ಟಾಲಿವುಡ್ನತ್ತ ಸಪ್ತಮಿಗೌಡ ; ಮೊದಲ ತೆಲುಗು ಚಿತ್ರಕ್ಕೆ ಮಾಡಿಕೊಂಡ ತಯಾರಿ ಏನು..?
ಕೆಲ ನಟಿಯರು ಇರೋ ಉದ್ಯಮದಲ್ಲಿ ಏನಾದರೂ ಸಾಧಿಸಿ ಬೇರೆ ಭಾಷೆಯತ್ತ ಮುಖ ಮಾಡ್ತಾರೆ. ಇನ್ನು ಕೆಲ ನಟಿಯರು ಏನಾದರೂ ಸಾಧಿಸಲೆಬೇಕು ಅಂತ ಪಕ್ಕದ ಮನೆಗಳತ್ತ ಮುಖ ಮಾಡ್ತಾರೆ. ಇದಕ್ಕೆ ಸಪ್ತಮಿಗೌಡ ಅತ್ಯುತ್ತಮ ಉದಾಹರಣೆ.
ಹೌದು. ಕಾಂತಾರ ಮೂಲಕ ಭಾಷೆಯ ಭೇದ ಭಾವ ಇಲ್ಲದೇ, ಎಲ್ಲ ವರ್ಗದ ಜನರ ಹೃದಯವನ್ನ ಗೆದ್ದ ಸಪ್ತಮಿಗೌಡ ಯುವದಲ್ಲಿಯೂ ತಮ್ಮ ಛಾಪು ಮೂಡಿಸಿದರು. ಮೋಡಿಯನ್ನ ಮಾಡಿದರು. ಇವತ್ತು ಕೂಡ ಯುವ ಚಿತ್ರದಲ್ಲಿ ಸಪ್ತಮಿ ಅವರ ಸಹಜಾಭಿನಯವನ್ನ ಅನೇಕರು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದರ ನಡುವೆ ಸಪ್ತಮಿ ಗೌಡ ದಕ್ಷಿಣದ ಬೇರೆ ರಾಜ್ಯಗಳತ್ತ ದಂಡೆತ್ತಿ ಹೊರಟಿದ್ದಾರೆ.

ಕಳೆದ ನಾಲ್ಕು ವರ್ಷದಲ್ಲಿ , ಪಾಪ್ ಕಾರ್ನ್ ಮಂಕಿ ಟೈಗರ್.. ಕಾಂತಾರ.. ಯುವ.. ಹೀಗೆ ಮೂರು ಕನ್ನಡ ಸಿನಿಮಾಗಳನ್ನ ಮಾಡಿರುವ ಸಪ್ತಮಿ ಗೌಡ, ಇದೀಗ ಆಂಧ್ರಪ್ರದೇಶದ ಪ್ರವಾಸ ಕೈಗೊಂಡಿದ್ದಾರೆ. ಮೊದಲ ತೆಲುಗು ಚಿತ್ರವನ್ನ ಒಪ್ಪಿಕೊಂಡಿದ್ದಾರೆ.
ನಿಮಗೆ ಗೊತ್ತಿರಲಿ.. ಅಸಲಿಗೆ ಸಪ್ತಮಿಗೌಡ, ತೆಲುಗು ಚಿತ್ರರಂಗಕ್ಕೆ ಕಾಲಿಡ್ತಾರೆ ಅನ್ನುವ ಸುದ್ದಿ ಕಳೆದ ವರ್ಷಾಂತ್ಯದಲ್ಲಿಯೇ ಕೇಳಿ ಬಂದಿತ್ತು. ಜಯಂ ಹೀರೋ ನಿತಿನ್ ಅವರ ಮುಂದಿನ ಚಿತ್ರ ತಮ್ಮುಡು ದಲ್ಲಿ ಸಪ್ತಮಿ ಗೌಡ ಹೀರೋಯಿನ್ ಎಂಬ ವಿಚಾರ ಜಗಜ್ಜಾಹೀರಾಗಿತ್ತು. ಆದರೆ ಆ ಸುದ್ದಿಯ ಮೇಲೆ ಸಪ್ತಮಿ ಗೌಡ ಈಗ ಅಧಿಕೃತವಾದ ಮೊಹರು ಒತ್ತಿದ್ದಾರೆ. ತಮ್ಮುಡು
ಚಿತ್ರದ ಬಗ್ಗೆ.. ತಮ್ಮ ಪಾತ್ರದ ಬಗ್ಗೆ..ಕೆಲವೊಂದಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ತಮ್ಮುಡು ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು, ಸಪ್ತಮಿ ಗೌಡ ತೂಕ ಇಳಿಸಿಕೊಂಡಿದ್ದಾರೆ. ಸ್ಲಿಮ್ ಆಗಿದ್ದಾರೆ. ಇನ್ನೂ ರೇಸ್ ಕೋರ್ಸ್ ಮೈದಾನದಲ್ಲಿನ ಜಾಕಿಗಳಿಗೂ ಸೆಡ್ಡು ಹೊಡೆಯುವಂತೆ ಸಪ್ತಮಿ ಗೌಡ ಈ ಚಿತ್ರಕ್ಕೆ ಕುದುರೆ ಸವಾರಿಯನ್ನ ಕಲಿತಿದ್ದಾರೆ.

