ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದ ಸಾರಾ ಗೋವಿಂದು, ತಾರಾ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಮತ್ತು ನಟಿ ತಾರಾ ಅನುರಾಧ ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ ಚಿತ್ರರಂಗದ ಕಷ್ಟಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.
ಚಿತ್ರರಂಗದಲ್ಲಿ ಅನೇಕ ರೀತಿಯ ಸಮಸ್ಯೆಗಳಿವೆ, ಈಗ ಘೋಷಣೆ ಮಾಡಿರುವ ಪ್ಯಾಕೇಜ್ನಲ್ಲಿ ಕಲಾವಿದರಿಗೆ ಎಂದು ಕೊಡುತ್ತಿರುವ ಧನ ಸಹಾಯದ ಕುರಿತು ಗೊಂದಲ ಇದೆ, ದಯವಿಟ್ಟು ಇದನ್ನು ಪರಿಶೀಲಿಸಿ ಚಿತ್ರರಂಗಕ್ಕೆ ಸಹಾಯ ಮಾಡಬೇಕು ಎಂದು ಸಾರಾ ಗೋವಿಂದು ವಿನಂತಿಸಿದ್ದಾರೆ.
ಇತ್ತೀಚಿಗಷ್ಟೆ ರಾಜ್ಯ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿತ್ತು. ಇದರಲ್ಲಿ ಕಲಾವಿದರಿಗೆ ಮತ್ತು ಕಲಾತಂಡಗಳಿಗೆ ತಲಾ 3 ಸಾವಿರ ನೆರವು ಪ್ರಕಟಿಸಿತ್ತು. ಆದರೆ, ಈ ನಿರ್ಧಾರದಿಂದ ಗೊಂದಲ ಉಂಟಾಗಿದೆ ಎಂದು ಸಾರಾ ಗೋವಿಂದು ಅಭಿಪ್ರಾಯ ಪಟ್ಟಿದ್ದರು.

ಕಲಾವಿದರು ಎಂದರೆ ಬಹಳಷ್ಟು ವಿಭಾಗ ಇದೆ. ಜಾನಪದ ಕಲಾವಿದರು, ರಂಗಭೂಮಿ ಕಲಾವಿದರು, ಪೋಷಕ ಕಲಾವಿದರು ಅಥವಾ ಕನ್ನಡ ಸಂಸ್ಕೃತಿಗೆ ಇಲಾಖೆಗೆ ಸೇರಿದ ಕಲಾವಿದರಾ ಎಂಬ ಗೊಂದಲ ಇದೆ. ಚಿತ್ರರಂಗದಲ್ಲಿ ನಾಯಕ ಕಲಾವಿದರು, ಸಹ ಕಲಾವಿದರು, ಪೋಷಕ ಕಲಾವಿದರು, ಕಾರ್ಮಿಕ ಸಂಘಟನೆ ಎಲ್ಲರನ್ನು ಸೇರಿಸಿ ಪರಿಹಾರ ಕೊಡಬೇಕಾಗಿ ಕೇಳಿಕೊಂಡಿದ್ದರು.
ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಿಸಿದ ಬಳಿಕ ಕನ್ನಡ ಚಲನಚಿತ್ರ ನಿರ್ದೇಶಕ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು. ನಿರ್ದೇಶಕರ, ತಂತ್ರಜ್ಞರನ್ನು ನಿರ್ಲಕ್ಷ್ಯ ಮಾಡಲಾಗಿದೆ. ದಯವಿಟ್ಟು ನಮಗೂ ಪರಿಹಾರ ಕೊಡಿ ಎಂದು ಆಗ್ರಹಿಸಿದ್ದರು.
ನಿರ್ಮಾಪಕ ಭಾಮ ಹರೀಶ್, ನಟ ಕಾರ್ತಿಕ್ ಜಯರಾಂ ಇತ್ತೀಚಿಗಷ್ಟೆ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಚಿತ್ರರಂಗಕ್ಕೆ ನೆರವು ನೀಡುವಂತೆ ಕೋರಿದ್ದರು.


Click it and Unblock the Notifications











