ಪ್ರಶಸ್ತಿ ನನಗಾಗಲೀ, ನನ್ನ ಕರ್ತೃತ್ವಶಕ್ತಿಗಾಗಲೀ ಹೊಸ ಕಿರೀಟ ತೊಡಿಸಿಲ್ಲ..
ಬೆಂಗಳೂರು : ಟಿ.ಎಸ್. ನಾಗಾಭರಣ ಅವರಂಥಹ ಸಮರ್ಥರು ಅಪಸ್ವರ ಎತ್ತಿದ ಮೇಲೆ ಸರಕಾರ ನೀಡುವ ಪ್ರಶಸ್ತಿ ಸ್ವೀಕರಿಸುವುದು ನನಗೆ ಶೋಭೆ ತರುವುದಿಲ್ಲ ಎಂದು ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಂ ಹೇಳಿದ್ದಾರೆ.
ಮಾಯಾಮೃಗ ಧಾರಾವಾಹಿಯನ್ನು ರಾಜ್ಯ ಸರ್ಕಾರ ಅತ್ಯುತ್ತಮ ಮೆಗಾ ಧಾರಾವಾಹಿ ಎಂದು ಪರಿಗಣಿಸಿ ಪ್ರಶಸ್ತಿ ನೀಡಿರುವ ಬಗ್ಗೆ ನಾಗಭರಣ ಸೇರಿದಂತೆ ಹಲವು ಖ್ಯಾತನಾಮರು ಟೀಕೆ ಮಾಡಿರುವ ಹಿನ್ನೆಲೆಯಲ್ಲಿ ತಮಗೆ ದೊರೆತಿರುವ ಈ ಪ್ರಶಸ್ತಿಯನ್ನು ಗೌರವವಾಗಿ ಹಿಂತಿರುಗಿಸಲು ಸೀತಾರಾಂ ನಿರ್ಧರಿಸಿದ್ದಾರೆ.
ಜನರು ಈಗಾಗಲೇ ಮಾಯಾಮೃಗ ಧಾರಾವಾಹಿಯನ್ನು ಮೆಚ್ಚಿದ್ದಾರೆ. ಒಪ್ಪಿದ್ದಾರೆ. ಆದರಿಸಿದ್ದಾರೆ. ಜನ ನನಗೆ ಈಗಾಗಲೇ ಪ್ರಶಸ್ತಿ ನೀಡಿಯಾಗಿದೆ. ಈಗ ಬಂದಿರುವ ಪ್ರಶಸ್ತಿ ನನಗಾಗಲೀ, ನನ್ನ ಕರ್ತೃತ್ವಶಕ್ತಿಗಾಗಲೀ ಹೊಸ ಕಿರೀಟವನ್ನೇನೂ ತೊಡಿಸುವುದಿಲ್ಲ ಎಂದು ಟಿ.ಎನ್. ಸೀತಾರಾಂ ಪ್ರತಿಕ್ರಿಯಿಸಿದ್ದಾರೆ.
ಸರಕಾರದಿಂದ ನನಗೆ ಈವರೆಗೆ ಅಧಿಕೃತವಾಗಿ ಪ್ರಶಸ್ತಿ ಬಂದ ಬಗ್ಗೆ ಪತ್ರ ಬಂದಿಲ್ಲ. ಪತ್ರ ಬಂದ ಬಳಿಕ ನಾನು ವಿನಯಪೂರ್ವಕವಾಗಿ ಪ್ರಶಸ್ತಿಯನ್ನು ಹಿಂತಿರುಗಿಸಿ, ಈ ವಿವಾದಕ್ಕೆ ಮಂಗಳಹಾಡ ಬಯಸುತ್ತೇನೆ ಎಂದು ಸೀತಾರಾಂ ಕನ್ನಡ.ಇಂಡಿಯಾ ಇನ್ಫೋ ಡಾಟ್ಕಾಂ ಪ್ರತಿನಿಧಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಈ ಟೀವಿಗೆ ತಾವು ನಿರ್ದೇಶಿಸುತ್ತಿರುವ ಮನ್ವಂತರ ಧಾರಾವಾಹಿಯ ಮುಹೂರ್ತ ಸಂದರ್ಭದಲ್ಲಿ ಅವರು ನಮ್ಮ ಪ್ರತಿನಿಧಿಯಾಂದಿಗೆ ಮಾತನಾಡಿದರು. ಮಲ್ಲೇಶ್ವರದಲ್ಲಿ ಭಾನುವಾರ ಬೆಳಗ್ಗೆ ಈ ಧಾರಾವಾಹಿಯ ಮುಹೂರ್ತ ನೆರವೇರಿತು.
ಈ ಹೊಸ ಧಾರಾವಾಹಿ ಮತ್ತೊಮ್ಮೆ ಹೊಸ - ಹಳೆಯ ಕಲಾವಿದರ ಸಮಾಗಮವಾಗಲಿದೆ ಎಂದೂ ಸೀತಾರಾಂ ಹೇಳಿದರು. ಈ ಧಾರಾವಾಹಿಯಲ್ಲಿ ಸೀತಾರಾಂ, ಮಾಳವಿಕಾ, ಅಭಿನಯ, ಮುಖ್ಯಮಂತ್ರಿ ಚಂದ್ರ, ಚಿದು, ಮೇಘಾ ನಾಡಿಗ್ ಮತ್ತು ಸೇತೂರಾಂ ಅವರಲ್ಲದೆ ಹಲವು ಚಲನಚಿತ್ರ ನಟ- ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications