ನೋವಿನ ನಡುವೆಯೂ ವಿಜಯಲಕ್ಷ್ಮಿ ದರ್ಶನ್ ಮಹತ್ಕಾರ್ಯ!
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾಗಿ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ. ದರ್ಶನ್ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಪತ್ನಿ ವಿಜಯಲಕ್ಷ್ಮಿ ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಪತಿ ಜೊತೆಗಿನ ಫೊಟೊ ಹಂಚಿಕೊಂಡು ಗಣೇಶ ಹಬ್ಬದ ಶುಭಾಶಯ ಕೋರಿದ್ದ ವಿಜಯಲಕ್ಷ್ಮಿ ಇಂದು(ಆಗಸ್ಟ್ 29) ಮೈಸೂರಿಗೆ ಭೇಟಿ ನೀಡಿದ್ದಾರೆ.
ಮೈಸೂರು ದಸರಾ ಜಂಬೂ ಸವಾರಿಗೆ ಸಿದ್ಧತೆ ನಡೀತಿದೆ. ಕಾಡಿನಿಂದ ನಾಡಿಗೆ ಗಜ ಪಡೆಯನ್ನು ಕರೆತಂದು ತಲೀಮು ನಡೆಸಲಾಗುತ್ತಿದೆ. ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು, ಭೀಮ, ಪ್ರಶಾಂತ್, ಕಂಜನ್, ಲಕ್ಷ್ಮೀ, ಕಾವೇರಿ, ಧನಂಜಯ ಸೇರಿ ಹಲವು ಆನೆಗಳು ಆಗಸ್ಟ್ 12ರಿಂದ ರಾಜಬೀದಿಗಳಲ್ಲಿ ತಾಲೀಮು ನಡೆಸುತ್ತಿವೆ. ಮೈಸೂರು ಅರಮನೆಗೆ ಭೇಟಿ ನೀಡುವ ಪ್ರವಾಸಿಗರು ಇದನ್ನು ವೀಕ್ಷಿಸಬಹುದು. ಅಷ್ಟೇ ಅಲ್ಲ ಆನೆಗಳು ವಿಶ್ರಾಂತಿ ಪಡೆಯುವ ಜಾಗಕ್ಕೆ ತೆರಳಿ ನೋಡುವ ಅವಕಾಶವೂ ಇದೆ.

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಇಂದು ಮೈಸೂರಿನ ಅರಮನೆಗೆ ಭೇಟಿ ನೀಡಿ ದಸರಾ ಹಬ್ಬಕ್ಕೆ ಬಂದಿರುವ ಆನೆ ಮಾವುತರ ತಂಡಕ್ಕೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ್ದಾರೆ. ದಸರಾ ಆನೆಗಳನ್ನು ಹತ್ತಿರದಿಂದ ನೋಡಿ ಸಂಭ್ರಮಿಸಿದ್ದಾರೆ. ಆ ವೀಡಿಯೋವನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಎಲ್ಲಾ ನೋವು ಮರೆತು ವಿಜಯಲಕ್ಷ್ಮಿ ನಗು ನಗುತ್ತಾ ಆನೆಗಳಿಗೆ ಮೇವು ನೀಡಿ ನೀರುಣಿಸಿ ಖುಷಿಪಟ್ಟಿದ್ದಾರೆ. ಈ ವೇಳೆ ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಅಕ್ಕನ ಮಗ ಚಂದು ಕೂಡ ಜೊತೆಗಿದ್ದರು.
