ಅಂದು ಅವರ ಸಿನಿಮಾ ನೋಡಲು ಕ್ಯೂನಲ್ಲಿದ್ದರು, ಇಂದು ಅವರ ಪಕ್ಕದಲ್ಲೇ ಕಟೌಟ್.!
ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಅದ್ಧೂರಿಯಾಗಿ ಪ್ರದರ್ಶನವಾಗ್ತಿದೆ. ಸುಮಾರು ವರ್ಷದ ನಂತರ ಅಂಬಿ ಕಟೌಟ್ ಚಿತ್ರಮಂದಿರಗಳ ಬಳಿ ರಾರಾಜಿಸುತ್ತಿದೆ.
ಇದೀಗ, ಅಂಬರೀಶ್ ಅವರ ಅಭಿಮಾನಿಯೊಬ್ಬರು ಕಾಕತಾಳೀಯ ಸಂಗತಿಯೊಂದನ್ನ ಹಂಚಿಕೊಂಡಿದ್ದಾರೆ. ಒಂದು ಕಾಲದಲ್ಲಿ ಅಂಬರೀಶ್ ಅವರ ಸಿನಿಮಾ ನೋಡಲು ಥಿಯೇಟರ್ ಬಳಿ ಕ್ಯೂನಲ್ಲಿ ನಿಂತಿದ್ದವರು, ಈಗ ಅವರ ಪಕ್ಕದಲ್ಲೇ ಕಟೌಟ್ ಆಗಿ ಮಿಂಚುತ್ತಿದ್ದಾರೆ.
ಈ ಖುಷಿಯನ್ನ ನಟ ಸತೀಶ್ ನೀನಾಸಂ ತಮ್ಮ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಹೌದು, ಮಂಡ್ಯದ ಸಿದ್ಧಾರ್ಥ್ ಚಿತ್ರಮಂದಿರಲ್ಲಿ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರ ಪ್ರದರ್ಶನವಾಗುತ್ತಿದೆ. ಅದರ ಪಕ್ಕದ 'ಸಂಜಯ' ಚಿತ್ರಮಂದಿರದಲ್ಲಿ ಸತೀಶ್ ನೀನಾಸಂ ಅಭಿನಯದ 'ಅಯೋಗ್ಯ' ಸಿನಿಮಾ ಪ್ರದರ್ಶನವಾಗುತ್ತಿದೆ.

''ಇದೊಂದು ರೀತಿಯ ಕಾಕತಾಳೀಯ, ಅಂಬಿ ಅಣ್ಣನ 'ಅಂಬಿ ನಿನಗೆ ವಯಸ್ಸಾಯ್ತೋ' ಮಂಡ್ಯದ ಸಿದ್ದಾರ್ಥ ಚಿತ್ರಮಂದಿರದಲ್ಲಿ. ನನ್ನ ಅಯೋಗ್ಯ ಸಂಜಯದಲ್ಲಿದೆ. ನನ್ನದು 50ನೇ ದಿನ. ಇದಲ್ಲವೇ ಹೆಮ್ಮೆಯ ವಿಷಯ. ಒಂದು ಕಾಲದಲ್ಲಿ ಅವರ ಚಿತ್ರಕ್ಕಾಗಿ ಟಿಕೆಟ್ಗೆ ಕ್ಯೂನಲ್ಲಿ ಅದೇ ಚಿತ್ರಮಂದಿರದಲ್ಲಿ ನಿಂತಿದ್ದೆ. ಇಂದು ಅವರ ಕಟೌಟ್ ಪಕ್ಕದಲ್ಲೇ ನನ್ನದು ಒಂದು ಕಟೌಟ್ ನಿಂತಿದೆ. ಇದೊಂದು ನನ್ನ ವೃತ್ತಿ ಬದುಕಿನಲ್ಲೇ ಶ್ರೇಷ್ಟವಾದ್ದು. ಅವರ ಜೊತೆ ಅಭಿನಯಿಸೋ ಹಂಬಲ ಇನ್ನು ಇದೆ. ಅವರ ಆಶೀರ್ವಾದ ನಮ್ಮ ಜೊತೆಗಿದೆ. ಈ ವಾರ ನೋಡುವೆ. 'ಅಂಬಿ ನಿನಗೆ ವಯಸ್ಸಾಯ್ತೋ' ನೀವೆಲ್ಲರೂ ನೋಡಿ...''
ಸತೀಶ್ ಅಭಿನಯದ 'ಅಯೋಗ್ಯ' ಸಿನಿಮಾ ಆಗಸ್ಟ್ 17 ರಂದು ಬಿಡುಗಡೆಯಾಗಿತ್ತು. ಮಹೇಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಚಿತಾ ರಾಮ್ ನಾಯಕಿಯಾಗಿದ್ದರು.


Click it and Unblock the Notifications











