿನಗಳ ಅಂತರದಲ್ಲಿ ಎರಡೂ ಪಾರ್ಟ್ ರಿಲೀಸ್!
ಈ ವರ್ಷ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಚಿತ್ರಗಳ ಪೈಕಿ ಕನ್ನಡದ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಸಹ ಒಂದು. ಕಳೆದ ಎರಡು ವರ್ಷಗಳಿಂದ ವಿವಿಧ ಕಾರಣಗಳಿಂದ ಸದ್ದು ಮಾಡುತ್ತಿದ್ದ ಈ ಚಿತ್ರ ಯಾವಾಗ ತೆರೆಗೆ ಬರಲಿದೆ ಎಂಬ ನಿಖರ ಉತ್ತರ ಮಾತ್ರ ಸಿಗುತ್ತಿರಲಿಲ್ಲ.
ಕಳೆದ ವರ್ಷ 777 ಚಾರ್ಲಿ ಮೂಲಕ ದೇಶದ ಸಿನಿ ರಸಿಕರ ಮನ ಗೆದ್ದಿದ್ದ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಹಾಗೂ ಪ್ರಶ್ನೆ ಸಿನಿ ರಸಿಕರಲ್ಲಿ ಮೂಡಿತ್ತು.

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಾಗೂ ಕವಲುದಾರಿ ರೀತಿಯ ಎರಡು ವಿಭಿನ್ನ ಕಥಾಹಂದರವಿರುವ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ಹೇಮಂತ್ ಎಂ ರಾವ್ ನಿರ್ದೇಶನದ ಚಿತ್ರ ಎಂಬ ಅಂಶ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗುವಲ್ಲಿ ಪ್ರಭಾವ ಬೀರಿತ್ತು.
ನಾಯಕನಾಗಿ ರಕ್ಷಿತ್ ಶೆಟ್ಟಿ ನಟಿಸಿದ್ದರೆ, ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಬೀರ್ಬಲ್ ಬೆಡಗಿ ರುಕ್ಮಣಿ ವಸಂತ್ ಹಾಗೂ ಚೈತ್ರಾ ಆಚಾರ್ ನಾಯಕಿಯರಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪೋಸ್ಟರ್ ಹಾಗೂ ಟೀಸರ್ ಗಮನಿಸಿದರೆ ಚಿತ್ರ ಒಂದು ಪ್ರೇಮಕಥೆ ಎಂಬುದು ತಿಳಿದುಬಂದಿತ್ತು.
ಕೆಲ ದಿನಗಳ ಹಿಂದಷ್ಟೇ ತಮ್ಮ ಚಿತ್ರ ಎರಡು ಭಾಗಗಳಾಗಿ ಬಿಡುಗಡೆಗೊಳ್ಳಲಿದೆ ಎಂಬುದನ್ನು ಘೋಷಿಸಿದ್ದ ಚಿತ್ರತಂಡ ಇಂದು ( ಜೂನ್ 15 ) ಆ ಎರಡು ಭಾಗಗಳ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಹೌದು, ನಾಯಕ ರಕ್ಷಿತ್ ಶೆಟ್ಟಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, "ಅವನ ಮೊದಲು ಹಾಗೂ ಅವರ ಉಳಿದ ಕಥೆ.. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಸೆಪ್ಟೆಂಬರ್ 1ರಂದು ಬಿಡುಗಡೆಯಾಗಲಿದೆ ಹಾಗೂ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಅಕ್ಟೋಬರ್ 20ರಂದು ಬಿಡುಗಡೆಯಾಗಲಿದೆ. ದಿನಾಂಕವನ್ನು ಗುರುತು ಮಾಡಿಟ್ಟುಕೊಳ್ಳಿ" ಎಂದು ಬರೆದುಕೊಂಡಿದ್ದಾರೆ.
