ಹೊಸ 'ಸತ್ಯ ಹರಿಶ್ಚಂದ್ರ'ನ ಆಗಮನಕ್ಕೆ ಮುಹೂರ್ತ ನಿಗದಿ
ಶರಣ್ ಅಭಿನಯದ 'ಸತ್ಯ ಹರಿಶ್ಚಂದ್ರ' ಸಿನಿಮಾ ಸದ್ಯ ಟ್ರೈಲರ್ ಮತ್ತು ಹಾಡುಗಳು ಮೂಲಕ ಗಮನ ಸೆಳೆದಿದೆ. ಈ ಮಧ್ಯೆ ಸಿನಿಮಾ ಯಾವಾಗ ಬಿಡುಗಡೆಯಾಗಬಹುದು ಎಂಬ ಕುತೂಹಲ ಸಿನಿ ಪ್ರೇಕ್ಷಕರನ್ನ ಕಾಡುತ್ತಿತ್ತು. ಇದೀಗ, ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಹೌದು, ಹೊಸ 'ಸತ್ಯ ಹರಿಶ್ಚಂದ್ರ'ನ ಆಗಮನಕ್ಕೆ ವೇದಿಕೆ ಸಿದ್ದವಾಗಿದ್ದು, ಅಕ್ಟೋಬರ್ 20 ರಂದು ಚಿತ್ರಮಂದಿರಕ್ಕೆ ಕಾಲಿಡಲಿದ್ದಾನಂತೆ.

ಅಂದ್ಹಾಗೆ, ಹೊಸ 'ಸತ್ಯ ಹರಿಶ್ಚಂದ್ರ' ಔಟ್ ಅಂಡ್ ಔಟ್ ಕಾಮಿಡಿ ಎಂಟರ್ ಟೈನ್ ಮೆಂಟ್ ಸಿನಿಮಾವಾಗಿದ್ದು, ಆಕ್ಷನ್, ಥ್ರಿಲ್, ಲವ್, ಸೆಂಟಿಮೆಂಟ್, ಕಾಮಿಡಿ ಹೀಗೆ ಒಂದು ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳು ಈ ಚಿತ್ರದಲ್ಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ಈಗಾಗಲೇ ಹಾಡುಗಳು ಸೌಂಡ್ ಮಾಡುತ್ತಿದೆ.
ಶರಣ್ ಗೆ ಜೋಡಿಯಾಗಿ ಸಂಚಿತಾ ಪಡುಕೊಣೆ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಚಿಕ್ಕಣ್ಣ, ಭಾವನ ರಾವ್, ಸಾಧುಕೋಕಿಲಾ, ಶರತ್ ಲೋಹಿತಾಶ್ವ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.

ಈ ಚಿತ್ರವನ್ನ ಕೆ.ಮಂಜು ನಿರ್ಮಾಣ ಮಾಡಿದ್ದು, ದಯಾಳ್ ಪದ್ಮನಾಭನ್ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ, ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಮಾಡಿರುವ 'ಸತ್ಯ ಹರಿಶ್ಚಂದ್ರ' ಅಕ್ಟೋಬರ್ ತಿಂಗಳಿನಲ್ಲಿ ಅಬ್ಬರಿಸಲಿದೆ.
ವಿಶೇಷ ಅಂದ್ರೆ, 1965ರ ವೇಳೆ ಡಾ.ರಾಜ್ ಅಭಿನಯದಲ್ಲಿ ಮೂಡಿ ಬಂದಿದ್ದ 'ಸತ್ಯ ಹರಿಶ್ಚಂದ್ರ' ಚಿತ್ರದ 'ಕುಲದಲ್ಲಿ ಕೀಳ್ಯಾವುದೋ' ಹಾಡನ್ನ ಈ ಚಿತ್ರದಲ್ಲಿ ಮತ್ತೆ ಬಳಸಲಾಗುತ್ತಿದೆ. ಹುಣುಸೂರು ಕೃಷ್ಣ ಮೂರ್ತಿ ಅವರು ಸಾಹಿತ್ಯದ ಹಾಡಿಗೆ ಗಂಟಸಾಲ ಅವರು ಧ್ವನಿಯಾಗಿದ್ದರು. ಈಗ ಅದೇ ಸಾಲುಗಳಿಗೆ ಗಾಯಕ ವಿಜಯ್ ಪ್ರಕಾಶ್ ದ್ವನಿಗೂಡಿಸಿದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.


Click it and Unblock the Notifications











