Breaking: ಕನ್ನಡದ ಹಾಸ್ಯ ನಟ ಸರಿಗಮ ವಿಜಿ ಇನ್ನಿಲ್ಲ
ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ನಟ, ರಂಗಕರ್ಮಿ ಸಿರಿಗಮ ವಿಜಿ(76) ಕೊನೆಯುಸಿರೆಳೆದಿದ್ದಾರೆ. ವಾರದ ಹಿಂದೆಯಷ್ಟೆ ಅವರನ್ನು ಯಶವಂತಪುರ ಬಳಿಯ ಮಣಿಪಾಲ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬಹು ಅಂಗಾಂಗ ವೈಫಲ್ಯದಿಂದ ವಿಜಿ ಬಳಲುತ್ತಿದ್ದರು. 'ಡಕೋಟಾ ಎಕ್ಸ್ಪ್ರೆಸ್' ಅವರು ನಟಿಸಿದ ಕೊನೆಯ ಸಿನಿಮಾ. 250ಕ್ಕೂ ಅಧಿಕ ಸಿನಿಮಾಗಳಲ್ಲಿ ಸರಿಗಮ ವಿಜಿ ನಟಿಸಿದ್ದರು. 75ಕ್ಕೂ ಅಧಿಕ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದರು. ಟೈಗರ್ ಪ್ರಭಾಕರ್ ಹಾಗೂ ವಿಜಿ ಕಾಂಬಿನೇಷನ್ ಸೂಪರ್ ಹಿಟ್ ಆಗಿತ್ತು. ಪ್ರಭಾಕರ್ ಆಪ್ತ ಬಳಗದಲ್ಲಿನ ಕೂಡ ಅವರು ಗುರ್ತಿಸಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಂದ ದೂರ ಉಳಿದಿದ್ದರು.

1980ರಲ್ಲಿ ಗೀತಪ್ರಿಯಾ ನಿರ್ದೇಶನದ 'ಬೆಳವಳದ ಮಡಿಲಲ್ಲಿ' ಚಿತ್ರದಲ್ಲಿ ಸರಿಗಮ ವಿಜಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಅದಕ್ಕೂ ಮುನ್ನ ರಂಗಭೂಮಿಯಲ್ಲಿ ಸರಿಗಮನ ವಿಜಿ ಗುರ್ತಿಸಿಕೊಂಡಿದ್ದರು. ಹಲವು ನಾಟಕಗಳಲ್ಲಿ ನಟಿಸಿ ಮನೆಮಾತಾಗಿದ್ದರು. ಹಾಗಾಗಿ ಚಿತ್ರರಂಗದಲ್ಲಿ ಅವಕಾಶಗಳು ಸಿಕ್ಕಿತ್ತು. ಹಾಸ್ಯಪಾತ್ರಗಳಲ್ಲೇ ಹೆಚ್ಚು ವಿಜಿ ನಟಿಸಿದ್ದರು. ನಾಟಕಗಳಲ್ಲಿ ಕೂಡ ಅಂತದ್ದೇ ಪಾತ್ರಗಳಲ್ಲಿ ಗುರ್ತಿಸಿಕೊಂಡಿದ್ದರು.
ವಿಜಿ ನಟಿಸುತ್ತಿದ್ದ 'ಸಂಸಾರದಲ್ಲಿ ಸರಿಗಮ' ನಾಟಕ ಬಹಳ ಜನಪ್ರಿಯವಾಗಿತ್ತು. ಹಾಗಾಗಿ ಅವರ ಹೆಸರಿನ ಜೊತೆ ಸರಿಗಮ ಎನ್ನುವುದು ಸೇರಿಕೊಂಡಿತ್ತು. ಈ ನಾಟಕ ಸಾವಿರಕ್ಕೂ ಅಧಿಕ ಪ್ರದರ್ಶನ ಕಂಡಿತ್ತು. 80ಕ್ಕೂ ಅಧಿಕ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇಂದು(ಜನವರಿ 15) ಬೆಳಗಿನ ಜಾನ 9.45 ನಿಮಿಷಕ್ಕೆ ವಿಜಿ ವಿಧಿವಶರಾಗಿದ್ದಾರೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಯಶವಂತಪುರ ಮಣಿಪಾಲ ಆಸ್ಪತ್ರೆಯಿಂದ ಸರಿಗಮ ವಿಜಿ ಪಾರ್ಥೀವ ಶರೀರವನ್ನು ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಮಹಾಲಕ್ಷ್ಮಿಪುರಂದಲ್ಲಿರುವ ನಿವಾಸದಲ್ಲಿ 1 ಗಂಟೆಯಿಂದ ರಾತ್ರ 10 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ನಾಳೆ ಬೆಳಗ್ಗೆ 10 ಗಂಟೆ ಸುಮಾರಿಗೆ ಚಾಮರಾಜಪೇಟೆಯ ಟಿ. ಆರ್ ಮಿಲ್ ಬಳಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ರಂಗಭೂಮಿ, ಸಿನಿಮಾ ಮಾತ್ರವಲ್ಲದೇ ಕಿರುತೆರೆ ಧಾರಾವಾಹಿಗಳಲ್ಲಿ ಕೂಡ ಸರಿಗಮ ವಿಜಿ ಕೆಲಸ ಮಾಡಿದ್ದರು. ಕೆಲ ಧಾರಾವಾಹಿಗಳನ್ನು ನಿರ್ದೇಶಿಸಿದ್ದರು. ಬಣ್ಣ ಕೂಡ ಹಚ್ಚಿದ್ದರು. ಅವರ ಅಗಲಿಕೆಗೆ ಆಪ್ತರು, ಚಿತ್ರರಂಗದ ತಾರೆಯರು ಕಂಬನಿ ಮಿಡಿದಿದ್ದಾರೆ. 'ಕಪ್ಪು ಕೊಳ', 'ಪ್ರತಾಪ್', 'ಮನಮೆಚ್ಚಿದ ಸೊಸೆ', 'ಕೆಂಪಯ್ಯ ಐಪಿಎಸ್', 'ಜಗತ್ ಕಿಲಾಡಿ', 'ಯಮಲೋಕದಲ್ಲಿ ವೀರಪ್ಪನ್', 'ದುರ್ಗಿ' ಸರಿಗಮ ವಿಜಿ ನಟಿಸಿದ ಕೆಲ ಸಿನಿಮಾಗಳು.
ವಿಜಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದೊಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪುತ್ರ ರೋಹಿತ್ ತಂದೆ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಾ ಬಂದಿದ್ದರು. ತಂದೆ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದರು. ಬಳಿಕ ಕಿಡ್ನಿಗೂ ಸಮಸ್ಯೆ ಆಗಿತ್ತು. ವೈದ್ಯರು ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಬೆಳಗ್ಗೆ 9 ಗಂಟೆಯಿಂದ 9.30 ನಡುವೆ ಅವರು ವಿಧಿವಶರಾದರು ಎಂದು ಪುತ್ರ ರೋಹಿತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


Click it and Unblock the Notifications











