ಸಾಯಿ ಪಲ್ಲವಿ ವಕೇಶನ್ ಫೋಟೊಗಳನ್ನು ಟು ಪೀಸ್ ಹಾಕ್ಕೊಂಡಂಗೆ ಮಾಡಿದ್ರು; ಸಪ್ತಮಿ ಗೌಡ ಗರಂ
ಸಾರ್ವಜನಿಕ ಸ್ಥಳಗಳಲ್ಲಿ ನಟಿಯರು ಬಂದಾಗ ಪಾಪರಾಜಿಗಳು ಅಸಭ್ಯವಾಗಿ ವಿಡಿಯೋ/ಫೋಟೋ ಶೂಟ್ ಮಾಡುವುದು, ದೇಹದ ಭಾಗಗಳ ಮೇಲೆ ಅನವಶ್ಯಕವಾಗಿ ಜೂಮ್ ಮಾಡುವುದರ ಬಗ್ಗೆ ನಟಿ ಸಪ್ತಮಿ ಗೌಡ ದನಿ ಎತ್ತಿದ್ದಾರೆ. ಇತ್ತೀಚೆಗೆ ಈ ಬಗ್ಗೆ ಅಭಿಯಾನ ಮಾಡಿದ್ದರು. ಶಿವರಾಜ್ಕುಮಾರ್, ರಮ್ಯಾ, ರಕ್ಷಿತಾ ಪ್ರೇಮ್, ಯುವ ರಾಜ್ಕುಮಾರ್ ಸೇರಿದಂತೆ ಸಾಕಷ್ಟು ಜನ ಇದಕ್ಕೆ ದನಿಗೂಡಿಸಿದ್ದರು.
ಅಸಭ್ಯವಾಗಿ ವಿಡಿಯೋ ಚಿತ್ರೀಕರಿಸುವ ಛಾಯಾಗ್ರಾಹಕರು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಬಗ್ಗೆ ಸಪ್ತಮಿ ಗೌಡ ಕೆಂಡಾಮಂಡಲವಾಗಿದ್ದರು. ತಮ್ಮ ವಿಚಾರದಲ್ಲೇ ಈ ರೀತಿ ಆದಾಗ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ Kadakk Talks ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಪ್ತಮಿ ಗೌಡ ಮಾತನಾಡಿದ್ದಾರೆ. ಈ ಬಗ್ಗೆ ದನಿ ಎತ್ತಿದಾಗ ಕೆಲವರು ಅದಕ್ಕೆ ನೆಗೆಟಿವ್ ಕಾಮೆಂಟ್ ಮಾಡಿದ್ದರು. ಸೀರೆ ಉಟ್ಟು ಬಂದರೆ ಹಿಂಗೆಲ್ಲಾ ಆಗಲ್ಲ ಎಂದಿದ್ದರು. ಸೀರೆ ಉಟ್ಟು ಬಂದಾಗಲೇ ಇಂತಹ ಅನುಭವ ಆಗಿತ್ತು ಎಂದು ಸಪ್ತಮಿ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಸಾಯಿ ಪಲ್ಲವಿ ಅವರನ್ನು ನೋಡಿ, ಯಾವಾಗಲೂ ಸೀರೆ ಉಟ್ಟು ಓಡಾಡುತ್ತಾರೆ. ಆ ರೀತಿ ಬಂದರೆ ಯಾರು ಕೆಟ್ಟದಾಗ ವೀಡಿಯೋ ಮಾಡಲ್ಲ ಎಂದು ನೈತಿಕ ಪೊಲೀಸ್ಗಿರಿ ಮಾಡುವಂತಹ ಕಾಮೆಂಟ್ ಹಾಕುವವರ ಬಗ್ಗೆ ಸಪ್ತಮಿ ಗೌಡ ಪ್ರತಿಕ್ರಿಯಿಸಿದ್ದಾರೆ. ಇದೇ ಸಾಯಿ ಪಲ್ಲವಿ ಅವರ ವಕೇಶನ್ ಫೋಟೊಗಳನ್ನು ಎಐ ಬಳಸಿ ಕೆಟ್ಟದಾಗಿ ಬಿಂಬಿಸಿದ್ದರು. ಅದಕ್ಕೆ ಏನು ಹೇಳ್ತೀರಾ? ಎಂದು ಸಪ್ತಮಿ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಸಾಯಿ ಪಲ್ಲವಿ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ವಕೇಶನ್ ಫೋಟೊಗಳನ್ನು ಹಂಚಿಕೊಂಡಿದ್ರು.. ಆ ಎಲ್ಲಾ ಫೋಟೊಗಳನ್ನು ಎಐ ಬಳಸಿ, ಆಕೆ ಟೂ ಪೀಸ್ ಸ್ವಿಮ್ಮಿಂಗ್ ಕಾಸ್ಟ್ಯೂಮ್ ಹಾಕಿಕೊಂಡಂತೆ ಚಿತ್ರಿಸಿದ್ರು.. ಇದಕ್ಕೆ ಏನಂತೀರಾ? ನಿಮ್ಮ ಮನಸ್ಸು ಒಳ್ಳೆಯದಿದ್ರೆ, ಎಲ್ಲವೂ ಸರಿಯಾಗಿ ಇರುತ್ತೆ.. ಈ ಶತಮಾನದಲ್ಲಿ ನೈತಿಕ ಪೊಲೀಸ್ಗಿರಿ ಎಲ್ಲಾ ಬೇಡ" ಎಂದು ಸಪ್ತಮಿ ಗೌಡ ಹೇಳಿದ್ದಾರೆ.

ನಾನು ಸೀರೆ ಉಟ್ಟು ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಲೇ ಕಹಿ ಅನುಭವ ಆಗಿತ್ತು. ಅಸಭ್ಯವಾಗಿ ವೀಡಿಯೋ ಚಿತ್ರಿಸಿ ಪೋಸ್ಟ್ ಮಾಡಿದ್ರು ಎಂದು ಸಪ್ತಮಿ ಗೌಡ ತಿಳಿಸಿದ್ದಾರೆ. "ನಾನು ಕ್ಯಾರವಾನ್ನಿಂದ ಇಳಿಯುವಾಗ ವೀಡಿಯೋ ಮಾಡಲು ಬಂದಿದ್ದವರು ಫೋನ್ ಮೇಲಕ್ಕೆ ಎತ್ತಿದ್ರು.. ನೆಕ್ಸ್ಟ್ ಟೈಂ ನಮ್ಮ ಸಹಾಯಕರಿಗೆ ಹೇಳಿ ಛತ್ರಿ ಹಿಡಿಯೋಕೆ ಹೇಳ್ತೀನಿ ಏನು ವೀಡಿಯೋ ಮಾಡ್ತಿರೋ ಮಾಡಲಿ.. ನಾನು ಕ್ಯಾರವಾನ್ ಇಂದ ಇಳಿಯುವಾಗ ಮೇಲಿನಿಂದ ಸೆರೆಹಿಡಿದರೆ ಹೇಗೆ? ಬೇಕಂತಲೇ ಹೀಗೆ ಮಾಡುತ್ತೀದ್ದಾರೆ" ಎಂದಿದ್ದಾರೆ.
ಮೊದಲ ಬಾರಿ ಹೀಗೆ ನಡೆದಾಗ ಆ ವೀಡಿಯೋಗಳನ್ನು ಡಿಲೀಟ್ ಮಾಡುವಂತೆ ಎಲ್ಲರಿಗೂ ಹೇಳ್ದೆ. ಆದರೆ ಎಲ್ಲರೂ ಡಿಲೀಟ್ ಮಾಡ್ತಾರಾ, ಎಲ್ಲಾ ಸೋಶಿಯಲ್ ಮೀಡಿಯಾ ಪೇಜ್ ಇಂದ ತೆಗಿತ್ತಾರಾ? ಯಾರು ಬೇಕಾದರೂ ವಿಡಿಯೋ ಡೌನ್ಲೋಡ್ ಮಾಡಿ ಹಾಕಬಹುದು.. ಹಾಗಾಗಿ ಹೇಗೆ ಎಲ್ಲಾ ನಾಶ ಮಾಡೋಕೆ ಸಾಧ್ಯ.. ಹೋಗಲಿ ಇಂತಹ ವೀಡಿಯೋಗಳಿಂದ ಏನಾದರೂ ಪ್ರಯೋಜನ ಇದ್ಯಾ? ಇಂತಹ ವಿಡಿಯೋ ಬಿಟ್ರೆ, ಅವ್ರು ಸಿನಿಮಾ ಬಗ್ಗೆ ಒಂದೇ ಒಂದು ವಿಡಿಯೋ ಹಾಕಲ್ಲ. ಸಿನಿಮಾ ಪ್ರಚಾರಕ್ಕೆ ಅನುಕೂಲ ಆಗುತ್ತಾ? ಕೊನೆ ಪಕ್ಷ ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಜನರಿಗೆ ಮಾಹಿತಿ ಸಿಗುತ್ತಾ? ಇಲ್ಲ.. ಬರೀ ತಮ್ಮ ಲಾಭಕ್ಕೆ ಇಂತಹ ವೀಡಿಯೋ ಪೋಸ್ಟ್ ಮಾಡ್ತಾರೆ ಎಂದು ಸಪ್ತಮಿ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
'ರೈಸ್ ಆಫ್ ಅಶೋಕ' ಚಿತ್ರದ ಬಿಡುಗಡೆ ದಿನ ಚಿತ್ರಮಂದಿರದಲ್ಲಿ ಪರದೆಗೆ ಪೂಜೆ ಮಾಡುತ್ತಿದ್ದೆವು.. ಆಗ ಸ್ಟೇಜ್ ಹತ್ತಿ ವಿಡಿಯೋ ಮಾಡಿದ್ರು.. ಅದನ್ನು ಪೋಸ್ಟ್ ಮಾಡುವಾಗ ಹೆಣ್ಣು ಮಕ್ಕಳಿಗೆ ಮುಜುಗರವಾಗುತ್ತದೆ ಎನ್ನುವ ಪರಿಜ್ಞಾನ ಬೇಡವೇ.. ತಮ್ಮ ಮನೆಯ ಹೆಣ್ಣು ಮಕ್ಕಳ ವಿಡಿಯೋ ಹಾಕ್ತಾರಾ ಎಂದು ಸಪ್ತಮಿ ಗೌಡ ಆಕ್ರೋಶ ಹೊರ ಹಾಕಿದ್ದಾರೆ. ಪದೇ ಪದೆ ಹೀಗೆ ಆದಾಗ ಪ್ರತಿಕ್ರಿಯಿಸಬೇಕಾಯಿತು. ಆ ಬಗ್ಗೆ ದನಿ ಎತ್ತಬೇಕಾಯಿತು ಎಂದು ಸಪ್ತಮಿ ಗೌಡ ವಿವರಿಸಿದ್ದಾರೆ.


Click it and Unblock the Notifications