ನಟ ದರ್ಶನ್ ಪ್ರಾಣಿ, ಪಕ್ಷಿ ಪ್ರೀತಿ, ಕಾಳಜಿ ಬಗ್ಗೆ ಗೊತ್ತೇಯಿದೆ. ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ 12 ವರ್ಷಗಳಿಂದ ಆನೆಯೊಂದನ್ನು ದರ್ಶನ್ ದತ್ತು ಪಡೆದಿದ್ದಾರೆ. ಅದಕ್ಕೆ ಮಾದೇಶ ಎಂದು ಹೆಸರಿಟ್ಟಿದ್ದಾರೆ. ಮೈಸೂರಿನ ತಮ್ಮ ಫಾರ್ಮ್ಹೌಸ್ನಲ್ಲಿ ನಟ ದರ್ಶನ್ ಸಾಕಷ್ಟು ಪ್ರಾಣಿ, ಪಕ್ಷಿಗಳನ್ನು ಸಾಕುತ್ತಿದ್ದಾರೆ. ತಮ್ಮ ಬಿಡುವಿನ ಬಹುತೇಕ ಸಮಯವನ್ನು ಅಲ್ಲೇ ಕಳೆಯುತ್ತಾರೆ. ಇತ್ತೀಚೆಗೆ ವಿಜಯಲಕ್ಷ್ಮಿ ದರ್ಶನ್ ಕೂಡ ಅಲ್ಲಿಗೆ ಹೆಚ್ಚು ಭೇಟಿ ನೀಡುತ್ತಿದ್ದಾರೆ.
ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾಗಿ ದರ್ಶನ್ ಮತ್ತೆ ಜೈಲು ಸೇರಿದ್ದು ಗೊತ್ತೇಯಿದೆ. ಫಾರ್ಮ್ಹೌಸ್ನಲ್ಲಿ ದರ್ಶನ್ ನಿಂತಿರುವ ಫೋಟೊವನ್ನು ವಿಜಯಲಕ್ಷ್ಮಿ ಹಂಚಿಕೊಂಡು ಒಡೆದ ಹೃದಯದ ಎಮೋಜಿ ಹಾಕಿ ಬೇಸರ ವ್ಯಕ್ತಪಡಿಸಿದ್ದರು. 'ಡೆವಿಲ್' ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿ ಒಂದಷ್ಟು ಪೋಸ್ಟ್ಗಳನ್ನು ವಿಜಯಲಕ್ಷ್ಮಿ ಹಂಚಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಪತಿ ದರ್ಶನ್ ಸೋಶಿಯಲ್ ಮೀಡಿಯಾ ಖಾತೆಗಳನ್ನು ತಾವೇ ನಿರ್ವಹಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಸೆಲೆಬ್ರೆಟಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ರಮ್ಯಾ ಅವರಿಗೆ ಕೆಲವರು ಕೆಟ್ಟ ಕೆಟ್ಟ ಮೆಸೇಜ್ ಕಳುಹಿಸಿದ್ದು ಈ ಬಗ್ಗೆ ಆಕೆ ದೂರು ಕೊಟ್ಟಿದ್ದರು. ಪೊಲೀಸರು ಕೆಲವರನ್ನು ಬಂಧಿಸಿ ಬುದ್ಧಿ ಹೇಳಿದ್ದಾರೆ. ಇತ್ತೀಚೆಗೆ ವಿಜಯಲಕ್ಷ್ಮಿ ದರ್ಶನ್ ಹಾಗೂ ಪುತ್ರ ವಿನೀಶ್ ಬಗ್ಗೆಯೂ ಇದೇ ರೀತಿ ಕೆಟ್ಟದಾಗಿ ಕಿಡಿಗೇಡಿಗಳು ಟ್ರೋಲ್ ಮಾಡಿದ್ದಾರೆ. ಇದು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ವಿಜಯಲಕ್ಷ್ಮಿ, ವಿನೀಶ್ ಬಗ್ಗೆ ಅಶ್ಲೀಲ ಪದಗಳಿಂದ ಟ್ರೋಲ್ ಮಾಡಿದವರ ವಿರುದ್ಧ ಸಾಮಾಜಿಕ ಹೋರಾಟಗಾರ ಭಾಸ್ಕರ್ ಪ್ರಸಾದ್ ಎಂಬುವವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಸಂಬಂಧ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಅವರು ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದಾರೆ.


Click it and Unblock the Notifications











