ಕೊರೊನಾ ಸಂಕಷ್ಟ; ಬಡವರ ಹಸಿವು ನೀಗಿಸಲು ಬೀದಿಗಿಳಿದ ಸತೀಶ್ ನೀನಾಸಂ
ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಸ್ಯಾಂಡಲ್ ವುಡ್ ಮಂದಿ ಮುಂದಾಗಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ಮಂದಿ ಈಗಾಗಲೇ ಸಾಕಷ್ಟು ಮಂದಿಗೆ ನೆರವಾಗಿದ್ದಾರೆ. ಅನೇಕ ಸ್ಟಾರ್ ಕಲಾವಿದರು ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಜನರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ.
ಒಂದೆಡೆ ಆಕ್ಸಿಜನ್, ಬೆಡ್, ಚಿಕಿತ್ಸೆ ಸಿಗದೆ ಪರದಾಡುತ್ತಿರುವ ಜನ ಮತ್ತೊಂದೆಡೆ ಕೆಲಸವಿಲ್ಲದೆ ಊಟಕ್ಕೂ ಪರದಾಡುತ್ತಿರುವವರು. ದೇಶದಲ್ಲಿ ಎದುರಾಗಿರುವ ಭೀಕರ ಪರಿಸ್ಥಿತಿ ವಿರುದ್ಧ ಹೋರಾಡಲು ಅನೇಕರು ಕೈ ಜೋಡಿದ್ದಾರೆ. ಅದರಲ್ಲೂ ಸಾಕಷ್ಟು ಮಂದಿ ಸಿನಿ ಕಲಾವಿದರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಇದೀಗ ಸ್ಯಾಂಡಲ್ ವುಡ್ ನಟ ಸತೀಶ್ ನೀನಾಸಂ ಕೂಡ ಬೀದಿಗಿಳಿದಿದ್ದಾರೆ. ಒಂದೊಳ್ಳೆ ಕಾರಣಕ್ಕೆ ಬೀದಿಗಿಳಿದಿರುವುದಾಗಿ ಹೇಳಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಆಹಾರ ವಿತರಿಸುವ ಮೂಲಕ ಸತೀಶ್ ಒಂದಿಷ್ಟು ಮಂದಿಯ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ.

ಪ್ರತಿನಿತ್ಯ ಸಾವಿರಾರು ಮಂದಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ. ಗಾಂಧಿ ಬಜಾರ್ ಸುತ್ತಮುತ್ತ ಆಹಾರ ವಿತರಿಸುತ್ತಿದ್ದಾರೆ. ಗಾಡಿ ವ್ಯಾಪಾರಿಗಳು, ಬಡವರು ಹಾಗೂ ನಿರ್ಗತಿಕರಿಗೆ ಸತೀಶ್ ಆಹಾರ ವಿತರಿಸಿದ್ದಾರೆ. ಸತೀಶ್ ಮಾನವೀಯ ಕೆಲಸಕ್ಕೆ ಅವರ ಸ್ನೇಹಿತರು ಕೈ ಜೋಡಿಸಿದ್ದಾರೆ.

ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಅನೇಕ ಮಂದಿ ಮಾನವೀಯ ಕೆಲಸ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್, ಉಪೇಂದ್ರ, ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ, ಕಿರಣ್ ರಾಜ್, ಕವಿರಾಜ್, ಸಂಚಾರಿ ವಿಜಯ್ ಸೇರಿದಂತೆ ಸಾಕಷ್ಟು ಮಂದಿ ಸಂಕಷ್ಟದಲ್ಲಿರೋರಿಗೆ ನೆರವಾಗಿದ್ದಾರೆ.


Click it and Unblock the Notifications