ಹೀಗೆ ಸಪ್ತ ಸಾಗರದಾಚೆ ಎಲ್ಲೋ ಮೊದಲ ಭಾಗ ಸೆಪ್ಟೆಂಬರ್ 1ರಂದು ಬಿಡುಗಡೆಯಾಗಲಿದ್ದು, ಎರಡನೇ ಭಾಗ ಅಕ್ಟೋಬರ್ 20ರಂದು ತೆರೆಗೆ ಬರಲಿದೆ. ಈ ಎರಡೂ ಭಾಗಗಳ ನಡುವೆ 50ದಿನಗಳ ಅಂತರವಿದೆ. ಸಿನಿ ರಸಿಕರಿಗೆ ಇದೊಂದು ಹೊಸ ಅನುಭವವೆಂದೇ ಹೇಳಬಹುದಾಗಿದೆ. ಹೌದು, ಮೊದಲ ಭಾಗವನ್ನು ವೀಕ್ಷಿಸಿದ ಎರಡು - ಮೂರು ವರ್ಷಗಳ ಬಳಿಕ ಆ ಚಿತ್ರದ ಎರಡನೇ ಭಾಗವನ್ನು ನೋಡಿ ಅಭ್ಯಾಸವಿರುವ ಚಿತ್ರ ಪ್ರೇಮಿಗಳು ಸಪ್ತ ಸಾಗರದಾಚೆ ಎಲ್ಲೋ ಚಿತ್ರವನ್ನು 50 ದಿನಗಳ ಅಂತರದಲ್ಲಿ ವೀಕ್ಷಿಸಬಹುದಾಗಿದ್ದು, ಈ ಪ್ರಯೋಗ ಎಷ್ಟರ ಮಟ್ಟಿಗೆ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಈ ಚಿತ್ರಕ್ಕೆ ಪರಂವಃ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದು, ಇದೀಗ ಕೆವಿಎನ್ ಪ್ರೊಡಕ್ಷನ್ಸ್ ಬಿಡುಗಡೆ ಹಾಗೂ ಹಂಚಿಕೆಯಲ್ಲಿ ಕೈಜೋಡಿಸಿದೆ. ಇನ್ನು ಚಿತ್ರದ ಸ್ಟಿಲ್ ಫೋಟೊಗಳನ್ನು ಗಮನಿಸಿದರೆ ರಕ್ಷಿತ್ ಶೆಟ್ಟಿ ಮೊದಲಿಗೆ ರುಕ್ಮಿಣಿ ವಸಂತ್ ಜತೆ ಪ್ರೀತಿಯಲ್ಲಿ ಬಿದ್ದು ಯಾವುದೋ ಕಾರಣದಿಂದ ಜೈಲಿಗೆ ಹೋದ ಕಾರಣ ಅವರಿಬ್ಬರ ಪ್ರೀತಿ ಮುರಿದು ಬಿದ್ದು ಬಳಿಕ ಹೊರಬಂದ ನಂತರ ಚೈತ್ರಾ ಆಚಾರ್ ಜತೆ ಪ್ರೀತಿಯಲ್ಲಿ ಬೀಳಲಿದ್ದಾರೆ ಎಂಬುದನ್ನು ಊಹಿಸಬಹುದಾಗಿದೆ. ಇದು ಮೇಲ್ನೋಟಕ್ಕೆ ಕಂಡು ಬರುತ್ತಿರುವ ಕಥೆಯಾಗಿದ್ದು, ಹೇಮಂತ್ ಎಂ ರಾವ್ ಯಾವ ರೀತಿಯ ಸ್ಕ್ರೀನ್ಪ್ಲೇ ಬರೆದು ಸಿನಿ ರಸಿಕರನ್ನು ರಂಜಿಸುತ್ತಾರೆ ಎಂಬುದು ಚಿತ್ರಕ್ಕಾಗಿ ಕಾಯುವಂತೆ ಮಾಡಿದೆ.


Click it and Unblock the Notifications