ಇನ್ನೂ ತಮ್ಮ ಮೊದಲ ತೆಲುಗು ಚಿತ್ರದಲ್ಲಿಯೇ ನಿತಿನ್ ಅವರಂತಹ ಪ್ರತಿಭಾವಂತ ನಟನ ಜೊತೆ ತೆರೆಹಂಚಿಕೊಳ್ಳುತ್ತಿರುವುದಕ್ಕೆ ಸಪ್ತಮಿಗೌಡ ಅವರಿಗೆ ಸಿಕ್ಕಾಪಟ್ಟೆ ಖುಷಿ ಇದೆ. ಸೋನೆ ಪೆ ಸುಹಾಗ ಅನ್ನುವಂತೆ ವಕೀಲ್ ಸಾಬ್ ಅಂತಹ ಚಿತ್ರವನ್ನ ನಿರ್ದೇಶಿಸಿರುವ ವೇಣು ಶ್ರೀರಾಮ್ ಈ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಟಾಲಿವುಡ್ನ ಖ್ಯಾತ ನಿರ್ಮಾಪಕ ದಿಲ್ ರಾಜು ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ಸಪ್ತಮಿ ಗೌಡ ಸದ್ಯಕ್ಕೆ ಕ್ಲೌಡ್ ನೈನ್ ನಲ್ಲಿದ್ದಾರೆ.
ಒಟ್ನಲ್ಲಿ ಕನ್ನಡದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ, ಕನ್ನಡಿಗರ ಮನಗೆದ್ದ ಸಪ್ತಮಿ ಗೌಡ ಈಗ ಬಾಲಿವುಡ್ ನಂತರ ಟಾಲಿವುಡ್ ಕಡೆ ಹೊರಟಿದ್ದಾರೆ. ರಶ್ಮಿಕಾ ಮಂದಣ್ಣ.. ಶ್ರೀಲೀಲಾ ಅವರಂತೆಯೇ ಆಂಧ್ರದ ಜನ ಸಪ್ತಮಿ ಗೌಡ ಅವರನ್ನ ಅಪ್ಪಿ ಒಪ್ಪಿಕೊಳ್ಳಲಿ.. ಆದರೆ.. ಆ ನಂತರ ಸಪ್ತಮಿ ಗೌಡ ಕನ್ನಡ ಚಿತ್ರರಂಗವನ್ನ ಮರೆಯದಿರಲಿ.. ಕನ್ನಡವನ್ನ ಕಡೆಗಣಿಸದೇ ಇರಲಿ.. ಅನ್ನುವುದು ಸಪ್ತಮಿ ಗೌಡ ಅವರ ಅಭಿಮಾನಿಗಳ ಮನದ ಆಶಯ


Click it and Unblock the Notifications











