ಏಳು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದು ನಟಿ ವಿಜಯಲಕ್ಷ್ಮಿ ದೂರು: ಸೀಮಾನ್ಗೆ ಪೊಲೀಸ್ ಸಮನ್ಸ್
ಬಹುಭಾಷಾ ನಟಿ ವಿಜಯಲಕ್ಷ್ಮೀ ಮತ್ತು ನಾಮ್ ತಮಿಳರ್ ಕಚ್ಚಿ (ಎನ್ಟಿಕೆ) ಮುಖ್ಯ ಸಂಯೋಜಕ ಸೀಮಾನ್ ಪ್ರಕರಣದಲ್ಲಿ ಹೊಸ ಅಪ್ಡೇಟ್ ಬಂದಿದೆ. ಸೀಮಾನ್ ವಿರುದ್ಧ ನಟಿ ವಿಜಯಲಕ್ಷ್ಮಿ ಅವರು ಹೊಸ ದೂರನ್ನು ದಾಖಲಿಸಿದ ನಂತರ ಶನಿವಾರ ಸೆಪ್ಟೆಂಬರ್ 9 ರಂದು ಚೆನ್ನೈ ಪೊಲೀಸರು ಆರೋಪಿಗೆ ಸಮನ್ಸ್ ನೀಡಿದ್ದಾರೆ.
ತಮಿಳುನಾಡಿನ ವಲಸರವಕ್ಕಂ ಪೊಲೀಸರು ಎನ್ಟಿಕೆ ಮುಖ್ಯ ಸಂಯೋಜಕ ಸೀಮಾನ್ ವಿರುದ್ಧ ನಟಿ ವಿಜಯಲಕ್ಷ್ಮಿ ಅವರು ನೀಡಿದ ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ತಮ್ಮ ಮುಂದೆ ಹಾಜರಾಗುವಂತೆ ವಿಚಾರಣೆಗೆ ನೋಟಿಸ್ ನೀಡಿದ್ದಾರೆ. ಶನಿವಾರ ಬೆಳಗ್ಗೆ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು, ಆದರೆ, ಅವರು ಮಂಗಳವಾರದವರೆಗೆ ಸಮಯ ಕೋರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸಮಯಾವಾಕಾಶ ಕೇಳಿದ ಕಾರಣ ಪೋಲೀಸರು ಮಂಗಳವಾರ, ಸೆಪ್ಟೆಂಬರ್ 12, 2023 ರಂದು ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂದು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಸೀಮಾನ್ ಮದುವೆಯ ನೆಪದಲ್ಲಿ ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ನಟಿ ವಿಜಯಲಕ್ಷ್ಮಿ ಆಗಸ್ಟ್ 29 ರಂದು ದೂರು ದಾಖಲಿಸಿದ್ದರು.
ಏಳು ಬಾರಿ ಗರ್ಭಪಾತ!
ನಟಿ ವಿಜಯಲಕ್ಷ್ಮಿ ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತ ಕಚೇರಿಯಲ್ಲಿ ದಾಖಲಿಸಿರುವ ದೂರಿನಲ್ಲಿ ಆರೋಪಿ ಸೀಮಾನ್ ಏಳು ಬಾರಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಬಲವಂತ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ಪೊಲೀಸರು ಆತನನ್ನು ವಿಚಾರಣೆಗೆ ಕರೆದಿದ್ದಾರೆ.
ಎನ್ಟಿಕೆ ಮುಖ್ಯ ಸಂಯೋಜಕರ ವಿರುದ್ಧ ಹೊಸ ದೂರು ನೀಡಿದ ನಟಿ ವಿಜಯಲಕ್ಷ್ಮಿ ಅವರು ತನಗೆ ಮೋಸ ಮಾಡಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿದ ನಂತರ ಅವರು ತಮ್ಮೊಂದಿಗೆ ಸಂಬಂಧ ಹೊಂದಿದ್ದರು ಎಂದು ಆರೋಪಿಸಿ ಪೊಲೀಸರು ಹೇಳಿಕೆಯನ್ನು ದಾಖಲಿಸಿದ್ದಾರೆ.
ವಿಜಯಲಕ್ಷ್ಮಿ ಈ ಹಿಂದೆ 2011 ರಲ್ಲಿ ಸೀಮಾನ್ ವಿರುದ್ಧ ಶ್ರೀಮತಿ ವಿಜಯಲಕ್ಷ್ಮಿ ರಾಮಾಪುರಂ ಪೊಲೀಸರಿಗೆ ಇದೇ ರೀತಿಯ ದೂರು ನೀಡಿದ್ದರು. ಪೊಲೀಸರು ಸೀಮಾನ್ ವಿರುದ್ಧ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು), 354 (ಕ್ರಿಮಿನಲ್ ಹಲ್ಲೆ), 376 (ಅತ್ಯಾಚಾರಕ್ಕೆ ಶಿಕ್ಷೆ), 506 (i) (ಕ್ರಿಮಿನಲ್ ಬೆದರಿಕೆ) ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ದೂರುದಾರರು ಮನವಿ ಮಾಡಿದ ನಂತರ ಎಫ್ಐಆರ್ನಲ್ಲಿ ಹೆಚ್ಚಿನ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸಲಾಗಿಲ್ಲ.

ಇದೀಗ ಮತ್ತೊಮ್ಮೆ ವಿಜಯಲಕ್ಷ್ಮಿ ಅವರು ಕಳೆದ ವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೀಮಾನ್ ವಿರುದ್ಧ ಹೊಸ ದೂರು ದಾಖಲಿಸಿದ್ದಾರೆ. ಇದರ ನಂತರ, ಮುಂದಿನ ಕ್ರಮಕ್ಕಾಗಿ ದೂರನ್ನು ಉಪ ಪೊಲೀಸ್ ಆಯುಕ್ತ (ಡಿಸಿಪಿ), ಕೊಯಂಬೆಡು ಜಿ. ಉಮಯಲ್ ಅವರಿಗೆ ರವಾನಿಸಲಾಗಿದೆ. ಕಳೆದ ವಾರ ಆರು ಗಂಟೆಗಳ ಕಾಲ ಡಿಸಿಪಿ ವಿಜಯಲಕ್ಷ್ಮಿ ಅವರನ್ನು ವಿಚಾರಣೆ ನಡೆಸಿದ್ದರು.
ತಿರುವಳ್ಳೂರಿನ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ವಿಜಯಲಕ್ಷ್ಮಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆಕೆಯ ಹೇಳಿಕೆಯನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 164 ರ ಅಡಿಯಲ್ಲಿ ದಾಖಲಿಸಲಾಗಿದೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗಿತ್ತು.
ಸೆಪ್ಟೆಂಬರ್ 7 ರ ಗುರುವಾರ, ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ (RGGH) ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸುಮಾರು ಎರಡು ಗಂಟೆಗಳ ಕಾಲ ನಾಲ್ಕು ವೈದ್ಯರ ತಂಡವು ನಟಿ ವಿಜಯಲಕ್ಷ್ಮಿ ಅವರನ್ನು ಪರೀಕ್ಷಿಸಿದೆ.
ದೂರು ದಾಖಲಿಸಿದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ವಿಜಯಲಕ್ಷ್ಮಿ, ಕಳೆದೆರಡು ವರ್ಷಗಳಿಂದ ಸೀಮಾನ್ ವಿರುದ್ಧ ಹೋರಾಟ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಈ ಕಿರುಕುಳದಿಂದಾಗಿ ತನ್ನ ಜೀವನವನ್ನು ಕೊನೆಗೊಳಿಸಬೇಕೆಂದು ಹಲವು ಬಾರಿ ಯೋಚಿಸಿದ್ದಾಗಿಯೂ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕಿರುಕುಳದ ಕಾರಣ ಜುಲೈ 2020 ರಲ್ಲಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು.


Click it and Unblock the Notifications










